
ಬೆಂಗಳೂರು (ಜು.25): ಮದ್ಯ ಸೇವಿಸಿ ವಾಹನ ಚಲಾಯಿಸಿದ ವೇಳೆ ಸ್ವಯಂ ಅಫಘಾತಕ್ಕೀಡಾಗಿ ಮೃತಪಟ್ಟ ಸವಾರನ ಅವಲಂಬಿತರು ಪೂರ್ಣ ಪ್ರಮಾಣದ ಪರಿಹಾರ ಪಡೆಯಲು ಸಾಧ್ಯವಿಲ್ಲ ಎಂದು ಹೈಕೋರ್ಟ್ ಸ್ಪಷ್ಟಪಡಿಸಿದೆ.
ಮೃತನ ಸವಾರನ ಅವಲಂಬಿತರಿಗೆ ₹3.44 ಲಕ್ಷ ಪರಿಹಾರ ನೀಡಲು ಮೋಟಾರು ಅಪಘಾತ ಪರಿಹಾರ ಕ್ಲೇಮು ನ್ಯಾಯಾಧೀಕರಣ ಹೊರಡಿಸಿದ್ದ ಆದೇಶ ರದ್ದು ಕೋರಿ ವಿಮಾ ಕಂಪನಿಯೊಂದು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಕೆ.ಬಿ.ಗೀತಾ ಅವರ ಪೀಠ ಈ ಆದೇಶ ಮಾಡಿದೆ. ಪ್ರಕರಣಕ್ಕೆ ಸಂಬಂಧಿಸಿದ ವಿಧಿವಿಜ್ಞಾನ ಪ್ರಯೋಗಾಲಯದ (ಎಫ್ಎಸ್ಎಲ್) ವರದಿ ಪ್ರಕಾರ ಮೃತ ಸವಾರ ಅಪಘಾತದ ಸಮಯದಲ್ಲಿ ಸಂಪೂರ್ಣವಾಗಿ ಮದ್ಯ ಸೇವಿಸಿದ್ದರು. ಆತನ ರಕ್ತದಲ್ಲಿ 102.64 ಎಂಜಿ ಪ್ರಮಾಣದಲ್ಲಿ ಮದ್ಯ ಪತ್ತೆಯಾಗಿತ್ತು. ಮದ್ಯ ಸೇವಿಸಿ ಚಾಲಕನೇ ಸ್ವತಃ ಅಪಘಾತಕ್ಕೆ ಒಳಗಾಗಿದ್ದಾರೆ. ಇಂತಹ ಘಟನೆಗಳಲ್ಲಿ ನಿಯಮಾನುಸಾರ ಮೃತನ ಅವಲಂಬಿತರಿಗೆ ಪೂರ್ಣ ಪ್ರಮಾಣದ ಪರಿಹಾರ ಸಿಗುವುದಿಲ್ಲ ಎಂದು ಪೀಠ ಆದೇಶದಲ್ಲಿ ವಿವರಿಸಿದೆ.
ಆದರೆ, ವಿಮಾ ಒಪ್ಪಂದದ ಮಿತಿಯ ಅನುಸಾರ ಪರಿಹಾರ ಸಿಗಲಿದೆ. ಅದರ ಹೊರತಾಗಿ ಹೆಚ್ಚಿನ ಪರಿಹಾರ ಕೋರಲು ಬರುವುದಿಲ್ಲ. ಅದರಂತೆ ವಿಮಾ ಪಾಲಿಸಿಯಲ್ಲಿರುವ ಕರಾರಿನಂತೆ ವೈಯಕ್ತಿಕ ಅಪಘಾತ ವಿಮಾ ಮೊತ್ತ ಒಂದು ಲಕ್ಷ ರು. ಮಾತ್ರ ವಿಮಾ ಕಂಪನಿಯು ಮೃತನ ಅವಲಂಬಿತರಿಗೆ ಪಾವತಿಸಬೇಕು ಎಂದ ಹೈಕೋರ್ಟ್, ಮೃತನ ವಾರಸುದಾರರಿಗೆ ವಿಚಾರಣಾ ನ್ಯಾಯಾಲಯ ಘೋಷಿಸಿದ್ದ 3.44 ಲಕ್ಷ ರು. ಪರಿಹಾರ ಪ್ರಮಾಣವನ್ನು ರದ್ದುಪಡಿಸಿತು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ