ರಾಜ್ಯಕ್ಕೆ 2ನೇ ಅಲೆ ಭೀತಿ : ಮತ್ತೆ ಲಾಕ್‌ಡೌನ್‌, ನೈಟ್‌ ಕರ್ಫ್ಯೂ ..?

By Kannadaprabha NewsFirst Published Feb 21, 2021, 7:11 AM IST
Highlights

ರಾಜ್ಯದಲ್ಲಿ ಮತ್ತೊಮ್ಮೆ ಮಹಾಮಾರಿ ಕೊಂಚ ಹೆಚ್ಚಾಗುತ್ತಿದ್ದು ಜನತೆ ತೀವ್ರ ಎಚ್ಚರಿಕೆಯಿಂದ ಇರಬೇಕು ಎಂದು ರಾಜ್ಯ ಆರೋಗ್ಯ ಸಚಿವ ಸುಧಾಕರ್ ಎಚ್ಚರಿಕೆ ನೀಡಿದ್ದಾರೆ. 

ಬೆಂಗಳೂರು  (ಫೆ.21): ನೆರೆಯ ಮಹಾರಾಷ್ಟ್ರ ಹಾಗೂ ಕೇರಳದಲ್ಲಿ ಕೊರೋನಾ ಪ್ರಕರಣಗಳು ಹೆಚ್ಚಾಗಿರುವುದರಿಂದ ನಮ್ಮಲ್ಲೂ ಸೋಂಕು ಹೆಚ್ಚಾಗುವ ಸಾಧ್ಯತೆ ಇದೆ. ಹೀಗಾಗಿ ಮಹಾರಾಷ್ಟ್ರ ಹಾಗೂ ಕೇರಳದಿಂದ ರಾಜ್ಯಕ್ಕೆ ಬರುವವರು ಕಡ್ಡಾಯವಾಗಿ ಆರ್‌ಟಿಪಿಸಿಆರ್‌ ನೆಗೆಟಿವ್‌ ವರದಿಯನ್ನು ತರಬೇಕು ಎಂದು ಸೂಚಿಸಲಾಗಿದೆ. ಕೇರಳ ಮತ್ತು ಮಹಾರಾಷ್ಟ್ರದ ಜೊತೆಗೆ ನಮ್ಮ ರಾಜ್ಯದ 7 ಜಿಲ್ಲೆಗಳು ಗಡಿ ಹಂಚಿಕೊಂಡಿದ್ದು, ಅಲ್ಲಿ ಕಟ್ಟುನಿಟ್ಟಿನ ತಪಾಸಣೆಗೆ ನಿರ್ಧರಿಸಲಾಗಿದೆ. ಮಾರ್ಚ್ ಅಂತ್ಯದವರೆಗೂ ಬಹಳ ಎಚ್ಚರಿಕೆ ವಹಿಸಬೇಕು ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್‌ ಹೇಳಿದ್ದಾರೆ.

ಅಲ್ಲದೆ, ರಾಜ್ಯದಲ್ಲಿ ಕೊರೋನಾ ಸೋಂಕು ಹರಡದಂತೆ ಕೆಲವು ಮಾರ್ಗಸೂಚಿಗಳನ್ನು ಪ್ರಕಟಿಸಲಾಗುತ್ತಿದೆ. ಅವುಗಳನ್ನು ಸಾರ್ವಜನಿಕರು ಕಡ್ಡಾಯವಾಗಿ ಪಾಲಿಸಬೇಕು. ಈ ಮೂಲಕ ರಾಜ್ಯದಲ್ಲಿ ಎರಡನೇ ಅಲೆ ಉಂಟಾಗದಂತೆ ಸಹಕರಿಸಬೇಕು ಎಂದು ಮನವಿ ಮಾಡಿದ್ದಾರೆ.

ರಾಜ್ಯದಲ್ಲಿ ಕೊರೋನಾ 2ನೇ ಅಲೆ ಭೀತಿ: ಇಲ್ಲಿದೆ ಫೆ.20ರ ಅಂಕಿ-ಸಂಖ್ಯೆ ...

ಶನಿವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ರಾಜ್ಯದಲ್ಲಿ ಸೋಂಕಿನ ಪ್ರಮಾಣ ಕಡಿಮೆಯಾಗಿದೆ. ಬೇರೆ ರಾಜ್ಯಗಳಿಂದ ಸೋಂಕು ಹರಡುವುದನ್ನು ನಿಯಂತ್ರಿಸಿದರೆ ರಾಜ್ಯದಲ್ಲಿ ಕಠಿಣ ಕ್ರಮಗಳನ್ನು ತೆಗೆದುಕೊಳ್ಳುವ ಅಗತ್ಯ ಬೀಳುವುದಿಲ್ಲ. ಎರಡನೇ ಅಲೆ ತಡೆಯಲು ಯಶಸ್ವಿಯಾದರೆ ಮುಂದೆ ಲಾಕ್‌ಡೌನ್‌, ರಾತ್ರಿ ಕರ್ಪ್ಯೂ ಅಗತ್ಯ ಬೀಳುವುದಿಲ್ಲ. ಸದ್ಯಕ್ಕಂತೂ ನಮ್ಮ ಮುಂದೆ ಲಾಕ್‌ಡೌನ್‌ ಹಾಗೂ ರಾತ್ರಿ ಕಫä್ರ್ಯ ಚಿಂತನೆಯಿಲ್ಲ. ಮುಂದೆಯೂ ಅಂತಹ ಪರಿಸ್ಥಿತಿ ಬಾರದಿರಬೇಕಾದರೆ ಸಾರ್ವಜನಿಕರು ಕಟ್ಟುನಿಟ್ಟಾಗಿ ಕೊರೋನಾ ಮಾರ್ಗಸೂಚಿ ಪಾಲಿಸಿ ಎಂದು ಕರೆ ನೀಡಿದರು.

ಗಡಿ ಜಿಲ್ಲೆಗಳಲ್ಲಿ ಕಟ್ಟೆಚ್ಚರ: ಕೇರಳ ರಾಜ್ಯಕ್ಕೆ ಹೊಂದಿಕೊಂಡಿರುವ ಚಾಮರಾಜನಗರ, ದಕ್ಷಿಣ ಕನ್ನಡ, ಮೈಸೂರು ಹಾಗೂ ಕೊಡಗು ಜಿಲ್ಲೆಗಳ ಗಡಿಯಲ್ಲಿ ಕಟ್ಟೆಚ್ಚರ ವಹಿಸಲಾಗುವುದು. ಪ್ರತಿಯೊಬ್ಬರ ಬಳಿಯೂ ಕೊರೋನಾ ನೆಗೆಟಿವ್‌ ವರದಿಯನ್ನು ಪರೀಕ್ಷಿಸಲಾಗುವುದು. ಮಹಾರಾಷ್ಟ್ರ ಗಡಿಯ ಬೆಳಗಾವಿ, ಕಲಬುರಗಿ, ವಿಜಯಪುರ ಜಿಲ್ಲೆಗಳಲ್ಲೂ ಕಡ್ಡಾಯವಾಗಿ ಆರ್‌ಟಿಪಿಸಿಆರ್‌ ವರದಿ ಪರೀಕ್ಷಿಸಲಾಗುವುದು. ಗಡಿಯಲ್ಲಿ ಎಲ್ಲಾ ಕಡೆಯೂ ಗೃಹ ಇಲಾಖೆಯ ಸಹಕಾರದೊಂದಿಗೆ ಕಟ್ಟೆಚ್ಚರ ವಹಿಸಲಾಗಿದೆ ಎಂದು ತಿಳಿಸಿದರು.

ಕೇರಳ, ಮಹಾರಾಷ್ಟ್ರ ಬಗ್ಗೆ ವಿಶೇಷ ಎಚ್ಚರಿಕೆ: ಮಹಾರಾಷ್ಟ್ರ, ಕೇರಳದಲ್ಲಿ ಕೊರೋನಾ ಹೆಚ್ಚಾಗಿದೆ. ಕಳೆದ ಒಂದು ವಾರದಿಂದ ಈ ರಾಜ್ಯಗಳಲ್ಲಿ ಕೊರೋನಾ ಪ್ರಕರಣಗಳು ಹೆಚ್ಚಾಗುತ್ತಿವೆ. ಕೇರಳವೊಂದರಲ್ಲಿಯೇ ಶುಕ್ರವಾರ 5405 ಪ್ರಕರಣಗಳು ದಾಖಲಾಗಿವೆ. ಪ್ರತಿ ದಿನ ಸರಾಸರಿ 15 ಮಂದಿ ಸಾವನ್ನಪ್ಪುತ್ತಿದ್ದಾರೆ. ಮಹಾರಾಷ್ಟ್ರದಲ್ಲಿ ಶುಕ್ರವಾರ 6112 ಪ್ರಕರಣ ದಾಖಲಾಗಿದ್ದು, ಒಂದೇ ದಿನ 44 ಜನ ಮೃತಪಟ್ಟಿದ್ದಾರೆ. ಹೀಗಾಗಿ ನಾವು ಎಚ್ಚರ ವಹಿಸಬೇಕಿದೆ. ಸಾರ್ವಜನಿಕರೂ ಸಹ ನೆರೆಯ ಜಿಲ್ಲೆಗಳಲ್ಲಿ ಹೆಚ್ಚಾಗುತ್ತಿರುವ ಪ್ರಕರಣಗಳನ್ನು ಗಮನಿಸಿ ಕೊರೋನಾ ಮಾರ್ಗಸೂಚಿ ಪಾಲಿಸಬೇಕು ಎಂದು ಮನವಿ ಮಾಡಿದರು.

click me!