
ಬೆಂಗಳೂರು (ಫೆ.20): ಕೇರಳ ವಯನಾಡ್ ನಲ್ಲಿ ಕಾಡಾನೆ ತುಳಿತಕ್ಕೆ ಒಳಗಾಗಿ ಮೃತ ನಾದ ವ್ಯಕ್ತಿ ಗೆ ಕರ್ನಾಟಕ ಸರ್ಕಾರ ಬರೋಬ್ಬರಿ 15 ಲಕ್ಷ ರೂ ಪರಿಹಾರ ನೀಡಿದೆ. ರಾಹುಲ್ ಗಾಂಧಿ ಆದೇಶ ದ ಮೇಲೆ ಪರಿಹಾರ ನೀಡಲಾಗಿದ್ದು, ಇದು ಭಾರೀ ಆಕ್ರೋಶಕ್ಕೆ ಕಾರಣವಾಗಿದೆ.
ಕರ್ನಾಟಕದಲ್ಲಿ ಆನೆ ದಾಳಿಗೆ 5 ಲಕ್ಷ ಪರಿಹಾರ ನೀಡಲಾಗುತ್ತದೆ. ಮಾತ್ರವಲ್ಲ ಬರ ಪರಿಹಾರಕ್ಕೆ ಹಣವಿಲ್ಲ, ತೆರಿಗೆ ಹಣದಲ್ಲಿ ಕೇಂದ್ರ ಮೋಸ ಮಾಡಿದೆ ಎಂದೆಲ್ಲ ಹೇಳುವ ಸಿದ್ದರಾಮಯ್ಯ ಸರಕಾರ ಪಕ್ಕದ ರಾಜ್ಯದ ವ್ಯಕ್ತಿ ಆನೆ ದಾಳಿಯಿಂದ ಮೃತಪಟ್ಟಾಗ ಕೊಡಲು ಹಣವಿದೆಯೇ? ಎಂದು ರಾಜ್ಯದ ಜನತೆ ಪ್ರಶ್ನಿಸುತ್ತಿದ್ದಾರೆ.
ಕೇರಳದ ವಯನಾಡ್ನಲ್ಲಿ ಕರ್ನಾಟಕ ಮೂಲದ ಆನೆಯ ದಾಳಿಯಿಂದ ಅಜೀಶ್ ಎಂಬ ವ್ಯಕ್ತಿ ಮೃತಪಟ್ಟಿದ್ದು, ಸ್ವತಃ ಆ ಕ್ಷೇತ್ರದ ಸಂಸದರಾಗಿರುವ ರಾಹುಲ್ ಗಾಂಧಿ ಅವರು ಮೃತ ವ್ಯಕ್ತಿಯ ಕುಟುಂಬದವರನ್ನು ಭೇಟಿ ಮಾಡಿ ಪರಿಹಾರ ನೀಡುವ ಭರವಸೆ ಕೊಟ್ಟಿದ್ದರು.
ಅದರಂತೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಸಲಹೆ ಮೇರೆಗೆ ರಾಜ್ಯ ಅರಣ್ಯ ಮಂತ್ರಿ ಈಶ್ವರ ಖಂಡ್ರೆ 15 ಲಕ್ಷ ರೂ ಪರಿಹಾರ ನೀಡಿದ್ದಾರೆ. ಈ ಕುರಿತು ರಾಹುಲ್ ಗಾಂಧಿ ಅವರಿಗೆ ಸಚಿವ ಈಶ್ವರ್ ಖಂಡ್ರೆ ಬರೆದಿರುವ ಪತ್ರ ವೈರಲ್ ಆಗಿದೆ. ನಿಮ್ಮ ಸಲಹೆಯಂತೆ 15 ಲಕ್ಷ ರೂಪಾಯಿ ಪರಿಹಾರ ನೀಡುವುದಾಗಿ ಘೋಷಣೆ ಮಾಡಿದ್ದೇವೆ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ. ಇಷ್ಟು ಮಾತ್ರವಲ್ಲ ಈ ಬಗ್ಗೆ ಬೀದರ್ನಲ್ಲಿ ಸೋಮವಾರ ಈಶ್ವರ ಖಂಡ್ರೆ ಹೇಳಿಕೆ ನೀಡಿ, ಸಿಎಂ ಸಿದ್ದರಾಮಯ್ಯ ಅವರ ಸೂಚನೆ ಮೇರೆಗೆ ಕೇರಳ ವ್ಯಕ್ತಿಯ ಕುಟುಂಬ ಪರಿಹಾರ ಪಡೆಯುತ್ತಿದೆ ಎಂದಿದ್ದರು.
ಕರ್ನಾಟಕ ಪೊಲೀಸರಿಗೆ 20 ವರ್ಷಗಳಿಂದ ಬೇಕಾಗಿದ್ದ ನಕ್ಸಲ್ನನ್ನು ಹಿಡಿದುಕೊಟ್ಟ ಕೇರಳದ ಕಾಡಾನೆ!
ನಿಜವಾಗಲೂ ಅದು ಕರ್ನಾಟಕದ ಆನೆಯೇ?
ಕಾಡಾನೆ ಉಪಟಳ ತಾಳಲಾರದೆ ಆಕ್ರೋಶಗೊಂಡ ಜನರ ಒತ್ತಾಯಕ್ಕೆ ಮಣಿದು ಹಾಸನದ ಬೇಲೂರಿನಲ್ಲಿ ನ.30ರಂದು ಸೆರೆ ಹಿಡಿದಿದ್ದ ಮಕ್ನಾ ಆನೆಯನ್ನು ಬಿಳಿಗಿರಿ ರಂಗನಾಥ ಬೆಟ್ಟದ ಹುಲಿ ಸಂರಕ್ಷಿತ ಅರಣ್ಯ ಪ್ರದೇಶದಲ್ಲಿ ಬಿಡಲಾಗಿತ್ತು. ಅಲ್ಲಿಂದ ಆನೆ ಬಂಡೀಪುರ ದಾಟಿ ವಯನಾಡು ಭಾಗಕ್ಕೆ ತಲುಪಿತ್ತು. ಮಾತ್ರವಲ್ಲ ವಯನಾಡುವಿನಲ್ಲಿರುವ ಆಜೀಶ್ ಅವರ ಮೇಲೆ ದಾಳಿ ಮಾಡಿದ್ದರಿಂದ ಆತ ಮೃತಪಟ್ಟಿದ್ದ, ಇದು ಆನೆಗೆ ಹಾಕಿದ್ದ ಕಾಲರ್ ಐಡಿಯಿಂದ ತಿಳಿದುಬಂದಿದೆ.
ಇನ್ನು ಇತ್ತೀಚೆಗೆ ತನ್ನ ಕ್ಷೇತ್ರ ವಯನಾಡಿಗೆ ಭೇಟಿ ನೀಡಿದ್ದ ರಾಹುಲ್ ಗಾಂಧಿ ಅವರು ಮೃತ ವ್ಯಕ್ತಿಯ ಕುಟುಂಬವನ್ನು ಭೇಟಿ ಮಾಡಿ ಪರಿಹಾರ ನೀಡುವ ಭರವಸೆ ಕೊಟ್ಟಿದ್ದರು. ಕಾಡಾನೆ ನಿಂತಲ್ಲಿ ನಿಲ್ಲುವ ಪ್ರಾಣಿಯಲ್ಲ. ಅದಕ್ಕೆ ನಿರ್ದಿಷ್ಟ ಜಾಗ ಎಂಬುದು ಇಲ್ಲ. ಹೀಗಾಗಿ ಈ ವಿಚಾರ ತೀವ್ರ ಚರ್ಚೆಗೆ ಕಾರಣವಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ