
ರಾಜ್ಯದಲ್ಲಿ ಇತ್ತೀಚೆಗೆ ಹೃದಯಾಘಾತದಿಂದ ಸಂಭವಿಸಿರುವ ಸಾವುಗಳು ಆತಂಕ ಮೂಡಿಸಿವೆ. ಇವುಗಳಲ್ಲಿ ಹಲವರು ಯುವ ವಯಸ್ಸಿನವರು ಹೃದಯಾಘಾತಕ್ಕೆ ಬಲಿಯಾಗುತ್ತಿದ್ದಾರೆ ಎಂಬುದೇ ಗಮನಾರ್ಹ ಸಂಗತಿ.
ತುಮಕೂರು ಜಿಲ್ಲೆಯ ಗುಬ್ಬಿ ತಾಲ್ಲೂಕಿನ ಅರೇಹಳ್ಳಿ ಗ್ರಾಮದ ಸಿದ್ದೇಶ್ (23) ಸ್ನೇಹಿತನ ಮನೆಗೆ ಊಟಕ್ಕೆ ಹೋಗಿದ್ದ. ಊಟ ಮುಗಿಸಿಕೊಂಡು ಮನೆಗೆ ವಾಪಸ್ ಬರುತ್ತಿದ್ದ ವೇಳೆ, ಚಿಕ್ಕನಾಯಕನಹಳ್ಳಿಯ ಬಳಿ ಅವರು ಹಠಾತ್ ಎದೆ ನೋವಿನಿಂದ ಕುಸಿದು ಬಿದ್ದರು. ಸ್ನೇಹಿತರು ತಕ್ಷಣವೇ ಅವರನ್ನು ಗುಬ್ಬಿ ಆಸ್ಪತ್ರೆಗೆ ಕರೆದೊಯ್ಯಲಾದರೂ, ಆಗಲೇ ಅವರು ಮೃತಪಟ್ಟಿದ್ದರು.
ವಿರಾಜಪೇಟೆಯ ಚಿಕ್ಕಪೇಟೆ ವಾರ್ಡ್ನಿಂದ ಆಯ್ಕೆಯಾದ ಮಾಜಿ ಪುರಸಭೆ ಸದಸ್ಯೆ ಬಿ. ಆಶಾ ಸುಬ್ಬಯ್ಯ ಅವರಿಗೆ ತಡರಾತ್ರಿ ಹೃದಯಾಘಾತ ಉಂಟಾಗಿ ತೀವ್ರ ಅನಾರೋಗ್ಯಕ್ಕೆ ಒಳಗಾಗಿದ್ದರು. ಅವರನ್ನು ತಕ್ಷಣ ಮೈಸೂರಿಗೆ ಕರೆದೊಯ್ಯುವ ಪ್ರಯತ್ನ ನಡೆದರೂ ಮಾರ್ಗಮಧ್ಯೆ ಅವರು ಕೊನೆಯುಸಿರೆಳೆದರು.
ತಾರಾನಗರ ಗ್ರಾಮದ ನಿವಾಸಿ ರಾಜೇಶ್ (35) ಅವರು ಜಿಂದಾಲ್ ಕಾರ್ಖಾನೆಯಲ್ಲಿ ಸೂಪರ್ವೈಸರ್ ಆಗಿ ಕೆಲಸ ಮಾಡುತ್ತಿದ್ದರು. ನಿನ್ನೆ ಸಂಜೆ ತಮ್ಮ ಮನೆಲ್ಲಿಯೇ ಎದೆ ನೋವಿನ ತೀವ್ರತೆಯಿಂದ ಕುಸಿದು ಬಿದ್ದರು. ಅವರನ್ನು ಬಳ್ಳಾರಿಯ ವಿಮ್ಸ್ ಆಸ್ಪತ್ರೆಗೆ ರವಾನೆ ಮಾಡುತ್ತಿರುವ ವೇಳೆ ಮಾರ್ಗಮಧ್ಯೆ ಮೃತಪಟ್ಟರು. ಅವರು ಯಾವುದೇ ದುಶ್ಚಟಗಳಲ್ಲಿ ತೊಡಗಿದ್ದವರಲ್ಲ. ಇನ್ನೂ ವಿವಾಹವೂ ಆಗಿರಲಿಲ್ಲ.
ತುಮಕೂರು ನಗರದ ದಿಬ್ಬೂರಿನ ನಿವಾಸಿ ಬಾವಿಕಟ್ಟೆ ವಿಶ್ವನಾಥ್ (66) ಅವರು ಆರೋಗ್ಯವಂತರಾಗಿದ್ದರೂ, ನಿನ್ನೆ ಎದೆ ನೋವಿನಿಂದ ಇದ್ದಕ್ಕಿದ್ದಂತೆ ಕುಸಿದು ಬಿದ್ದರು. ತಕ್ಷಣ ಆಸ್ಪತ್ರೆಗೆ ಕರೆದೊಯ್ಯಲಾದರೂ ಅವರು ಅಸ್ವಸ್ಥಗೊಂಡ ಕ್ಷಣಗಳಲ್ಲಿ ಮೃತಪಟ್ಟರು.
ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿಯಲ್ಲಿ, ಹಾಸನ ಮೂಲದ ಸತೀಶ್ (46) ಅವರು ಲಾಯಿಲದ ಬಾಡಿಗೆ ಮನೆಯಲ್ಲಿ ವಾಸವಿದ್ದರು. ಇಂದು ಬೆಳಿಗ್ಗೆ ಸ್ನಾನ ನಂತರ ಕುಸಿದು ಬಿದ್ದ ಅವರನ್ನು ಪತ್ನಿ ಜಯಶ್ರೀ ತಕ್ಷಣ ಆಸ್ಪತ್ರೆಗೆ ಕರೆದೊಯ್ದರು. ಆದರೆ ವೈದ್ಯರು ಆಸ್ಪತ್ರೆಗೆ ತರಲಾದಾಗಲೇ ಅವರು ಮೃತಪಟ್ಟಿದ್ದಾಗಿ ಘೋಷಿಸಿದರು. ಸತೀಶ್ ಬೆಳ್ತಂಗಡಿ ತಾಲೂಕು ಆಡಳಿತ ಸೌಧದಲ್ಲಿ ಪ್ರಥಮ ದರ್ಜೆ ಸಹಾಯಕನಾಗಿ ಕೆಲಸ ಮಾಡುತ್ತಿದ್ದರು.
ಈ ಘಟನೆಗಳು ಹೃದಯಾಘಾತದ ಅಪಾಯವನ್ನು ಗಂಭೀರವಾಗಿ ಪರಿಗಣಿಸಬೇಕೆಂಬ ಅಗತ್ಯವನ್ನು ಒತ್ತಿಹೇಳುತ್ತಿವೆ, ವಿಶೇಷವಾಗಿ ಯುವಜನರಲ್ಲಿ ಕೂಡ ಇದರ ಪ್ರಮಾಣ ಹೆಚ್ಚುತ್ತಿರುವುದು ಚಿಂತಾಜನಕವಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ