
ಬೆಂಗಳೂರು (ಜು.29): ಖಾಸಗಿ ಜಗಳಕ್ಕೆ ತಮಗಿರುವ ಹುದ್ದೆ ಹಾಗೂ ಅಧಿಕಾರವನ್ನು ದುರುಪಯೋಗಪಡಿಸಿಕೊಂಡು ಬೈಕ್ ಸವಾರ (Biker), ಆತನ ತಾಯಿ ಹಾಗೂ 70 ವರ್ಷದ ವೃದ್ಧ ತಾತನ ವಿರುದ್ಧ ಎಫ್ಐಆರ್ (FIR) ದಾಖಲಿಸಿದ್ದ ಮಾಲೂರು ಜೆಎಂಎಫ್ಸಿ (JMFC) ಜಡ್ಜ್ ಗಾಯತ್ರಿ ಅವರ ವರ್ತನೆಗೆ ಕರ್ನಾಟಕ ಹೈಕೋರ್ಟ್ (Karnataka High Court) ತೀವ್ರ ತರಾಟೆಗೆ ತೆಗೆದುಕೊಂಡಿದೆ. ನ್ಯಾಯಮೂರ್ತಿ ಎಂ. ನಾಗಪ್ರಸನ್ನ (Justice M. Nagaprasanna) ಅವರಿದ್ದ ಪೀಠವು ಜಡ್ಜ್ ದಾಖಲಿಸಿದ್ದ ಎಫ್ಐಆರ್ಗೆ ಮಧ್ಯಂತರ ತಡೆಯಾಜ್ಞೆ (Interim Stay) ನೀಡಿದೆ.
ಮಾಲೂರು ಜೆಎಂಎಫ್ಸಿ ಜಡ್ಜ್ ಗಾಯತ್ರಿ ಹಾಗೂ ಅವರ ಪತಿ ತಮ್ಮ ಖಾಸಗಿ ಇನ್ನೋವಾ ಕಾರಿನಲ್ಲಿ (Innova Car) ಪ್ರಯಾಣಿಸುತ್ತಿದ್ದಾಗ ಈ ಘಟನೆ ನಡೆದಿದೆ. ರಸ್ತೆಯಲ್ಲಿ ಕಾರನ್ನು ನಿಧಾನವಾಗಿ ಚಲಿಸುವಂತೆ ಬೈಕ್ ಸವಾರರೊಬ್ಬರು ಹೇಳಿದ್ದಕ್ಕೆ ಇಬ್ಬರ ನಡುವೆ ಜಗಳ ಆರಂಭವಾಗಿದೆ. ಮಾತಿಗೆ ಮಾತು ಬೆಳೆದು ಜಗಳ ತಾರಕಕ್ಕೇರಿದಾಗ ಜಡ್ಜ್ ಗಾಯತ್ರಿ ಹಾಗೂ ಅವರ ಪತಿ ಬೈಕ್ ಸವಾರನನ್ನು ಆತನ ಮನೆಯವರೆಗೆ ಚೇಸ್ (Chase) ಮಾಡಿಕೊಂಡು ಹೋಗಿದ್ದಾರೆ.
ಬೈಕ್ ಸವಾರನ ಮನೆಯ ಬಳಿಯೂ ಜಗಳ ನಡೆದ ನಂತರ ಜಡ್ಜ್ ಗಾಯತ್ರಿ ಅವರು ತಮ್ಮ ಅಧಿಕಾರ ಬಳಸಿ ಪೊಲೀಸರ ಮೂಲಕ ಬೈಕ್ ಸವಾರ, ಆತನ ತಾಯಿ ಹಾಗೂ 70 ವರ್ಷದ ವೃದ್ಧ ತಾತನ ವಿರುದ್ಧ ಎಫ್ಐಆರ್ (FIR) ದಾಖಲಿಸಿ ಬಂಧಿಸುವಂತೆ ಮಾಡಿದ್ದಾರೆ. ಈ ಇಡೀ ಘಟನೆಯ ಸಿಸಿಟಿವಿ ದೃಶ್ಯಾವಳಿಗಳು (CCTV Footage) ಸಾಮಾಜಿಕ ಜಾಲತಾಣಗಳಲ್ಲಿ (Social Media) ವೈರಲ್ ಆಗಿದ್ದವು. ಹೈಕೋರ್ಟ್ ವಿಚಾರಣೆ ವೇಳೆ ರಾಜ್ಯದ ಎಸ್ಪಿಪಿ (SPP) ಬಿ.ಎನ್. ಜಗದೀಶ್ ಅವರು ಈ ವೈರಲ್ ವಿಡಿಯೋ ದೃಶ್ಯಗಳನ್ನು ನ್ಯಾಯಮೂರ್ತಿಗಳಿಗೆ ತೋರಿಸಿದರು.
ಘಟನೆಯ ಸಂಪೂರ್ಣ ವಿವರ ಆಲಿಸಿದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಪೀಠ, ಜಡ್ಜ್ ಗಾಯತ್ರಿ ಅವರ ನಡವಳಿಕೆಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿತು. ‘ಜಡ್ಜ್ ಆದ ಮಾತ್ರಕ್ಕೆ ಸಾಮಾನ್ಯ ನಾಗರಿಕರೊಂದಿಗೆ ಇಂತಹ ವರ್ತನೆ ಮಾಡುವುದು ಸರಿಯಲ್ಲ. ಜಡ್ಜ್ ಹುದ್ದೆಗೆ ಥರವಲ್ಲದ ರೀತಿಯಲ್ಲಿ ಗಾಯತ್ರಿ ಅವರು ನಡೆದುಕೊಂಡಿದ್ದಾರೆ. ಜಡ್ಜ್ ನಡವಳಿಕೆಯು ನ್ಯಾಯಾಲಯದ ಒಳಗೂ ಹಾಗೂ ಹೊರಗೂ ಸಾರ್ವಜನಿಕರಲ್ಲಿ ವಿಶ್ವಾಸ ಮೂಡಿಸುವಂತಿರಬೇಕು. ಇಲ್ಲಿ ತಾವೇ ದೂರುದಾರರಾಗಿ, ತಾವೇ ಜಡ್ಜ್ ಆಗಿ ಆದೇಶಿಸಿದ್ದಾರೆ. ಇದು ತಮ್ಮ ಹುದ್ದೆಯ ಸ್ಪಷ್ಟ ದುರುಪಯೋಗ (Misuse of Power)’ ಎಂದು ಕೋರ್ಟ್ ಕಟುವಾಗಿ ಹೇಳಿದೆ.
ವಿಚಾರಣೆ ವೇಳೆ ಎಸ್ಪಿಪಿ ಬಿ.ಎನ್. ಜಗದೀಶ್ ಅವರು ಜಡ್ಜ್ ಗಾಯತ್ರಿ ಅವರ ಹಳೆಯ ಘಟನೆಯೊಂದನ್ನು ಕೋರ್ಟ್ ಗಮನಕ್ಕೆ ತಂದರು. ಈ ಹಿಂದೆ ತಮ್ಮ ಖಾಸಗಿ ಮನೆಯ ರಿಪೇರಿ ಕೆಲಸ ಮಾಡುವಂತೆ ಪಿಡಬ್ಲ್ಯೂಡಿ (PWD Officer) ಅಧಿಕಾರಿಗೆ ಜಡ್ಜ್ ಬುಲಾವ್ ನೀಡಿದ್ದರು. ಅದಕ್ಕೆ ನಿರಾಕರಿಸಿದ ಅಧಿಕಾರಿಯನ್ನು ಬಂಧಿಸುವಂತೆ ಪೊಲೀಸರಿಗೆ ಸೂಚಿಸಿದ ಆರೋಪವೂ ಈ ಜಡ್ಜ್ ಮೇಲಿದೆ ಎಂದು ತಿಳಿಸಿದರು.
ಪ್ರಕರಣದ ತೀವ್ರತೆಯನ್ನು ಪರಿಗಣಿಸಿದ ಹೈಕೋರ್ಟ್, ಜಡ್ಜ್ ಗಾಯತ್ರಿ ಅವರ ವಿರುದ್ಧ ಸೂಕ್ತ ಶಿಸ್ತುಕ್ರಮ ಕೈಗೊಳ್ಳುವಂತೆ (Disciplinary Action) ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗಳಿಗೆ (Chief Justice) ಮನವಿ ಮಾಡಿದೆ. ಜೊತೆಗೆ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿರುವ ಜಗಳದ ದೃಶ್ಯಗಳನ್ನು ತೆರವುಗೊಳಿಸಲು (Remove Viral Video) ಆದೇಶಿಸಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ