
ಬೆಂಗಳೂರು (ಜ.15): ರಾಜ್ಯ ರಾಜಕೀಯದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತೊಮ್ಮೆ ತಮ್ಮ 'ಮಾಸ್ಟರ್ ಸ್ಟ್ರೋಕ್' ಮೂಲಕ ಗಮನ ಸೆಳೆದಿದ್ದಾರೆ. ಜನವರಿ 22 ರಿಂದ 31 ರವರೆಗೆ ವಿಧಾನಮಂಡಲದ ಜಂಟಿ ಅಧಿವೇಶನ ಕರೆಯುವ ಸರ್ಕಾರದ ಹಠಾತ್ ನಿರ್ಧಾರವು ವಿರೋಧ ಪಕ್ಷಗಳಾದ ಬಿಜೆಪಿ ಮತ್ತು ಜೆಡಿಎಸ್ನ ಬೃಹತ್ ಹೋರಾಟದ ಪ್ಲಾನ್ಗಳನ್ನು ಬುಡಮೇಲು ಮಾಡುವ ಜೊತೆಗೆ, ಸ್ವಪಕ್ಷದ ಆಂತರಿಕ ಪೈಪೋಟಿಗೂ ಲಗಾಮು ಹಾಕುವ ಮುನ್ಸೂಚನೆ ನೀಡಿದೆ.
ಕೇಂದ್ರ ಸರ್ಕಾರವು ಉದ್ಯೋಗ ಖಾತ್ರಿ (MGNREGA) ಬದಲಿಗೆ ತಂದಿರುವ VB-G RAM G ಕಾಯ್ದೆಯ ವಿರುದ್ಧ ನಿರ್ಣಯ ಅಂಗೀಕರಿಸಲು ಸರ್ಕಾರ ಜಂಟಿ ಅಧಿವೇಶನ ಘೋಷಿಸಿದೆ. ಆದರೆ ಇದರ ಅಸಲಿ ಉದ್ದೇಶ ವಿರೋಧ ಪಕ್ಷದ ಪ್ಲಾನ್ ವಿಫಲಗೊಳಿಸುವುದೇ ಆಗಿದೆ ಎಂಬ ಚರ್ಚೆ ಜೋರಾಗಿದೆ. ಜನವರಿ 24 ರಂದು ಹಾಸನದಲ್ಲಿ ಬೃಹತ್ ಸಮಾವೇಶಕ್ಕೆ ಜೆಡಿಎಸ್ ಸಜ್ಜಾಗಿತ್ತು. ಆದರೆ ಅಧಿವೇಶನ ಇರುವುದರಿಂದ ಶಾಸಕರು ಮತ್ತು ಪ್ರಮುಖ ನಾಯಕರು ಸದನದಲ್ಲಿ ಹಾಜರಿರಲೇಬೇಕಾದ ಅನಿವಾರ್ಯತೆ ಎದುರಾಗಿದೆ. ಜೊತೆಗೆ, ಜನವರಿ 17 ರಂದು ಬಳ್ಳಾರಿಯಿಂದ ಬೆಂಗಳೂರಿಗೆ ಪಾದಯಾತ್ರೆ ಆರಂಭಿಸಲು ಬಿಜೆಪಿ ಹವಣಿಸುತ್ತಿತ್ತು. ಈಗ ಅಧಿವೇಶನದ ನೆಪದಲ್ಲಿ ಈ ಹೋರಾಟದ ತೀವ್ರತೆ ತಗ್ಗಿಸುವಲ್ಲಿ ಸಿಎಂ ಯಶಸ್ವಿಯಾಗಿದ್ದಾರೆ.
ಸಂಕ್ರಾಂತಿ ಕಳೆದ ಕೂಡಲೇ ಮುಖ್ಯಮಂತ್ರಿ ಬದಲಾವಣೆ ಗಾಳಿ ಜೋರಾಗಿ ಬೀಸುತ್ತಿತ್ತು. ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಸಿಎಂ ಗಾದಿಯ ಮೇಲೆ ಕಣ್ಣಿಟ್ಟಿದ್ದಾರೆ ಎಂಬ ಮಾತುಗಳ ನಡುವೆಯೇ ಸಿದ್ದರಾಮಯ್ಯ ಅಧಿವೇಶನದ ಅಸ್ತ್ರ ಪ್ರಯೋಗಿಸಿದ್ದಾರೆ. ಅಧಿವೇಶನದ ಅವಧಿಯಲ್ಲಿ ಮತ್ತು ಫೆಬ್ರವರಿ 13 ರಂದು ಸರ್ಕಾರದ 1,000 ದಿನಗಳ ಸಂಭ್ರಮದ 'ಸಾಧನಾ ಸಮಾವೇಶ' ಹಮ್ಮಿಕೊಂಡಿರುವುದರಿಂದ ಸದ್ಯಕ್ಕೆ ನಾಯಕತ್ವ ಬದಲಾವಣೆ ಸಾಧ್ಯವಿಲ್ಲ ಎಂಬ ಸಂದೇಶವನ್ನು ಹೈಕಮಾಂಡ್ಗೆ ರವಾನಿಸಿದ್ದಾರೆ.
ಫೆಬ್ರವರಿಯಲ್ಲಿ ಬಜೆಟ್ ಮಂಡನೆ ಹಾಗೂ ಏಪ್ರಿಲ್ನಲ್ಲಿ ನಡೆಯಲಿರುವ ಸ್ಥಳೀಯ ಸಂಸ್ಥೆಗಳ ಚುನಾವಣೆಗಳ ಜವಾಬ್ದಾರಿಯನ್ನು ಹೊತ್ತಿರುವ ಸಿದ್ದರಾಮಯ್ಯ, ತಮ್ಮ ಕುರ್ಚಿಯನ್ನು ಭದ್ರಪಡಿಸಿಕೊಂಡಿದ್ದಾರೆ. ಈ ಮೂಲಕ ಅತ್ತ ಬಿಜೆಪಿ-ಜೆಡಿಎಸ್ ಮೈತ್ರಿಕೂಟಕ್ಕೂ, ಇತ್ತ ಸ್ವಪಕ್ಷದ ಪ್ರಬಲ ಆಕಾಂಕ್ಷಿಗಳಿಗೂ ಸಿದ್ದರಾಮಯ್ಯ ಏಕಕಾಲದಲ್ಲಿ 'ಚೆಕ್ ಮೆಟ್' ನೀಡಿದ್ದಾರೆ ಎನ್ನಲಾಗುತ್ತಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ