ಬತ್ತಿ ಹೋಗಿದ್ದ ಬಸವಸಾಗರ ಜಲಾಶಯಕ್ಕೆ ಬಂತು ಜೀವಕಳೆ: ಕೃ‍ಷ್ಣ ನದಿ ತೀರದಲ್ಲಿ ಪ್ರವಾಹ ಭೀತಿ

By Sathish Kumar KHFirst Published Jul 27, 2023, 6:30 PM IST
Highlights

ಕೆಲವು ದಿನಗಳ ಹಿಂದೆ ಬತ್ತಿ ಹೋಗಿದ್ದ ಯಾದಗಿರಿ, ರಾಯಚೂರು, ವಿಜಯಪುರ ಹಾಗೂ ಕಲಬುರಗಿ ಜಿಲ್ಲೆಗಳ ಜೀವನಾಡಿಯಾಗಿರುವ ಬಸವಸಾಗರ ಜಲಾಶಯಕ್ಕೆ ಈಗ ಜೀವಕಳೆ ಬಂದಿದೆ.

ವರದಿ: ಪರಶುರಾಮ ಐಕೂರ್, ಏಷ್ಯಾನೆಟ್ ಸುವರ್ಣ ನ್ಯೂಸ್ 

ಯಾದಗಿರಿ (ಜು.27): ಮಹಾರಾಷ್ಟ್ರದ ಪಶ್ಚಿಮ ಘಟ್ಟ ಪ್ರದೇಶದ ಕೃಷ್ಣಾ ಜಲಾನಯನ ಪ್ರದೇಶದಲ್ಲಿ ಸುರಿಯುತ್ತಿರುವ ವ್ಯಾಪಕ ಮಳೆಗೆ ಬತ್ತಿ ಬರಿದಾಗಿದ್ದ ಜಲಾಶಯಗಳ, ನದಿಗಳು ಹಾಗೂ ಕೆರೆಗಳು ಭರ್ತಿಯಾಗ್ತಿವೆ. ಯಾದಗಿರಿ, ರಾಯಚೂರು, ವಿಜಯಪುರ ಹಾಗೂ ಕಲಬುರಗಿ ಜಿಲ್ಲೆಗಳ ಜೀವನಾಡಿಯಾಗಿರುವ ಬಸವಸಾಗರ ಜಲಾಶಯಕ್ಕೆ ಈಗ ಜೀವಕಳೆ ಬಂದಿದೆ. ಯಾದಗಿರಿ ಜಿಲ್ಲೆಯ ಹುಣಸಗಿ ತಾಲೂಕಿನ ನಾರಾಯಣಪುರ ಬಳಿಯ ಬಸವಸಾಗರ ಜಲಾಶಯಕ್ಕೆ ಒಳಹರಿವು ಹೆಚ್ಚಾಗಿದೆ. ಸುಮಾರು 1.50 ಲಕ್ಷ ಕ್ಯೂಸೆಕ್ ಆಲಮಟ್ಟಿ ಡ್ಯಾಂ ನಿಂದ ನಾರಾಯಣಪುರದ ಬಸವಸಾಗರ ಜಲಾಶಯಕ್ಕೆ ಬಿಡುಗಡೆ ಮಾಡಲಾಗಿದೆ. ಇದರಿಂದಾಗಿ ಕೃಷ್ಣಾ ನದಿಗೆ ಬಸವಸಾಗರ ಜಲಾಶಯದಿಂದ ಸುಮಾರು 80 ಸಾವಿರ ಕ್ಯೂಸೆಕ್ ನೀರನ್ನು ರಿಲೀಸ್ ಮಾಡಲಾಗಿದೆ.

ಕೃಷ್ಣಾ ನದಿಗೆ ನೀರು ಬಿಡುಗಡೆ ಮುನ್ನ ಕ್ರಸ್ಟಗೇಟ್ ಪೂಜೆ:  ನಾರಾಯಣಪುರದ ಬಸವಸಾಗರ ಜಲಾಶಯದಿಂದ ಕೃಷ್ಣಾ ನದಿಗೆ ನೀರು ಬಿಡುಗಡೆಗೂ ಮುನ್ನ ನಿನ್ನೆ ರಾತ್ರಿ ಅಣೆಕಟ್ಟು ಅಧಿಕಾರಿಗಳು ಕ್ರಸ್ಟಗೇಟ್ ಗೆ ಸಾಂಪ್ರದಾಯಿಕವಾಗಿ ಪೂಜೆ ಸಲ್ಲಿಸಿದರು. ವಿಜಯಪುರ ಜಿಲ್ಲೆಯ ಆಲಮಟ್ಟಿ ಲಾಲ್ ಬಹದ್ದೂರ್ ಶಾಸ್ತ್ರಿ ಜಲಾಶಯದಿಂದ ಬಸವಸಾಗರಕ್ಕೆ 1 ಲಕ್ಷದ 50 ಸಾವಿರ ಕ್ಯೂಸೆಕ್ ನಷ್ಟು ನೀರು ಹರಿದು ಬರುತ್ತಿದೆ. ಹೀಗಾಗಿ ಇಂದು ಬೆಳಿಗ್ಗೆ ಜಲಾಶಯದ 12 ಕ್ರಸ್ಟಗೇಟ್ ಗಳನ್ನು ತೆರದು 80 ಸಾವಿರ ಕ್ಯೂಸೆಕ್ ನಷ್ಟು ನೀರನ್ನು ಕೃಷ್ಣಾ ನದಿಗೆ ಹರಿಬಿಡಲಾಗಿದೆ. ಇದರಿಂದಾಗಿ ನೀರಿಲ್ಲದೇ ಒಣಗಿ ಹೋಗಿದ್ದ ಕೃಷ್ಣಾ ನದಿಗೆ ಈಗ ಜೀವಕಳೆ ಬಂದಿದೆ. ಹಲವು ತಿಂಗಳುಗಳಿಂದ ನದಿಗೆ ಕಂಗೆಟ್ಟಿದ್ದ ಅನ್ಮದಾತನ ಮೊಗದಲ್ಲಿ ಮಂದಹಾಸ ಮೂಡಿದೆ. ಭತ್ತ ನಾಟಿ ಸೇರಿದಂತೆ ಹಲವು ಬೆಳೆಗಳ ಬಿತ್ತನೆಗೆ ಮುಂದಾಗಿದ್ದಾರೆ.

ವಿಜಯಪುರ: ಆಲಮಟ್ಟಿ ಜಲಾಶಯ ತುಂಬೋಕೆ 2 ಮೀ. ಬಾಕಿ

ಕೃಷ್ಣಾ ನದಿತೀರದಲ್ಲಿ ಪ್ರವಾಹದ ಭೀತಿ: ನಾರಾಯಣಪುರ ಬಳಿಯ ಬಸವಸಾಗರ ಡ್ಯಾಂ‌ನಿಂದ ಅಪಾರ ಪ್ರಮಾಣದ ನೀರನ್ನು ಕೃಷ್ಣಾ ನದಿಗೆ ಹರಿಬಿಡಲಾಗುತ್ತಿದ್ದು, ಇದರಿಂದಾಗಿ ಕೃಷ್ಣಾ ತೀರದ ಗ್ರಾಮಗಳಿಗೆ ಪ್ರವಾಹದ ಭೀತಿ ಎದುರಾಗಿದೆ. ಕೃಷ್ಣಾ ಎಡ ಹಾಗೂ ಬಲ ದಂಡೆಯ ಕಾಲುವೆಗಳ ಮೂಲಕ ಹರಿಸಲಾಗುತ್ತಿದೆ. ಯಾದಗಿರಿ ಹಾಗೂ ರಾಯಚೂರು ಜಿಲ್ಲಾಡಳಿತ ಸಾಕಷ್ಟು ಮುಂಜಾಗ್ರತಾ ಕ್ರಮಗಳನ್ನು ವಹಿಸಿದೆ. ಜೊತೆಗೆ ನದಿ ತೀರದ ಗ್ರಾಮಗಳಿಗೆ ಅಗತ್ಯ ಮುಂಜಾಗ್ರತಾ ಕ್ರಮ ಕೈಗೊಳ್ಳುವಂತೆ ಸ್ಥಳೀಯ ಆಡಳಿತಗಳಿಗೆ ಹಾಗೂ ಪೊಲೀಸ್ ಇಲಾಖೆಗೆ ಸೂಚನೆ ನೀಡಲಾಗಿದೆ. ಪೋಲಿಸ್ ಇಲಾಖೆ ಸಿಬ್ಬಂದಿಗಳು ಮೈಕ್ ಮೂಲಕ ಜನ-ಜಾನುವಾರುಗಳು ನದಿಗೆ ಇಳಿಯದಂತೆ ಯಾವುದೇ ಚಟುವಟಿಕೆ ನಡೆಸದಂತೆ ಜಾಗೃತಿ ಮೂಡಿಸುತ್ತಿದ್ದಾರೆ.

ಹಾರಂಗಿ ಜಲಾಶಯದಿಂದ ಭಾರಿ ಪ್ರಮಾಣದ ನೀರು ಹೊರಕ್ಕೆ: ಕೆಳಭಾಗದ ಗ್ರಾಮಗಳಿಗೆ ಪ್ರವಾಹದ ಭೀತಿ

ಬತ್ತಿ ಹೋಗಿದ್ದ ಬಸವಸಾಗರ ಡ್ಯಾಂ ಭರ್ತಿಯತ್ತ: ಯಾದಗಿರಿ ಜಿಲ್ಲೆ ಸೇರಿದಂತೆ ಹಲವೆಡೆ ಸುರಿಯುತ್ತಿರುವ ನಿರಂತರ ಮಳೆಯಿಂದ ಬತ್ತಿ ಹೋಗಿದ್ದ ಬಸವಸಾಗರ ಜಲಾಶಯ ಭತ್ತಿಯತ್ತ ಸಾಗಿದೆ. ಯಾದಗಿರಿ ಜಿಲ್ಲೆಯ ಹುಣಸಗಿ ತಾಲೂಕಿನ ಬಸವಸಾಗರ ಜಲಾಶಯ ಕಳೆದ 10 ದಿನದ ಹಿಂದೆ ಡೆಡ್ ಸ್ಟೋರೆಜ್ ಮಟ್ಟಕ್ಕೆ ತಲುಪಿತ್ತು. ಕುಡಿಯಲು ಸಹ ನೀರು ಇಲ್ಲದಂತ ಪರಿಸ್ಥಿತಿಯಾಗಿತ್ತು.  ನಾರಾಯಣಪುರದ ಬಸವಸಾಗರ ಜಲಾಶಯ ಒಟ್ಟು 492.25 ಮೀಟರ್ ಹೊಂದಿದೆ. ಸದ್ಯ 490 ಮೀ ನೀರು ತುಂಬಿದೆ. 33.31 ಟಿಎಂಸಿ ಯಷ್ಟು ಸಾಮರ್ಥ್ಯ ಹೊಂದಿರುವ ಡ್ಯಾಂ ಪ್ರಸ್ತುತ 24.19 ಟಿಎಂಸಿ ನೀರು ತುಂಬಿದೆ. ಜೊತೆಗೆ ಬಸವಸಾಗರ ಜಲಾಶಯದಿಂದ ಕೃಷ್ಣಾ ನದಿಗೆ ಸಹ 80 ಸಾವಿರ ಕ್ಯೂಸೆಕ್ ನೀರನ್ನು ಬಿಡುಗಡೆ ಮಾಡಿದ್ದಾರೆ. ಇದರಿಂದ ಕೃಷ್ಣಾ ನದಿತೀರದ ಗ್ರಾಮಗಳಲ್ಲಿ ಪ್ರವಾಹದ ಭೀತಿ ಶುರುವಾಗಿದೆ.

click me!