
ಮೈಸೂರು (ಆ.06): ಸಚಿವ ಎಚ್.ಸಿ. ಮಹದೇವಪ್ಪ ಅವರ 'ಕೆಆರ್ಎಸ್ಗೆ ಟಿಪ್ಪು ಅಡಿಗಲ್ಲು ಹಾಕಿದ್ದರು' ಎಂಬ ಹೇಳಿಕೆಯನ್ನು ಕೆಪಿಸಿಸಿ ವಕ್ತಾರ ಮತ್ತು ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಪರಾಜಿತ ಕಾಂಗ್ರೆಸ್ ಅಭ್ಯರ್ಥಿ ಎಂ. ಲಕ್ಷ್ಮಣ್ ಬಲವಾಗಿ ಸಮರ್ಥಿಸಿಕೊಂಡಿದ್ದಾರೆ.
ಮೈಸೂರಿನಲ್ಲಿಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಹಲವು ವಿವಾದಾತ್ಮಕ ವಿಷಯಗಳ ಕುರಿತು ಸ್ಫೋಟಕ ಹೇಳಿಕೆಗಳನ್ನು ನೀಡಿದರು. ಕೆಆರ್ಎಸ್ ಅಣೆಕಟ್ಟೆಗೆ ಟಿಪ್ಪು ಸುಲ್ತಾನ್ ಅಡಿಗಲ್ಲು ಹಾಕಿದ್ದರು ಎಂಬ ಸಚಿವ ಎಚ್.ಸಿ. ಮಹದೇವಪ್ಪ ಅವರ ಹೇಳಿಕೆಯನ್ನು ಸಮರ್ಥಿಸಿಕೊಂಡ ಲಕ್ಷ್ಮಣ್, 'ಸಚಿವರ ಹೇಳಿಕೆ ನೂರಕ್ಕೆ ನೂರು ಸತ್ಯ. ಕೆಆರ್ಎಸ್ ಅಣೆಕಟ್ಟು ಕಟ್ಟಿಸಿದ್ದು ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ನಿಜ. ಆದರೆ, ಅದಕ್ಕೂ ಮೊದಲು ಅದೇ ಜಾಗದಲ್ಲಿ ಟಿಪ್ಪು ಸುಲ್ತಾನ್ 'ಮೋವಿ ಡ್ಯಾಂ' ಹೆಸರಿನಲ್ಲಿ ಬ್ಯಾರೇಜ್ ನಿರ್ಮಿಸಿ 6 ಟಿಎಂಸಿ ನೀರು ಸಂಗ್ರಹಿಸುತ್ತಿದ್ದರು. ಆ ನೀರನ್ನು ಶ್ರೀರಂಗಪಟ್ಟಣ ಮತ್ತು ಕೆ.ಆರ್. ನಗರ ಭಾಗದ ಕೃಷಿ ಭೂಮಿಗೆ ಹರಿಸುತ್ತಿದ್ದರು. ಇದಕ್ಕೆ ಶಾಸನದ ಸಾಕ್ಷಿಗಳಿವೆ' ಎಂದು ಸ್ಪಷ್ಟಪಡಿಸಿದರು.
ಇದೇ ವೇಳೆ, 'ನಾಲ್ವಡಿ ಕೃಷ್ಣರಾಜ ಒಡೆಯರಿಗಿಂತ ನನ್ನ ತಂದೆ ಸಿದ್ದರಾಮಯ್ಯ ಹೆಚ್ಚು ಕೆಲಸ ಮಾಡಿದ್ದಾರೆ' ಎಂಬ ಡಾ. ಯತೀಂದ್ರ ಸಿದ್ದರಾಮಯ್ಯ ಅವರ ಹೇಳಿಕೆಯನ್ನೂ ಸಮರ್ಥಿಸಿಕೊಂಡರು. 'ಮೈಸೂರು ಸಂಸ್ಥಾನದ ರಾಜ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರನ್ನು ಇಂದಿನ ಸಂಸದರಿಗೆ ಹೋಲಿಸುವುದು ಬೇಡ. ರಾಜಪ್ರಭುತ್ವದಲ್ಲಿ ನಾಲ್ವಡಿ ಅವರು ಮೈಸೂರಿಗೆ ಕೆಲಸ ಮಾಡಿದರು, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸಿದ್ದರಾಮಯ್ಯನವರು ಮೈಸೂರಿಗೆ ನೀರು, ಆಸ್ಪತ್ರೆ, ರಸ್ತೆಗಳಂತಹ ಮಹತ್ವದ ಕೊಡುಗೆಗಳನ್ನು ನೀಡಿದ್ದಾರೆ. ಹಾಗಾಗಿ ಯತೀಂದ್ರ ಹೇಳಿದ್ದರಲ್ಲಿ ತಪ್ಪಿಲ್ಲ' ಎಂದರು.
ಮೈಸೂರು-ಕೊಡಗು ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಇವಿಎಂ ತಿರುಚಿ ಗೆದ್ದಿದೆ ಎಂದು ಲಕ್ಷ್ಮಣ್ ಗಂಭೀರ ಆರೋಪ ಮಾಡಿದರು. 'ಕ್ಷೇತ್ರದ ಒಟ್ಟು 2202 ಬೂತ್ಗಳ ಪೈಕಿ 292 ಬೂತ್ಗಳಲ್ಲಿ ಮತಗಳ್ಳತನ ನಡೆದಿದೆ. ಈ ಬೂತ್ಗಳಲ್ಲಿ ಒಟ್ಟು 1.45 ಲಕ್ಷ ಮತಗಳಿದ್ದು, ಕಾಂಗ್ರೆಸ್ಗೆ ಕೇವಲ 22 ಸಾವಿರ ಮತಗಳು ಬಂದಿವೆ. ಆದರೆ, ಕಳೆದ ನಾಲ್ಕು ಚುನಾವಣೆಗಳಲ್ಲಿ ಇದೇ ಬೂತ್ಗಳಲ್ಲಿ ನಮಗೆ ಶೇ. 40ರಷ್ಟು ಮತಗಳು ಬಂದಿದ್ದವು. ಒಂದು ಬೂತ್ನಲ್ಲಿ ನಮ್ಮ 15 ಕಾರ್ಯಕರ್ತರ ಮನೆಗಳಿದ್ದು, 750 ಮತಗಳಿದ್ದರೂ ಕಾಂಗ್ರೆಸ್ಗೆ ಬಂದಿದ್ದು ಬರೀ ಏಳು ಮತ. ಇದು ಹೇಗೆ ಸಾಧ್ಯ? ಎನ್.ಆರ್. ಕ್ಷೇತ್ರದ ಶಾಂತಿ ನಗರದಲ್ಲೂ ಇದೇ ರೀತಿ ಆಗಿದೆ' ಎಂದು ಅಂಕಿ-ಅಂಶಗಳ ಸಮೇತ ಆರೋಪಿಸಿದರು.
'ಪ್ರತಾಪ್ ಸಿಂಹ ಮೊಬೈಲ್ ತನಿಖೆಯಾದರೆ ಜೈಲು ಖಚಿತ
ಮಾಜಿ ಸಂಸದ ಪ್ರತಾಪ್ ಸಿಂಹ ವಿರುದ್ಧ ಸ್ಫೋಟಕ ಆರೋಪ ಮಾಡಿದ ಲಕ್ಷ್ಮಣ್, 'ಸಂಸತ್ ಭದ್ರತಾ ಲೋಪ ಪ್ರಕರಣದಲ್ಲಿ ಪೊಲೀಸರು ಜಪ್ತಿ ಮಾಡಿರುವ ಪ್ರತಾಪ್ ಸಿಂಹ ಅವರ ಮೊಬೈಲ್ ಅನ್ನು ಎಸ್ಐಟಿ ತನಿಖೆಗೆ ಒಪ್ಪಿಸಿದರೆ, ಪ್ರಜ್ವಲ್ ರೇವಣ್ಣನಂತೆ ಅವರೂ ಜೈಲು ಸೇರುತ್ತಾರೆ. ಅವರ ಮೊಬೈಲ್ನಲ್ಲಿ ಖಾಸಗಿ ಚಿತ್ರಗಳು ಮತ್ತು ವೀಡಿಯೋಗಳಿವೆ. ಈ ವಿಷಯ ತಿಳಿದು ಗೃಹ ಸಚಿವ ಅಮಿತ್ ಶಾ ಅವರೇ ದಂಗಾಗಿದ್ದಾರೆ. ಈ ಬಗ್ಗೆ ನನ್ನ ಬಳಿಯೂ ಕೆಲವು ಆಧಾರಗಳಿವೆ' ಎಂದು ಹೇಳುವ ಮೂಲಕ ಹೊಸ ಬಾಂಬ್ ಸಿಡಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ