
ಬೆಂಗಳೂರು: ಕೆಆರ್ಎಸ್ ಜಲಾಶಯದಿಂದ 15 ದಿನಗಳ ಕಾಲ ತಮಿಳುನಾಡಿಗೆ ಪ್ರತಿನಿತ್ಯ 3500 ಕ್ಯುಸೆಕ್ ನೀರು ಹರಿಸಲು ಕಾವೇರಿ ನಿರ್ವಹಣಾ ಮಂಡಳಿ ಆದೇಶ ಮಾಡಿರುವ ವಿರುದ್ಧ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದೆ. ಬೆಂಗಳೂರು, ಮಂಡ್ಯ ಸೇರಿದಂತೆ ರಾಜ್ಯದ ಹಲವೆಡೆ ಪ್ರತಿಭಟನೆಗಳು ನಡೆಯುತ್ತಿವೆ. ಪ್ರತಿಭಟನೆ ವೇಳೆ ಮಾತನಾಡಿರುವ ಕನ್ನಡ ಪರ ಹೋರಾಟಗಾರ ವಾಟಾಳ್ ನಾಗರಾಜ್, ನಾಡಿದ್ದು ಬೆಳಗ್ಗೆ 11 ಗಂಟೆಗೆ ವುಡ್ ಲ್ಯಾಂಡ್ ಹೋಟೆಲ್ನಲ್ಲಿ ಸಭೆ ನಡೆಸಲಾಗುವುದು. ಸಭೆ ಬಳಿಕ ಬಂದ್ ದಿನಾಂಕ ನಿರ್ಧರಿಸುತ್ತೇವೆ. ಕರ್ನಾಟಕ ಬಂದ್ ಮಾಡೇ ಮಾಡುತ್ತೇವೆ ಎಂದು ಹೇಳಿದರು.
ಇಂದು ಬೆಂಗಳೂರಿನ ಹಲವು ಭಾಗಗಳಲ್ಲಿ ಕನ್ನಡ ಪರ ಸಂಘಟನೆಗಳು, ತಮಿಳುನಾಡಿಗೆ ನೀರು ಹರಿಸದಂತೆ ಆಗ್ರಹಿಸಿ ಪ್ರತಿಭಟನೆ ನಡೆಸುತ್ತಿವೆ. ಮೈಸೂರು ಬ್ಯಾಂಕ್ ಸರ್ಕಲ್ನಲ್ಲಿ ಪ್ರತಿಭಟನೆ ನಡೆಸುತ್ತಿದ್ದ ಕನ್ನಡ ಪರ ಹೋರಾಟಗಾರರಾದ ವಾಟಾಳ್ ನಾಗರಾಜ್ ಮತ್ತು ಸಾರಾ ಗೋವಿಂದ್ ಅವರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ಕರವೇ ನಾರಾಯಣಗೌಡರು ಮಾತನಾಡಿ, ಸರ್ಕಾರ ಯಾವುದೇ ಕಾರಣಕ್ಕೂ ಈ ಆದೇಶವನ್ನು ಒಪ್ಪಿಕೊಳ್ಳಬಾರದು. ಕಾವೇರಿ ಅನ್ನೋದು ಕನ್ನಡಿಗರ ಭಾವನೆ, ಅದರ ಜೊತೆ ಹುಡುಗಾಟ ಆಡಬಾರದು. ತಮಿಳುನಾಡಿನ ರಾಜಕೀಯ ನಾಯಕರು ಕೇಂದ್ರದ ಜೊತೆ ಲಾಬಿ ಮಾಡಿದ್ದಾರೆ. ಆದರೆ, ಈ ತೀರ್ಪನ್ನು ಯಾವುದೇ ಕಾರಣಕ್ಕೂ ರಾಜ್ಯ ಸರ್ಕಾರ ಒಪ್ಪಿಕೊಳ್ಳಬಾರದು.
ಇವತ್ತು ನಮ್ಮ ಡ್ಯಾಂಗಳಲ್ಲಿ ಇರೋದು ಒಟ್ಟು 12 ಟಿಎಂಸಿ ನೀರು ಮಾತ್ರ, ಆದರೆ ಬೆಂಗಳೂರಿಗೇ ತಿಂಗಳಿಗೆ 3 ಟಿಎಂಸಿಯಷ್ಟು ನೀರು ಬೇಕಾಗುತ್ತದೆ. ಮಳೆ ಇಲ್ಲದ ಕಾರಣ ನಮ್ಮ ಡ್ಯಾಂಗಳಲ್ಲಿ ನೀರಿಲ್ಲದಿರುವುದರಿಂದ, ಕರ್ನಾಟಕಕ್ಕೆ ತಮಿಳುನಾಡಿಗೆ ಅಷ್ಟು ನೀರು ಬಿಡೋಕೆ ಆಗಲ್ಲ; 4 ಟಿಎಂಸಿ ನೀರು ನಾವು ಯಾವುದೇ ಕಾರಣಕ್ಕೂ ಬಿಡೋದಕ್ಕೆ ಸಾಧ್ಯವಿಲ್ಲ.
ರಾಜ್ಯ ಸರ್ಕಾರ ತಕ್ಷಣವೇ ಇದಕ್ಕೆ ಮೇಲ್ಮನವಿ ಸಲ್ಲಿಸಬೇಕು ಹಾಗೂ ನಮ್ಮ ಜಲಾಶಯಗಳ ನಿಜವಾದ ಸ್ಥಿತಿಗತಿ ಬಗ್ಗೆ ಮನವರಿಕೆ ಮಾಡಿ ಕರ್ನಾಟಕದ ರೈತರ ಹಿತ ಕಾಪಾಡಬೇಕು. ತಮಿಳುನಾಡು ಸಿಎಂ ನಮ್ಮ ಸಿಎಂ ಜೊತೆ ಚರ್ಚೆ ನಡೆಸಬೇಕು ಅಂತ ಹೇಳುತ್ತಿದ್ದಾರೆ. ತಮಿಳುನಾಡಿನ ಸಿಎಂ ಬೇಕಿದ್ದರೆ ಕರ್ನಾಟಕಕ್ಕೆ ಬರಲಿ, ನಮ್ಮ ಜಲಾಶಯಗಳ ಸ್ಥಿತಿಯನ್ನು ಬಂದು ನೋಡಲಿ. ಏನೇ ಆಗಲಿ, ನಾವು ಕಾವೇರಿ ನೀರು ಕೊಡೋಕೆ ಆಗಲ್ಲ ಅಂತ ಸಿಎಂ ಸ್ಪಷ್ಟವಾಗಿ ಹೇಳಬೇಕು.
ಕರ್ನಾಟಕ ಬಂದ್ ಬಗ್ಗೆ ನಾರಾಯಣಗೌಡ ಹೇಳಿದ್ದೇನು?
ಅವತ್ತು ಬಂಗಾರಪ್ಪನವರು ಹೇಗೆ ತೀರ್ಪನ್ನು ತಿರಸ್ಕರಿಸಿದರೋ, ಇವತ್ತು ಬಂಗಾರಪ್ಪನವರ ಶಿಷ್ಯ ಅಂತ ಹೇಳಿಕೊಳ್ಳುವ ಸಿಎಂ ಮತ್ತು ಡಿಕೆ ಶಿವಕುಮಾರ್ ಅವರೂ ಇದನ್ನು ಧಿಕ್ಕರಿಸಬೇಕು ಹಾಗೂ ನೀರು ಬಿಡೋಕೆ ಆಗಲ್ಲ ಎಂದು ಸ್ಪಷ್ಟಪಡಿಸಬೇಕು. ನಾವು ಈ ತೀರ್ಪನ್ನು ಖಂಡಿಸಿ ಹೋರಾಟ ಮಾಡುತ್ತೇವೆ. ಆದರೆ, ನನಗೆ ಪದೇ ಪದೇ ಕರ್ನಾಟಕ ಬಂದ್ ಮಾಡುವುದರಲ್ಲಿ ವಿಶ್ವಾಸವಿಲ್ಲ; ಪದೇ ಪದೇ ಕರ್ನಾಟಕ ಬಂದ್ ಮಾಡಿಕೊಂಡು ಕೂರುವುದು ಸರಿಯಲ್ಲ. ಅದರ ಹೊರತಾಗಿ ಹಲವು ಹೋರಾಟದ ಚಳವಳಿ ಮಾದರಿಗಳಿವೆ, ಆ ಪ್ರಕಾರವೇ ನಾವು ಮುಂದಿನ ಚಳವಳಿಯನ್ನು ರೂಪಿಸುತ್ತೇವೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ