
ಬೆಂಗಳೂರು (ಮಾ.13): ರಾಜ್ಯದಲ್ಲಿ ಎದುರಾಗಿರುವ ಅಡುಗೆ ಅನಿಲ (LPG) ಪೂರೈಕೆ ಗೊಂದಲ ಈಗ ಸರ್ಕಾರ ಮತ್ತು ಹೋಟೆಲ್ ಮಾಲೀಕರ ನಡುವಿನ ಸಂಘರ್ಷಕ್ಕೆ ಕಾರಣವಾಗಿದೆ. ಇಂದು ಬೆಳಿಗ್ಗೆ ಆಹಾರ ಸಚಿವರೊಂದಿಗೆ ನಡೆದ ಸಭೆಯ ನಂತರ ಹೋಟೆಲ್ ಮಾಲೀಕರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದು, ಸರ್ಕಾರದ ಧೋರಣೆಯಿಂದ ಹೋಟೆಲ್ ಉದ್ಯಮ ಬೀದಿಗೆ ಬೀಳುವ ಆತಂಕ ಎದುರಾಗಿದೆ.
ಸಭೆಯ ವಿವರಗಳನ್ನು ಹಂಚಿಕೊಂಡ ನಿಸರ್ಗ ಹೋಟೆಲ್ ಮಾಲೀಕ ಕೃಷ್ಣರಾಜ್ ಅವರು ಸರ್ಕಾರದ ವಿರುದ್ಧ ಹರಿಹಾಯ್ದಿದ್ದಾರೆ. ‘ನಾವು ಇಂದು ಬೆಳಿಗ್ಗೆ ನಡೆದ ಸಭೆಗೆ ಹೋಗಿದ್ವಿ. ಆದರೆ ಸಚಿವರು ಮತ್ತು ಅಧಿಕಾರಿಗಳು ಮುಂದಿನ 10 ದಿನಗಳವರೆಗೆ ಹೋಟೆಲ್ಗಳಿಗೆ ಗ್ಯಾಸ್ ಪೂರೈಕೆ ಮಾಡಲು ಸಾಧ್ಯವಿಲ್ಲ, ನೀವೇನಾದರೂ ಪರ್ಯಾಯ ವ್ಯವಸ್ಥೆ ಮಾಡಿಕೊಳ್ಳಿ ಎಂದು ಕೈತೊಳೆದುಕೊಂಡಿದ್ದಾರೆ. ನಾವು ಎಷ್ಟೇ ಅಂಗಲಾಚಿದರೂ ಅವರು ನಮ್ಮ ಮನವಿಯನ್ನು ಪರಿಗಣಿಸಲಿಲ್ಲ’ ಎಂದು ಬೇಸರ ವ್ಯಕ್ತಪಡಿಸಿದರು.
ವಿಶೇಷವೆಂದರೆ, ರಾಜ್ಯದಲ್ಲಿ ಸದ್ಯ ಒಂದು ತಿಂಗಳಿಗೆ ಆಗುವಷ್ಟು ಗ್ಯಾಸ್ ಸ್ಟಾಕ್ ಲಭ್ಯವಿದೆ ಎಂದು ಅಧಿಕಾರಿಗಳೇ ಒಪ್ಪಿಕೊಂಡಿದ್ದಾರೆ. ಆದರೆ, "ಈ ದಾಸ್ತಾನನ್ನು ಕೇವಲ ಗೃಹ ಬಳಕೆಯ ಸಿಲಿಂಡರ್ಗಳಿಗೆ (Home Supply) ಮೀಸಲಿಡಬೇಕು. ಆದ್ದರಿಂದ ಹೋಟೆಲ್ಗಳಿಗೆ ನೀಡಲು ಸಾಧ್ಯವಿಲ್ಲ" ಎಂಬ ನಿಲುವನ್ನು ಸರ್ಕಾರ ತಳೆದಿದೆ. "ನಾವು ಪ್ರತಿಯೊಂದು ಹೋಟೆಲ್ಗೆ ಕನಿಷ್ಠ ಎರಡೇ ಎರಡು ಸಿಲಿಂಡರ್ ಕೊಡಿ ಎಂದು ಬೇಡಿಕೊಂಡೆವು. ಅಷ್ಟಾದರೂ ಅವರು ಒಪ್ಪಲಿಲ್ಲ" ಎಂದು ಕೃಷ್ಣರಾಜ್ ತಿಳಿಸಿದರು.
ಗ್ಯಾಸ್ ಇಲ್ಲದೆ ಹೋಟೆಲ್ ನಡೆಸಲು ಸಾಧ್ಯವಿಲ್ಲ ಎಂಬುದು ಮಾಲೀಕರ ವಾದ. ಇದು ಕೇವಲ ಹೋಟೆಲ್ ಮಾಲೀಕರು ಅಥವಾ ಅಲ್ಲಿನ ಸಿಬ್ಬಂದಿಯ ಸಮಸ್ಯೆ ಮಾತ್ರವಲ್ಲ. ಹೋಟೆಲ್ ಉದ್ಯಮ ಸ್ಥಗಿತಗೊಂಡರೆ ಅದಕ್ಕೆ ತರಕಾರಿ, ಹಾಲು ಮತ್ತು ದಿನಸಿ ಪೂರೈಸುವ ಇತರ ಸಣ್ಣ ಉದ್ದಿಮೆಗಳಿಗೂ ಭಾರಿ ಹೊಡೆತ ಬೀಳಲಿದೆ. ಇಡೀ ಸಪ್ಲೈ ಚೈನ್ ಮೇಲೆ ಇದು ನಕಾರಾತ್ಮಕ ಪರಿಣಾಮ ಬೀರಲಿದೆ ಎಂದು ಹೋಟೆಲ್ ಮಾಲೀಕರು ಎಚ್ಚರಿಸಿದ್ದಾರೆ.
ಸರ್ಕಾರವು ಜನರನ್ನು ಮನೆಯಿಂದಲೇ ಊಟದ ಬಾಕ್ಸ್ ತನ್ನಿ ಎಂದು ಹೇಳುವುದು ಪ್ರಾಯೋಗಿಕವಾಗಿ ಸಾಧ್ಯವಿಲ್ಲ. "ಬೆಂಗಳೂರಿನಂತಹ ನಗರದಲ್ಲಿ ಜನರು ಕೆಲಸ ಕಾರ್ಯಗಳಿಗೆ ಬರುವಾಗ ಮೊದಲೇ ಪ್ಲಾನ್ ಮಾಡಿಕೊಂಡು ಬಾಕ್ಸ್ ತರಲು ಆಗುವುದಿಲ್ಲ. ಅನೇಕರು ಹೋಟೆಲ್ ಊಟವನ್ನೇ ಅವಲಂಬಿಸಿದ್ದಾರೆ. ಸಚಿವರು ಈ ವಾಸ್ತವವನ್ನು ಅರ್ಥ ಮಾಡಿಕೊಳ್ಳಬೇಕು. 10 ದಿನಗಳ ಕಾಲ ಗ್ಯಾಸ್ ಇಲ್ಲದೆ ಉದ್ಯಮ ನಡೆಸುವುದು ಅಸಾಧ್ಯದ ಮಾತು" ಎಂದು ಕೃಷ್ಣರಾಜ್ ಗುಡುಗಿದ್ದಾರೆ.
ಸದ್ಯ ಹೋಟೆಲ್ ಉದ್ಯಮ ಶೇಕಡಾ 50 ರಷ್ಟು ಪರ್ಯಾಯ ವ್ಯವಸ್ಥೆ ಮಾಡಿಕೊಂಡಿದ್ದರೂ, ಪೂರ್ಣ ಪ್ರಮಾಣದ ಅಡುಗೆಗೆ ಅನಿಲ ಸಿಲಿಂಡರ್ ಅತ್ಯಗತ್ಯವಾಗಿದೆ. ಸರ್ಕಾರ ತಕ್ಷಣವೇ ಮಧ್ಯಪ್ರವೇಶಿಸಿ ಹೋಟೆಲ್ಗಳಿಗೆ ಸೀಮಿತ ಪ್ರಮಾಣದಲ್ಲಾದರೂ ಗ್ಯಾಸ್ ಪೂರೈಕೆಗೆ ಕ್ರಮ ಕೈಗೊಳ್ಳದಿದ್ದರೆ ಹೋಟೆಲ್ಗಳು ಮುಚ್ಚುವ ಪರಿಸ್ಥಿತಿ ನಿರ್ಮಾಣವಾಗಲಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ