
ರಿ ಭೋಯ್, ಮೇಘಾಲಯ: ಭಾರತ ಸರ್ಕಾರದ ಬೆಂಗಳೂರಿನ ವಾರ್ತಾ ಶಾಖೆಯು, ಮೇಘಾಲಯಕ್ಕೆ ಆಯೋಜಿಸಿರುವ ಮಾಧ್ಯಮ ಪ್ರವಾಸದ ಭಾಗವಾಗಿ, ಕರ್ನಾಟಕದ ಮಾಧ್ಯಮ ಪ್ರತಿನಿಧಿಗಳ ತಂಡವು ಇಂದು ರಿ ಭೋಯ್ ಜಿಲ್ಲೆಯ ಉಮ್ದೆನ್ ಡಿವಾನ್ ರೇಷ್ಮೆ ಗ್ರಾಮಕ್ಕೆ ಭೇಟಿ ನೀಡಿತು. ಈ ಗ್ರಾಮವು ತನ್ನ ಶ್ರೀಮಂತ ರೇಷ್ಮೆ ನೇಯ್ಗೆಯ ಸಂಪ್ರದಾಯ ಮತ್ತು ಸಮುದಾಯ ಆಧಾರಿತ ಕರಕುಶಲತೆಗೆ ಹೆಸರುವಾಸಿಯಾಗಿದೆ.
ಸ್ಥಳೀಯವಾಗಿ 'ರೈಂಡೈ' ಎಂದು ಕರೆಯಲ್ಪಡುವ ಎರಿ ರೇಷ್ಮೆಯನ್ನು ತಯಾರಿಸಲು ಈ ಗ್ರಾಮವು ಪ್ರಸಿದ್ಧವಾಗಿದೆ. ಈ ರೇಷ್ಮೆಗೆ ಇತ್ತೀಚೆಗೆ ಪ್ರತಿಷ್ಠಿತ ಭೌಗೋಳಿಕ ಸೂಚ್ಯಂಕ (ಜಿಐ ಟ್ಯಾಗ್) ದೊರೆತಿದ್ದು, ಇದು ಅದರ ಪ್ರಾದೇಶಿಕ ಅನನ್ಯತೆ ಮತ್ತು ಸಾಂಪ್ರದಾಯಿಕ ಮೌಲ್ಯವನ್ನು ಗುರುತಿಸಿದೆ. ಎರಿ ರೇಷ್ಮೆಯನ್ನು 'ಅಹಿಂಸಾ' ರೇಷ್ಮೆಯೆಂದು ಬಣ್ಣಿಸಲಾಗಿದ್ದು, ರೇಷ್ಮೆ ಹುಳುಗಳಿಗೆ ಹಾನಿ ಮಾಡದೆ ಇದನ್ನು ಉತ್ಪಾದಿಸಲಾಗುತ್ತದೆ. ಇದು ಪರಿಸರ ಸ್ನೇಹಿಯಾಗಿ ತಯಾರಿಸಲ್ಪಟ್ಟ ವಸ್ತ್ರವಾಗಿದೆ.
ಭೇಟಿಯ ಸಂದರ್ಭದಲ್ಲಿ, ಮಾಧ್ಯಮ ತಂಡವು ಸ್ಥಳೀಯ ಕುಶಲಕರ್ಮಿಗಳೊಂದಿಗೆ, ವಿಶೇಷವಾಗಿ ಮಹಿಳಾ ನೇಕಾರರೊಂದಿಗೆ ಸಂವಾದ ನಡೆಸಿತು. ರೇಷ್ಮೆ ಹುಳು ಸಾಕಣೆ, ನೂಲು ತೆಗೆಯುವುದು, ಬಣ್ಣ ಹಾಕುವುದು ಮತ್ತು ಕೈಮಗ್ಗದ ನೇಯ್ಗೆಯವರೆಗೆ ರೇಷ್ಮೆ ಉತ್ಪಾದನೆಯ ಸಂಪೂರ್ಣ ಪ್ರಕ್ರಿಯೆಯ ಬಗ್ಗೆ ಮಾಹಿತಿ ಪಡೆದುಕೊಂಡಿತು. ಕುಶಲಕರ್ಮಿಗಳು ಸ್ಥಳೀಯ ಸಸ್ಯಗಳು ಮತ್ತು ಸಾವಯವ ವಸ್ತುಗಳಿಂದ ಪಡೆದ ನೈಸರ್ಗಿಕ ಬಣ್ಣಗಳ ಬಳಕೆಯನ್ನು ಪ್ರದರ್ಶಿಸಿದರು. ಇದು ಎರಿ ರೇಷ್ಮೆಗೆ ವಿಶಿಷ್ಟವಾದ ಬಣ್ಣಗಳನ್ನು ನೀಡುವುದಲ್ಲದೆ, ರಸಾಯನಿಕ ಮುಕ್ತ ಮತ್ತು ಪರಿಸರ ಜವಾಬ್ದಾರಿಯುತ ಉತ್ಪಾದನೆಯನ್ನು ಖಚಿತಪಡಿಸುತ್ತದೆ.
ಮಹಿಳಾ ನೇತೃತ್ವದ ಸ್ವಸಹಾಯ ಸಂಘಗಳ ಸದಸ್ಯರೊಂದಿಗಿನ ಸಂವಾದದಲ್ಲಿ, ಅವರು ತಮ್ಮ ಸಾಂಪ್ರದಾಯಿಕ ನೇಯ್ಗೆ ತಂತ್ರಗಳನ್ನು ಸಂರಕ್ಷಿಸುವಲ್ಲಿನ ಅನುಭವ, ಉತ್ಪಾದನಾ ಸಾಮರ್ಥ್ಯ ಸುಧಾರಿಸುವುದು ಮತ್ತು ಸಾಮೂಹಿಕ ಪ್ರಯತ್ನದ ಮೂಲಕ ಸುಸ್ಥಿರ ಜೀವನೋಪಾಯ ಸೃಷ್ಟಿಸುವ ಬಗ್ಗೆ ಮಾಹಿತಿ ಹಂಚಿಕೊಂಡರು.
ಮಾಧ್ಯಮ ಪ್ರತಿನಿಧಿಗಳು ಎರಿ ರೇಷ್ಮೆಯ ಶಾಲುಗಳು ಮತ್ತು ಸ್ತೋಲ್ಗಳಂತಹ (ಅಂಗ ವಸ್ತ್ರ) ಉತ್ಪನ್ನಗಳ ಸಂಕೀರ್ಣ ನೇಯ್ಗೆ ಮಾದರಿಗಳು ಮತ್ತು ನೈಸರ್ಗಿಕ ವಿನ್ಯಾಸವನ್ನು ವೀಕ್ಷಿಸಿದರು ಹಾಗೂ ಉಮ್ದೆನ್ ಡಿವಾನ್ನ ಕರಕುಶಲತೆಯನ್ನು ವ್ಯಾಖ್ಯಾನಿಸುವ ಸಂಪ್ರದಾಯ ಮತ್ತು ಕೌಶಲ್ಯದ ಸಮ್ಮಿಲನವನ್ನು ಶ್ಲಾಘಿಸಿದರು. ಮಾರುಕಟ್ಟೆ ಪ್ರವೇಶ, ಜಿಐ-ಟ್ಯಾಗ್ ಹೊಂದಿರುವ ಉತ್ಪನ್ನಗಳ ಬ್ರ್ಯಾಂಡಿಂಗ್ ಮತ್ತು ರಾಷ್ಟ್ರೀಯ ಮಟ್ಟದಲ್ಲಿ ಸ್ಥಳೀಯ ಕಲೆಗಳನ್ನು ಉತ್ತೇಜಿಸುವಲ್ಲಿ ಮಾಧ್ಯಮಗಳ ಪಾತ್ರದ ಕುರಿತು ಚರ್ಚೆಗಳು ನಡೆದವು.
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ತಮ್ಮ 'ಮನ್ ಕಿ ಬಾತ್' ಕಾರ್ಯಕ್ರಮದ 123 ನೇ ಸಂಚಿಕೆಯಲ್ಲಿ ಮೇಘಾಲಯದ ಎರಿ ರೇಷ್ಮೆಯ ಬಗ್ಗೆ ಉಲ್ಲೇಖಿಸಿರುವುದು ಈ ಭೇಟಿಗೆ ಹೆಚ್ಚಿನ ಮಹತ್ವವನ್ನು ತಂದಿದೆ. ಅಲ್ಲಿ ಅವರು ಭಾರತದ ವೈವಿಧ್ಯಮಯ ಕಲೆ, ಕರಕುಶಲತೆ ಮತ್ತು ಸಾಂಪ್ರದಾಯಿಕ ಕೌಶಲ್ಯಗಳನ್ನು ಕೊಂಡಾಡಿದ್ದರು. ಪ್ರಧಾನಮಂತ್ರಿಯವರು ಸ್ವಸಹಾಯ ಸಂಘಗಳ ಮೂಲಕ ಎರಿ ರೇಷ್ಮೆ ಉತ್ಪಾದನೆಯನ್ನು ಮುನ್ನಡೆಸುತ್ತಿರುವ ಮೇಘಾಲಯದ ಮಹಿಳೆಯರನ್ನು ಶ್ಲಾಘಿಸಿದ್ದು, ಇದನ್ನು ಸುಸ್ಥಿರತೆ, ಸಾಂಸ್ಕೃತಿಕ ಸಂರಕ್ಷಣೆ ಮತ್ತು ಜೀವನೋಪಾಯ ಸೃಷ್ಟಿಯ ಮಾದರಿ ಎಂದು ಬಣ್ಣಿಸಿದ್ದರು.
ಕರ್ನಾಟಕದ ಮಾಧ್ಯಮ ತಂಡದ ಸದಸ್ಯರು ಕುಶಲಕರ್ಮಿಗಳ ದೃಢಸಂಕಲ್ಪ ಮತ್ತು ಸಮರ್ಪಣಾ ಮನೋಭಾವವನ್ನು ಶ್ಲಾಘಿಸಿದರು. ಉಮ್ದೆನ್ ಡಿವಾನ್ ರೇಷ್ಮೆ ಗ್ರಾಮವು ಜಿಐ-ಟ್ಯಾಗ್ ಹೊಂದಿರುವ ಸ್ಥಳೀಯ ಉತ್ಪನ್ನಗಳ ಉತ್ತೇಜನ, ಗ್ರಾಮೀಣ ಉದ್ಯಮಶೀಲತೆ ಮತ್ತು ಈ ಪ್ರದೇಶದ ಸುಸ್ಥಿರ ಪ್ರವಾಸೋದ್ಯಮಕ್ಕೆ ಕೊಡುಗೆ ನೀಡುವ ಸಾಮರ್ಥ್ಯದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ