ವಿಜಯ ಮಲ್ಯ, ಕ್ಯಾ। ಗೋಪಿನಾಥ್‌ವಿರುದ್ಧ ತನಿಖೆ ರದ್ದುಗೊಳಿಸಿದ ಹೈಕೋರ್ಟ್

By Kannadaprabha NewsFirst Published May 1, 2024, 11:25 AM IST
Highlights

ಕಿಂಗ್ ಫಿಷರ್ ಏರ್‌ಲೈನ್ಸ್ ಲಿಮಿಟೆಡ್ ಮತ್ತು ಡೆಕ್ಕನ್ ಏವಿಯೇಷನ್ಸ್ ಲಿಮಿಟೆಡ್‌ನ ವಿಲೀನ ಪ್ರಕ್ರಿಯೆಯಲ್ಲಿ ವಂಚನೆ ನಡೆದಿದೆ ಎಂಬ ಆರೋಪ ಸಂಬಂಧ  ವಿಜಯ್ ಮಲ್ಯ ಹಾಗೂ ಇತರರ ವಿರುದ್ಧದ ತನಿಖೆಯನ್ನು ರದ್ದುಗೊಳಿಸಲಾಗಿದೆ.

ಬೆಂಗಳೂರು (ಮೇ.1): ಕಿಂಗ್ ಫಿಷರ್ ಏರ್‌ಲೈನ್ಸ್ ಲಿಮಿಟೆಡ್ ಮತ್ತು ಡೆಕ್ಕನ್ ಏವಿಯೇಷನ್ಸ್ ಲಿಮಿಟೆಡ್‌ನ ವಿಲೀನ ಪ್ರಕ್ರಿಯೆಯಲ್ಲಿ ವಂಚನೆ ನಡೆದಿದೆ ಎಂಬ ಆರೋಪ ಸಂಬಂಧ ಕಿಂಗ್‌ಫಿಷರ್ ಮಾಜಿ ಮಾಲೀಕ ವಿಜಯ್ ಮಲ್ಯ ಹಾಗೂ ಏರ್ ಡೆಕ್ಕನ್ ಸಂಸ್ಥಾಪಕ ಕ್ಯಾಪ್ಟನ್‌ ಜಿ.ಆರ್. ಗೋಪಿನಾಥ್ ವಿರುದ್ಧದ ಗಂಭೀರ ವಂಚನೆ ತನಿಖೆ ಕಚೇರಿ (ಎಸ್‌ಎಫ್‌ಐಒ) ನಡೆಸುತ್ತಿದ್ದ ತನಿಖೆಯನ್ನು ಹೈಕೋರ್ಟ್ ರದ್ದುಗೊಳಿಸಿದೆ.

ಪ್ರಕರಣಕ್ಕೆ ಸಂಬಂಧಿಸಿದ ತಮ್ಮ ವಿರುದ್ಧದ ತನಿಖೆ ರದ್ದುಪಡಿಸುವಂತೆ ಕೋರಿ ಕಿಂಗ್‌ಫಿಷರ್, ಡೆಕ್ಕನ್ ಚಾರ್ಟರ್ಸ್, ಕ್ಯಾಪ್ಟನ್ ಗೋಪಿನಾಥ್ ಮತ್ತಿತರರು ಸಲ್ಲಿಸಿದ್ದ ಅರ್ಜಿ ಪುರಸ್ಕರಿಸಿದ ನ್ಯಾ। ಹೇಮಂತ್ ಚಂದನಗೌಡರ್ ಅವರ ಪೀಠ ಈ ಆದೇಶ ಮಾಡಿದೆ.

ಲಲಿತ್‌ ಮೋದಿ ಜೊತೆ ಸಂಬಂಧ ಹೊಂದಿದ್ದ ವಿಜಯ್ ಮಲ್ಯ ದತ್ತು ಮಗಳು, ಐಪಿಎಲ್‌ ವಿವಾದಗಳು

ನ್ಯಾಯಾಲಯದ ಅನುಮತಿಯ ಬಳಿಕವೇ ವಿಲೀನ ಪ್ರಕ್ರಿಯೆ ನಡೆದಿದೆ. ಆದ್ದರಿಂದ ಎಸ್‌ಎಫ್‌ಐಒ ಕ್ರಿಮಿನಲ್ ಪ್ರಕರಣ ದಾಖಲಿಸಿ ತನಿಖೆ ಹಾಗೂ ವಿಚಾರಣೆ ನಡೆಸಲು ಸಾಧ್ಯವಿಲ್ಲ. ಪ್ರಕರಣ ಸಂಬಂಧ ಯಾವುದೇ ಬಾಧಿತರಾರು ದೂರು ನೀಡಿಲ್ಲ. 2007ರಲ್ಲಿ ವಿಲೀನ ನಡೆದಿದರೆ, 2012ರಲ್ಲಿ ಕಂಪನಿ ಕಾಯ್ದೆಯಡಿ ಕಾನೂನು ಕ್ರಮ ಆರಂಭಿಸಿರುವುದು ನಿಯಮ ಬಾಹಿರ ಎಂದು ಅಭಿಪ್ರಾಯಪಟ್ಟ ಹೈಕೋರ್ಟ್‌ ಅರ್ಜಿದಾರರ ವಿರುದ್ಧದ ಪ್ರಕರಣ ರದ್ದುಪಡಿಸಿದೆ.

ಏನಿದು ಪ್ರಕರಣ?: ಏರ್ ಲೈನ್ ಡೆಕ್ಕನ್ ಒಡೆತನವನ್ನು ತನ್ನ ಸುಪರ್ದಿಗೆ ಪಡೆಯುವಾಗ ಕಿಂಗ್‌ಫಿಷರ್ ಕಂಪನಿಯು 1,234 ಕೋಟಿ ರು. ನಷ್ಟದಲ್ಲಿತ್ತು. ಅರ್ಹತಾ ಷರತ್ತುಗಳನ್ನು ಪೂರೈಸದೇ ವಿಲೀನ ಪ್ರಕ್ರಿಯೆ ನಡೆಸಲಾಗಿದೆ. ಬಂಡವಾಳ ಲಾಭದ ಮೇಲಿನ ತೆರಿಗೆ ತಪ್ಪಿಸಲು ಮತ್ತು ಡೆಕ್ಕನ್ ಏರ್‌ನ ಹೂಡಿಕೆದಾರರನ್ನು ವಂಚಿಸಲು ವಿಲೀನ ಪ್ರಕ್ರಿಯೆ ನಡೆಸಲಾಗಿದೆ ಎಂದು ಆರೋಪಿಸಿ ಕಿಂಗ್‌ಫಿಶರ್ ಮತ್ತು ಇತರರ ವಿರುದ್ಧ 2012ರಲ್ಲಿ ಎಸ್‌ಎಫ್‌ಐಒ ತನಿಖೆ ಆರಂಭಿಸಿತ್ತು.

ಹಾಸನದಲ್ಲಿ ಮತದಾನ ಮಾಡಿ ವಿದೇಶಕ್ಕೆ ಪ್ರಜ್ವಲ್ ರೇವಣ್ಣ ಎಸ್ಕೇಪ್!

ಕಿಂಗ್‌ಫಿಷರ್ ಏರ್‌ಲೈನ್ಸ್ ಮಾಜಿ ಮಾಲೀಕ ವಿಜಯ್‌ ಮಲ್ಯ, ಕಂಪನಿಯ ನಿರ್ದೇಶಕ ಮತ್ತು ಯುನೈಟೆಡ್ ಬ್ರೇವರೀಸ್ ಸಮೂಹದ ಪ್ರಧಾನ ಹಣಕಾಸು ಅಧಿಕಾರಿ ಎ.ಕೆ.ರವಿ ನೆಡುಂಗಡಿ, ಡೆಕ್ಕನ್ ಏರ್ ಸಂಸ್ಥಾಪಕ ಕ್ಯಾಪ್ಟರ್ ಜಿ.ಆರ್. ಗೋಪಿನಾಥ್ ಸೇರಿದಂತೆ ಮತ್ತಿತರು ಪ್ರಕರಣದಲ್ಲಿ ಆರೋಪಿಗಳಾಗಿದ್ದರು. ಅವರ ವಿರುದ್ಧ 2018ರಲ್ಲಿ ಬೆಂಗಳೂರಿನ ಗಂಭೀರ ವಂಚನೆಗಳ ತಡೆ ವಿಶೇಷ ನ್ಯಾಯಾಲಯವು ಬಂಧನ ವಾರೆಂಟ್ ಜಾರಿ ಮಾಡಿತ್ತು. ವಾರೆಂಟ್, ಎಸ್‌ಎಫ್‌ಐಒ ತನಿಖೆ ಮತ್ತು ವಿಶೇಷ ನ್ಯಾಯಾಲಯದ ವಿಚಾರಣಾ ಪ್ರಕ್ರಿಯೆ ರದ್ದತಿಗೆ ಕೋರಿ ಅರ್ಜಿದಾರರು ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ವಿಜಯ್‌ ಮಲ್ಯ ಅರ್ಜಿ ಸಲ್ಲಿಸಿರಲಿಲ್ಲ.

click me!