
ಬೆಂಗಳೂರು, (ಮೇ.07): ಮಾಜಿ ಸಚಿವ ಬಿ.ಜೆ. ಪುಟ್ಟಸ್ವಾಮಿ ಅವರು 50 ವರ್ಷಗಳ ರಾಜಕೀಯ ಜೀವನದಿಂದ ನಿವೃತ್ತಿ ಪಡೆದು ಸನ್ಯಾಸ ಸ್ವೀಕರಿಸಿದ್ದಾರೆ.ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪನರ ಆಪ್ತರಾಗಿದ್ದ ಮಾಜಿ ಸಚಿವ ಬಿ.ಜೆ. ಪುಟ್ಟಸ್ವಾಮಿ ಶುಕ್ರವಾರ ಸನ್ಯಾಸ ದೀಕ್ಷೆ ಸ್ವೀಕರಿಸಿದರು.
ಪುಟ್ಟಸ್ವಾಮಿ ಅವರಿಗೆ ಶ್ರೀ ಪೂರ್ಣಾನಂದ ಪುರಿ ಸ್ವಾಮಿಗಳೆಂದು ನಾಮಕರಣ ಮಾಡಿ ಕೈಲಾಸ ಆಶ್ರಮ ಮಹಾಸಂಸ್ಥಾನದ ಪೀಠಾಧಿಪತಿ ಶ್ರೀ ಜಯೇಂದ್ರಪುರಿ ಮಹಾಸ್ವಾಮಿಗಳು ಸನ್ಯಾಸ ಧೀಕ್ಷೆ ನೀಡಿದರು.
ಮೇ 8ರಂದು ಬೆಂಗಳೂರಿನ ಮಾದನಾಯಕನಹಳ್ಳಿಯಲ್ಲಿರುವ ಶ್ರೀ ಕ್ಷೇತ್ರ ತೈಲೇಶ್ವರ ಗಾಣಿಗರ ಮಹಾ ಸಂಸ್ಥಾನ ಮಠಕ್ಕೆ ತೆರಳಲಿದ್ದು, ಮೇ 15ರಂದು ಪ್ರಥಮ ಪೀಠಾಧಿಪತಿಯಾಗಿ ಶ್ರೀ ಪೂರ್ಣಾನಂದ ಪುರಿ ಸ್ವಾಮಿಗಳು ಅಲಂಕೃತಗೊಳ್ಳಿಲಿದ್ದಾರೆ. ಪಟ್ಟಾಭಿಷೇಕ ಕಾರ್ಯಕ್ರಮಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ, ಮಾಜಿ ಸಿಎಂ ಎಸ್.ಎಂ. ಕೃಷ್ಣ, ವಿಪಕ್ಷ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಮಾಜಿ ಸಿಎಂ ಎಚ್.ಡಿ ಕುಮಾರಸ್ವಾಮಿ ಸೇರಿ ಹಲವು ಸಚಿವರು ಭಾಗವಹಿಸಲಿದ್ದಾರೆ. 20 ಮಠಾಧೀಶರು ದಿವ್ಯ ಸಾನಿಧ್ಯ ವಹಿಸಿಲಿದ್ದಾರೆ.
BJ Puttaswamy: ರಾಜಕೀಯ ತ್ಯಜಿಸಿ ಮಠಾಧೀಶರಾಗಲಿದ್ದಾರೆ ಬಿಎಸ್.ಯಡಿಯೂರಪ್ಪ ಪರಮಾಪ್ತ!
ಬಿ.ಜೆ.ಪುಟ್ಟಸ್ವಾಮಿ ಅವರು ಕರ್ನಾಟಕ ರಾಜ್ಯ ನೀತಿ ಮತ್ತು ಯೋಜನಾ ಆಯೋಗದ ಉಪಾಧ್ಯಕ್ಷ ಸ್ಥಾನಕ್ಕೆ ಏ.30ರಂದು ರಾಜೀನಾಮೆ ನೀಡಿದ್ದರು. ನಾನು ಸಮಾಜ ಸುಧಾರಣಾ ಸ್ವಾಮೀಜಿಯಾಗಿ ದೀಕ್ಷೆ ಪಡೆಯುವೆ ಎಂದು ಈ ಹಿಂದೆ ಹೇಳಿದ್ದರು.
ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಅಪ್ತರಾಗಿರುವ ಪುಟ್ಟಸ್ವಾಮಿ ಅವರು ಯಡಿಯೂರಪ್ಪ ಅವರ ರಾಜಕೀಯ ಕಾರ್ಯದರ್ಶಿಯಾಗಿದ್ದರು. ಬಳಿಕ ಸಹಕಾರ ಸಚಿವರಾಗಿ ಅಧಿಕಾರ ನಡೆಸಿದರು. ಬಿಜೆಪಿ ಸರ್ಕಾರದ ಈ ಅವಧಿಯಲ್ಲಿ ಅವರನ್ನು ರಾಜ್ಯ ಯೋಜನಾ ಮಂಡಳಿಯ ಉಪಾಧ್ಯಕ್ಷರನ್ನಾಗಿ ಮಾಡಲಾಗಿತ್ತು. ಏ. 30ರಂದು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.
ಸ್ವಾಮೀಜಿಯಾಗಲು ಕಾರಣವೇನು..?
ಸನ್ಯಾಸ ಸ್ವೀಕರಿಸಿ ಸ್ವಾಮೀಜಿ ಆಗಲು ಕಾರಣ ಏನು ಎಂಬುದಕ್ಕೆ ಬಿ.ಜೆ ಪುಟ್ಟಸ್ವಾಮಿ ಉತ್ತರಿಸಿದ್ದಾರೆ. ಏಷ್ಯಾನೆಟ್ ಸುವರ್ಣ ನ್ಯೂಸ್ಗೆ ಪ್ರತಿಕ್ರಿಯಿಸಿದ ಅವರು, ಗಾಣಿಗ ಸಮುದಾಯಕ್ಕೆ ಮಠ ಕಟ್ಟಿಸರೂ 2016 ರಿಂದ ಪೀಠಾಧಿಪತಿಗಾಗಿ ಹುಡುಕಾಟ ನಡೆದಿತ್ತು. ಇದ್ದಕ್ಕಾಗಿ ಮೂವರನ್ನ ಆಯ್ಕೆ ಮಾಡಿ ರಾಜ್ಯ ಮೂರು ಪ್ರತಿಷ್ಠಿತ ಮಠದಲ್ಲಿ ಕಲಿಕೆಗಾಗಿ ಅವಕಾಶ ಮಾಡಿಕೊಡಲಾಗಿತ್ತು. ಆದರೆ ಯಾರೊಬ್ಬರು ಪೀಠಾಧಿಪತಿ ಆಗಲು ಸಾಧ್ಯವಾಗಲಿಲ್ಲ. ಬೆಂಗಳೂರಿನ ರಾಜರಾಜೇಶ್ವರಿನಗರ ಜಯೇಂದ್ರಪುರಿ ಸ್ವಾಮೀಜಿ ಒಮ್ಮೆ ಯಾಗ ಮಾಡಿಸಿದಾಗ , ಅವರ ಪ್ರಾರ್ಥನೆ ವೇಳೆ ನಾನು ಕಾಣಿಸಿಕೊಂಡಿದ್ದನಂತೆ.
ಹೀಗಾಗಿ ನೀನೇ ಪೀಠಾಧ್ಯಕ್ಷ ಆಗಬೇಕು ಎಂದು ಸ್ವಾಮೀಜಿ ತಿಳಿಸಿದರು. ಹೀಗಾಗಿ ನಾನೂ ಕೂಡ ಯೋಚನೆ ಮಾಡಿ ಈ ನಿರ್ಧಾರ ತೆಗೆದುಕೊಂಡೆ ಎಂದು ಪುಟ್ಟಸ್ವಾಮಿ ಹೇಳಿದರು. ಗಾಣಿಗ ಸಮಾಜದ ಉಳಿವು ಮತ್ತು ಬೆಳವಣಿಗೆಗೆ ಸ್ವಾಮಿಜಿಯಾಗಲು ನಿರ್ಧರಿಸಿದ್ದೇನೆ. ನಮ್ಮ ಗಾಣಿಗ ಸಮಾಜಕ್ಕೆ ಯಾವುದೇ ಪೀಠ ಹಾಗೂ ವಿದ್ಯಾಸಂಸ್ಥೆ ಇಲ್ಲಾ ಎಲ್ಲಾ ಸಮಾಜದಲ್ಲಿ ಇರುವಂತೆ ನಮ್ಮ ಗಾಣಿಗ ಸಮುದಾಯಕ್ಕೂ ಒಂದು ಪೀಠ ಬೇಕು ಎಂಬ ಹಂಬಲ ನನ್ನದಾಗಿತ್ತು. ನಮ್ಮ ಸಮಾಜದ ಒಳಿತಿಗಾಗಿ ಬಹಳ ಕಷ್ಟಪಟ್ಟಿದ್ದೇನೆ. ಜಯೇಂದ್ರ ಪುರಿ ಸ್ವಾಮಿಜಿ ಮಾರ್ಗದರ್ಶನ ಮೇರೆಗೆ ನಾನೇ ಪೀಠಾಧ್ಯಕ್ಷ ಆಗಲಿದ್ದೇನೆ ಎಂದು ಪುಟ್ಟಸ್ವಾಮಿ ಹೇಳಿದ್ದರು.
ರಾಜರಾಜೇಶ್ವರಿ ಶ್ರೀಗಳ ಆಜ್ಞೆ ಆಗಿದೆ ‘ಯಡಿಯೂರಪ್ಪ ಅವರ ಕಾಲದಲ್ಲಿ 8 ಎಕರೆ ಜಮೀನು ಮತ್ತು 5 ಕೋಟಿ ರು. ನೀಡಿದ್ದರು. ನ್ಯಾಯವಾಗಿ ದುಡಿದ ಹಣ ಮತ್ತು ಜನಾಂಗದವರಿಂದ ಭಿಕ್ಷೆ ಬೇಡಿ ಸಂಸ್ಥೆ ನಿರ್ಮಾಣ ಮಾಡಿದ್ದೇನೆ. ಗುರುಪೀಠ ನಿರ್ಮಿಸಿ 2016ರಲ್ಲಿ ಉದ್ಘಾಟನೆ ಮಾಡಲಾಯಿತಾದರೂ ಸಮರ್ಪಕವಾಗಿ ಪ್ರಾರಂಭಿಸಿಲ್ಲ. ಜನಾಂಗದ 3-4 ಮಂದಿಯನ್ನು ಸನ್ಯಾಸತ್ವ ತರಬೇತಿ ಪಡೆಯಲು ಮುರುಘರಾಜೇಂದ್ರ ಮಠ, ಸಿದ್ಧಗಂಗಾ ಮಠ ಮತ್ತು ರಾಜರಾಜೇಶ್ವರಿ ನಗರದ ಮಠದಲ್ಲಿ ಬಿಟ್ಟಿದ್ದೆವು. ಆದರೆ, ಅದು ಯಶಸ್ವಿಯಾಗಲಿಲ್ಲ. ಕಳೆದ 4-5 ತಿಂಗಳ ಹಿಂದೆ ರಾಜರಾಜೇಶ್ವರಿ ನಗರದ ಮಠದ ಜಯೇಂದ್ರ ಸ್ವಾಮೀಜಿ ಅವರು ಮಠದಲ್ಲಿ ಯಾಗ ಮಾಡಿದ್ದರು. ನನ್ನನ್ನು ಕರೆದಿದ್ದರಿಂದ ಅಲ್ಲಿಗೆ ಹೋಗಿದ್ದೆ. ಅವರೇ ಆದೇಶ ನೀಡಿದ್ದರಿಂದ ನಾನು ಮೊದಲ ಪೀಠಾಧಿಪತಿಗೆ ನೇಮಕವಾಗಲು ತೀರ್ಮಾನಿಸಿದ್ದೇನೆ’ ಎಂದಿದ್ದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ