ಕೊನೆಗೂ ಕಾಂಗ್ರೆಸ್‌ ಕಡೆಗೆ ವಾಲಿದ ಲಿಂಗಾಯತರು, ಒಕ್ಕಲಿಗ ಮತಗಳು

By Kannadaprabha NewsFirst Published May 14, 2023, 5:16 AM IST
Highlights

ವೀರಶೈವ ಲಿಂಗಾಯತ ಸಮುದಾಯ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯಿಂದ ಹೊರ ಬಂದು ಕಾಂಗ್ರೆಸ್‌ನತ್ತ ಒಲವು ತೋರಿದೆಯೇ? ಈ ಬಾರಿಯ ಚುನಾವಣಾ ಫಲಿತಾಂಶ ಹಾಗೂ ಉಭಯ ಪಕ್ಷಗಳಲ್ಲಿ ಜಯಶೀಲರಾದ ಲಿಂಗಾಯತ ಸಮುದಾಯದ ಅಭ್ಯರ್ಥಿಗಳ ಸಂಖ್ಯೆಯನ್ನು ಗಮನಿಸಿದಾಗ ಹೀಗೊಂದು ಪ್ರಶ್ನೆ ಉದ್ಭವಿಸುತ್ತಿದೆ.

ಬೆಂಗಳೂರು (ಮೇ.14) : ವೀರಶೈವ ಲಿಂಗಾಯತ ಸಮುದಾಯ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯಿಂದ ಹೊರ ಬಂದು ಕಾಂಗ್ರೆಸ್‌ನತ್ತ ಒಲವು ತೋರಿದೆಯೇ? ಈ ಬಾರಿಯ ಚುನಾವಣಾ ಫಲಿತಾಂಶ ಹಾಗೂ ಉಭಯ ಪಕ್ಷಗಳಲ್ಲಿ ಜಯಶೀಲರಾದ ಲಿಂಗಾಯತ ಸಮುದಾಯದ ಅಭ್ಯರ್ಥಿಗಳ ಸಂಖ್ಯೆಯನ್ನು ಗಮನಿಸಿದಾಗ ಹೀಗೊಂದು ಪ್ರಶ್ನೆ ಉದ್ಭವಿಸುತ್ತಿದೆ.

ಬಿಜೆಪಿಯು ತನ್ನ ವೋಟ್‌ ಬ್ಯಾಂಕ್‌L(Lingayat vote bank bjp) ಎನಿಸಿದ್ದ ಲಿಂಗಾಯತ ಸಮುದಾಯಕ್ಕೆ ಈ ಬಾರಿ ಒಟ್ಟು 68 ವಿಧಾನಸಭಾ ಕ್ಷೇತ್ರಗಳಲ್ಲಿ(Karnataka assembly constituency) ಟಿಕೆಟ್‌ ನೀಡಿ ಸಮುದಾಯದ ಪ್ರೀತಿಗೆ ಪಾತ್ರವಾಗಲು ಮುಂದಾಗಿತ್ತು. ಆದರೆ ಈ ಪೈಕಿ ಗೆದ್ದವರು 17 ಮಂದಿ ಮಾತ್ರ. ಇದೇ ವೇಳೆ ಕಾಂಗ್ರೆಸ್‌ ಪಕ್ಷವು ರೆಡ್ಡಿ ಲಿಂಗಾಯತ ಸೇರಿದಂತೆ ವೀರಶೈವ ಲಿಂಗಾಯತ ಸಮುದಾಯಕ್ಕೆ 51 ಕ್ಷೇತ್ರದಲ್ಲಿ ಟಿಕೆಟ್‌ ನೀಡಿದ್ದು, ಇದರಲ್ಲಿ 39 ಕ್ಷೇತ್ರದಲ್ಲಿ ಅಭ್ಯರ್ಥಿಗಳು ಜಯಭೇರಿ ಬಾರಿಸಿದ್ದಾರೆ.

Latest Videos

Karnataka election results 2023: ಬಿಜೆಪಿಗೆ ಮುಖಭಂಗದ ಜತೆ ತೀವ್ರ ಮುಜುಗರ !

ಕಳೆದ ವಿಧಾನಸಭಾ ಚುನಾವಣೆಯಲ್ಲಿ ಲಿಂಗಾಯತ ಸಮುದಾಯ ಬಿಜೆಪಿಗೆ ದೊಡ್ಡ ಪ್ರಮಾಣದಲ್ಲಿ ಬೆಂಬಲ ನೀಡಿ ಕಾಂಗ್ರೆಸ್‌ ಅನ್ನು ತಿರಸ್ಕರಿಸಿತ್ತು. ಲಿಂಗಾಯತ ಪ್ರತ್ಯೇಕ ಧರ್ಮ ಸ್ಥಾಪನೆಗೆ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್‌ ಸರ್ಕಾರ ಕುಮ್ಮಕ್ಕು ನೀಡಿದೆ ಎಂಬ ಸಿಟ್ಟಿನಿಂದಾಗಿ ಬಿಜೆಪಿ ಪರ ಗಟ್ಟಿಯಾಗಿ ನಿಂತಿತ್ತು. ಇದಕ್ಕೆ ಪೂರಕವಾಗಿ ಬಿಜೆಪಿ 104 ಸ್ಥಾನ ಗಳಿಸಿ ಬಳಿಕ ‘ಆಪರೇಷನ್‌ ಕಮಲ’ದ ಮೂಲಕ ಆಡಳಿತ ಚುಕ್ಕಾಣಿ ಹಿಡಿದಿತ್ತು.

ಅಧಿಕಾರಕ್ಕೆ ಬಂದ ಬಳಿಕ ಬಿಜೆಪಿ ಲಿಂಗಾಯತ ಸಮುದಾಯವನ್ನು ನಿರ್ಲಕ್ಷಿಸುತ್ತಿದೆ, ಪ್ರಮುಖ ಲಿಂಗಾಯತ ನಾಯಕರನ್ನು ಕಡೆಗಣಿಸುತ್ತಿದೆ ಎಂಬ ಭಾವನೆ ಕ್ರಮೇಣ ಸಮುದಾಯದಲ್ಲಿ ಮೂಡತೊಡಗಿತ್ತು. ಇದಕ್ಕೆ ಪೂರಕವೆಂಬಂತೆ ನಂತರ ನಡೆದ ಬೆಳವಣಿಗೆಯಲ್ಲಿ ಮುಖ್ಯಮಂತ್ರಿ ಸ್ಥಾನದಿಂದ ಬಿ.ಎಸ್‌.ಯಡಿಯೂರಪ್ಪ ಅವರನ್ನು ಕೆಳಗಿಸಿದ್ದು ಈ ಸಮುದಾಯದ ಅಸಮಾಧಾನಕ್ಕೆ ಕಾರಣವಾಗಿತ್ತು.

ಸಮುದಾಯದ ಮುಖಂಡರಾದ ಜಗದೀಶ್‌ ಶೆಟ್ಟರ್‌, ಲಕ್ಷ್ಮಣ ಸವದಿ ಅವರಿಗೆ ಟಿಕೆಟ್‌ ನಿರಾಕರಿಸಿದ್ದೂ ಬಿಜೆಪಿ ಮೇಲಿನ ಸಿಟ್ಟು ಇನ್ನಷ್ಟುಹೆಚ್ಚಾಗಲು ಕಾರಣವಾಯಿತು. ಲಿಂಗಾಯತ ಸಮುದಾಯದ ನಾಯಕತ್ವವನ್ನು ಕಸಿದುಕೊಂಡು ಬೇರೆ ಸಮುದಾಯಕ್ಕೆ ನೀಡಲಾಗುವುದು ಎಂಬ ಆತಂಕವೂ ಕಾಂಗ್ರೆಸ್‌ ಪರ ನಿಲ್ಲಲು ಕಾರಣವಾಯಿತೇ ಎಂಬ ಪ್ರಶ್ನೆ ಸಾರ್ವಜನಿಕ ವಲಯದಲ್ಲಿ ವ್ಯಕ್ತವಾಗಿದೆ.

ಜೆಡಿಎಸ್‌ನಿಂದ ಕಾಂಗ್ರೆಸ್ಸಿಗೆ ಒಕ್ಕಲಿಗ ಮತಗಳು ವರ್ಗ

ಬೆಂಗಳೂರು (ಮೇ.14) : ಜೆಡಿಎಸ್‌ನ ಭದ್ರಕೋಟೆ ಎಂದೇ ಬಣ್ಣಿಸಲಾಗುವ ಹಳೆ ಮೈಸೂರು ಭಾಗದಲ್ಲಿ ಕಾಂಗ್ರೆಸ್‌ ಹೆಚ್ಚು ಸ್ಥಾನಗಳನ್ನು ಗೆದ್ದಿದ್ದು, ಜೆಡಿಎಸ್‌ ಧೂಳೀಪಟವಾಗಿದೆ. ಈ ಮೂಲಕ ಜೆಡಿಎಸ್‌ನ ಮತಗಳು ಕಾಂಗ್ರೆಸ್‌ ಪಕ್ಷಕ್ಕೆ ವರ್ಗಾವಣೆಯಾಗಿರುವುದು ಸ್ಪಷ್ಟವಾಗಿ ಕಂಡುಬರುತ್ತಿದೆ.

2018ರ ಚುನಾವಣೆಗೆ ಹೋಲಿಸಿದರೆ ಈ ಬಾರಿ ಜೆಡಿಎಸ್‌ ಬರೋಬ್ಬರಿ ಶೇ.5ರಷ್ಟುಮತಗಳನ್ನು ಕಳೆದುಕೊಂಡಿದೆ. ಆ ಮತಗಳು ಸ್ಪಷ್ಟವಾಗಿ ಕಾಂಗ್ರೆಸ್ಸಿಗೆ ವರ್ಗವಾಗಿವೆ. ಹಾಗೆ ನೋಡಿದರೆ ಬಿಜೆಪಿಯಿಂದ ಹೆಚ್ಚು ಮತಗಳು ಕಾಂಗ್ರೆಸ್ಸಿಗೆ ಹೋಗಿಲ್ಲ. 2018ಕ್ಕೆ ಹೋಲಿಸಿದರೆ ಬಿಜೆಪಿ ಕೇವಲ ಶೇ.0.35ರಷ್ಟುಮತಗಳನ್ನು ಮಾತ್ರವೇ ಕಳೆದುಕೊಂಡಿದೆ. ಜೆಡಿಎಸ್‌ನ ಮತಗಳು ಹೆಚ್ಚಾಗಿ ವರ್ಗವಾದ್ದರಿಂದಲೇ ಕಾಂಗ್ರೆಸ್‌ ಇಷ್ಟೊಂದು ಸ್ಥಾನಗಳನ್ನು ಸಾಧಿಸಲು ಸಾಧ್ಯವಾಗಿದೆ ಎಂದು ವಿಶ್ಲೇಷಿಸಲಾಗುತ್ತಿದೆ.

ಬಿಜೆಪಿಗೆ ಭ್ರಷ್ಟಪಕ್ಷದ ಪಟ್ಟಕಟ್ಟಿಗೆದ್ದ ಕಾಂಗ್ರೆಸ್‌ !

ರಾಜ್ಯದಲ್ಲಿ ಒಂದು ವೇಳೆ ಕಾಂಗ್ರೆಸ್‌ ಅಧಿಕಾರಕ್ಕೆ ಬಂದರೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಅವರು ಮುಖ್ಯಮಂತ್ರಿ ಹುದ್ದೆಗೇರುವ ಸಾಧ್ಯತೆ ಹಾಗೂ ‘ಅಧಿಕಾರ ಮನೆ ಬಾಗಿಲಿಗೆ ಬಂದಿದೆ, ಕಳೆದುಕೊಳ್ಳಬೇಡಿ. ಒಂದೇ ಒಂದು ಅವಕಾಶ ಕೊಡಿ’ ಎಂದು ಒಕ್ಕಲಿಗ ಪ್ರಾಬಲ್ಯದ ಕ್ಷೇತ್ರಗಳಲ್ಲೆಲ್ಲಾ ಡಿ.ಕೆ.ಶಿವಕುಮಾರ್‌ ಮಾಡಿದ ಮನವಿ ಪರಿಣಾಮಕಾರಿಯಾಗಿ ಕೆಲಸ ಮಾಡಿದೆ ಎಂದು ಹೇಳಲಾಗುತ್ತಿದೆ. ಈಗಾಗಲೇ ಜೆಡಿಎಸ್‌ನ ಎಚ್‌.ಡಿ.ಕುಮಾರಸ್ವಾಮಿ ಅವರು ಎರಡು ಬಾರಿ ಮುಖ್ಯಮಂತ್ರಿಯಾಗಿದ್ದಾರೆ, ಡಿ.ಕೆ.ಶಿವಕುಮಾರ್‌ ಅವರಿಗೂ ಒಂದು ಅವಕಾಶ ನೀಡೋಣ ಎಂಬ ಭಾವನೆಯೊಂದಿಗೆ ಸಮುದಾಯ ಕಾಂಗ್ರೆಸ್ಸಿನತ್ತ ವಾಲಿರಬಹುದು ಎನ್ನಲಾಗುತ್ತಿದೆ.

click me!