ಇನ್‌ಸ್ಪೆಕ್ಟರ್‌ ಪ್ರವೀಣ್‌ ವಿರುದ್ಧ ತನಿಖೆಗೆ ಹೈಕೋರ್ಟ್‌ ಆದೇಶ

By Kannadaprabha NewsFirst Published Feb 2, 2023, 11:33 AM IST
Highlights

ಕಳ್ಳತನ ಪ್ರಕರಣವೊಂದರ ದೂರು ದಾಖಲಿಸಿಕೊಳ್ಳುವಂತೆ ಮ್ಯಾಜಿಸ್ಪ್ರೇಟ್‌ ಕೋರ್ಟ್‌ ಸೂಚಿಸಿದರೂ ನಿರ್ಲಕ್ಷ್ಯ ತೋರಿ ಕಡತ ಕಾಣೆಯಾಗಿದೆ ಎಂದು ಕಾರಣ ಹೇಳಿದ್ದ ಕಾಟನ್‌ಪೇಟೆ ಪೊಲೀಸ್‌ ಠಾಣೆಯ ಹಿಂದಿನ ಇನ್‌ಸ್ಪೆಕ್ಟರ್‌ ವಿರುದ್ಧ ಇಲಾಖಾ ತನಿಖೆ ನಡೆಸಿ ಮೂರು ತಿಂಗಳಲ್ಲಿ ವರದಿ ಸಲ್ಲಿಸುವಂತೆ ಹೈಕೋರ್ಟ್‌ ಸೂಚಿಸಿದೆ.

ಬೆಂಗಳೂರು (ಫೆ.02): ಕಳ್ಳತನ ಪ್ರಕರಣವೊಂದರ ದೂರು ದಾಖಲಿಸಿಕೊಳ್ಳುವಂತೆ ಮ್ಯಾಜಿಸ್ಪ್ರೇಟ್‌ ಕೋರ್ಟ್‌ ಸೂಚಿಸಿದರೂ ನಿರ್ಲಕ್ಷ್ಯ ತೋರಿ ಕಡತ ಕಾಣೆಯಾಗಿದೆ ಎಂದು ಕಾರಣ ಹೇಳಿದ್ದ ಕಾಟನ್‌ಪೇಟೆ ಪೊಲೀಸ್‌ ಠಾಣೆಯ ಹಿಂದಿನ ಇನ್‌ಸ್ಪೆಕ್ಟರ್‌ ವಿರುದ್ಧ ಇಲಾಖಾ ತನಿಖೆ ನಡೆಸಿ ಮೂರು ತಿಂಗಳಲ್ಲಿ ವರದಿ ಸಲ್ಲಿಸುವಂತೆ ಹೈಕೋರ್ಟ್‌ ಸೂಚಿಸಿದೆ.

ಕಳ್ಳತನ ಪ್ರಕರಣ ದೂರಿನ ತನಿಖೆಯನ್ನು ಕಾಟನ್‌ಪೇಟೆ ಇನ್‌ಸ್ಪೆಕ್ಟರ್‌ ಬದಲು ಬೇರೆ ಪೊಲೀಸ್‌ ಮೇಲಾಧಿಕಾರಿಗಳಿಂದ ತನಿಖೆ ನಡೆಸಬೇಕು ಎಂದು ಎಂ. ಪ್ರಕಾಶ್‌ ಅವರು ಸಲ್ಲಿಸಿದ್ದ ಮೇಲ್ಮನವಿಯನ್ನು ನ್ಯಾ. ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯ ಪೀಠ ಇತ್ತೀಚೆಗೆ ವಿಚಾರಣೆ ನಡೆಸಿತು. ಪ್ರಕರಣ ದಾಖಲಿಸಿಕೊಳ್ಳಲು ನಿರ್ಲಕ್ಷ್ಯ ತೋರಿದ್ದ ಹಿಂದಿನ ಇನ್‌ಸ್ಪೆಕ್ಟರ್‌ ಕೆ.ವೈ.ಪ್ರವೀಣ್‌ ವಿರುದ್ಧ ಪೊಲೀಸ್‌ ಮಹಾನಿರ್ದೇಶಕರು ಇಲಾಖಾ ತನಿಖೆ ನಡೆಸಿ, ಮೂರು ತಿಂಗಳಲ್ಲಿ ವಿಚಾರಣೆ ನಡೆಸಿ ಕೈಗೊಂಡ ಕ್ರಮದ ಬಗ್ಗೆ ನ್ಯಾಯಾಲಯಕ್ಕೆ ವರದಿ ಸಲ್ಲಿಸಬೇಕು ಎಂದು ಹೈಕೋರ್ಟ್‌ ಸೂಚಿಸಿದೆ.

ಸಿಡಿ ಪ್ರಕರಣ ಬಗ್ಗೆ ಸಿಎಂ ಜತೆ ಚರ್ಚಿಸುವೆ: ಗೃಹ ಸಚಿವ ಆರಗ ಜ್ಞಾನೇಂದ್ರ

ಪ್ರಕರಣದ ವಿವರ: ಕೌಟುಂಬಿಕ ಆಸ್ತಿ ಹಂಚಿಕೆ ವಿವಾದದ ಹಿನ್ನೆಲೆಯಲ್ಲಿ 2021ರ ಮಾ. 26ರಂದು ವಿನಾಯಕ ಅವರು ತಮ್ಮ ಮನೆಗೆ ನುಗ್ಗಿ ಗೃಹೋಪಯೋಗಿ ಸೇರಿ ಇತರೆ ವಸ್ತುಗಳನ್ನು ಕಳವು ಮಾಡಿದ್ದರು ಎಂದು ಪ್ರಕಾಶ್‌ ಠಾಣೆಗೆ ದೂರು ಸಲ್ಲಿಸಲು ಹೋದಾಗ ವೈಯಕ್ತಿಕ ವಿಚಾರ ಎಂದು ಪ್ರಕರಣ ದಾಖಲಿಸಿಕೊಂಡಿರಲಿಲ್ಲ. ಬಳಿಕ ಅವರು ಮ್ಯಾಜಿಸ್ಪ್ರೇಟ್‌ ಕೋರ್ಟ್‌ನಲ್ಲಿ ಖಾಸಗಿ ದೂರು ಸಲ್ಲಿಸಿದ್ದರು. ದೂರಿನ ವಿಚಾರಣೆ ನಡೆಸಿದ ಕೋರ್ಟ್‌ ಕಾಟನ್‌ಪೇಟೆ ಪೊಲೀಸರಿಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುವಂತೆ 2022ರ ಮೇ 4ರಂದು ಆದೇಶಿಸಿದ್ದರೂ ಪ್ರಕರಣ ದಾಖಲಿಸಿಕೊಂಡಿರಲಿಲ್ಲ.

ಅತ್ತೆ ಮಗಳಿಗಾಗಿ ಸ್ನೇಹಿತನನ್ನೇ ಬಡಿದು ಹತ್ಯೆ: ನಾಲ್ವರ ಬಂಧನ

ಈ ಬಗ್ಗೆ ಕೋರ್ಟ್‌ನಿಂದ ಪುನಃ ಠಾಣೆಗೆ ನೆನಪೋಲೆ ಹೋದರೂ ಇನ್‌ಸ್ಪೆಕ್ಟರ್‌ ಪ್ರಕರಣ ದಾಖಲಿಸಿಕೊಳ್ಳದೇ ನಿರ್ಲಕ್ಷ್ಯ ತೋರಿದರು. ಇದರಿಂದ ಇನ್‌ಸ್ಪೆಕ್ಟರ್‌ ಕೆ.ವೈ.ಪ್ರವೀಣ್‌ ಅಮಾನತ್ತಾಗಿದ್ದರು. ನಂತರ ಇನ್‌ಸ್ಪೆಕ್ಟರ್‌ ಆಗಿ ನೇಮಕಗೊಂಡ ಜಿ.ಬಾಲರಾಜ ಅವರು ಕಡತ ಹುಡುಕಿಸಿ ತಕ್ಷಣ ಕ್ರಮ ವಹಿಸಿದ್ದರು. ಕೋರ್ಟ್‌ ಆದೇಶದ ಐದೂವರೆ ತಿಂಗಳ ಬಳಿಕ ಪ್ರಕರಣ ದಾಖಲಾಗಿತ್ತು. ಕೋರ್ಟ್‌ ಆದೇಶದ ಕಡತ ಬೇರೆ ದಾಖಲೆಗಳ ಜೊತೆ ಸೇರಿ ಕಾಣೆಯಾಗಿತ್ತು. ಕಡತ ಸಿಕ್ಕ ತಕ್ಷಣ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಕೋರ್ಟ್‌ಗೆ ಸರ್ಕಾರದ ಪರ ವಕೀಲರು ತಿಳಿಸಿದ್ದರು.

click me!