
ಬೆಂಗಳೂರು (ಏ.9): ಶಾಲೆಗಳಲ್ಲಿ ಪ್ರತಿದಿನ 'ವಂದೇ ಮಾತರಂ' ಗೀತೆಯ ಆರೂ ಚರಣಗಳನ್ನು ಕಡ್ಡಾಯವಾಗಿ ಹಾಡಬೇಕೆಂಬ ಕೇಂದ್ರ ಸರ್ಕಾರದ ಶಿಷ್ಟಾಚಾರ ಮಾರ್ಗಸೂಚಿಯನ್ನು ಪ್ರಶ್ನಿಸಿ ಸಲ್ಲಿಕೆಯಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು (PIL) ವಿಚಾರಣೆ ನಡೆಸಲು ಕರ್ನಾಟಕ ಹೈಕೋರ್ಟ್ ನಿರಾಕರಿಸಿದೆ. ಮುಖ್ಯ ನ್ಯಾಯಮೂರ್ತಿ ವಿಭು ಬಕ್ರು ಅವರ ನೇತೃತ್ವದ ವಿಭಾಗೀಯ ಪೀಠವು ಈ ಅರ್ಜಿಯನ್ನು ವಜಾಗೊಳಿಸಿದೆ.
ಈ ಹಿಂದೆಯೇ ಇದೇ ರೀತಿಯ ಅರ್ಜಿಯನ್ನು ಸುಪ್ರೀಂ ಕೋರ್ಟ್ ಪರಿಶೀಲಿಸಿ ವಜಾಗೊಳಿಸಿತ್ತು. ಸುಪ್ರೀಂ ಕೋರ್ಟ್ನ ತೀರ್ಪು ಪರಿಗಣಿಸಿ ಇದೀಗ ಸಲ್ಲಿಕೆಯಾಗಿರುವ ಪಿಐಎಲ್ ವಿಚಾರಣೆ ನಿರಾಕರಿಸಿದೆ. ಕೇಂದ್ರದ ಮಾರ್ಗಸೂಚಿಗಳು ಅಸಾಂವಿಧಾನಿಕ ಎಂಬ ಅರ್ಜಿದಾರರ ವಾದವನ್ನು ಪುರಸ್ಕರಿಸಲು ನ್ಯಾಯಾಲಯ ಒಪ್ಪಲಿಲ್ಲ.
ವಂದೇ ಮಾತರಂ ಗೀತೆಯನ್ನು ಖ್ಯಾತ ಸಾಹಿತಿ ಬಂಕಿಮ್ ಚಂದ್ರ ಚಟರ್ಜಿ ಅವರು ನವೆಂಬರ್ 7, 1875 ರಂದು ರಚಿಸಿದರು. ಇದು ಮೊದಲು 'ಬಂಗದರ್ಶನ್' ಎಂಬ ಸಾಹಿತ್ಯ ಪತ್ರಿಕೆಯಲ್ಲಿ ಪ್ರಕಟವಾಯಿತು. ನಂತರ 1882 ರಲ್ಲಿ ಹೊರಬಂದ ಅವರ ಪ್ರಸಿದ್ಧ ಕಾದಂಬರಿ ‘ಆನಂದಮಠ’ದಲ್ಲಿ ಈ ಗೀತೆಯನ್ನು ಸೇರಿಸಲಾಯಿತು. ಇದು ಕೇವಲ ಹಾಡಲ್ಲ, ಭಾರತದ ಏಕತೆ ಮತ್ತು ಅಖಂಡತೆಯ ಪ್ರತೀಕವಾಗಿದೆ.
ವಂದೇ ಮಾತರಂ ಗೀತೆಯ ರೋಚಕ ಇತಿಹಾಸ
ಬ್ರಿಟಿಷ್ ಆಡಳಿತಗಾರರು ಪ್ರತಿ ಸಮಾರಂಭದಲ್ಲಿ ಇಂಗ್ಲೆಂಡ್ ರಾಣಿಗೆ ಗೌರವ ಸಲ್ಲಿಸಲು ‘ಸೇವ್ ದಿ ಕ್ವೀನ್’ ಹಾಡುವುದನ್ನು ಕಡ್ಡಾಯಗೊಳಿಸಿದ್ದರು. ಈ ಗುಲಾಮಗಿರಿಯ ಮನಸ್ಥಿತಿಯನ್ನು ವಿರೋಧಿಸಿ ಬಂಕಿಮ್ ಚಂದ್ರ ಚಟರ್ಜಿ ಅವರು 1874ರಲ್ಲಿಯೇ ಈ ಗೀತೆಯನ್ನು ಸಿದ್ಧಪಡಿಸಿದ್ದರು. ಭಾರತದ ಭೂಮಿಯನ್ನು 'ತಾಯಿ' ಎಂದು ಸಂಬೋಧಿಸುವ ಮೂಲಕ ದೇಶಪ್ರೇಮದ ಕಿಚ್ಚು ಹಚ್ಚುವುದು ಇದರ ಉದ್ದೇಶವಾಗಿತ್ತು.
ವಂದೇ ಮಾತರಂ ಮೊದಲ ಬಾರಿಗೆ ಹಾಡಿದ್ದು ಎಲ್ಲಿ?
1896 ರಲ್ಲಿ ಕೋಲ್ಕತ್ತಾದಲ್ಲಿ ನಡೆದ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಅಧಿವೇಶನದಲ್ಲಿ ಮೊದಲ ಬಾರಿಗೆ ಈ ಹಾಡನ್ನು ಹಾಡಲಾಯಿತು. ಅಂದಿನಿಂದ ಇದು ಬ್ರಿಟಿಷ್ ಆಳ್ವಿಕೆಯ ವಿರುದ್ಧ ಕ್ರಾಂತಿಕಾರಿಗಳ, ಸಾಮಾನ್ಯ ಜನರ ನೆಚ್ಚಿನ ಘೋಷಣೆಯಾಗಿ ಮಾರ್ಪಟ್ಟಿತು. ಪ್ರಧಾನಿ ನರೇಂದ್ರ ಮೋದಿ ಅವರು ಈ ಹಿಂದೆ ಮಾತನಾಡಿ, 1937 ರಲ್ಲಿ ಈ ಗೀತೆಯ ಪ್ರಮುಖ ಚರಣಗಳನ್ನು ಕೈಬಿಟ್ಟಿದ್ದು ದೇಶದ ವಿಭಜನೆಗೆ ಪರೋಕ್ಷ ಕಾರಣವಾಯಿತು ಎಂದು ಅಭಿಪ್ರಾಯಪಟ್ಟಿದ್ದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ