
ಬೆಂಗಳೂರು (ಜೂ.4): ಸಿದ್ದರಾಮಯ್ಯ ಸರ್ಕಾರ ಅಧಿಕಾರಕ್ಕೆ ಬಂದ ದಿನದಿಂದಲೇ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಬಗ್ಗೆ ಭಾರೀ ಚರ್ಚೆಗಳು ಉಂಟಾಗಿವೆ. ಒಂದಲ್ಲ, ಎರಡಲ್ಲ ಸಾಲು ಸಾಲು ಲೋಪಗಳು ಕಂಡುಬಂದಿದ್ದರೂ ಸರ್ಕಾರ ಮಾತ್ರ ಇದನ್ನು ಒಪ್ಪಿಕೊಳ್ಳಲು ಸಿದ್ದವೇ ಇಲ್ಲ. ಹಂಪಿ ಗ್ಯಾಂಗ್ರೇಪ್ನಿಂದ ಹಿಡಿದು, ಬುಧವಾರ ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಸಂಭವಿಸಿದ ಕಾಲ್ತುಳಿತದವರೆಗೂ ಜನರ ಕಣ್ಣೆದುರು ಕಾಣುತ್ತಿರುವುದು ಸರ್ಕಾರದ ಅಸಹಾಯಕತೆ.
ಅಷ್ಟಕ್ಕೂ ರಾಜ್ಯದಲ್ಲಿ ಎಲ್ಲಾ ಪರಿಸ್ಥಿತಿಯನ್ನು ನಿಭಾಯಿಸುವಷ್ಟು ಪೊಲೀಸ್ ಬಲವೇ ಇಲ್ಲ. ಇದನ್ನು ಹೇಳಿರೋದು ಸ್ವತಃರ ರಾಜ್ಯದ ಗೃಹ ಸಚಿವ ಡಾ.ಜಿ ಪರಮೇಶ್ವರ್. 'ಪೊಲೀಸ್ ಇಲಾಖೆಯಲ್ಲಿ ಸುಮಾರು 15 ಸಾವಿರ ಹುದ್ದೆಗಳು ಖಾಲಿ ಇವೆ. ಅದನ್ನು ಭರ್ತಿ ಮಾಡಲಾಗುವುದು. ಈಗಾಗಲೇ 545 ಪಿಎಸ್ಐಗಳು ತರಬೇತಿ ಪಡೆಯುತ್ತಿದ್ದಾರೆ. 402 ಪಿಎಸ್ಐ ಫಲಿತಾಂಶ ಬಾಕಿ ಇದೆ. ಶೀಘ್ರವಾಗಿ ಬಿಡುಗಡೆ ಮಾಡಲಾಗುವುದು. ಇದರಲ್ಲಿ 219 ಪಿಎಸ್ಐಗಳನ್ನು ಬೆಂಗಳೂರು ನಗರಕ್ಕೆ ನೀಡಲಾಗುವುದು' ಎಂದು ಇತ್ತೀಚೆಗೆ ನಡೆದ ಕಾರ್ಯಕ್ರಮವೊಂದರಲ್ಲಿ ಹೇಳಿದ್ದರು. ಆದರೆ, ಇಲ್ಲಿಯವರೆಗೂ ಅದು ಹೇಳಿಕೆಯಾಗಿ ಮಾತ್ರವೇ ಉಳಿದಿದೆ.
ಕರ್ನಾಟಕದ ಕಾನೂನು ಮತ್ತು ಸುವ್ಯವಸ್ಥೆಯನ್ನು ಕೆಟ್ಟದಾಗಿ ಬೆಳಕಿಗೆ ತಂದಿರುವ ಸಮಯದಲ್ಲಿ, ಪೊಲೀಸ್ ಇಲಾಖೆಯಲ್ಲಿ 15 ಸಾವಿರಕ್ಕೂ ಅಧಿಕ ಹುದ್ದೆಗಳು ಖಾಲಿ ಇವೆ ಎಂದು ಅಂಕಿಅಂಶಗಳು ಬಹಿರಂಗಪಡಿಸಿವೆ. 1,11,330 ರ ಮಂಜೂರಾದ ಬಲಕ್ಕೆ ಹೋಲಿಸಿದರೆ, ಪೊಲೀಸ್ ಪಡೆಯು ಶೇ. 16.69 ರಷ್ಟು ಸಿಬ್ಬಂದಿ ಕೊರತೆಯಿಂದ ಬಳಲುತ್ತಿದೆ.
ಇಷ್ಟೇ ಅಲ್ಲ, ಕರ್ನಾಟಕದಲ್ಲಿ ಪೊಲೀಸ್-ಸಾರ್ವಜನಿಕ ಅನುಪಾತವು 1 ಲಕ್ಷ ಜನಸಂಖ್ಯೆಗೆ 165.04 ರಷ್ಟಿದ್ದು, ಇದು ಪೊಲೀಸ್ ಸಂಶೋಧನೆ ಮತ್ತು ಅಭಿವೃದ್ಧಿ ಬ್ಯೂರೋ (BPR&D) ಪ್ರಕಾರ ರಾಷ್ಟ್ರೀಯ ಸರಾಸರಿ 196.88 ಕ್ಕೆ ಹೋಲಿಸಿದರೆ ತುಂಬಾ ಕಡಿಮೆಯಾಗಿದೆ.
ಪ್ರಸ್ತುತ, ಪೊಲೀಸ್ ಪಡೆಯ ಅನುಮೋದಿತ ಬಲ 1,11,330 ಆಗಿದ್ದು, ನಿಜವಾದ ಬಲ 92,749 ಆಗಿದೆ. ಅಧಿಕೃತ ಅಂಕಿಅಂಶಗಳ ಪ್ರಕಾರ, 6,591 ಪೊಲೀಸ್ ಕಾನ್ಸ್ಟೆಬಲ್ ಹುದ್ದೆಗಳು ಮತ್ತು 819 ಹೆಡ್ ಕಾನ್ಸ್ಟೆಬಲ್ ಹುದ್ದೆಗಳು ಖಾಲಿ ಉಳಿದಿವೆ.
ಹೆಚ್ಚುವರಿಯಾಗಿ, 2,107 ಸಶಸ್ತ್ರ ಪೊಲೀಸ್ ಕಾನ್ಸ್ಟೇಬಲ್ (ನಗರ ಸಶಸ್ತ್ರ ಮೀಸಲು/ಜಿಲ್ಲಾ ಸಶಸ್ತ್ರ ಮೀಸಲು) ಮತ್ತು 3,830 ಮೀಸಲು ಪೊಲೀಸ್ ಕಾನ್ಸ್ಟೇಬಲ್ (ಕರ್ನಾಟಕ ರಾಜ್ಯ ಮೀಸಲು ಪೊಲೀಸ್) ಹುದ್ದೆಗಳು ಭರ್ತಿಯಾಗಿಲ್ಲ.
ಈ ಹುದ್ದೆಗಳ ಭರ್ತಿ ಕುರಿತು ಮಾತನಾಡಿದ್ದ ಡಾ. ಪರಮೇಶ್ವರ್, 600 ಸಬ್ ಇನ್ಸ್ಪೆಕ್ಟರ್ಗಳು ಸೇರಿದಂತೆ 4,115 ಪೊಲೀಸ್ ಸಿಬ್ಬಂದಿಯನ್ನು ನೇಮಕ ಮಾಡಿಕೊಳ್ಳಲು ಅನುಮತಿ ನೀಡಲಾಗಿದೆ ಮತ್ತು ಅದಕ್ಕಾಗಿ ನೇಮಕಾತಿ ಅಧಿಸೂಚನೆ ಇನ್ನೂ ಹೊರಡಿಸಲಾಗಿಲ್ಲ ಎಂದು ಹೇಳಿದರು. ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಮಾತನಾಡಿ, ಸಿಬ್ಬಂದಿ ಕೊರತೆಯು ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವಲ್ಲಿ, ಸಾರ್ವಜನಿಕ ಸುರಕ್ಷತೆಯನ್ನು ಖಾತ್ರಿಪಡಿಸುವಲ್ಲಿ ವಿವಿಧ ಸವಾಲುಗಳಿಗೆ ಕಾರಣವಾಗುತ್ತದೆ ಮತ್ತು ಇದು ಅಸ್ತಿತ್ವದಲ್ಲಿರುವ ಸಿಬ್ಬಂದಿಯ ಮೇಲೆ ಹೆಚ್ಚಿನ ಕೆಲಸದ ಒತ್ತಡವನ್ನುಂಟು ಮಾಡುತ್ತದೆ ಎಂದಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ