
ಬೆಂಗಳೂರು (ಜು.05): ಕಾಂಗ್ರೆಸ್ ಸರ್ಕಾರದಿಂದ 2ನೇ ಗ್ಯಾರಂಟಿಯಾಗಿ ಜಾರಿಗೊಂಡ 200 ಯೂನಿಟ್ವರೆಗಿನ ಉಚಿತ ವಿದ್ಯುತ್ ಬಳಕೆಯ ಗೃಹಜ್ಯೋತಿ ಯೋಜನೆಗೆ ಜೂ.18ರಿಂದ ನೋಂದಣಿ ಪ್ರಕ್ರಿಯೆ ಆರಂಭಿಸಲಾಗಿದೆ. ಈಗ ಹದಿನೆಂಟು ದಿನಗಳಲ್ಲಿ ಒಟ್ಟು 1 ಕೋಟಿಗೂ ಅಧಿಕ ಜನರು ನೋಂದಣಿ ಮಾಡಿಸಿಕೊಂಡಿದ್ದಾರೆ.
ಅರ್ಜಿ ಸಲ್ಲಿಕೆಗೆ ಕೊನೆ ದಿನಾಂಕವಿಲ್ಲ: ಗೃಹ ಜ್ಯೋತಿ ಯೋಜನೆಯ ಜೂನ್ ಮಾಹೆಯ ವಿದ್ಯುತ್ ಬಿಲ್ ಜುಲೈಗೆ ಬರುತ್ತೆ ಅದನ್ನು ಕಟ್ಟಬೇಕಾಗುತ್ತದೆ. ಜುಲೈ ತಿಂಗಳಿನಿಂದ ಯೋಜನೆ ಅನ್ವಯವಾಗುತ್ತದೆ. ಅದು ಉಚಿತವಾಗಲಿದ್ದು ಆಗಸ್ಟ್ನಿಂದ ಅರ್ಹರು ಬಿಲ್ ಕಟ್ಟುವಂತಿಲ್ಲ. ಪ್ರತಿದಿನ ಸುಮಾರು 85 ರಿಂದ 86 ಲಕ್ಷ ಜನರು ಅರ್ಜಿ ಸಲ್ಲಿಸಿದ್ದಾರೆ. ಜುಲೈ ತಿಂಗಳು 25 ರ ವರೆಗೆ ಅರ್ಜಿ ಸಲ್ಲಿಸಬಹುದು ಒಂದೊಮ್ಮೆ ಅವರು ಅರ್ಜಿ ಸಲ್ಲಿಸದೇ ಇದ್ದಲ್ಲಿ ಒಂದು ತಿಂಗಳ ಬಿಲ್ ಕಟ್ಟಬೇಕಾಗುತ್ತದೆ. ಮತ್ತೆ ಅವರು ಅರ್ಜಿ ಸಲ್ಲಿಸಲು ಅವಕಾಶ ಇರುತ್ತದೆ.
ಕಾಫಿನಾಡಲ್ಲಿ ಭರ್ಜರಿ ಮಳೆ, ತುಂಗಾ-ಭದ್ರಾ- ಹೇಮಾವತಿ ನದಿಗಳಿಗೆ ಜೀವಕಳೆ
ಅರ್ಜಿ ಸಲ್ಲಿಸಲು ಗಡುವನ್ನು ವಿಧಿಸಿಲ್ಲ: ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಇಂಧನ ಸಚಿವ ಕೆ.ಜೆ. ಜಾರ್ಜ್ ಅವರು, ಸದ್ಯಕ್ಕೆ ಅರ್ಜಿ ಸಲ್ಲಿಸಲು ಗಡುವನ್ನು ವಿಧಿಸಿಲ್ಲ. ಎರಡರಿಂದ ಮೂರು ತಿಂಗಳು ಸಮಯಾವಕಾಶ ಕೊಡುತ್ತೇವೆ. ಅಷ್ಟರಲ್ಲಿ ಯಾರೂ ಅರ್ಜಿ ಹಾಕದಿದ್ದರೆ ಅರ್ಜಿ ಪಡೆಯುವುದನ್ನು ನಿಲ್ಲಿಸಬೇಕಾಗುತ್ತದೆ. ಭಾಗ್ಯ ಜ್ಯೋತಿ ಯೋಜನೆಯ ಫಲಾನುಭವಿಗಳು ಸಹ ಗೃಹ ಜ್ಯೋತಿ ಲಾಭ ಪಡೆಯಲು ಅರ್ಜಿಯನ್ನು ಸಲ್ಲಿಸಲೇ ಬೇಕಾಗುತ್ತದೆ ಎಂದರು. ಬಾಡಿಗೆ ಮನೆಯವರದ್ದು, ಹೊಸದಾಗಿ ಬಾಡಿಗೆ ಬಂದವರದ್ದು ಹೀಗೆ ಕೆಲವು ಗೊಂದಲಗಳು ನಮ್ಮ ಗಮನಕ್ಕೆ ಬಂದ ಕೂಡಲೇ ಸರಿಪಡಿಸುವ ಕೆಲಸವನ್ನು ಮಾಡಿದ್ದೇವೆ ಎಂದು ತಿಳಿಸಿದರು.
ರಾಜ್ಯದ ಒಟ್ಟು 6 ವಿದ್ಯುತ್ ನಿಗಮಗಳಲ್ಲಿ ಗೃಹ ಜ್ಯೋತಿ ಯೋಜನೆ(Gruhajyoti scheme)ಗೆ ಅರ್ಜಿ ಸ್ವೀಕಾರ ಪ್ರಕ್ರಿಯೆ ವೇಗ ಪಡೆದಿರುವ ಹಿನ್ನೆಲೆಯಲ್ಲಿ ಪ್ರತಿ ನಿತ್ಯ ಕನಿಷ್ಠ 10 ಲಕ್ಷಕ್ಕೂ ಹೆಚ್ಚು ಗ್ರಾಹಕರು ಅರ್ಜಿ ಸಲ್ಲಿಸಲು ಮುಂದಾಗುತ್ತಿದ್ದಾರೆ. ಇನ್ನೂ ಗೃಹ ಜ್ಯೋತಿ ನಿಯಮದನ್ವಯ ಗೃಹ ಬಳಕೆಯ ವಿದ್ಯುತ್ ಸಂಪರ್ಕಗಳಿಗೆ ಮಾತ್ರ ಅನ್ವಯ. ವಾಣಿಜ್ಯ ಉದ್ದೇಶಕ್ಕೆ ವಿದ್ಯುತ್ ಉಪಯೋಗಿಸಿದ್ದಲ್ಲಿ ಯೋಜನೆ ಅನ್ವಯವಾಗುವುದಿಲ್ಲ.
ನಾನು ಟೆಂಟ್ನಲ್ಲಿ ಬ್ಲೂಫಿಲ್ಮ್ ತೋರಿಸಿ ಬಂದವನಲ್ಲ: ಡಿಕೆಶಿಗೆ ಟಾಂಗ್ ಕೊಟ್ಟ ಹೆಚ್ಡಿಕೆ
ರಾಜ್ಯದ ಇ-ಆಡಳಿತ ಗೃಹ ಜ್ಯೋತಿ ಯೋಜನೆಗೆ ಪ್ರತ್ಯೇಕವಾಗಿ ನೋಂದಣಿ ಲಿಂಕ್ ನೀಡಿದ ಬಳಿಕ ಅರ್ಜಿ ಸಲ್ಲಿಕೆಯು ದುಪ್ಪಟ್ಟಾಗಿದೆ. ಅರ್ಜಿ ಸಲ್ಲಿಸಲು ಯಾವುದೇ ಶುಲ್ಕವಿಲ್ಲದೆ ವಿದ್ಯುತ್ ಕಛೇರಿ, ನಾಡಕಛೇರಿ ಹಾಗೂ ಕಂಪ್ಯೂಟರ್, ಲ್ಯಾಪ್’ಟಾಪ್, ಮೊಬೈಲ್ ಫೋನ್ ನಲ್ಲಿ ಅಧಿಕೃತ ಪೋರ್ಟಲ್ https://sevasindhugs.karnataka.gov.in ಮೂಲಕ ನೋಂದಾಯಿಸಬಹುದು. ಮೇಲ್ಕಂಡ ವೆಬ್ಸೈಟ್ ಹೊರತುಪಡಿಸಿ, ನೋಂದಣಿಗೆ ಯಾವುದೇ ಖಾಸಗಿ/ನಕಲಿ ವೆಬ್ಸೈಟ್ ಬಳಸದೇ ಇರುವುದು ಸೂಕ್ತ.
ಬೆಂಗಳೂರು ಒನ್(Bengaluru one), ಗ್ರಾಮ ಒನ್, ಕರ್ನಾಟಕ ಒನ್ ಹಾಗೂ ಗ್ರಾಮ ಪಂಚಾಯಿತಿ ಕಚೇರಿಗಳಲ್ಲಿ ನೋಂದಣಿಗೆ ನಿಗದಿತ ಸೇವಾ ಶುಲ್ಕವನ್ನಷ್ಟೇ ಪಾವತಿಸಿ ನೋಂದಾಯಿಸಿಕೊಳ್ಳಬಹುದು. ಹೆಚ್ಚುವರಿ ಹಣಕ್ಕೆ ಯಾರಾದರೂ ಬೇಡಿಕೆಯಿಟ್ಟಲ್ಲಿ, ಗ್ರಾಹಕರು ಕೂಡಲೇ 24x7 ಸಹಾಯವಾಣಿ 1912 ಕ್ಕೆ ಕರೆಮಾಡಿ ತಿಳಿಸಬಹುದು. ಅಂತಹ ಪ್ರಯತ್ನಗಳ ವಿರುದ್ಧ ಸೂಕ್ತ ಕ್ರಮಗಳನ್ನು ಕೈಗೊಳ್ಳಲಾಗುತ್ತದೆ ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಲಾಗಿದೆ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ