
ಕನ್ನಡಪ್ರಭ ವಾರ್ತೆ ಕೂಡ್ಲಿಗಿ (ಸೆ.6): ದೇಶದ ಅಭಿವೃದ್ಧಿಗೆ ಸೈನಿಕ, ಕಾರ್ಮಿಕ ಹಾಗೂ ಕೃಷಿಕರಷ್ಟೇ ಅಲ್ಲದೇ ಶಿಕ್ಷಕರ ಕೊಡುಗೆಯೂ ಪ್ರಮುಖವಾಗಿದ್ದು, ಮುಂಬರುವ ದಿನಗಳಲ್ಲಿ ಶಿಕ್ಷಕರ ಹೆಸರಿನ ಮುಂದೆ ‘Tr’ (Teacher) ಎಂದು ಸೇರಿಸಿ ಗೌರವಿಸುವ ಸಂಪ್ರದಾಯ ಪ್ರತಿಯೊಬ್ಬರೂ ಮಾಡಬೇಕು ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಕರೆ ನೀಡಿದರು. ಈಗಾಗಲೇ ವೈದ್ಯರಿಗೆ ಹಾಗೂ ಡಾಕ್ಟರೆಟ್ ಪದವೀಧರರಿಗೆ Dr ಎಂದು ಹಾಗೂ ಪ್ರಾಧ್ಯಾಪಕರಿಗೆ Prof ಎಂಬ ವಿಶೇಷಣಗಳಿಂದ ಕರೆಯಲಾಗುತ್ತದೆ. ಇದಕ್ಕೆ ‘Tr’ ಹೊಸ ಸೇರ್ಪಡೆ.
ಕೂಡ್ಲಿಗಿಯಲ್ಲಿ ಶನಿವಾರ ಪ್ರಜಾಸೇವೆ ಇಲಾಖೆಗೆ ಚಾಲನೆ ನೀಡಿದ ಬಳಿಕ ಶಿಕ್ಷಕರ ದಿನಾಚರಣೆಯ ಮಹತ್ವ ಸ್ಮರಿಸಿದರು. ರಾಜ್ಯದಲ್ಲಿ ನಾಲ್ಕೂವರೆ ಲಕ್ಷಕ್ಕೂ ಹೆಚ್ಚು ಶಿಕ್ಷಕರಿದ್ದಾರೆ. ಜನ್ಮ ನೀಡಿದ ತಾಯಿ ಮತ್ತು ಅಕ್ಷರ ಕಲಿಸಿದ ಶಿಕ್ಷಕರಿಬ್ಬರೂ ನಮಗೆ ದೇವರು ಇದ್ದಂತೆ. ವೈದ್ಯರು, ಎಂಜಿನಿಯರ್ಗಳಿಗೆ ಸಿಗುವಂತೆ ಶಿಕ್ಷಕರಿಗೂ ಗೌರವ ನೀಡಲು ಅವರ ಹೆಸರಿನ ಮುಂದೆ ಟೀಚರ್ (Tr) ಎಂಬ ಬಿರುದು ಬಳಸುವ ಕುರಿತು ಸಂಪುಟ ಸಭೆಯಲ್ಲಿ ಚರ್ಚಿಸಿ ನಿರ್ಧಾರ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಸಮಾಜವನ್ನು ಬದಲಾಯಿಸುವ ಶಕ್ತಿ ಶಿಕ್ಷಣಕ್ಕಿದೆ. ಸರ್ಕಾರಿ ಹಾಗೂ ಗ್ರಾಮೀಣ ಶಾಲೆಗಳಲ್ಲಿ ವ್ಯಾಸಂಗ ಮಾಡುವ ಬಡ ಮಕ್ಕಳಿಗೆ ಪ್ರೋತ್ಸಾಹ ನೀಡಲು ಶೇ.15ರಷ್ಟು ಗ್ರಾಮೀಣ ಮೀಸಲಾತಿಯೊಂದಿಗೆ, ಹೆಚ್ಚುವರಿಯಾಗಿ ಶೇ.7.5ರಷ್ಟು ಆಂತರಿಕ ಮೀಸಲಾತಿ ನೀಡಲು ಸರ್ಕಾರ ಹೊಸ ರೂಪ ನೀಡುತ್ತಿದೆ ಎಂದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ