ಇಂದಿರಾ ಕ್ಯಾಂಟೀನ್ ಊಟದ ಬೆಲೆಯಲ್ಲಿ ಯಾವುದೇ ಹೆಚ್ಚಳ ಇಲ್ಲ: ರಾಜ್ಯ ಸರ್ಕಾರ ಸ್ಪಷ್ಟನೆ

By Govindaraj SFirst Published Aug 19, 2023, 9:36 PM IST
Highlights

ಮುಖ್ಯಮಂತ್ರಿ ಸಿದ್ದರಾಮಯ್ಯನವರ ಕನಸಿನ ಕೂಸು ಇಂದಿರಾ ಕ್ಯಾಂಟೀನ್​ನಲ್ಲಿ ಬಡವರಿಗೆ ನೀಡುತ್ತಿದ್ದ ಊಟದ ದರದಲ್ಲಿ ಯಾವುದೇ ಹೆಚ್ಚಳ ಇಲ್ಲ. ಯಥಾ ಪ್ರಕಾರ ಬಿಬಿಎಂಪಿ ವ್ಯಾಪ್ತಿಯಲ್ಲಿ ಎಂದಿನಂತೆ ದರ ಇರಲಿದೆ. 

ಬೆಂಗಳೂರು (ಆ.19): ಮುಖ್ಯಮಂತ್ರಿ ಸಿದ್ದರಾಮಯ್ಯನವರ ಕನಸಿನ ಕೂಸು ಇಂದಿರಾ ಕ್ಯಾಂಟೀನ್​ನಲ್ಲಿ ಬಡವರಿಗೆ ನೀಡುತ್ತಿದ್ದ ಊಟದ ದರದಲ್ಲಿ ಯಾವುದೇ ಹೆಚ್ಚಳ ಇಲ್ಲ. ಯಥಾ ಪ್ರಕಾರ ಬಿಬಿಎಂಪಿ ವ್ಯಾಪ್ತಿಯಲ್ಲಿ ಎಂದಿನಂತೆ ದರ ಇರಲಿದೆ. ಇಂದಿರಾ ಕ್ಯಾಂಟೀನ್ ಊಟದ ಬೆಲೆ 62 ರೂಪಾಯಿ ಪ್ರತಿ ದಿನದ ವೆಚ್ಚ ಹೊರತು ಒಂದು ಊಟದ್ದಲ್ಲ ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವರ ಮಾಧ್ಯಮ ಪ್ರಕಟಣೆ ಹೊರಡಿಸಿದೆ. ಸಾರ್ವಜನಿಕರಿಂದ ಸಂಗ್ರಹಿಸುವ 25 ರೂಪಾಯಿ ಉಪಹಾರ ಮತ್ತು ಎರಡು ಊಟದ ವೆಚ್ಚವಾಗಿರುತ್ತದೆ. ಬೆಳಗಿನ ತಿಂಡಿ 5 ರುಪಾಯಿ, ಮಧ್ಯಾಹ್ನದ ಊಟ 10 ರುಪಾಯಿ ಹಾಗೂ ರಾತ್ರಿ ಊಟ 10 ರೂಪಾಯಿ ಒಟ್ಟಾರೆ 25 ರುಪಾಯಿ ಆಗುತ್ತದೆ.

ಬಿಬಿಎಂಪಿ ಹೊರತುಪಡಿಸಿ ಸ್ಥಳೀಯ ಸಂಸ್ಥೆಗಳಲ್ಲಿ ಹೊಸದಾಗಿ 188 ಇಂದಿರಾ ಕ್ಯಾಂಟೀನ್ ತೆರೆಯಲು ಒಪ್ಪಿಗೆ ನೀಡಲಾಗಿದೆ.ಹೊಸ ಇಂದಿರಾ ಕ್ಯಾಂಟೀನ್‍ಗೆ 25 ಕೋಟಿ ರೂ. ಮೀಸಲಿಡಲು ಸಚಿವ ಸಂಪುಟ ಸಭೆಯಲ್ಲಿ ಅನುಮೋದಿಸಲಾಗಿದೆ. ಪ್ರದೇಶಕ್ಕೆ ಅನುಗುಣವಾಗಿ ಸ್ಥಳೀಯ ತಿಂಡಿ-ತಿನಿಸುಗಳನ್ನು ಗಮನದಲ್ಲಿಟ್ಟುಕೊಂಡು ಮೆನು ಸಿದ್ಧಪಡಿಸಲಾಗುವುದು ಎಂದು ಸಚಿವ ಎಚ್.ಕೆ.ಪಾಟೀಲ್ ಹೇಳಿದರು. ಅಂದರೆ ಚಪಾತಿ, ರೊಟ್ಟಿ, ಪಲ್ಯ.. ಹೀಗೆ ಊಟದಲ್ಲಿ ಪದಾರ್ಥಗಳ ಸಂಖ್ಯೆ ಕೂಡಾ ಹೆಚ್ಚಾಗಿ ಇರಲಿದೆ ಎಂದರು.

ಕೌನ್ಸೆಲಿಂಗ್‌ ಮೂಲಕ ವರ್ಗಾವಣೆಯಿಂದ ಸರ್ಕಾರದ ಇಮೇಜ್‌ ಹೆಚ್ಚಳ: ಬಸವರಾಜ ಹೊರಟ್ಟಿ

ಇಂದಿರಾ ಕ್ಯಾಂಟೀನ್‌ಗೆ ಬೀಗ ಜಡಿದ ಸಿಬ್ಬಂದಿ: ಬಡ ಕುಟುಂಬದವರಿಗೆ, ಕಾಲೇಜು ವಿದ್ಯಾರ್ಥಿಗಳಿಗೆ ಆಸರೆಯಾಗಿರುವ ಇಂದಿರಾ ಕ್ಯಾಂಟೀನ್‌ನಲ್ಲಿ ಕೆಲಸ ಮಾಡುವ ಸಿಬ್ಬಂದಿಗೆ ಸಂಬಳ ನೀಡಿಲ್ಲವೆಂದು ಕ್ಯಾಂಟೀನ್‌ಗೆ ಬೀಗ ಜಡಿದು, ಏಜೆನ್ಸಿ ಮಾಲೀಕನ ವಿರುದ್ಧ ಕೊರಟಗೆರೆ ಪೋಲಿಸ್‌ ಠಾಣೆಯಲ್ಲಿ ದೂರು ನೀಡಿ ಪ್ರತಿಭಟನೆ ನಡೆಸಿದ ಘಟನೆ ಕೊರಟಗೆರೆಯಲ್ಲಿ ನಡೆದಿದೆ.

ಕಾಂಗ್ರೆಸ್‌ ಸರ್ಕಾರದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಬಡವರಿಗೆ, ವಿದ್ಯಾರ್ಥಿಗಳಿಗೆ, ಸಾರ್ವಜನಿಕರಿಗೆ ಅನುಕೂಲವಾಗಲೆಂದು ಇಂದಿರಾ ಕ್ಯಾಂಟೀನ್‌ ನಿರ್ಮಿಸಿ ಕಡಿಮೆ ದರದಲ್ಲಿ ತಿಂಡಿ ಮತ್ತು ಊಟವನ್ನು ವಿತರಣೆ ಮಾಡುತ್ತಿದ್ದರು. ಆದರೆ ಕೊರಟಗೆರೆಯಲ್ಲಿ ಇಂದಿರಾ ಕ್ಯಾಂಟಿನ್‌ ಏಜೆನ್ಸಿ ಮಾಲೀಕ ಸಿಬ್ಬಂದಿಗೆ ಸುಮಾರು 7 ತಿಂಗಳಿನಿಂದ ಸಂಬಳ ನೀಡದಿರುವ ಕಾರಣ ಸಿಬ್ಬಂದಿಯು ಕ್ಯಾಂಟೀನ್‌ಗೆ ಬೀಗ ಜಡಿದು ಪೊಲೀಸ್‌ ಠಾಣೆ ಮೆಟ್ಟಿಲೇರಿದ್ದಾರೆ.

ಹೈ-ಕ ಬಿಜೆಪಿ ಶಾಸಕರು ನನ್ನ ಸಂಪರ್ಕದಲ್ಲಿ: ಸಚಿವ ಪ್ರಿಯಾಂಕ್‌ ಸ್ಫೋಟಕ ಹೇಳಿಕೆ

ಈ ವಿಚಾರವಾಗಿ ಸಾಕಷ್ಟು ಬಾರಿ ಸಂಬಂಧಿತ ಅಧಿಕಾರಿಗಳಿಗೆ ತಿಳಿಸಿ ಮನವಿ ಮಾಡಿಕೊಂಡರೂ ಯಾವುದೇ ಪ್ರಯೋಜನವಾಗಿಲ್ಲ. ಈ ವಿಷಯದ ಬಗ್ಗೆ ಮಾಧ್ಯಮದವರಿಗೆ ತಿಳಿಸಿದರೆ ಕೆಲಸದಿಂದ ತೆಗೆದು ಬೇರೆಯ ಸಿಬ್ಬಂದಿಯನ್ನು ಕೆಲಸಕ್ಕೆ ಸೇರಿಸಿಕೊಳ್ಳಲಾಗುತ್ತದೆ, ನೀವು ಕೆಲಸಕ್ಕೆ ಬಂದರೆ ಬನ್ನಿ. ಇಲ್ಲವೆಂದರೆ ಬಿಡಿ ಎಂದು ಬೆದರಿಕೆ ಹಾಕಿದ್ದರು. ಆದ್ದರಿಂದ ಪೊಲೀಸ್‌ ಠಾಣೆಯಲ್ಲಿ ಅವರ ವಿರುದ್ಧ ದೂರು ನೀಡಲಾಗಿದೆ ಎನ್ನುತ್ತಾರೆ ಕ್ಯಾಂಟೀನ್‌ ಸಿಬ್ಬಂದಿ.

click me!