ರಾಜ್ಯ ಸರ್ಕಾರದ 'ಕೇಸ್ ವಾಪಸಿ' ನಿರ್ಧಾರಕ್ಕೆ ಹೈಕೋರ್ಟ್ ತಡೆ!; ಲಾಡ್ಲೆ ಮಶಾಕ್‌ ಗಲಭೆ ಸೇರಿದಂತೆ 52 ಕ್ರಿಮಿನಲ್ ಕೇಸ್‌ ರದ್ದು ತೀರ್ಮಾನಕ್ಕೆ ಬ್ರೇಕ್‌

Published : Jul 02, 2026, 11:42 AM IST
Karnataka High Court

ಸಾರಾಂಶ

ಆಳಂದ ಕೋಮು ಗಲಭೆ ಸೇರಿದಂತೆ 52 ಕ್ರಿಮಿನಲ್ ಪ್ರಕರಣಗಳನ್ನು ಹಿಂಪಡೆಯುವ ರಾಜ್ಯ ಸರ್ಕಾರದ ನಿರ್ಧಾರಕ್ಕೆ ಕರ್ನಾಟಕ ಹೈಕೋರ್ಟ್ ಮಧ್ಯಂತರ ತಡೆಯಾಜ್ಞೆ ನೀಡಿದೆ. ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ನ್ಯಾಯಾಲಯ, ಸರ್ಕಾರದ ಕ್ರಮದಲ್ಲಿ ಮೇಲ್ನೋಟಕ್ಕೆ ದೋಷಗಳಿವೆ ಎಂದಿದೆ.

ಬೆಂಗಳೂರು (ಜು.2): ವಿವಿಧ ಪೊಲೀಸ್ ಠಾಣೆಗಳಲ್ಲಿ ದಾಖಲಾಗಿದ್ದ ಭೀಕರ ಆಳಂದ ಕೋಮು ಗಲಭೆ ಸೇರಿದಂತೆ ಒಟ್ಟು 52 ಕ್ರಿಮಿನಲ್ ಪ್ರಕರಣಗಳನ್ನು ಹಿಂಪಡೆಯಲು ಮೇ 27 ರಂದು ರಾಜ್ಯ ಸರ್ಕಾರ ಕೈಗೊಂಡಿದ್ದ ಸಚಿವ ಸಂಪುಟದ ತೀರ್ಮಾನಕ್ಕೆ ಕರ್ನಾಟಕ ಹೈಕೋರ್ಟ್ ಭಾರಿ ಆಘಾತ ನೀಡಿದೆ. ಸರ್ಕಾರದ ಈ ನಿರ್ಧಾರವನ್ನು ಪ್ರಶ್ನಿಸಿ ಗಿರೀಶ್ ಭಾರಧ್ವಜ್ ಅವರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ (PIL) ವಿಚಾರಣೆ ನಡೆಸಿದ ನ್ಯಾಯಾಲಯವು, ಪ್ರಕ್ರಿಯೆಗೆ ಮಧ್ಯಂತರ ತಡೆಯಾಜ್ಞೆ ನೀಡಿ ಆದೇಶಿಸಿದೆ. ಮುಖ್ಯ ನ್ಯಾಯಮೂರ್ತಿ ವಿಭು ಬಕ್ರು ಮತ್ತು ನ್ಯಾಯಮೂರ್ತಿ ಕೆ.ಎಸ್. ಹೇಮಲೇಖಾ ಅವರನ್ನೊಳಗೊಂಡ ಹೈಕೋರ್ಟ್‌ನ ಉನ್ನತ ವಿಭಾಗೀಯ ಪೀಠವು ಈ ಮಹತ್ವದ ಆದೇಶವನ್ನು ಹೊರಡಿಸಿದೆ.

ವಿಚಾರಣೆ ವೇಳೆ ಅರ್ಜಿದಾರರ ಪರ ಹಿರಿಯ ವಕೀಲ ವೆಂಕಟೇಶ್ ದಳವಾಯಿ ಅವರು ನ್ಯಾಯಪೀಠದ ಮುಂದೆ ಸುದೀರ್ಘ ವಾದ ಮಂಡಿಸಿದರು. "ರಾಜ್ಯದ ಮೂವರು ಹಿರಿಯ ಸಚಿವರ ಶಿಫಾರಸಿನ ಮೇರೆಗೆ ವಿವಿಧ ಠಾಣೆಗಳಲ್ಲಿದ್ದ ಕ್ರಿಮಿನಲ್ ಪ್ರಕರಣಗಳನ್ನು ಪ್ರಾಸಿಕ್ಯೂಷನ್‌ನಿಂದ ಹಿಂಪಡೆಯಲಾಗಿದೆ. ಆದರೆ, ಇದೇ ವಿಷಯಕ್ಕೆ ಸಂಬಂಧಿಸಿದಂತೆ 2025 ರಲ್ಲಿ ಹೈಕೋರ್ಟ್ ಹೊರಡಿಸಿದ್ದ ಕಟ್ಟುನಿಟ್ಟಿನ ಆದೇಶಕ್ಕೆ ತದ್ವಿರುದ್ಧವಾದ ನಿಲುವನ್ನು ಸರ್ಕಾರ ತಳೆದಿದೆ. ರಾಜಕೀಯ ದುರುದ್ದೇಶದಿಂದ ನಿಯಮಗಳನ್ನು ಗಾಳಿಗೆ ತೂರಲಾಗಿದೆ," ಎಂದು ಅವರು ಕೋರ್ಟ್ ಗಮನಕ್ಕೆ ತಂದರು.

ವಾದವನ್ನು ಪುರಸ್ಕರಿಸಿದ ಹೈಕೋರ್ಟ್, ಕ್ರಿಮಿನಲ್ ಪ್ರೊಸೀಜರ್ ಕೋಡ್‌ನ ಸೆಕ್ಷನ್ 321 ರ ಅಡಿಯಲ್ಲಿ (Section 321 CrPC) ಪ್ರಾಸಿಕ್ಯೂಷನ್ ಹಿಂಪಡೆಯಲು ಕೈಗೊಂಡ ಕ್ರಮದಲ್ಲಿ ಮೇಲ್ನೋಟಕ್ಕೆ ತಪ್ಪುಗಳು ಕಂಡುಬಂದಿವೆ ಎಂದು ಅಭಿಪ್ರಾಯಪಟ್ಟಿತು. ಈ ಹಿನ್ನೆಲೆಯಲ್ಲಿ ಮುಂದಿನ ಕ್ರಮಗಳಿಗೆ ತಡೆ ನೀಡಿರುವ ಪೀಠವು, ರಾಜ್ಯ ಗೃಹ ಇಲಾಖೆ ಹಾಗೂ ಅಭಿಯೋಗ ಮತ್ತು ಸರ್ಕಾರಿ ವ್ಯಾಜ್ಯಗಳ ಇಲಾಖೆಗೆ ತುರ್ತು ನೋಟಿಸ್ ಜಾರಿ ಮಾಡಿದೆ.

ಲಾಡ್ಲೆ ಮಶಾಕ್ ದರ್ಗಾ ಗಲಭೆ ಕೇಸ್‌ಗೂ ತಡೆ

ಸರ್ಕಾರ ಹಿಂಪಡೆದಿದ್ದ 52 ಪ್ರಕರಣಗಳಲ್ಲಿ ಕಲಬುರಗಿ ಜಿಲ್ಲೆಯ ಆಳಂದ ತಾಲೂಕಿನ ಕುಖ್ಯಾತ 'ಲಾಡ್ಲೆ ಮಶಾಕ್ ದರ್ಗಾ ಗಲಭೆ' ಪ್ರಕರಣ ಸೇರಿದಂತೆ ಕೆಲವು ಅತ್ಯಂತ ಸೂಕ್ಷ್ಮ ಕೋಮುಗಲಭೆ ಪ್ರಕರಣಗಳೂ ಸೇರಿದ್ದವು. ವಿವಿಧ ರಾಜಕಾರಣಿಗಳು, ರೈತಪರ ಸಂಘಟನೆಗಳ ಮುಖಂಡರು, ಕನ್ನಡಪರ ಹೋರಾಟಗಾರರು ಹಾಗೂ ಸಾಮಾಜಿಕ ಕಾರ್ಯಕರ್ತರ ವಿರುದ್ಧ ದಾಖಲಾಗಿದ್ದ ಈ ಪ್ರಕರಣಗಳನ್ನು ಕೈಬಿಡಲು ಸರ್ಕಾರ ಮುಂದಾಗಿತ್ತು. ಆದರೆ ಹೈಕೋರ್ಟ್‌ನ ಈಗಿನ ತಡೆಯಾಜ್ಞೆಯಿಂದಾಗಿ ಈ ಎಲ್ಲಾ ಪ್ರಕರಣಗಳ ಕಾನೂನು ಪ್ರಕ್ರಿಯೆಗಳು ಯಥಾಸ್ಥಿತಿಯಲ್ಲಿ ಮುಂದುವರಿಯಲಿವೆ.

ಸಚಿವ ಯು.ಟಿ. ಖಾದರ್‌ಗೆ ನೋಟಿಸ್ ನೀಡಲು ಕೋರ್ಟ್ ನಿರಾಕರಣೆ

ಅರ್ಜಿಯಲ್ಲಿ ಮೂರನೇ ಪ್ರತಿವಾದಿಯನ್ನಾಗಿ ಮಾಡಲಾಗಿದ್ದ ಹಾಲಿ ಆರೋಗ್ಯ ಸಚಿವ ಯು.ಟಿ. ಖಾದರ್ ಅವರಿಗೆ ನೋಟಿಸ್ ಜಾರಿಗೊಳಿಸಲು ಹೈಕೋರ್ಟ್ ನಿರಾಕರಿಸಿದೆ. "ಸದನದ ಒಳಗೆ (Assembly) ಶಾಸಕರು ಅಥವಾ ಸಚಿವರು ನೀಡುವ ಹೇಳಿಕೆಗಳಿಗೆ ಹಾಗೂ ವ್ಯಕ್ತಪಡಿಸುವ ಅಭಿಪ್ರಾಯಗಳಿಗೆ ಕಾನೂನಾತ್ಮಕ ವಿನಾಯಿತಿ ಇರುತ್ತದೆ. ಕೇವಲ ಸದನದ ಹೇಳಿಕೆಯನ್ನು ಆಧರಿಸಿ ಅವರೊಬ್ಬರನ್ನೇ ವೈಯಕ್ತಿಕವಾಗಿ ಪ್ರಕರಣದಲ್ಲಿ ಪ್ರತಿವಾದಿಯನ್ನಾಗಿ ಮಾಡಲು ಬರುವುದಿಲ್ಲ," ಎಂದು ಸಿಜೆ ನೇತೃತ್ವದ ಪೀಠ ಸ್ಪಷ್ಟಪಡಿಸಿದೆ. ಹಿಂದಿನ ನ್ಯಾಯಾಲಯದ ಆದೇಶಗಳನ್ನು ಉಲ್ಲಂಘಿಸಿ ಸರ್ಕಾರ ರಾಜಕೀಯ ಪ್ರಭಾವದಡಿ ಕೇಸ್‌ಗಳನ್ನು ವಾಪಸ್ ಪಡೆದಿರುವುದು ಮೇಲ್ನೋಟಕ್ಕೆ ಸಾಬೀತಾಗಿರುವುದರಿಂದ, ಹೈಕೋರ್ಟ್‌ನ ಈ ಮಧ್ಯಂತರ ಆದೇಶವು ಸರ್ಕಾರಕ್ಕೆ ತೀವ್ರ ಕಾನೂನಾತ್ಮಕ ಹಿನ್ನಡೆಯನ್ನು ತಂದಿಟ್ಟಿದೆ.

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

4850 ಕೋಟಿ ರಾಜಧನ ವಸೂಲಿಗೆ ಮುಂದಾದ ಸರ್ಕಾರ, ರಾಜ್ಯದಲ್ಲಿ ಜಲ್ಲಿಕಲ್ಲು, ಎಂ ಸ್ಯಾಂಡ್ ಸರಬರಾಜು ಬಂದ್‌?
ಯುವತಿ ಸ್ನಾನದ ದೃಶ್ಯ ರೆಕಾರ್ಡ್‌ ಆರೋಪ: ಕಾನೂನು ಪ್ರಕ್ರಿಯೆ ವಿರುದ್ಧ ಮಧ್ಯಂತರ ತಡೆ