ಬಾದಾಮಿ ಜನರಿಗೆ ದಯವಿಟ್ಟು ನನ್ನ ಕ್ಷಮಿಸಿ ಎಂದ ಸಿದ್ದರಾಮಯ್ಯ

Published : Feb 15, 2023, 12:37 PM IST
ಬಾದಾಮಿ ಜನರಿಗೆ ದಯವಿಟ್ಟು ನನ್ನ ಕ್ಷಮಿಸಿ ಎಂದ ಸಿದ್ದರಾಮಯ್ಯ

ಸಾರಾಂಶ

ಅಭಿಮಾನಿಗಳ ಪ್ರೀತಿಗೆ ಸ್ಪಂದಿಸಿ ಮಾತನಾಡಿರುವ ಸಿದ್ದರಾಮಯ್ಯ, ದಯವಿಟ್ಟು ನನ್ನನ್ನು ಕ್ಷಮಿಸಬೇಕು. ಮೈಸೂರಿನಿಂದ ಬಂದ ನನ್ನನ್ನು ಪ್ರೀತಿಯಿಂದ ಗೆಲ್ಲಿಸಿದ್ದೀರಿ. ಆದರೆ ನಿಮ್ಮ ಜನಪ್ರತಿನಿಧಿಯಾಗಿ ಆಯ್ಕೆಯಾಗಿದ್ದರೂ ನಿತ್ಯ ನಿಮ್ಮ ಕಷ್ಟಸುಖ ಆಲಿಸಲು ಆಗುತ್ತಿಲ್ಲ ಎಂದಿದ್ದಾರೆ.

ಕನ್ನಡಪ್ರಭ ವಾರ್ತೆ, ಬೆಂಗಳೂರು

ಬೆಂಗಳೂರು: ಕ್ಷೇತ್ರದ ಆಯ್ಕೆ ಬಗ್ಗೆ ಗೊಂದಲದಲ್ಲಿರುವ ವಿಧಾನಸಭೆ ವಿರೋಧ ಪಕ್ಷದ ನಾಯಕ ಹಾಗೂ ಬಾದಾಮಿ ಹಾಲಿ ಶಾಸಕ ಸಿದ್ದರಾಮಯ್ಯ ಅವರಿಗೆ ಬಾದಾಮಿಯಿಂದಲೇ ಸ್ಪರ್ಧಿಸುವಂತೆ ಒತ್ತಡ ಹೆಚ್ಚಾಗಿದ್ದು, ಸತತ ಮೂರನೇ ಬಾರಿಗೆ ಮಂಗಳವಾರ ಬಾದಾಮಿ ಕ್ಷೇತ್ರದಿಂದ ಆಗಮಿಸಿದ ನೂರಾರು ಮುಖಂಡರು ಸಿದ್ದರಾಮಯ್ಯ ಮೇಲೆ ಒತ್ತಡ ಹೇರಿದ್ದಾರೆ.

ಸಿದ್ದರಾಮಯ್ಯ ಅವರ ಅಧಿಕೃತ ಸರ್ಕಾರಿ ನಿವಾಸಕ್ಕೆ ಆಗಮಿಸಿದ್ದ ಸ್ಥಳೀಯ ಮುಖಂಡರು ಹಾಗೂ ಅಭಿಮಾನಿಗಳು, ತಾವು ಕ್ಷೇತ್ರದಿಂದ ಸ್ಪರ್ಧಿಸದಿದ್ದರೆ ಗ್ರಾಮ ಪಂಚಾಯಿತಿ, ಪಟ್ಟಣ ಪಂಚಾಯಿತಿ, ಪುರಸಭೆ ಸದಸ್ಯತ್ವ ಸ್ಥಾನಗಳಿಗೆ ರಾಜೀನಾಮೆ ನೀಡುವುದಾಗಿಯೂ ಎಚ್ಚರಿಕೆ ನೀಡಿದ್ದಾರೆ.

ದಯವಿಟ್ಟು ಕ್ಷಮಿಸಿ:

ಅಭಿಮಾನಿಗಳ ಪ್ರೀತಿಗೆ ಸ್ಪಂದಿಸಿ ಮಾತನಾಡಿರುವ ಸಿದ್ದರಾಮಯ್ಯ, ದಯವಿಟ್ಟು ನನ್ನನ್ನು ಕ್ಷಮಿಸಬೇಕು. ಮೈಸೂರಿನಿಂದ ಬಂದ ನನ್ನನ್ನು ಪ್ರೀತಿಯಿಂದ ಗೆಲ್ಲಿಸಿದ್ದೀರಿ. ಆದರೆ ನಿಮ್ಮ ಜನಪ್ರತಿನಿಧಿಯಾಗಿ ಆಯ್ಕೆಯಾಗಿದ್ದರೂ ನಿತ್ಯ ನಿಮ್ಮ ಕಷ್ಟಸುಖ ಆಲಿಸಲು ಆಗುತ್ತಿಲ್ಲ. ನನ್ನ ಗೆಲ್ಲಿಸಿದ ನಿಮ್ಮ ಋುಣ ತೀರಿಸಲು ಆಗುವುದಿಲ್ಲ. ನನಗೆ 76 ವರ್ಷ ವಯಸ್ಸಾಗಿದೆ. ದೂರದ ಬಾದಾಮಿಗೆ ನಿರಂತರವಾಗಿ ಪ್ರಯಾಣಿಸಲು ಆಗುವುದಿಲ್ಲ ಎಂಬ ಕಾರಣಕ್ಕೆ ಮಾತ್ರವೇ ಬಾದಾಮಿಯಿಂದ ಸ್ಪರ್ಧಿಸಲು ಹಿಂಜರಿಯುತ್ತಿದ್ದೇನೆ. ದಯವಿಟ್ಟು ಅರ್ಥ ಮಾಡಿಕೊಳ್ಳಿ ಎಂದು ಮನವೊಲಿಸುವ ಪ್ರಯತ್ನ ಮಾಡಿದರು.

'ಮಾಜಿ ಸಿಎಂ ಸಿದ್ದರಾಮಯ್ಯಗೆ ಬಾದಾಮಿಯೇ ಸುರಕ್ಷಿತ'

ಆದರೂ ಪಟ್ಟು ಬಿಡದ ಬಾದಾಮಿ ಕಾಂಗ್ರೆಸ್‌ ಕಾರ್ಯಕರ್ತರು, ನೀವು ಕ್ಷೇತ್ರಕ್ಕೆ ಬಂದ ಬಳಿಕ ಎಂದೂ ಕಾಣದ ಅಭಿವೃದ್ಧಿಯನ್ನು ಕ್ಷೇತ್ರ ಕಂಡಿದೆ. ಹೀಗಾಗಿ ನೀವು ಈ ಬಾರಿಯೂ ಕ್ಷೇತ್ರದಿಂದಲೇ ಸ್ಪರ್ಧಿಸಬೇಕು. ಕೋಲಾರಕ್ಕಿಂತಲೂ ಬಾದಾಮಿಯಲ್ಲೇ ನಿಮಗೆ ಪೂರಕ ವಾತಾವರಣ ಇದೆ. ನಿಮ್ಮನ್ನು ಗೆಲ್ಲಿಸಿಕೊಂಡು ಬರುವ ಜವಾಬ್ದಾರಿ ನಮ್ಮದು ಎಂದು ಹಠ ಹಿಡಿದರು.

ಹೈಕಮಾಂಡ್‌ ಹೇಳಿದೆಡೆ ಸ್ಪರ್ಧೆ:

ಅಂತಿಮವಾಗಿ ಸಿದ್ದರಾಮಯ್ಯ ಅವರು, ಮುಂದೆ ನಮ್ಮ ಸರ್ಕಾರ ಬರುತ್ತದೆ. ನಾನು ಬಾದಾಮಿ ಶಾಸಕನಾಗಿರದಿದ್ದರೂ ಅಭಿವೃದ್ಧಿ ಮಾಡುತ್ತೇನೆ. ಫೆ.26ರ ಬಳಿಕ ನಡೆಯುವ ಸ್ಕ್ರೀನಿಂಗ್‌ ಸಮಿತಿಯಲ್ಲೂ ನಿಮ್ಮ ಒತ್ತಾಯದ ಬಗ್ಗೆ ಹೇಳುತ್ತೇನೆ. ಹೈಕಮಾಂಡ್‌ ಯಾವ ಕ್ಷೇತ್ರದಲ್ಲಿ ಸ್ಪರ್ಧಿಸುವಂತೆ ಹೇಳಿದರೆ ಅಲ್ಲಿಂದ ಸ್ಪರ್ಧಿಸುತ್ತೇನೆ. ಅದು ಕೋಲಾರ ಆಗಿರಬಹುದು, ಬಾದಾಮಿ ಆಗಿರಬಹುದು, ವರುಣ ಆಗಿರಬಹುದು ಅಥವಾ ಬೇರೆಯದ್ದೇ ಕ್ಷೇತ್ರ ಆಗಿರಬಹುದು ಹೈಕಮಾಂಡ್‌ ಹೇಳಿದಂತೆ ನಡೆದುಕೊಳ್ಳುತ್ತೇನೆ ಎಂದು ಸ್ಪಷ್ಟಪಡಿಸಿದರು.

ಬಾದಾಮಿಯಿಂದ ಸ್ಪರ್ಧಿಸಿ: ಸಿದ್ದರಾಮಯ್ಯಗೆ ಹಾಲೆಂಡ್‌ ಕನ್ನಡಿಗನ ಮನವಿ

ವರುಣದಿಂದಲೂ ಒತ್ತಾಯ

ಇದೇ ವೇಳೆ ಹಲವು ವರುಣ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್‌ ಮುಖಂಡರು ಸಹ ಸಿದ್ದರಾಮಯ್ಯ ನಿವಾಸಕ್ಕೆ ಆಗಮಿಸಿ ವರುಣ ಕ್ಷೇತ್ರದಿಂದ ಸ್ಪರ್ಧಿಸುವಂತೆ ಒತ್ತಾಯಿಸಿದರು ಎಂದು ತಿಳಿದುಬಂದಿದೆ. ಕೋಲಾರ ಹಾಗೂ ಬಾದಾಮಿ ಎರಡೂ ಕ್ಷೇತ್ರಗಳಲ್ಲೂ ಗೆಲುವು ಸುಲಭವಲ್ಲ. ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಸಂಚರಿಸಬೇಕಾಗಿರುವ ನೀವು ವರುಣದಿಂದ ಸ್ಪರ್ಧಿಸುವುದೇ ಒಳಿತು ಎಂದು ಹೇಳಿದರು ಎನ್ನಲಾಗಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಶಾಲೆಯಿಂದ ಮರಳುತ್ತಿದ್ದ ವೇಳೆ ಬೀದಿ ನಾಯಿ ದಾಳಿ, 5 ವರ್ಷದ LKG ಬಾಲಕಿಗೆ ಗಂಭೀರ ಗಾಯ
ಕರ್ನಾಟಕದಲ್ಲಿ ನಿಮ್ಹಾನ್ಸ್ ಮಾದರಿಯ ಮತ್ತಷ್ಟು ಸಂಸ್ಥೆಗಳು ಅಗತ್ಯ: ಸಚಿವ ಶರಣ ಪ್ರಕಾಶ್ ಪಾಟೀಲ್