ಮತ್ತೆ ಸಾರ್ವಜನಿಕ ಟ್ರಸ್ಟ್ ಮಸೂದೆ ಮಂಡನೆಗೆ ಸರ್ಕಾರ ನಿರ್ಧಾರ | 10 ವರ್ಷದ ಹಿಂದೆ ಪಾಸಾಗಿ ಹಿಂಪಡೆದಿದ್ದ ಮಸೂದೆ ಮತ್ತೆ ಜಾರಿ| ಟ್ರಸ್ಟ್ ಭೂಮಿಯನ್ನು ಟ್ರಸ್ಟಿ ಮಾರುವುದಕ್ಕೆ ಬ್ರೇಕ್!
ಬೆಂಗಳೂರು[ಜ.28]: ಕಳೆದ ಹತ್ತು ವರ್ಷಗಳ ಹಿಂದೆ ಹಿಂಪಡೆಯ ಲಾಗಿದ್ದ ಕರ್ನಾಟಕ ಸಾರ್ವಜನಿಕ ಟ್ರಸ್ಟ್ ವಿಧೇಯಕವನ್ನು ಮತ್ತೊಮ್ಮೆ ಜಾರಿಗೊಳಿಸಲು ಬಿಜೆಪಿ ಸರ್ಕಾರ ಮುಂದಾಗಿದೆ.
ಸಾರ್ವಜನಿಕ ಟ್ರಸ್ಟ್ ವಿಧೇಯಕ, ಭೂ ಸುಧಾರಣೆ ತಿದ್ದುಪಡಿ ಕಾಯ್ದೆ ಸೇರಿ 7ರಿಂದ 8 ವಿಧೇಯಕಗಳು ಹಾಗೂ 2ರಿಂದ 3 ಸುಗ್ರೀವಾಜ್ಞೆಗಳನ್ನು ವಿಧಾನ ಮಂಡಲ ಅಧಿವೇಶನದಲ್ಲಿ ಮಂಡಿಸಲು ಸರ್ಕಾರ ತೀರ್ಮಾನಿಸಿದೆ.
2011ರಲ್ಲಿ ಅಂದಿನ ಬಿಜೆಪಿ ಸರ್ಕಾರವು ಕರ್ನಾಟಕ ಸಾರ್ವಜನಿಕ ಟ್ರಸ್ಟ್ ವಿಧೇಯಕ ವನ್ನು ವಿಧಾನಮಂಡಲದಲ್ಲಿ ಅಂಗೀಕರಿಸಿ ರಾಜ್ಯಪಾಲರ ಅನುಮೋದನೆಗೆ ಕಳುಹಿಸಿತ್ತು. ಆದರೆ, ಆಡಳಿತ ಮತ್ತು ಪ್ರತಿ ಪಕ್ಷದ ತೀವ್ರ ವಿರೋಧದಿಂದಾಗಿ ನಂತರ ವಾಪಸ್ ಪಡೆಯಲಾಯಿತು.
ಸರ್ಕಾರಿ ಶಾಲೆಗೆ ಮಂಜೂರಾದ ಜಾಗವನ್ನು ಗ್ರಾಮಸ್ಥರೇ ತಟ್ಟು ಮಾಡಿದ್ರು..!
ಇದೀಗ ಮತ್ತೊಮ್ಮೆ ಟ್ರಸ್ಟ್ ವಿಧೇಯಕವನ್ನು ಮಂಡಿಸಲು ನಿರ್ಧರಿಸಿದೆ. ಟ್ರಸ್ಟ್ ಹೆಸರಲ್ಲಿ ಕಾರ್ಯ ನಿರ್ವಹಿಸುವ ಧಾರ್ಮಿಕ ಮತ್ತು ಶಿಕ್ಷಣ ಸಂಸ್ಥೆಗಳಲ್ಲಿ ಪಾರದರ್ಶಕತೆ ಕಾಯ್ದುಕೊಳ್ಳುವ ಸಂಬಂಧ ಕರ್ನಾಟಕ ಸಾರ್ವಜನಿಕ ಟ್ರಸ್ಟ್ ಕಾಯ್ದೆ ಮಂಡನೆ ಮಾಡಲು ನಿರ್ಧರಿಸಲಾಗಿದೆ. ಟ್ರಸ್ಟಿ ಹೆಸರಲ್ಲಿ ಅಕ್ರಮ ಜಮೀನು ಮಾರಾಟ ತಡೆಯಲು ಕಾಯ್ದೆ ಸಹಕಾರಿಯಾಗಲಿದೆ. ಸೂಕ್ತ ನಿಯಮಾವಳಿಗಳು ಇಲ್ಲದ ಕಾರಣ ಯಾವುದೇ ಕ್ರಮ ತೆಗೆದುಕೊಳ್ಳಲು ಸಾಧ್ಯವಾಗುತ್ತಿಲ್ಲ. ಈ ಕಾರಣಕ್ಕಾಗಿ ಕಾಯ್ದೆ ಮಂಡನೆಗೆ ಮುಂದಾಗಿದ್ದೇವೆ ಎಂದು ಕಾನೂನು ಮತ್ತು ಸಂಸದೀಯ ಸಚಿವ ಜೆ.ಸಿ. ಮಾಧುಸ್ವಾಮಿ ತಿಳಿಸಿದ್ದಾರೆ.
ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬರುವ ಫೆ.17ರಂದು ಜಂಟಿ ಅಧಿವೇಶನ ಕರೆಯಲಾಗಿದ್ದು, ರಾಜ್ಯಪಾಲರು ಜಂಟಿ ಅಧಿವೇಶನವನ್ನು ಉದ್ದೇಶಿಸಿ ಭಾಷಣ ಮಾಡಲಿದ್ದಾರೆ. 18ರಂದು ವಿಧೇಯಕಗಳು ಹಾಗೂ ಸುಗ್ರೀವಾಜ್ಞೆಗಳನ್ನು ಮಂಡಿಸಲಾಗು ವುದು. ನಂತರ ಅವುಗಳ ಸಾಧಕ-ಬಾಧಕಗಳ ಕುರಿತು ಚರ್ಚೆಗೆ ಅವಕಾಶ ನೀಡಲಾಗುವುದು. ಮಾ.5ರಂದು ಬಜೆಟ್ ಮಂಡನೆಯಾಗಲಿದ್ದು, ಅದಕ್ಕೂ ಮುನ್ನ ಚರ್ಚೆಗೆ ಅವಕಾಶ ನೀಡಲಾಗುವುದು ಎಂದು ಹೇಳಿದರು
ಸರ್ಕಾರದಿಂದ ಪಡೆದ ಭೂಮಿ ಮಾರಾಟಕ್ಕೆ ಅವಕಾಶ:
ಭೂ ಸುಧಾರಣೆ ಕಾಯ್ದೆಯ ಕಲಂ 109ಕ್ಕೆ ತಿದ್ದುಪಡಿ ತರಲು ಸರ್ಕಾರ ಮುಂದಾಗಿದೆ. ಇದರನ್ವಯ ಕೃಷಿಯೇತರ ಭೂಮಿ ಯನ್ನು ಮಾರಾಟ ಮಾಡಲು ಇಚ್ಛಿಸುವವರಿಗೆ ವಿನಾಯಿತಿ ನೀಡಲಾಗುವುದು. ಸರ್ಕಾರ ದಿಂದ ಭೂಮಿ ಪಡೆದು 7 ವರ್ಷಗಳಾದರೂ ಸದ್ಬಳಕೆ ಮಾಡಲು ಸಾಧ್ಯವಾಗದೆ ಮಾರಾಟ ಮಾಡಲು ಮುಂದಾದರೆ ಅವಕಾಶ ನೀಡಲಾಗುವುದು. ಆದರೆ ಯಾವ ಉದ್ದೇಶಕ್ಕಾಗಿ ಭೂಮಿ ಪಡೆಯಲಾಗಿರುತ್ತದೆಯೋ ಖರೀದಿ ಸುವವರು ಸಹ ಅದೇ ಉದ್ದೇಶಕ್ಕೆ ಬಳಕೆ ಮಾಡ ಬೇಕು. ಸದ್ಯಕ್ಕೆ ಭೂಮಿಯನ್ನು ಮಾರಾಟ ಮಾಡಲು ಅವಕಾಶ ಇಲ್ಲ. ಇದಕ್ಕೆ ತಿದ್ದುಪಡಿ ಮಾಡಿ ಮಾರಾಟಕ್ಕೆ ಅನುಮತಿ ನೀಡಲಾಗುವುದು ಎಂದರು.
ಗುಡ್ ನ್ಯೂಸ್ : ಸರ್ಕಾರಿ ಜಮೀನಿನಲ್ಲಿರುವ ಮನೆಗಳಿಗೆ ಹಕ್ಕು ಪತ್ರ
ಬಡವರಿಗೆ ಶಿಕ್ಷಣದಲ್ಲಿ ಶೇ.10 ಮೀಸಲು: ಕೇಂದ್ರ ಸರ್ಕಾರದ ಶೈಕ್ಷಣಿಕ ಸಂಸ್ಥೆಯಲ್ಲಿ ಶೇ.10ರಷ್ಟು ಆರ್ಥಿಕ ದುರ್ಬಲರಿಗೆ ಮೀಸಲಾತಿ ನೀಡಲಾಗುತ್ತಿದೆ. ಇದೇ ಮಾದರಿಯಲ್ಲಿ ರಾಜ್ಯದ ಶೈಕ್ಷಣಿಕ ಸಂಸ್ಥೆಯಲ್ಲಿಯೂ ಮೀಸಲಾತಿ ನೀಡುವ ಚಿಂತನೆ ಸರ್ಕಾರದ ಮುಂದಿದ್ದು, ಪರಿಶೀಲನೆ ಹಂತದಲ್ಲಿದೆ ಎಂದು ಇದೇ ವೇಳೆ ತಿಳಿಸಿದರು. ಬೆಂಗಳೂರಿಲ್ಲಿರುವ ರಾಷ್ಟ್ರೀಯ ಕಾನೂನು ಶಾಲೆಯಲ್ಲಿ ರಾಜ್ಯದ ವಿದ್ಯಾರ್ಥಿಗಳಿಗೆ ಶೇ.25ರಷ್ಟು ಪ್ರವೇಶಕ್ಕೆ ಮೀಸಲಾತಿ ನೀಡುವ ಸಂಬಂಧ ಮಸೂದೆಯನ್ನು ಮಂಡಿಸಲಾಗುವುದು ಎಂದು ಸಚಿವ ಮಾಧುಸ್ವಾಮಿ ತಿಳಿಸಿದರು.