
ಬೆಂಗಳೂರು (ಡಿ.02): ದೇಶದ ಲೋಕಸಭಾ ಚುನಾವಣೆಯ ಸೆಮಿ ಫೈನಲ್ ಎಂದೇ ಹೇಳಲಾಗುತ್ತಿರುವ ಪಂಚರಾಜ್ಯ ಚುನಾವಣೆಯಲ್ಲಿ ಈಗ ತೆಲಂಗಾಣ ಮತ್ತು ರಾಜಸ್ಥಾನದಲ್ಲಿ ಅತಂತ್ರ ಸರ್ಕಾರ ಬರುವ ಸಾಧ್ಯತೆಯಿದೆ ಎಂಬ ಎಕ್ಸಿಟ್ ಪೋಲ್ ಫಲಿತಾಂಶಗಳು ಬಂದಿವೆ. ಇದರ ಬೆನ್ನಲ್ಲಿಯೇ ತೆಲಂಗಾಣದಲ್ಲಿ ಗೆಲ್ಲುವ ಕಾಂಗ್ರೆಸ್ ನಾಯಕರನ್ನು ಬೇರೆ ಪಕ್ಷಗಳು ಆಪರೇಷನ್ ಮಾಡಿ ಕರೆದುಕೊಳ್ಳದಂತೆ ನಿಗಾವಹಿಸುವ ನಿಟ್ಟಿನಲ್ಲಿ ಕೈ ನಾಯಕರು ಕೆಲವು ತಂತ್ರಗಳನ್ನು ಹೆಣೆದಿದ್ದಾರೆ. ಈ ಹಿನ್ನೆಲೆಯಲ್ಲಿ ಶಾಸಕರನ್ನು ಹಿಡಿದಿಟ್ಟುಕೊಳ್ಳುವ ನಿಟ್ಟಿನಲ್ಲಿ ಕರ್ನಾಟಕದ ಉಪ ಮುಖ್ಯಮಂತ್ರಿ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ತೆಲಂಗಾಣಕ್ಕೆ ತೆರಳಿದ್ದಾರೆ.
ಈ ಕುರಿತು ಶನಿವಾರ ಸದಾಶಿವನಗರದ ತಮ್ಮ ಮನೆಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಡಿ.ಕೆ. ಶಿವಕುಮಾರ್ ಅವರು, ನಾನು ಇಂದು ಕನಕಪುರಕ್ಕೆ ಹೋಗುತ್ತಿದ್ದೇನೆ. ಕನಕಪುರದದಲ್ಲಿ ಜನಸಂಪರ್ಕ ಸಭೆ ನಡೆಸುತ್ತಿದ್ದೇನೆ. ನಮ್ಮ ಕ್ಷೇತ್ರದ ಜನರ ಜೊತೆಗೆ ಮಾತಾಡಿಲ್ಲ. ಅಸೆಂಬ್ಲಿ ಶುರುವಾಗುತ್ತಿದೆ, 10 ದಿನ ಬೆಳಗಾವಿಯಲ್ಲಿ ಇರಬೇಕು. ಪಾರ್ಟಿ ಕೆಲ್ಸ ಎಲೆಕ್ಷನ್ ಇದೆ. ನಾನು ಹೋಗಲ್ಲ ಅಂತ ಹೇಳ್ತಿಲ್ಲ. ತೆಲಂಗಾಣಕ್ಕೆ ಹೋಗ್ತಿದ್ದೇನೆ. ಪಾರ್ಟಿ ಕೆಲ್ಸ ಏನ ಹೇಳ್ತಾರೋ ಅದನ್ನು ಮಾಡ್ತೀನಿ. ನಮ್ಮ ಕ್ಯಾಂಡಿಡೇಟ್ ಎಲ್ಲವನ್ನೂ ತಿಳಿಸಿದ್ದಾರೆ. ಯಾರೆಲ್ಲ ಸಂಪರ್ಕ ಮಾಡಲು ಪ್ರಯತ್ನ ಮಾಡ್ತಿದ್ದಾರೆ ಎಂದು ತಿಳಿಸಿದ್ದಾರೆ. ಹೀಗಾಗಿ ನಾವು ಜಾಗೃತಿಯಿಂದ ಇದ್ದೇವೆ. ನಾಳೆ ಫಲಿತಾಂಶ ಬರ್ಲಿ ಮಾತನಾಡುತ್ತೇನೆ ಎಂದು ಹೇಳಿದರು.
ರೈತರಿಗೆ ಬರ ಪರಿಹಾರ ಕೊಡಲು ದುಡ್ಡಿಲ್ಲ, ಆದ್ರೆ ಶಾಸಕರ ಬರ್ತಡೇಲಿ ಹಣದ ಮಳೆಯನ್ನೇ ಸುರಿಸಲಾಗ್ತಿದೆ!
ಇನ್ನು ಈಗಾಗಲೇ ಕಾಂಗ್ರೆಸ್ ಅಧಿಕಾರವಿದ್ದ ರಾಜಸ್ಥಾನದಲ್ಲಿ ತೀವ್ರ ಸ್ಪರ್ಧೆಯ ಮುನ್ಸೂಚನೆ ಸಿಕ್ಕಿದೆ. ನನಗೆ ನನ್ನದೇ ಆದ ಅಭಿಪ್ರಾಯವಿದೆ. ಮತಯಂತ್ರದಲ್ಲಿರುವ ಮತದ ಮಾಹಿತಿ ನಿಮಗೂ ಗೊತ್ತಿಲ್ಲ, ನಮಗೂ ಗೊತ್ತಿಲ್ಲ. ನಾಳೆಯೇ ಎಲ್ಲವೂ ಹೊರಬೀಳಲಿದೆ. ಆಯಾ ರಾಜ್ಯಗಳಲ್ಲಿ ಕೇವಲ 10 ಸಾವಿರ ಮತದಾರರನ್ನು ಸಂಪರ್ಕಿಸಿ ಈ ಸಮೀಕ್ಷೆಗಳನ್ನು ಮಾಡಿ ಎಕ್ಸಿಟ್ ಪೋಲ್ ಮಾಡಲಾಗಿದೆ. ನಾವು ನಮ್ಮ ರಾಜ್ಯದಲ್ಲಿ ಪ್ರತಿ ಕ್ಷೇತ್ರದಲ್ಲಿ ಟಿಕೆಟ್ ನೀಡುವಾಗ 1 ಲಕ್ಷದಷ್ಟು ಜನರನ್ನು ಸಮೀಕ್ಷೆ ಮಾಡಿದ್ದೆವು. ತೆಲಂಗಾಣದಲ್ಲಿ ನಾನು 20 ಕ್ಷೇತ್ರ ಓಡಾಡಿದ್ದೇನೆ. ಬೇರೆ ಕ್ಷೇತ್ರಗಳಲ್ಲೂ ವರದಿ ಬಹಳ ಉತ್ತಮವಾಗಿದೆ ಎಂದು ಡಿ.ಕೆ. ಶಿವಕುಮಾರ್ ತಿಳಿಸಿದರು.
ತಾಯಿ ಗರ್ಭದಿಂದ ಹೊರಬಂದ ಹಸುಗೂಸಿಗೆ ನರಕ ತೋರಿಸಿದ ಆಸ್ಪತ್ರೆ: ಮಗುವಿಗೆ ಮುತ್ತಿಕೊಂಡು ಕಚ್ಚಿದ ಜಿರಳೆಗಳು
ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ನೆರೆ ರಾಜ್ಯದ ನಾಯಕರು ಕೆಲಸ ಮಾಡಿದ್ದರು. ನಮ್ಮ ನಾಯಕರು ಅಲ್ಲಿನ ಚುನಾವಣೆಯಲ್ಲಿ ಕೆಲಸ ಮಾಡಿದ್ದಾರೆ. ಹೀಗಾಗಿ, ನೆರೆ ರಾಜ್ಯದ ಚುನಾವಣೆಯಲ್ಲಿ ನಮಗೆ ನಮ್ಮದೇ ಆದ ಜವಾಬ್ದಾರಿ ಇರುತ್ತದೆ. ಚುನಾವಣೆಯಲ್ಲಿ ಗೆಲ್ಲುವ ನಮ್ಮ ಯಾವುದೇ ಶಾಸಕರು ಬೇರೆ ಪಕ್ಷದ ಕಡೆ ಹೋಗುವುದಿಲ್ಲ. ಈ ಬಗ್ಗೆ ನಾವು ಹೆಚ್ಚು ತಲೆಕೆಡಿಸಿಕೊಂಡಿಲ್ಲ. ನಮ್ಮ ಅಭ್ಯರ್ಥಿಗಳು ತಮ್ಮನ್ನು ಯಾರಾರು ಸಂಪರ್ಕ ಮಾಡಿದವರ ಬಗ್ಗೆಯೂ ನಮಗೆ ಮಾಹಿತಿ ನೀಡಿದ್ದಾರೆ. ಆಪರೇಷನ್ ಮಾಡುವ ಬಗ್ಗೆ ನಾವು ಕೂಡ ಹೆಚ್ಚು ಜಾಗ್ರತೆಯಿಂದಿದ್ದೇವೆ ಎಂದು ತಿಳಿಸಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ