ಮೆಟ್ರೋಗಾಗಿ 203 ಮರಗಳನ್ನು ಕಡಿಯಲು ಹೈಕೋರ್ಟ್‌ ಒಪ್ಪಿಗೆ

By Kannadaprabha NewsFirst Published Jun 10, 2023, 8:59 AM IST
Highlights

ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಮೆಟ್ರೋ ಮಾರ್ಗದ ಭಾಗವಾಗಿರುವ ‘ದೂರವಾಣಿ ನಗರ ಗೇಟ್‌-ಕೆಂಪಾಪುರ ಮಾರ್ಗ’ದ ನಿರ್ಮಾಣ ಕಾಮಗಾರಿಗಾಗಿ 203 ಮರಗಳ ತೆರವು ಹಾಗೂ 45 ಮರಗಳ ಸ್ಥಳಾಂತರಕ್ಕೆ ಅನುಮತಿ ನೀಡಿ ಹೈಕೋರ್ಟ್‌ ಆದೇಶಿಸಿದೆ. 

ಬೆಂಗಳೂರು (ಜೂ.10): ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಮೆಟ್ರೋ ಮಾರ್ಗದ ಭಾಗವಾಗಿರುವ ‘ದೂರವಾಣಿ ನಗರ ಗೇಟ್‌-ಕೆಂಪಾಪುರ ಮಾರ್ಗ’ದ ನಿರ್ಮಾಣ ಕಾಮಗಾರಿಗಾಗಿ 203 ಮರಗಳ ತೆರವು ಹಾಗೂ 45 ಮರಗಳ ಸ್ಥಳಾಂತರಕ್ಕೆ ಅನುಮತಿ ನೀಡಿ ಹೈಕೋರ್ಟ್‌ ಆದೇಶಿಸಿದೆ. ಮೆಟ್ರೋ ಕಾಮಗಾರಿ ಸೇರಿ ಅಭಿವೃದ್ಧಿ ಕಾಮಗಾರಿಗಳಿಗಾಗಿ ಮರಗಳನ್ನು ಕಡಿಯುವುದನ್ನು ಆಕ್ಷೇಪಿಸಿ ‘ಬೆಂಗಳೂರು ಎನ್ವಿರಾನ್ಮೆಂಟ್‌ ಟ್ರಸ್ಟ್‌’ ಹಾಗೂ ಪರಿಸರವಾದಿ ದತ್ತಾತ್ರೇಯ ಟಿ. ದೇವರೆ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಪಿ.ಬಿ. ವರಾಳೆ ಅವರ ನೇತೃತ್ವ ದ ವಿಭಾಗೀಯ ಪೀಠ ಈ ಆದೇಶ ಮಾಡಿದೆ.

ಮೆಟ್ರೋ ಯೋಜನೆ ಅತ್ಯಂತ ದಕ್ಷ ಮತ್ತು ಪರಿಸರಸ್ನೇಹಿ ಸಾರಿಗೆ ವ್ಯವಸ್ಥೆಯಾಗಿದೆ. ಇದರಿಂದ, ಹೆಚ್ಚಿನ ಸಂಖ್ಯೆಯ ಜನರ ಪ್ರಯಾಣದ ಸಮಯ ಉಳಿತಾಯವಾಗಲಿದೆ. ಜತೆಗೆ, ಸಂಚಾರ ದಟ್ಟಣೆಯೂ ಕಡಿಮೆಯಾಗಲಿದೆ. ದೂರವಾಣಿ ನಗರ ಗೇಟ್‌-ಕೆಂಪಾಪುರ ಮಾರ್ಗದಲ್ಲಿ 203 ಮರಗಳನ್ನು ಕಡಿಯಲು, 45 ಮರಗಳನ್ನು ಸ್ಥಳಾಂತರಿಸಲು ಹಾಗೂ 14 ಮರಗಳನ್ನು ಉಳಿಸಿಕೊಳ್ಳಲು ತಾಂತ್ರಿಕ ಸಲಹಾ ಸಮಿತಿ ಅನುಮೋದನೆ ನೀಡಿದೆ. ಅದರ ಆಧಾರದಲ್ಲಿ ವೃಕ್ಷ ಅಧಿಕಾರಿಗೆ ಮರಗಳ ತೆರವು ಹಾಗೂ ಸ್ಥಳಾಂತರಕ್ಕೆ ಬಿಎಂಆರ್‌ಸಿಎಲ್‌ಗೆ ಅನುಮತಿ ನೀಡಿದ್ದಾರೆ. ಅದನ್ನು ಕಾರ್ಯರೂಪಕ್ಕೆ ತರಲು ಅನುಮತಿ ನೀಡಬೇಕು ಎಂದು ಬಿಎಂಆರ್‌ಸಿಎಲ್‌ ಹೈಕೋರ್ಟ್‌ಗೆ ಮನವಿ ಮಾಡಿತ್ತು. ಈ ಮನವಿ ಪುರಸ್ಕರಿಸಿರುವ ಹೈಕೋರ್ಟ್‌, ಮರಗಳ ತೆರವು ಹಾಗೂ ಸ್ಥಳಾಂತರಕ್ಕೆ ಅನುಮತಿ ನೀಡಿದೆ.

ದೇವಾಸ್‌ ಸಿಇಒ ದೇಶಭ್ರಷ್ಟ ಆರ್ಥಿಕ ಅಪರಾಧಿ: ಸಿಬಿಐ ಕೋರ್ಟ್ ಘೋಷಣೆ

ಜುಲೈ ಅಂತ್ಯಕ್ಕೆ ಬೈಯಪ್ಪನಹಳ್ಳಿ- ಕೆ.ಆರ್‌.ಪುರ ಮೆಟ್ರೋ ಪೂರ್ಣ: ಬೈಯಪ್ಪನಹಳ್ಳಿ-ಕೆ.ಆರ್‌ ಪುರದವರೆಗಿನ 2.2 ಕಿ.ಮೀ. ಅಂತರದ ಮೆಟ್ರೋ ಮಾರ್ಗದ ಕಾಮಗಾರಿ ವೇಗ ಪಡೆದಿದ್ದು, ಜುಲೈ ಅಂತ್ಯದಲ್ಲಿ ಜನಬಳಕೆಗೆ ಮುಕ್ತವಾಗುವ ಸಾಧ್ಯತೆಯಿದೆ. ನೇರಳೆ ಮಾರ್ಗದ ರೀಚ್‌-1ಎ ಹಂತದ ಕಾಮಗಾರಿಯ ಪ್ರಮುಖ ಭಾಗವಾಗಿ ಸೇಲಂ ರೈಲ್ವೆ ಮಾರ್ಗದ ಬಳಿ ಅಳವಡಿಕೆಯಾಗಿದ್ದ 65 ಮೀಟರ್‌ ಉದ್ದದ ವೆಬ್‌ ಗರ್ಡರ್‌ಗೆ ವಯಡಕ್ಟ್ಗಳನ್ನು ಅಳವಡಿಸುವ ಕಾರ್ಯ ಈಚೆಗೆ ಮುಕ್ತಾಯವಾಗಿದೆ. ಗುತ್ತಿಗೆ ಸಂಸ್ಥೆ ಐಟಿಡಿ ಸೆಮೆಂಟೆಶನ್‌ ಲಿ. ಕಂಪನಿ ಇಲ್ಲಿ ವಯಡಕ್ಟ್ಗಳನ್ನು ಎತ್ತರಕ್ಕೇರಿಸಿ ಅಳವಡಿಸಿದೆ.

ಇನ್ನುಳಿದಂತೆ ಇಲ್ಲಿ 100 ಮೀ. ಎತ್ತರಿಸಿದ ಗೋಡೆ ನಿರ್ಮಾಣ ಆಗಬೇಕಿದೆ. ಜೊತೆಗೆ ಮಾರ್ಗದಲ್ಲಿ ಹಳಿ ಜೋಡಣೆ, ಸಿಗ್ನಲಿಂಗ್‌, ವಿದ್ಯುದ್ದೀಕರಣ, ನಿಲ್ದಾಣಗಳಲ್ಲಿ ಸಿವಿಲ್‌ ಕಾಮಗಾರಿ ಸೇರಿ ಹಲವು ಕಾರ್ಯಗಳಿವೆ. ಇದಾದ ಬಳಿಕ ಪ್ರಾಯೋಗಿಕವಾಗಿ ಸಂಚಾರ, ಸಿಎಂಆರ್‌ಎಸ್‌ನಿಂದ ಸುರಕ್ಷತಾ ಪರೀಕ್ಷೆ, ಜನಬಳಕೆಗೆ ಅನುಮತಿ ನೀಡುವಿಕೆ ಸೇರಿ ಇತರೆ ಪ್ರಕ್ರಿಯೆಗಳು ನಡೆಯಬೇಕಿದೆ. ಜುಲೈ ಅಂತ್ಯದ ವೇಳೆಗೆ ಈ ಎಲ್ಲವೂ ಪೂರ್ಣಗೊಳ್ಳುವ ನೀರಿಕ್ಷೆಯಿದೆ.

ಬಿಬಿಎಂಪಿ ವ್ಯಾಪ್ತಿಯಲ್ಲಿ ಆಸ್ತಿ ತೆರಿಗೆ ಏರಿಕೆ ಸದ್ಯಕ್ಕಿಲ್ಲ: ಹೊಸ ವ್ಯವಸ್ಥೆ ಜಾರಿಗೆ ಬೇಕಿದೆ 6 ತಿಂಗಳ ಕಾಲಾವಕಾಶ

691.81 ಕೋಟಿ ವೆಚ್ಚದಲ್ಲಿ ನಡೆಯುತ್ತಿರುವ ಈ ಮಾರ್ಗ ಬೆನ್ನಿಗಾನಹಳ್ಳಿ, ಕೆ.ಆರ್‌.ಪುರ, ಸಿಂಗಯ್ಯನಪಾಳ್ಯ, ಗರುಡಾಚಾರ್ಯಪಾಳ್ಯ, ಹೂಡಿ, ಸೀತಾರಾಮ ಪಾಳ್ಯ ನಿಲ್ದಾಣಗಳನ್ನು ಒಳಗೊಂಡಿದೆ. ರೀಚ್‌ 1ಎ ಮಾರ್ಗದ ಪೂರ್ಣಗೊಂಡಲ್ಲಿ ಬೆಂಗಳೂರು ಮೆಟ್ರೋ ರೈಲ್ವೆ ನಿಗಮವು ಒಟ್ಟಾರೆ 70.8 ಕಿ.ಮೀ. ಮಾರ್ಗದ ವ್ಯಾಪ್ತಿಯನ್ನು ಹೊಂದಿದಂತಾಗಲಿದೆ. ಇತ್ತೀಚೆಗೆ ಪ್ರಧಾನಿ ಮೋದಿ ಅವರು ಕೆ.ಆರ್‌ ಪುರಂ-ವೈಟ್‌ಫೀಲ್ಡ್‌ ಮೆಟ್ರೋ ಸೇವೆಗೆ ಚಾಲನೆ ನೀಡಿದ್ದರು. ಬೈಯಪ್ಪನಹಳ್ಳಿ-ಕೆ.ಆರ್‌. ಪುರಂ ಮಾರ್ಗ ಪೂರ್ಣಗೊಂಡರೆ ಪ್ರಯಾಣಿಕರ ಸಂಖ್ಯೆ ಇನ್ನಷ್ಟು ಹೆಚ್ಚಾಗಲಿದೆ.

click me!