
ಬೆಂಗಳೂರು(ಏ.21): ಎಂಟನೇ ತರಗತಿ ವ್ಯಾಸಂಗ ಮಾಡುತ್ತಿರುವ ಅಪ್ರಾಪ್ತೆಯನ್ನು(Minor Girl) ಪೋಷಕರ ಅನುಮತಿಯಿಲ್ಲದೆ ಮನೆಯಿಂದ ಹೊರಗೆ ಕರೆದೊಯ್ದು ಸುತ್ತಾಡಿಸಿಕೊಂಡು ಬಂದ ಆರೋಪದಡಿ ಜೈಲುಪಾಲಾಗಿರುವ(Jail) ದ್ವಿತೀಯ ಪಿಯು ವಿದ್ಯಾರ್ಥಿಗೆ ಇದೇ 22ರಿಂದ ಆರಂಭವಾಗಲಿರುವ ಪರೀಕ್ಷೆ ಬರೆಯುವುದಕ್ಕೆ ಷರತ್ತುಬದ್ಧ ಮಧ್ಯಂತರ ಜಾಮೀನು ನೀಡಿ ಹೈಕೋರ್ಟ್(High Court) ಆದೇಶಿಸಿದೆ. ದ್ವಿತೀಯ ಪಿಯು ಪರೀಕ್ಷೆ(PUC Examination) ಬರೆಯಲು ಮಧ್ಯಂತರ ಜಾಮೀನು(Interim Bail) ನೀಡುವಂತೆ ಕೋರಿ ಆರೋಪಿ ವಿದ್ಯಾರ್ಥಿ(Student) ಸಲ್ಲಿಸಿದ್ದ ಅರ್ಜಿ ಪುರಸ್ಕರಿಸಿದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರು ಈ ಆದೇಶ ಮಾಡಿದ್ದಾರೆ.
ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದ ಅಧಿಕಾರಿಗಳು, ಒಂದು ಲಕ್ಷ ರೂಪಾಯಿ ಮೊತ್ತದ ವೈಯಕ್ತಿಕ ಬಾಂಡ್ ಮತ್ತು ಅಷ್ಟೇ ಮೊತ್ತಕ್ಕೆ ಒಬ್ಬರ ಭದ್ರತಾ ಖಾತರಿ ಪಡೆದು ಆರೋಪಿಯನ್ನು(Accused) ಬಿಡುಗಡೆ ಮಾಡಬೇಕು. ಪದವಿ ಪೂರ್ವ ಶಿಕ್ಷಣ ಇಲಾಖೆ ಮತ್ತು ಕಾಲೇಜು ಆಡಳಿತ ಮಂಡಳಿಯು ಪರೀಕ್ಷೆ ಬರೆಯಲು ಆರೋಪಿಗೆ ಅನುಮತಿ ನೀಡಬೇಕು. ಪರೀಕ್ಷೆ ಮುಗಿದ ನಂತರ ಅಂದರೆ ಮೇ 11ರಂದು ಸಂಜೆ 6ಯೊಳಗೆ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹಕ್ಕೆ ಆರೋಪಿ ಸ್ವಯಂ ಹಾಜರಾಗಿ ಶರಣಾಗಬೇಕು ಎಂದು ಹೈಕೋರ್ಟ್ ಷರತ್ತು ವಿಧಿಸಿದೆ.
ಮೆಟ್ರೋ 2: 1342 ಮರಗಳ ಕತ್ತರಿಸಲು ಹೈಕೋರ್ಟ್ ಅಸ್ತು
ಅಲ್ಲದೆ, ಆರೋಪಿ ವಾಸ ಮಾಡುವ ವ್ಯಾಪ್ತಿ ಪ್ರದೇಶದ ಪೊಲೀಸ್ ಠಾಣೆಗೆ(Police Station) ತೆರಳಿ ಪ್ರತಿದಿನ ಸಂಜೆ 6 ಗಂಟೆಗೆ ಸಹಿ ಮಾಡಬೇಕು. ಪ್ರತ್ಯಕ್ಷ ಅಥವಾ ಪರೋಕ್ಷವಾಗಿ ಪ್ರಕರಣಕ್ಕೆ ಸಂಬಂಧಿಸಿದ ಸಾಕ್ಷ್ಯಗಳನ್ನು ನಾಶಪಡಿಸುವ ಕೆಲಸಕ್ಕೆ ಆರೋಪಿ ಮುಂದಾಗಬಾರದು. ಸಂಬಂಧಪಟ್ಟನ್ಯಾಯಾಲಯದ ಅನುಮತಿ ಪಡೆಯದೇ ಆ ನ್ಯಾಯಾಲಯದ ವ್ಯಾಪ್ತಿ ಪ್ರದೇಶವನ್ನು ಬಿಟ್ಟು ತೆರಳಬಾರದು. ಇದೇ ಮಾದರಿಯ ಅಪರಾಧ ಕೃತ್ಯದಲ್ಲಿ ಭಾಗಿಯಾಗಬಾರದು. ಒಂದೊಮ್ಮೆ ಆರೋಪಿ ಈ ಷರತ್ತುಗಳನ್ನು ಉಲ್ಲಂಘಿಸಿದರೆ ಕೂಡಲೇ ಮಧ್ಯಂತರ ಜಾಮೀನು ರದ್ದುಪಡಿಸಲು ಕೋರಿ ಪ್ರಾಸಿಕ್ಯೂಷನ್ ನ್ಯಾಯಾಲಯದ ಮೊರೆ ಹೋಗಬಹುದು ಎಂದು ಹೈಕೋರ್ಚ್ ಆದೇಶದಲ್ಲಿ ತಿಳಿಸಿದೆ.
ಗುತ್ತಿಗೆದಾರ ಸಂತೋಷ್ ರೀತಿ ಇನ್ನೂ ಎಷ್ಟು ಜನ ಸಾಯ್ಬೇಕು?: ಬಿಬಿಎಂಪಿಗೆ ಹೈಕೋರ್ಟ್ ತರಾಟೆ
ಪ್ರಕರಣವೇನು?:
ಪ್ರಕರಣದ ಸಂತ್ರಸ್ತೆಯ(Victim) ಸಹೋದರಿ ನಗರದ ಪೊಲೀಸರಿಗೆ ಏ.14ರಂದು ದೂರು ನೀಡಿದ್ದರು. ಆರೋಪಿಯು ‘ಪ್ರೀತಿಸುತ್ತಿದ್ದೇನೆ’ ಎಂದೇಳಿ ಎಂಟನೇ ತರಗತಿ ವ್ಯಾಸಂಗ ಮಾಡುತ್ತಿರುವ ನನ್ನ ತಂಗಿಯ ಹಿಂದೆ ಬಿದ್ದಿದ್ದ. ಎರಡು ವಾರಗಳ ಹಿಂದೆ ಮನೆಯಲ್ಲಿ ತಂದೆ-ತಾಯಿ ಇಲ್ಲದ ವೇಳೆ ಆರೋಪಿ ಮತ್ತು ಆತನ ಸ್ನೇಹಿತ, ನನ್ನ ತಂಗಿಯನ್ನು ಒತ್ತಾಯಪೂರ್ವಕವಾಗಿ ಹೊರಗೆ ಕರೆದುಕೊಂಡು ಹೋಗಿ ಸುತ್ತಾಡಿಸಿಕೊಂಡು ವಾಪಸ್ ಕರೆತಂದಿದ್ದಾರೆ. ಅವರು ವಾಪಸ್ ಬಂದಾಗ ನಾನು ಮನೆಯಲ್ಲಿ ಇದ್ದೆ. ಈ ಕುರಿತು ಪ್ರಶ್ನೆ ಮಾಡಿದಾಗ ಆರೋಪಿಗಳು ನನಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದರು. ಜತೆಗೆ, ತಳ್ಳಾಡಿ ಭುಜಕ್ಕೆ ನೋವು ಉಂಟು ಮಾಡಿದರು ಎಂದು ದೂರುದಾರೆ ಆರೋಪಿಸಿದ್ದಳು.
ಅದನ್ನು ಆಧರಿಸಿದ ಪೊಲೀಸರು ಇಬ್ಬರು ಆರೋಪಿಗಳ ವಿರುದ್ಧ ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ ಕಾಯ್ದೆ-2012ರ (ಪೊಕ್ಸೊ) ಕಾಯ್ದೆ ದೂರು ದಾಖಲಿಸಿದ್ದರು. ಆರೋಪಿಗಳನ್ನು ಬಂಧಿಸಿದ ಅಧೀನ ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದರು. ನ್ಯಾಯಾಲಯವು ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿತ್ತು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ