ಆನ್‌ಲೈನ್‌ ಜೂಜು ನಿಷೇಧ: ಹೈಕೋರ್ಟ್‌ ಸೂಚನೆ ಬೆನ್ನಲ್ಲೇ ಸರ್ಕಾರ ಮಹತ್ವದ ತೀರ್ಮಾನ!

Published : Sep 05, 2021, 07:23 AM IST
ಆನ್‌ಲೈನ್‌ ಜೂಜು ನಿಷೇಧ: ಹೈಕೋರ್ಟ್‌ ಸೂಚನೆ ಬೆನ್ನಲ್ಲೇ ಸರ್ಕಾರ ಮಹತ್ವದ ತೀರ್ಮಾನ!

ಸಾರಾಂಶ

* ಆನ್‌ಲೈನ್‌ ಜೂಜು ನಿಷೇಧ * ಹೈಕೋರ್ಟ್‌ ಸೂಚನೆ ಬೆನ್ನಲ್ಲೇ ಸರ್ಕಾರ ಮಹತ್ವದ ತೀರ್ಮಾನ * ಪೊಲೀಸ್‌ ಕಾಯ್ದೆ ತಿದ್ದುಪಡಿ ಆನ್ಲೈನ್‌ ಪಾವತಿ ಮೇಲೂ ನಿಗಾ

ಬೆಂಗಳೂರು(ಸೆ.05): ರಾಜ್ಯದಲ್ಲಿ ಆನ್‌ಲೈನ್‌ ಜೂಜು ನಿಷೇಧ ಮಾಡುವ ಸಲುವಾಗಿ ಪೊಲೀಸ್‌ ಕಾಯಿದೆಗೆ ತಿದ್ದುಪಡಿ ತರಲು ಶನಿವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಮಹತ್ವದ ನಿರ್ಧಾರ ತೆಗೆದುಕೊಳ್ಳಲಾಗಿದೆ.

ರಾಜ್ಯ ಸೇರಿದಂತೆ ದೇಶಾದ್ಯಂತ ಇತ್ತೀಚೆಗೆ ಆನ್‌ಲೈನ್‌ ಬೆಟ್ಟಿಂಗ್‌ ದಂಧೆ, ಆನ್‌ಲೈನ್‌ ಗೇಮ್‌ಗಳ ಮೂಲಕ ಜೂಜು ಆಡುವ ಪ್ರಮಾಣ ಹೆಚ್ಚಾಗಿದೆ. ಇದು ಕ್ರಮೇಣ ಚಟವಾಗಿ ಬದಲಾಗಿ ಲಕ್ಷಾಂತರ ಯುವಕರು ಜೀವನ ಹಾಳು ಮಾಡಿಕೊಳ್ಳುತ್ತಿದ್ದಾರೆ. ಇದೇ ಕಾರಣಕ್ಕೆ ತೆಲಂಗಾಣ, ತಮಿಳುನಾಡು ರಾಜ್ಯಗಳಲ್ಲಿ ಈಗಾಗಲೇ ಆನ್‌ಲೈನ್‌ ಗ್ಯಾಂಬ್ಲಿಂಗ್‌ಗೆ ನಿಷೇಧ ಹೇರಲಾಗಿದೆ. ಈ ನಡುವೆ, ರಾಜ್ಯದಲ್ಲಿ ಆನ್‌ಲೈನ್‌ ಗ್ಯಾಂಬ್ಲಿಂಗ್‌ ನಿಯಂತ್ರಣಕ್ಕೆ ಸರ್ಕಾರ ಯಾವ ಕ್ರಮ ಕೈಗೊಂಡಿದೆ ಎಂಬ ಕುರಿತು ಹೈಕೋರ್ಟ್‌ ಪ್ರಶ್ನೆ ಮಾಡಿದ್ದು, ಇದರ ಬೆನ್ನಲ್ಲೇ ರಾಜ್ಯದಲ್ಲೂ ಆನ್‌ಲೈನ್‌ ಜೂಜು ನಿಷೇಧಕ್ಕೆ ಶನಿವಾರ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಸರ್ಕಾರ ನಿರ್ಧಾರ ಮಾಡಿದೆ.

ಈ ಕುರಿತು ಸಭೆ ಬಳಿಕ ಮಾತನಾಡಿದ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜೆ.ಸಿ. ಮಾಧುಸ್ವಾಮಿ, ಪೊಲೀಸ್‌ ಕಾಯಿದೆಗೆ ತಿದ್ದುಪಡಿ ತಂದು ಆನ್‌ಲೈನ್‌ ಜೂಜಾಟಕ್ಕೆ ನಿಷೇಧ ಹೇರಲು ನಿರ್ಧರಿಸಲಾಗಿದೆ. ಆನ್‌ಲೈನ್‌ ಗೇಮ್‌ಗಳ ಮೂಲಕ ಜೂಜಿನಲ್ಲಿ ತೊಡಗುವುದಕ್ಕೆ ನಿಷೇಧ ಹೇರಲಾಗುವುದು. ಅಲ್ಲದೆ ಜೂಜಾಟಕ್ಕಾಗಿ ಆನ್‌ಲೈನ್‌ ಪಾವತಿ, ವರ್ಚುಯಲ್‌ ಕರೆನ್ಸಿ, ಎಲೆಕ್ಟ್ರಾನಿಕ್‌ ಕರೆನ್ಸಿ ಸೇರಿ ಯಾವುದೇ ವಹಿವಾಟು ನಡೆಸಿದರೂ ಪೊಲೀಸರು ನಿಗಾ ವಹಿಸಲಿದ್ದಾರೆ. ತಪ್ಪಿತಸ್ಥರಿಗೆ ಆಗಬೇಕಾದ ಶಿಕ್ಷೆ ಕುರಿತು ಸಹ ಕಾಯಿದೆಯಲ್ಲಿ ವಿವರಿಸಲಾಗುವುದು ಎಂದು ಹೇಳಿದರು.

ಹೈಕೋರ್ಟ್‌ ಸೂಚನೆ ಆಧಾರದ ಮೇಲೆ ಪೊಲೀಸ್‌ ಕಾಯಿದೆಯಲ್ಲಿ ಸೇರಿಸಲಾಗುತ್ತಿದೆ. ಲಾಭ ವೃದ್ಧಿಗಾಗಿ ನಡೆಯುವ ಎಲ್ಲಾ ಆನ್‌ಲೈನ್‌ ಜೂಜು ಇದರಲ್ಲಿ ಸೇರಿರಲಿದೆ. ಈ ಮುಂದೆ ಹೆಚ್ಚಿನ ಮಾಹಿತಿ ಒದಗಿಸಲಾಗುವುದು ಎಂದರು.

ಆನ್‌ಲೈನ್‌ ಜೂಜು ನಿಷೇಧ ಏಕೆ?:

ಬರೀ 25 ಅಥವಾ 50 ರು. ಬಂಡವಾಳ ಹೂಡಿ ಕೋಟಿ ಕೋಟಿ ಗೆಲ್ಲಬಹುದು ಎಂಬ ಆಮಿಷವೊಡ್ಡಿ ಯುವಕರ ದಾರಿ ತಪ್ಪಿಸುವಂತಹ ನೂರಾರು ಆನ್‌ಲೈನ್‌ ಗೇಮ್‌ ಆ್ಯಪ್‌ಗಳು ಸ್ಕಿಲ್‌ ಗೇಮ್‌ (ಕೌಶಲ್ಯ ಆಟ) ಹೆಸರಿನಲ್ಲಿ ಜೂಜಾಡಿಸಿ ಸಾವಿರಾರು ಕುಟುಂಬಗಳನ್ನು ಬೀದಿಗೆ ತಳ್ಳುತ್ತಿವೆ. ಕೊರೋನಾ ಅವಧಿಯಲ್ಲಿ ಇದರ ಪರಿಣಾಮ ಹೆಚ್ಚಾಗಿದೆ.

ಇತ್ತೀಚೆಗೆ ಆನ್‌ಲೈನ್‌ ಜೂಜಿನಲ್ಲಿ ಹಣ ಕಳೆದುಕೊಂಡ 20 ವರ್ಷದ ಚೆನ್ನೈ ಯುವಕನೊಬ್ಬ ಮಾನಸಿಕ ಆಘಾತಕ್ಕೆ ಒಳಗಾಗಿ ಡೆತ್‌ನೋಟ್‌ ಬರೆದಿಟ್ಟು ಆತ್ಮಹತ್ಯೆಗೆ ಶರಣಾಗಿದ್ದ. ಈ ಹಿನ್ನೆಲೆಯಲ್ಲಿ ಇಂತಹ ಆ್ಯಪ್‌ಗಳ ನಿಯಂತ್ರಣಕ್ಕೆ ಕಾನೂನಿನ ಅವಕಾಶವಿದೆ ಎಂದು ಮದ್ರಾಸ್‌ ಹೈಕೋರ್ಟ್‌ ಹೇಳಿತ್ತು. ಇದರ ಬೆನ್ನಲ್ಲೇ ತಮಿಳುನಾಡು ಸರ್ಕಾರ ಆಗಸ್ಟ್‌ 4 ರಂದು ತಮಿಳುನಾಡು ಸರ್ಕಾರ ಘೋಷಿಸಿತ್ತು. ಇದಕ್ಕೂ ಮೊದಲೇ ತೆಲಂಗಾಣವೂ ನಿಷೇಧಿಸಿತ್ತು.

ಇದರ ಬೆನ್ನಲ್ಲೇ ರಾಜ್ಯದಲ್ಲೂ ಆನ್‌ಲೈನ್‌ ಗ್ಯಾಂಬ್ಲಿಂಗ್‌ ನಿಷೇಧಕ್ಕೆ ಆನ್‌ಲೈನ್‌ ಹಾಗೂ ಆಫ್‌ಲೈನ್‌ ಅಭಿಯಾನಗಳು ಶುರುವಾಗಿದ್ದವು. ನ್ಯಾಯಾಲಯವೂ ಮಧ್ಯಪ್ರವೇಶ ಮಾಡಿರುವುದರಿಂದ ಆನ್‌ಲೈನ್‌ ಜೂಜು ನಿಷೇಧಿಸಲು ಸರ್ಕಾರ ಮುಂದಾಗಿದೆ.

ಆನ್‌ಲೈನ್‌ ಜೂಜು ಹೇಗೆ?

ಆನ್‌ಲೈನ್‌ನಲ್ಲಿ ಹಲವು ಜೂಜಾಟಗಳಿವೆ. ಇಸ್ಪೀಟ್‌ನ ಆಟವಾದರೆ ಆ್ಯಪ್‌ ಡೌನ್‌ಲೋಡ್‌ ಮಾಡಿಕೊಂಡ ಬಳಿಕ ನೋಂದಣಿಯಾಗಬೇಕು. ಇದಾದ ಕೂಡಲೇ ಆನ್‌ಲೈನ್‌ ಬ್ಯಾಂಕಿಂಗ್‌ ಲಿಂಕ್‌ ಕೇಳುತ್ತದೆ. ಕನಿಷ್ಠ 100 ರು.ನಿಂದ 1 ಸಾವಿರ ರು.ವರೆಗೆ ಹಣ ಪಾವತಿಸಿಕೊಂಡು ಪಾಯಿಂಟ್ಸ್‌ ನೀಡುತ್ತದೆ. ಆಟದಲ್ಲಿ ಗೆದ್ದಂತೆ ಇಂತಿಷ್ಟುಪಾಯಿಂಟ್ಸ್‌ ಕೊಡಲಾಗುತ್ತದೆ. ಗೆದ್ದ ಹಣವನ್ನು ಪುನಃ ಗ್ರಾಹಕನ ಖಾತೆಗೆ ಹಾಕಬೇಕಾದರೆ ಶೇ.5ರಂತೆ ಕಮಿಷನ್‌ ಕಡಿತಗೊಳ್ಳುತ್ತದೆ.

ಕ್ರಿಕೆಟ್‌ ಗೇಮ್‌ ಆಗಿದ್ದರೆ ಪಂದ್ಯಕ್ಕೆ 15, 29, 49 ರು. ಪಾವತಿಸಿಕೊಳ್ಳುತ್ತಾರೆ. ಪಂದ್ಯ ನಡೆಯುವ ನಾಲ್ಕೈದು ಗಂಟೆ ಮೊದಲು ಆ್ಯಪ್‌ನಲ್ಲಿ ಮಾಹಿತಿ ನೀಡಲಾಗತ್ತದೆ.

ಆಗ 49 ರು. ಪಾವತಿಸಿ ಆಟಗಾರರನ್ನು ಆಯ್ಕೆ ಮಾಡಿಕೊಂಡು ತಂಡ ರಚಿಸಿಕೊಳ್ಳಬೇಕು. ಆಯ್ಕೆ ಮಾಡಿದ ತಂಡದ ಆಟಗಾರರು ಉತ್ತಮ ಪ್ರದರ್ಶನ ನೀಡಿ ಗೆದ್ದರೆ 1 ಕೋಟಿ ರು., 10 ಲಕ್ಷ ರು., 5 ಲಕ್ಷ ರು. ಹಾಗೂ ಕನಿಷ್ಠ 50 ರು.ವರೆಗೂ ಬಹುಮಾನ ನೀಡುವ ಆಮಿಷವಿರುತ್ತದೆ.

ಯಾವ್ಯಾವ ಜೂಜು ನಿಷೇಧವಾಗಬಹುದು?

ಆನ್‌ಲೈನ್‌ ಮೂಲಕ ಬೆಟ್ಟಿಂಗ್‌ ನಡೆಸುವ ಎಲ್ಲಾ ವಹಿವಾಟಿಗೂ ನಿಷೇಧ ಹೇರಲು ನಿರ್ಧರಿಸಿದ್ದು, ಈ ಮೂಲಕ ರಾಜ್ಯದಲ್ಲಿ ಆನ್‌ಲೈನ್‌ ಕ್ಯಾಸಿನೊ, ಡ್ರೀಮ್‌ ಇಲೆವೆನ್‌, ರಮ್ಮಿ ಸರ್ಕಲ್‌, ಜಂಗ್ಲಿ ರಮ್ಮಿಯಂತಹ ಆನ್‌ಲೈನ್‌ ಜೂಜು ಆಟಗಳಿಗೆ ನಿರ್ಬಂಧ ಉಂಟಾಗುವ ಸಾಧ್ಯತೆ ಇದೆ. ಅಲ್ಲದೆ, ಆನ್‌ಲೈನ್‌ ಮೂಲಕ ನಡೆಯುವ ಕ್ರಿಕೆಟ್‌ ಸೇರಿದಂತೆ ಕ್ರೀಡಾ ಬೆಟ್ಟಿಂಗ್‌ಗಳೂ ಕಡಿವಾಣ ಬೀಳಬಹುದು.

ರಾಜ್ಯದಲ್ಲಿ ರಮ್ಮಿ ಸರ್ಕಲ್‌, ಡ್ರೀಮ್‌ 11, ಎಂ11 ಸರ್ಕಲ್‌, ಗೇಮ್‌, ಮಿಲಿಯನ್‌ ಫೇಸ್ಟ್‌, ಬ್ಲಿಟ್‌್ಜ ಪ್ರೀಮಿಯರ್‌ ಲೀಗ್‌, ಪೋಕರಿಬಾಜಿ, ರಮ್ಮಿ ಬಾಜಿ, ರಮ್ಮಿಗುರು, ಜಂಗ್ಲಿ ರಮ್ಮಿ, ವಿನ್‌ ರಮ್ಮಿ, ರಮ್ಮಿ ಕಲ್ಚರ್‌, ಮೈ ಟೀಮ್‌ 11 ಸರ್ಕಲ್‌, ಹವ್‌ಜಾತ್‌, ಫ್ಯಾನ್‌ಫೈಟ್‌ ಸೇರಿದಂತೆ ನೂರಾರು ಆನ್‌ಲೈನ್‌ ಗೇಮ್‌ಗಳು ಬಳಕೆಯಲ್ಲಿವೆ.

ಬಹುತೇಕ ಈ ಆ್ಯಪ್‌ಗಳು ಗೂಗಲ್‌ ಪ್ಲೇ ಸ್ಟೋರ್‌ನಲ್ಲಿ ದೊರೆಯುವುದಿಲ್ಲ. ಗೂಗಲ್‌ನಲ್ಲಿ ಸಚ್‌ರ್‍ ಮಾಡಿ ಡೌನ್‌ಲೋಡ್‌ ಮಾಡಿಕೊಳ್ಳಬೇಕು. ಈ ಆ್ಯಪ್‌ಗಳ ಲಿಂಕ್‌ಗಳನ್ನು ಯೂಟ್ಯೂಬ್‌, ಫೇಸ್‌ಬುಕ್‌, ಟೆಲಿಗ್ರಾಂನಲ್ಲಿ ಹರಿಬಿಡಲಾಗುತ್ತದೆ. ಬಳಕೆದಾರರನ್ನು ಹೆಚ್ಚಿಸಿಕೊಳ್ಳಲು ಆ್ಯಪ್‌ ಶೇರ್‌ ಮಾಡಿದರೆ 100 ರು. ನೀಡಲಾಗುತ್ತಿದೆ.

ಯಾಕೆ ನಿಷೇಧ?

25-50 ರು. ಹೂಡಿ ಕೋಟಿ ಗೆಲ್ಲುವ ಆಮಿಷವನ್ನು ಸ್ಕಿಲ್‌ ಗೇಮ್‌ ಹೆಸರಲ್ಲಿ ಜೂಜು ಆ್ಯಪ್‌ಗಳು ಒಡ್ಡುತ್ತಿವೆ. ಅಸಂಖ್ಯ ಯುವಕರು ಜೂಜಿನ ವ್ಯಸನಕ್ಕೆ ಸಿಲುಕಿ ಬದುಕು ಹಾಳು ಮಾಡಿಕೊಳ್ಳುತ್ತಿದ್ದಾರೆ. ಚೆನ್ನೈನಲ್ಲಿ ಯುವಕನೊಬ್ಬ ಆತ್ಮಹತ್ಯೆಗೂ ಶರಣಾಗಿದ್ದ. ಹೀಗಾಗಿ, ಇವುಗಳನ್ನು ನಿಷೇಧಿಸುವುದು ಸರ್ಕಾರದ ಉದ್ದೇಶ.

ರಮ್ಮಿ, ಕ್ಯಾಸಿನೋ, ಕ್ರಿಕೆಟ್‌ ನಿಷೇಧ?

ಡ್ರೀಮ್‌ 11, ರಮ್ಮಿ ಸರ್ಕಲ್‌, ಜಂಗ್ಲಿ ರಮ್ಮಿ, ಆನ್‌ಲೈನ್‌ ಕ್ಯಾಸಿನೋ, ಎಂ11 ಸರ್ಕಲ್‌, ಪೋಕರಿಬಾಜಿ, ರಮ್ಮಿ ಬಾಜಿ, ವಿನ್‌ ರಮ್ಮಿ, ಮೈಟೀಮ್‌ 11 ಸರ್ಕಲ್‌, ರಮ್ಮಿ ಕಲ್ಚರ್‌ ಸೇರಿ ನೂರಾರು ಗೇಮ್‌ಗಳು

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

Sharath R Ashok scuba diving: ಸಮುದ್ರದಾಳದಲ್ಲಿ ಆರ್ ಅಶೋಕ್ ಪುತ್ರನ ಗಿನ್ನೆಸ್ ಸಾಹಸ
Karnataka By-Election Results 2026 LIVE: Sharath R Ashok scuba diving - ಸಮುದ್ರದಾಳದಲ್ಲಿ ಆರ್ ಅಶೋಕ್ ಪುತ್ರನ ಗಿನ್ನೆಸ್ ಸಾಹಸ