
ಬೆಂಗಳೂರು (ಆ.19): ರಾಜ್ಯದಲ್ಲಿ ಬಹುದಿನಗಳಿಂದ ಭಾರೀ ಬೇಡಿಕೆಯಾಗಿದ್ದ ದಲಿತ ಸಮುದಾಯಗಳಿಗೆ ಒಳಮೀಸಲಾತಿ ನೀಡಬೇಕೆಂಬ ಕೂಗನ್ನು ಸಿಎಂ ಸಿದ್ದರಾಮಯ್ಯ ಸರ್ಕಾರ ಈಡೇರಿಸಿದೆ. ನಿವೃತ್ತ ನ್ಯಾಯಮೂರ್ತಿ ನಾಗಮೋಹನದಾಸ್ ಅವರು ನೀಡಿದ್ದ ವರದಿ ಸ್ವೀಕರಿಸಿ ಚರ್ಚೆಗಿಟ್ಟ ಬೆನ್ನಲ್ಲಿಯೇ ತೀವ್ರ ಪರ-ವಿರೋಧ ವ್ಯಕ್ತವಾಗಿತ್ತು. ಇದರ ಬೆನ್ನಲ್ಲಿಯೇ ಇಂದು ವಿಶೇಷ ಸಚಿವ ಸಂಪುಟ ಸಭೆಯನ್ನು ನಡೆಸಿದ ಸಿಎಂ ಸಿದ್ದರಾಮಯ್ಯ ಎಡಗೈ, ಬಲಗೈ ಸಮುದಾಯಕ್ಕೆ ಸಮಾನವಾಗಿ ಶೇ.6 ಮೀಸಲಾತಿ ನೀಡಿದ್ದಾರೆ. ಉಳಿದ ಸಮುದಾಯಕ್ಕೆ ಶೇ.5 ಮೀಸಲಾತಿ ಹಂಚಿಕೆ ಮಾಡಿದ್ದಾರೆ. ಈ ಮೂಲಕ ಪರಿಶಿಷ್ಟ ಜಾತಿಯ ಶೇ.17 ಮೀಸಲಾತಿಯನ್ನು ಸಮಾನಾವಾಗಿ ಹಂಚಿಕೆ ಮಾಡಿದ್ದಾರೆಂದು ಸಿಎಂ ಸಿದ್ದರಾಮಯ್ಯ ಅವರಿಗೆ ಎಲ್ಲ ಸಮುದಾಯದ ನಾಯಕರು ಸಿಹಿ ತಿನ್ನಿಸಿ ಸಂಭ್ರಮಿಸಿದರು. ಎಲ್ಲ ನಾಯಕರು ಸಿಹಿ ತಿನ್ನಿಸಿದ್ದರಿಂದ ಸಿಎಂ ಸಿದ್ದರಾಮಯ್ಯ ಅವರಿಗೆ ಸಿಹಿ ಸಾಕೆನಿಸುವಂತಿತ್ತು.
ಎಲ್ಲಾ ನಾಯಕರಿಗೂ ಸಮಾಧಾನ ಆಗಿದೆ:
ಕಾನೂನು ಸಚಿವ ಎಚ್. ಕೆ. ಪಾಟೀಲ್ ಮಾತನಾಡಿ, ಒಳಮೀಸಲಾತಿ ನೀಡುವ ವಿಚಾರದಲ್ಲಿ ವಿಶೇಷ ಸಂಪುಟ ಸಭೆ ಎರಡುವರೆ ಗಂಟೆ ನಡೆಯಿತು. ಎಲ್ಲಾ ಸಂತೋಷ ಸಮಾಧಾನದಿಂದ ಬಂದಿದ್ದೇವೆ. ಎಲ್ಲಾರಿಗೂ ಸಮಾಧನವಾಗಿದೆ. ಸಚಿವರಾದ ಮುನಿಯಪ್ಪ, ಪರಮೇಶ್ವರ್, ಶಿವರಾಜ್ ತಂಗಡಗಿ, ಮಹದೇವಪ್ಪ ಎಲ್ಲಾ ಸಂತೋಷವಾಗಿದ್ದಾರೆ. ಈ ಬಗ್ಗೆ ನಾಳೆ ಸದನದಲ್ಲಿ ಸಿಎಂ ಸಿದ್ದರಾಮಯ್ಯ ಅವರು ಈ ವಿಷಯ ತಿಳಿಸುತ್ತಾರೆ ಎಂದು ಮಾಹಿತಿ ನೀಡಿದರು.
ಒಳ್ಳೆಯ ನಿರ್ಧಾರವಾಗಿದೆ, 3 ಭಾಗ ಮಾಡಲಾಗಿದೆ:
ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ್ ತಂಗಡಗಿ ಹೇಳಿಕೆ... ಎಲ್ಲಾ ಒಳ್ಳೆಯ ನಿರ್ಧಾರವಾಗಿದೆ.. ಮೂರು ಭಾಗಗಳಾಗಿ ಮಾಡಲಾಗಿದೆ.. ಎಡಗೈಗೆ ಶೇ.6, ಬಗೈಗೆ ಶೇ.6 ಹಾಗೂ ಇತರೆ ಸಮುದಾಯಗಳಿಗೆ ಶೇ.5 ಮೀಸಲಾತಿ ಕೊಡಲಾಗಿದೆ.
ಮಾಜಿ ಸಚಿವರನ್ನು ಹೊತ್ತು ಮೆರೆಸಿದ ಕಾರ್ಯಕರ್ತರು:
ವಿಧಾನ ಸೌಧ ಬಳಿ ಮಾಜಿ ಸಚಿವ ಹೆಚ್. ಆಂಜನೇಯ ಅವರನ್ನ ಹೊತ್ತು ಮೆರೆಸಿದ ಕಾರ್ಯಕರ್ತರು. ಹೆಚ್.ಸಿ. ಮಹಾದೇವಪ್ಪನವರಿಗೆ ಸಿಹಿ ತಿನಿಸಿ ಕಾರ್ಯಕರ್ತರ ಸಂಭ್ರಮ.
ಪರಿಶಿಷ್ಟ ಜಾತಿಯ 101 ಸಮುದಾಯಕ್ಕೂ ಸಾಮಾಜಿಕ ನ್ಯಾಯ ಸಿಕ್ಕಿದೆ:
ಆಹಾರ ಸಚಿವ ಕೆಹೆಚ್. ಮುನಿಯಪ್ಪ ರವರ ಪ್ರತಿಕ್ರಿಯೆ, ಎಲ್ಲಾರಿಗೂ ಒಳ್ಳೆಯದಾಗಲಿ.... ಅಧಿವೇಶನದ ಸಂದರ್ಭದಲ್ಲಿ ನಾವು ಯಾವುದೇ ಪತ್ರಿಕಾ ಹೇಳಿಕೆಗಳನ್ನು ಕೊಡುವ ಹಾಗಿಲ್ಲ ನಾಳೆ ಮುಖ್ಯಮಂತ್ರಿಗಳೆ ಇದರ ಕುರಿತು ಹೇಳಿಕೆ ನೀಡಲಿದ್ದಾರೆ. ಪರಿಶಿಷ್ಟ ಜಾತಿಯ ನೂರೊಂದು ಜಾತಿಗಳಿಗೂ ಸಾಮಜಿಕ ನ್ಯಾಯ ಸಿಕ್ಕಿದ್ದು ಯಾವ ಜಾತಿಗೂ ಅನ್ಯಾಯವಾಗದ ರೀತಿಯಲ್ಲಿ ತೀರ್ಮಾನವಾಗಿದೆ.
ಇನ್ನು ರಾಜ್ಯದಲ್ಲಿ ಅಲೆಮಾರಿ ಸಮುದಾಯವನ್ನು ಎಡಗೈ ಅಥವಾ ಬಲಗೈ ಸಮುದಾಯಕ್ಕೆ ಸೇರಿಸದೇ ಇತರೆ ಪರಿಶಿಷ್ಟ ಜಾತಿಗಳ ಪಟ್ಟಿಗೆ ಸೇರಿಸಿದ್ದಕ್ಕೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸಿಎಂ ಸಿದ್ದರಾಮಯ್ಯ ಹಾಗೂ ಕಾಂಗ್ರೆಸ್ ಸರ್ಕಾರದ ವಿರುದ್ಧ ಘೋಷಣೆ ಕೂಗಿ, ಅಸಮಾಧಾನ ಹೊರಹಾಕಿದ್ದಾರೆ. ಕಾಂಗ್ರೆಸ್ ಸರ್ಕಾರದಿಂದ ರಾಜ್ಯದಲ್ಲಿ ನಮ್ಮನ್ನ ಬೀದಿಗೆ ತಂದಿದ್ದಾರೆ ಎಂದು ಎಂದು ಅಲೆಮಾರಿ ಸಮುದಾಯದ ಕಾರ್ಯಕರ್ತರು ಆಕ್ರೋಶ ಹೊರಹಾಕಿದರು. ಇನ್ನು ಗಲಾಟೆ ಆಗುವ ಮುನ್ಸೂಚನೆ ಅರಿತಿದ್ದ ಪೊಲೀಸರು ಅಲೆಮಾರಿ ಸಮುದಾಯದ ಕಾರ್ಯಕರ್ತರನ್ನು ವಿಧಾನಸೌಧದಿಂದ ಹೊರಗೆ ಕಳುಹಿಸಿ, ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತಂದಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ