ಓಲಾ ಉಬರ್ ಗೆ ಬಿಗ್ ರಿಲೀಫ್, ಸಾರಿಗೆ ಇಲಾಖೆ ನೀಡಿದ್ದ ಆದೇಶಕ್ಕೆ ಕೋರ್ಟ್ ಮಧ್ಯಂತರ ತಡೆ

By Gowthami KFirst Published Oct 14, 2022, 8:29 PM IST
Highlights

ಆಪ್ ಆಧಾರಿತ ವಾಗಿ ಆಟೋ ಸೇವೆ ನೀಡುತ್ತಿದ್ದ ಕಂಪೆನಿಗಳಿಗೆ ನ್ಯಾಯಾಲಯದಿಂದ ಬಿಗ್ ರಿಲೀಫ್ ಸಿಕ್ಕಿದೆ.  ಓಲಾ , ಉಬರ್ , ರಾಪಿಡೊ ಆಟೋ ಓಡಿಸದಂತೆ ಆದೇಶ ಮಾಡಿದ್ದ ಸಾರಿಗೆ ಇಲಾಖೆಗೆ ನ್ಯಾಯಾಲಯದ ಆದೇಶದಿಂದ ಅಲ್ಪ ಹಿನ್ನಡೆಯಾಗಿದೆ.  

ಬೆಂಗಳೂರು (ಅ.14): ಆಪ್ ಆಧಾರಿತ ವಾಗಿ ಆಟೋ ಸೇವೆ ನೀಡುತ್ತಿದ್ದ ಕಂಪೆನಿಗಳಿಗೆ ನ್ಯಾಯಾಲಯದಿಂದ ಬಿಗ್ ರಿಲೀಫ್ ಸಿಕ್ಕಿದೆ.  ಓಲಾ , ಉಬರ್ , ರಾಪಿಡೊ ಆಟೋ ಓಡಿಸದಂತೆ ಆದೇಶ ಮಾಡಿದ್ದ ಸಾರಿಗೆ ಇಲಾಖೆಗೆ ನ್ಯಾಯಾಲಯದ ಆದೇಶದಿಂದ  ಹಿನ್ನಡೆಯಾಗಿದೆ.  ಸರ್ಕಾರ ಯಾವುದೇ ಬಲವಂತದ ಕ್ರಮಕೈಗೊಳ್ಳುವಂತಿಲ್ಲ. ಓಲಾ, ಉಬರ್ ಕಂಪನಿ ಅನುಕೂಲಕರ ದರವನ್ನು ವಿಧಿಸಬೇಕು. ಪರವಾನಿಗೆ ಕಾಲಾವಕಾಶ ವಿಸ್ತರಿಸುವಂತೆ ಆದೇಶಿಸಿದೆ. 2021 ರ ಸಾರಿಗೆ ಇಲಾಖೆ ನಿಗದಿ ಪಡಿಸಿದ ದರವನ್ನು ಪಾಲಿಸಬೇಕು. 06-07-2021 ರಲ್ಲಿ ಸಾರಿಗೆ ಇಲಾಖೆ ಹೊರಡಿಸಿದ ಆದೇಶ ಪಾಲನೆ ಮಾಡಬೇಕು.  ಹೆಚ್ಚುವರಿ ಸರ್ವಿಸ್ ಚಾರ್ಜ್ ಬಗ್ಗೆ ನ್ಯಾಯಾಲಯಕ್ಕೆ ತಿಳಿಸಬೇಕು. 10 ರಿಂದ 15 ದಿನ ಒಳಗೆ ವರದಿ ಸರ್ಕಾರ ವರದಿ ಸಲ್ಲಿಸುವಂತೆ ನ್ಯಾಯಾಲಯ ಸೂಚನೆ ನೀಡಿದೆ. ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂಜಿಎಸ್‌ ಕಮಲ್‌ ಅವರ ಪೀಠ, ಆಟೋರಿಕ್ಷಾಗೆ ಸೇವೆಗೆ ನ್ಯಾಯಯುತ ದರ ವಿಧಿಸುವುದಕ್ಕೆ ಸಂಬಂಧಿಸಿದಂತೆ  ಕಂಪನಿಗಳ ಜೊತೆ ಸಭೆ ನಡೆಸಿ ಒಮ್ಮತಕ್ಕೆ ಬರುವಂತೆ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ನಿರ್ದೇಶಿಸಿತು. 15 ದಿನ ಕಾರ್ಯನಿರ್ವಹಿಸುವ ದಿನದಲ್ಲಿ ವರದಿ ಸಲ್ಲಿಸಿ ಎಂದಿರುವ ನ್ಯಾಯಾಲಯ ವಿಚಾರಣೆಯನ್ನು ನವೆಂಬರ್ 07ಕ್ಕೆ ಮುಂದೂಡಿದೆ.

ಹೈಕೋರ್ಚ್‌ ಸೂಚನೆ ಬೆನ್ನಲ್ಲೆ ಸಾರಿಗೆ ಇಲಾಖೆಯು ಕಂಪನಿಗಳ ಜತೆಗೆ ಸಭೆ ನಡೆಸಿ, ಆಟೋ ರಿಕ್ಷಾಗಳ ಸಂಖ್ಯೆ ಹಾಗೂ ನಿಗದಿಪಡಿಸಿರುವ ದರ ಕುರಿತು ಮಾಹಿತಿ ಪಡೆದಿದ್ದು, ಶುಕ್ರವಾರ ಹೈಕೋರ್ಚ್‌ಗೆ ವರದಿ ಸಲ್ಲಿಸಲಿದೆ. ಹೈಕೋರ್ಚ್‌ನಲ್ಲಿ ನಡೆಯಲಿರುವ ಪ್ರಕರಣದ ವಿಚಾರಣೆ ನಂತರ ಸಿಗುವ ಸೂಚನೆ ಆಧರಿಸಿ ಮುಂದಿನ ಕ್ರಮ ಅಥವಾ ದರ ನಿಗದಿ ಮಾಡಲು ಸಾರಿಗೆ ಇಲಾಖೆ ನಿರ್ಧರಿಸಿದೆ.

ಆಟೋ ಚಾಲಕರಿಂದ 'ನಮ್ಮ ಯಾತ್ರಿ' ಆ್ಯಪ್‌ ಬಿಡುಗಡೆಗೆ ಸಿದ್ಧತೆ!

ಇದಕ್ಕೂ ಮುನ್ನ ಅರ್ಜಿ ವಿಚಾರಣೆ ನಡೆಸಿದ ನ್ಯಾಯಪೀಠ, ಅರ್ಜಿದಾರರ ಕಂಪನಿಗಳು ಪರವಾನಗಿ ಪಡೆಯದೆ ಆಟೋರಿಕ್ಷಾ ಸೇವೆ ಒದಗಿಸುತ್ತಿವೆ. ಹೆಚ್ಚಿನ ಪ್ರಯಾಣ ದರ ಪಡೆಯುತ್ತಿದೆ ಎಂದು ಸರ್ಕಾರ ಹೇಳುತ್ತಿದೆ. ಇದಕ್ಕೆ ಪ್ರತಿಯಾಗಿ ಅರ್ಜಿದಾರ ಕಂಪನಿಗಳು ಆಟೋರಿಕ್ಷಾ ಸೇವೆ ಸ್ಥಗಿತಗೊಳಿಸುವುದಕ್ಕೆ ಸರ್ಕಾರ ಸಕಾರಣ ನೀಡಿಲ್ಲ. ತಮ್ಮ ಮನವಿ ಆಲಿಸದೆ ಸರ್ಕಾರ ಆದೇಶ ಹೊರಡಿಸಿದೆ. ದರ ನಿಗದಿ ಮಾಡುವುದಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ನಿಯಮ ರೂಪಿಸಿಲ್ಲ ಎಂದು ಹೇಳುತ್ತಿವೆ. ಹೀಗಿರುವಾಗ ಸೇವೆ ಸ್ಥಗಿತ ಮಾಡುವುದರಿಂದ ಅಂತಿಮವಾಗಿ ಸಾರ್ವಜನಿಕರಿಗೆ ಅನಾನುಕೂಲವಾಗುತ್ತದೆ. ಆದ್ದರಿಂದ ಪ್ರಕರಣದಲ್ಲಿ ಅಂತಿಮ ನಿರ್ಧಾರಕ್ಕೆ ಕೈಗೊಳ್ಳುವ ಮುನ್ನ ತಾತ್ಕಾಲಿಕ ಪರಿಹಾರ ಕ್ರಮ ಕಂಡುಕೊಳ್ಳಲು ಸರ್ಕಾರ ಮತ್ತು ಅರ್ಜಿದಾರರು ಸಭೆ ನಡೆಸಿ ಒಮ್ಮತಕ್ಕೆ ಬರಬೇಕು ಎಂದು ಸೂಚಿಸಿತು.

ಒಲಾ ಉಬರ್ ಜೊತೆ ಸಾರಿಗೆ ಇಲಾಖೆ ಸಭೆ, ದರದ ಮಾಹಿತಿ ನೀಡುವಂತೆ ಆದೇಶ!

ಸಹಾಯವಾಣಿಗೆ 40 ದೂರು: ಒಲಾ, ಉಬರ್‌ ಆಟೋರಿಕ್ಷಾ ಓಡಾಟ ನಡೆಸಿದರೆ ದೂರು ಸಲ್ಲಿಸಲು ಸಾರಿಗೆ ಇಲಾಖೆಯು ಆರಂಭಿಸಿರುವ ಸಹಾಯವಾಣಿಗೆ ಗುರುವಾರವೂ ಹಲವರು ಕರೆ ಮಾಡಿ ದೂರು ನೀಡಿದ್ದಾರೆ. ದುಪ್ಪಟ್ಟು ದರ ವಸೂಲಿ ಮಾಡುತ್ತಿದ್ದಾರೆ ಎಂದು ಬಹುತೇಕರು ಸಹಾಯವಾಣಿಗೆ ಸಿಬ್ಬಂದಿಗೆ ತಿಳಿಸಿದ್ದಾರೆ. ಬುಧವಾರ 180ಕ್ಕೂ ಅಧಿಕ ದೂರು ದಾಖಲಾಗಿದ್ದವು.

click me!