ನಾಡಿನ ಶ್ರೇಷ್ಠ ಉದ್ಯಮಿ, ಸಮಾಜಮುಖಿ ಚಿಂತಕ ಆರ್. ಎನ್. ಶೆಟ್ಟಿ ನಿಧನ!

By Suvarna NewsFirst Published Dec 17, 2020, 8:30 AM IST
Highlights

ನಾಡಿನ ಶ್ರೇಷ್ಠ ಉದ್ಯಮಿ ಆರ್ .ಎನ್. ಶೆಟ್ಟಿ (92) ನಿಧನ| ಬೆಂಗಳೂರಿನಲ್ಲಿ ನಿಧನರಾದ ಆರ್. ಎನ್ ಶೆಟ್ಟಿ.| ಬೆಳಿಗ್ಗೆ 3-30ಕ್ಕೆ ಹೃದಯಾಘಾತದಿಂದ ಸಾವು

ಕಾರವಾರ(ಡಿ.17): ನಾಡಿನ ಶ್ರೇಷ್ಠ ಉದ್ಯಮಿ, ಶಿಕ್ಷಣ ಮತ್ತು ಉದ್ಯಮ ಸಮೂಹಗಳ ಸ್ಥಾಪಕರು ಹಾಗೂ ಸಮಾಜಮುಖಿ ಚಿಂತಕ ಮತ್ತು ದಾನಿ ಆರ್. ಎನ್. ಶೆಟ್ಟಿ(92) ನಿಧನರಾಗಿದ್ದಾರೆ. ಬೆಂಗಳೂರಿನಲ್ಲಿದ್ದ ಅವರು ಗುರುವಾರ ಬೆಳಿಗ್ಗೆ ಸುಮಾರು 3-30ಕ್ಕೆ ಹೃದಯಾಘಾತದಿಂದ ಮೃತಪಟ್ಟಿದ್ದಾರೆಂದು ಕುಟುಂಬ ಸದಸ್ಯರು ಮಾಹಿತಿ ನೀಡಿದ್ದಾರೆ.

ಆರ್. ಎನ್. ಶೆಟ್ಟಿಯವರ  ಪಾರ್ಥಿವ ಶರೀರವನ್ನು ಸಾರ್ವಜನಿಕರ ದರ್ಶನಕ್ಕಾಗಿ ಉತ್ತರ ಹಳ್ಳಿಯ ಆರ್.ಎನ್. ಎಸ್. ತಾಂತ್ರಿಕ ವಿದ್ಯಾಲಯ ಕಾಲೇಜು ಆವರಣದಲ್ಲಿ ಮಧ್ಯಾಹ್ನ 2 ಗಂಟೆಯ ಬಳಿಕ ಇಡಲಾಗುವುದು, ಅಂತ್ಯಸಂಸ್ಕಾರ ಸಂಜೆ ನೆರವೇರಿಸಲಾಗುವುದು ಎಂದು ಅವರ ಕುಟುಂಬದ ಮೂಲಗಳು ತಿಳಿಸಿವೆ. ಮೂವರು ಗಂಡು, ನಾಲ್ವರು ಹೆಣ್ಣು ಹಾಗೂ ಪತ್ನಿಯನ್ನು ಅಗಲಿದ ಶೆಟ್ಟಿ ಅವರ ನಿಧನಕ್ಕೆ ಗಣ್ಯರು ಕಂಬನಿ ಮಿಡಿದಿದ್ದಾರೆ. 

ಮುರ್ಡೇಶ್ವರ ರಾಷ್ಟ್ರಮಟ್ಟದಲ್ಲಿ ಗುರುತಿಸಿಕೊಳ್ಳಲು ಆರ್.ಎನ್.ಶೆಟ್ಟಿ ಪ್ರಮುಖ ಕಾರಣ. ಮುರ್ಢೇಶ್ವರ ದೇವಸ್ಥಾನದ ಅಭಿವೃದ್ಧಿ, ಆಸ್ಪತ್ರೆ‌‌, ಶಿಕ್ಷಣ ಸಂಸ್ಥೆ ನಿರ್ಮಾಣ‌ ಮಾಡುವ ಮೂಲಕ ಮುರ್ಡೇಶ್ವರದ ಸರ್ವಾಂಗೀಣ ಅಭಿವೃದ್ಧಿಯಲ್ಲಿ ಮಹತ್ತರ ಪಾತ್ರ ವಹಿಸಿದ್ದರು. 

ಆರ್. ಎನ್. ಶೆಟ್ಟಿ ನಿಧನಕ್ಕೆ ಸಿಎಂ ಯಡಿಯೂರಪ್ಪ ಸಂತಾಪ:

ಆರ್. ಎನ್. ಶೆಟ್ಟಿ ನಿಧನಕ್ಕೆ ಸಿಎಂ ಬಿ. ಎಸ್. ಯಡಿಯೂರಪ್ಪ ಟ್ವೀಟ್ ಮೂಲಕ ಸಂತಾಪ ಸೂಚಿಸುತ್ತಾ ನಾಡಿನ ಖ್ಯಾತ ಉದ್ಯಮಿ ಆರ್.ಎನ್.ಶೆಟ್ಟಿ ನಿಧನರಾದ ಸುದ್ದಿ ತಿಳಿದು ಅತೀವ ದುಃಖವಾಗಿದೆ. ಅವರು ನಿರ್ಮಾಣ, ಮೂಲಸೌಕರ್ಯ ಅಭಿವೃದ್ಧಿ, ಹೋಟೆಲ್ ಉದ್ಯಮ, ಶಿಕ್ಷಣ ಕ್ಷೇತ್ರಗಳಲ್ಲಿ ತಮ್ಮದೇ ಛಾಪು ಮೂಡಿಸಿದ್ದರು. ಭಗವಂತನು ಅವರ ಆತ್ಮಕ್ಕೆ ಶಾಂತಿಯನ್ನು ಕರುಣಿಸಲಿ. ಕುಟುಂಬದವರಿಗೆ ಈ ದುಃಖವನ್ನು ಸಹಿಸುವ ಶಕ್ತಿಯನ್ನು ನೀಡಲಿ ಎಂದು ಪ್ರಾರ್ಥಿಸುತ್ತೇನೆ ಎಂದಿದ್ದಾರೆ.

ನಾಡಿನ ಖ್ಯಾತ ಉದ್ಯಮಿ ಆರ್.ಎನ್.ಶೆಟ್ಟಿ ನಿಧನರಾದ ಸುದ್ದಿ ತಿಳಿದು ಅತೀವ ದುಃಖವಾಗಿದೆ. ಅವರು ನಿರ್ಮಾಣ, ಮೂಲಸೌಕರ್ಯ ಅಭಿವೃದ್ಧಿ, ಹೋಟೆಲ್ ಉದ್ಯಮ, ಶಿಕ್ಷಣ ಕ್ಷೇತ್ರಗಳಲ್ಲಿ ತಮ್ಮದೇ ಛಾಪು ಮೂಡಿಸಿದ್ದರು. ಭಗವಂತನು ಅವರ ಆತ್ಮಕ್ಕೆ ಶಾಂತಿಯನ್ನು ಕರುಣಿಸಲಿ. ಕುಟುಂಬದವರಿಗೆ ಈ ದುಃಖವನ್ನು ಸಹಿಸುವ ಶಕ್ತಿಯನ್ನು ನೀಡಲಿ ಎಂದು ಪ್ರಾರ್ಥಿಸುತ್ತೇನೆ

— B.S. Yediyurappa (@BSYBJP)

ಆರ್. ಎನ್. ಶೆಟ್ಟಿ ಹಿನ್ನೆಲೆ ಹಾಗೂ ಸಾಧನೆ

* ಉತ್ತರ ಕನ್ನಡ ಜಿಲ್ಲೆಯ ಪವಿತ್ರ ಪುಣ್ಯ ಕ್ಷೇತ್ರ ಮುರುಡೇಶ್ವರದಲ್ಲಿ 1928ರ ಆಗಸ್ಟ್ 15ರಂದು ಜನಿಸಿದ ಆರ್.ಎನ್. ಶೆಟ್ಟಿ ಅವರು ರಾಜ್ಯದ ಮತ್ತು ದೇಶದ ಪ್ರಗತಿಗೆ ತಮ್ಮದೇ ಕೊಡುಗೆ ನೀಡಿದ್ದ ಹೆಸರಾಂತ ಉದ್ಯಮಿಯಾಗಿದ್ದರು.

*  ಧಾರ್ಮಿಕ, ಸಾಂಸ್ಕೃತಿಕ, ಆಧ್ಯಾತ್ಮಿಕ, ವೈದ್ಯಕೀಯ, ಆತಿಥ್ಯ, ವಸತಿ, ಔದ್ಯಮಿಕ, ಔದ್ಯೋಗಿಕ, ವಾಣಿಜ್ಯ, ಶೈಕ್ಷಣಿಕ, ಮೂಲಸೌಕರ್ಯ, ವಿದ್ಯುತ್ ಹಾಗೂ ನೀರಾವರಿ ಕ್ಷೇತ್ರ ಸೇರಿದಂತೆ ವಿವಿಧ ರಂಗಗಳಲ್ಲಿ ಆರ್.ಎನ್. ಶೆಟ್ಟಿ ಅವರು ಛಾಪು ಮೂಡಿಸಿದ್ದರು. ಕರ್ನಾಟಕದ ಅಭಿವೃದ್ಧಿಗೂ ಅವರು ನೀಡಿರುವ ಕೊಡುಗೆ ಅಸಾಧಾರಣ.

* 1961ರಲ್ಲಿ ಮೂಲಸೌಕರ್ಯ ಕಂಪನಿ ಹುಟ್ಟು ಹಾಕಿದ ಆರ್.ಎನ್. ಶೆಟ್ಟಿ ಅವರು, ಹಿಡಕಲ್ ಜಲಾಶಯ, ತಟ್ಟಿಹಳ್ಳ ಜಲಾಶಯ, ಸೂಪ ಜಲಾಶಯ, ಗೇರುಸೊಪ್ಪ ಜಲಾಶಯ, ಮಾಣಿ ಅಣೆಕಟ್ಟೆ, ವಾರಾಹಿ ಜಲ ವಿದ್ಯುತ್ ಯೋಜನೆ, ಕೆ.ಎಲ್.ಇ. ಆಸ್ಪತ್ರೆ ಮತ್ತು ವೈದ್ಯಕೀಯ ಸಂಶೋಧನಾ ಕೇಂದ್ರ, ಕೊಂಕಣ ರೈಲು ಸುರಂಗ, ರಾಷ್ಟ್ರೀಯ ಹೆದ್ದಾರಿಗಳ ನಿರ್ಮಾಣವೇ ಮೊದಲಾದ ಹತ್ತು ಹಲವು ಮಹತ್ವದ ಜನೋಪಯೋಗಿ ಯೋಜನೆಗಳನ್ನು ಯಶಸ್ವಿಯಾಗಿ ನಿರ್ವಹಿಸಿ ಮೈಲುಗಲ್ಲಿನ ಸಾಧನೆ ಮಾಡಿದ್ದಾರೆ.

* ಬಾಲ್ಯದಿಂದಲೇ ತಾವು ನಂಬಿದ, ನಿತ್ಯ ಪೂಜಿಸುತ್ತಿದ್ದ ಮುರುಡೇಶ್ವರದ ಪುರಾತನ ಶಿವ ದೇವಾಲಯದ ನವೀಕರಣ ಕೈಂಕರ್ಯದಲ್ಲಿ ಮಹತ್ವದ ಪಾತ್ರ ವಹಿಸಿದ ಅವರು, 249 ಅಡಿ ಎತ್ತರದ ಭವ್ಯ ಗೋಪುರ ಮತ್ತು ಬೆಟ್ಟದ ಮೇಲೆ 123 ಅಡಿ ಎತ್ತರದ ಭವ್ಯ ಶಿವನ ಮೂರ್ತಿಯನ್ನು ಸ್ಥಾಪಿಸುವ ಮೂಲಕ ಮುರುಡೇಶ್ವರವನ್ನು ಒಂದು ಪವಿತ್ರ ಪುಣ್ಯತಾಣ ಹಾಗೂ ಪ್ರವಾಸೋದ್ಯಮ ಕೇಂದ್ರವಾಗಿಯೂ ಪರಿವರ್ತಿಸಿದ್ದಾರೆ. ನಿತ್ಯ ಸಾವಿರಾರು ಭಕ್ತರು ಈ ಕ್ಷೇತ್ರಕ್ಕೆ ಭೇಟಿ ನೀಡುವಂತೆ ಅಭಿವೃದ್ಧಿಪಡಿಸಿದ್ದರು

* ಶ್ರೀ ಆರ್.ಎನ್.ಶೆಟ್ಟಿ ಟ್ರಸ್ಟ್ ವತಿಯಿಂದ ಹಲವು ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸಿ ನಗರ ಮತ್ತು ಗ್ರಾಮೀಣ ಭಾಗದಲ್ಲಿ ಸಾವಿರಾರು ವಿದ್ಯಾರ್ಥಿಗಳಿಗೆ ಪ್ರಾಥಮಿಕ ಹಂತದಿಂದ ಉನ್ನತ ಶಿಕ್ಷಣ ಹಾಗೂ ವೃತ್ತಿಪರ ಶಿಕ್ಷಣದವರೆಗೆ ವಿದ್ಯಾದಾನ ಮಾಡುತ್ತಿದ್ದಾರೆ. ಆರ್.ಎನ್.ಎಸ್. ಅವರ ಈ ಎಲ್ಲ ಮಹತ್ವಾಕಾಂಕ್ಷೆಯ ಸತ್ಕಾರ್ಯಗಳಿಗೆ ಅವರ ಕುಟುಂಬದ ಸದಸ್ಯರೆಲ್ಲರೂ ಒತ್ತಾಸೆಯಾಗಿ ನಿಂತಿದ್ದರು. ಇವರ ಈ ಅಸಾಧಾರಣ ಸೇವೆಗೆ ಸರ್.ಎಂ. ವಿಶ್ವೇಶ್ವರಯ್ಯ ಸ್ಮಾರಕ ಪ್ರಶಸ್ತಿ, ರಾಜ್ಯ ಸರ್ಕಾರದಿಂದ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಕಾಸಿಯಾದ ಕೈಗಾರಿಕಾ ರತ್ನ ಪ್ರಶಸ್ತಿಯೇ ಮೊದಲಾದ ಹತ್ತು ಹಲವು ಗೌರವಗಳು ಸಂದಿವೆ.

* ಸಮಾಜದ ಒಳಿತಿಗಾಗಿ ಕಂಡ ಕನಸುಗಳನ್ನು ನನಸು ಮಾಡಿದ ಸಾಧಕ, ಅಸಾಧ್ಯವಾದುದನ್ನೂ ಸಾಧಿಸಿ ತೋರಿಸಿದ ಸಮಾಜಮುಖಿ ಚಿಂತಕ ಆರ್.ಎನ್. ಶೆಟ್ಟಿ ಅವರು ಇತ್ತೀಚೆಗಷ್ಟೇ ಕೋವಿಡ್ ಸಂದರ್ಭದಲ್ಲಿ ಪಿಎಂ ಕೇರ್ಸ್ ಗೆ 2.4 ಕೋಟಿ ರೂಪಾಯಿ ಮತ್ತು ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ 1 ಕೋಟಿ 5 ಲಕ್ಷ ರೂಪಾಯಿ ಸೇರಿ ಒಟ್ಟು 3 ಕೋಟಿ 9 ಲಕ್ಷ ರೂ. ದೇಣಿಗೆ ನೀಡಿದ್ದರು.

click me!