ಕೋಟ್ಯಂತರ ವಂಚನೆ: ಕಣ್ವ ಗ್ರೂಪ್ ಎಂಡಿ ಸೆರೆ

Published : Nov 02, 2019, 09:52 AM IST
ಕೋಟ್ಯಂತರ ವಂಚನೆ: ಕಣ್ವ ಗ್ರೂಪ್ ಎಂಡಿ ಸೆರೆ

ಸಾರಾಂಶ

ಗ್ರಾಹಕರಿಗೆ ಬಡ್ಡಿ ಹಾಗೂ ಅಸಲು ಹಿಂದಿರುಗಿಸದೆ ಕೋಟ್ಯಂತರ ರುಪಾಯಿ ವಂಚಿಸಿದ ಆರೋಪದ ಹಿನ್ನೆಲೆಯಲ್ಲಿ ಕಣ್ವ ಸಮೂಹ ಸಂಸ್ಥೆ ನಿರ್ದೇಶಕನನ್ನು ಬಸವೇಶ್ವರ ನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ನಂಜುಂಡಯ್ಯ ಬಂಧಿತ. ಪ್ರಾಥಮಿಕ ಹಂತದಲ್ಲಿ ನಂಜುಂಡಯ್ಯ ಸಂಸ್ಥೆ ವಂಚನೆ ಮಾಡಿರುವುದು ಮೇಲ್ನೋಟಕ್ಕೆ ಕಂಡು ಬಂದ ಹಿನ್ನೆಲೆಯಲ್ಲಿ ಬಂಧಿಸಿ, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ಬೆಂಗಳೂರು(ನ.02): ಗ್ರಾಹಕರಿಗೆ ಬಡ್ಡಿ ಹಾಗೂ ಅಸಲು ಹಿಂದಿರುಗಿಸದೆ ಕೋಟ್ಯಂತರ ರುಪಾಯಿ ವಂಚಿಸಿದ ಆರೋಪದ ಹಿನ್ನೆಲೆಯಲ್ಲಿ ಕಣ್ವ ಸಮೂಹ ಸಂಸ್ಥೆ ನಿರ್ದೇಶಕನನ್ನು ಬಸವೇಶ್ವರ ನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ನಂಜುಂಡಯ್ಯ ಬಂಧಿತ. ಪ್ರಾಥಮಿಕ ಹಂತದಲ್ಲಿ ನಂಜುಂಡಯ್ಯ ಸಂಸ್ಥೆ ವಂಚನೆ ಮಾಡಿರುವುದು ಮೇಲ್ನೋಟಕ್ಕೆ ಕಂಡು ಬಂದ ಹಿನ್ನೆಲೆಯಲ್ಲಿ ಬಂಧಿಸಿ, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ವಂಚನೆಯ ಮೊತ್ತ ಎಷ್ಟು ಎಂಬುದು ತಿಳಿದಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

 ಗಂಟೇಲಿ ಪೊಲೀಸ್ ತುರ್ತು ಸ್ಪಂದನೆ 112ಕ್ಕೆ ಬಂತು 50 ಸಾವಿರ ಕರೆ..!

ರಾಜಾಜಿನಗರದ ವೆಸ್ಟ್ ಆಫ್ ಕಾರ್ಡ್ ರಸ್ತೆಯಲ್ಲಿ ಕಣ್ವ ಸಮೂಹ ಸಂಸ್ಥೆಗಳ ಕೇಂದ್ರ ಕಚೇರಿ ಇದೆ. ಸೌಹಾರ್ದ ಕೋ-ಆಪರೇಟಿವ್ ಸೊಸೈಟಿಯನ್ನು ಕೂಡ ಹೊಂದಿದ್ದಾರೆ. ಸಂಸ್ಥೆಯಲ್ಲಿ ಹಣ ಹೂಡಿಕೆ ಮಾಡಿದರೆ ಶೇ. 12.6ರಷ್ಟು ಬಡ್ಡಿ ನೀಡುವುದಾಗಿ ಗ್ರಾಹಕರಿಗೆ ಆಮಿಷವೊಡ್ಡಲಾಗಿತ್ತು. ಅದರಂತೆ ನೂರಾರು ಮಂದಿ ಸಂಸ್ಥೆಯಲ್ಲಿ ಕೋಟ್ಯಂತರ ರುಪಾಯಿ ಹಣ ಹೂಡಿಕೆ ಮಾಡಿದ್ದಾರೆ. ಕಳೆದ ಎರಡು ತಿಂಗಳಿಂದ ಸಂಸ್ಥೆ ಬಡ್ಡಿ ನೀಡದೆ ಸತಾಯಿಸಿದೆ. ಬಡ್ಡಿ ನೀಡದ ಸಂಸ್ಥೆಯ ಕಚೇರಿ ಎದುರು ಹೂಡಿಕೆದಾರರು ಪ್ರತಿಭಟನೆ ಕೂಡ ನಡೆಸಿದ್ದರು. 20ಕ್ಕೂ ಹೆಚ್ಚು ಮಂದಿ ದೂರು: ಮಂಜು ನಾಥ ನಗರದ ನಿವಾಸಿ ನಿವೃತ್ತ ಉದ್ಯೋಗಿ ಗೋಪಾಲ್(62) ಎಂಬುವರು 2018ರ ಸೆ.11ರಂದು ₹11 ಲಕ್ಷ ಹಾಗೂ 2018 ಜೂ.26ರಂದು ₹5.5 ಲಕ್ಷ ಸೇರಿ ಒಟ್ಟು ₹16.5 ಲಕ್ಷ ಹಣವನ್ನು ಸಂಸ್ಥೆಯಲ್ಲಿ ನಿಶ್ಚಿತ ಠೇವಣಿ ಇಟ್ಟಿದ್ದರು.

ಸುಮನಹಳ್ಳಿ ಮೇಲ್ಸೇತುವೆಯಲ್ಲಿ ಗುಂಡಿ, ವಾಹನ ಸವಾರರೇ ಹುಷಾರ್..!

ಕಂಪನಿ ನಿಯಮದ ಪ್ರಕಾರ ವಾರ್ಷಿಕವಾಗಿ ತನಗೆ ಶೇ.12.6ರಷ್ಟು ಬಡ್ಡಿ ಬರಬೇಕಿತ್ತು. ಆದರೆ ಸಂಸ್ಥೆ ಎರಡು ತಿಂಗಳಿಂದ ಬಡ್ಡಿ ಪಾವತಿಸಿಲ್ಲ. ಅಲ್ಲದೆ ಅಸಲು ಕೂಡ ಪಾವತಿಸಿಲ್ಲ ಎಂದು ಗೋಪಾಲ್, ಬಸವೇಶ್ವರ ನಗರ ಠಾಣೆಗೆ ದೂರು ನೀಡಿದ್ದರು. ಸುಮಾರು 20ಕ್ಕೂ ಹೆಚ್ಚು ಮಂದಿ ವಂಚನೆ ಬಗ್ಗೆ ದೂರು ನೀಡಿದ್ದಾರೆ. ಆರೋಪಿ ನಂಜುಂಡಯ್ಯ ಅವರನ್ನು ಬಂಧಿಸಿ, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಸಾಲದ ಹಣ ಇನ್ನಿತರೆ ಕ್ಷೇತ್ರದಲ್ಲಿ ಹೂಡಿಕೆ ಮಾಡಲಾಗಿರುವ ಹಣವನ್ನು ಹೂಡಿಕೆ ಮಾಡಲಾಗಿದೆ ಎಂದು ಹೇಳಿಕೆ ನೀಡಿದ್ದಾರೆ. ಎಷ್ಟು ಮೊತ್ತದ ವಂಚನೆ ಎಂಬುದು ಇನ್ನು ತಿಳಿದು ಬಂದಿಲ್ಲ. ದೂರುಗಳನ್ನು ಸ್ವೀಕರಿಸಿ ಲೆಕ್ಕ ಹಾಕಿದ ಬಳಿಕ ವಂಚನೆಯ ಮೊತ್ತ ತಿಳಿಯಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಸಿಐಡಿಗೆ ಪ್ರಕರಣ ವರ್ಗಾವಣೆ

ಹದಿನೈದು ವರ್ಷಗಳ ಹಿಂದೆ ನಂಜುಂಡಯ್ಯ ಅವರು ಕಣ್ವ ಸಮೂಹ ಸಂಸ್ಥೆಯನ್ನು ಹುಟ್ಟು ಹಾಕಿದ್ದರು. ಕೋ ಆಪರೇಟಿವ್ ಸೊಸೈಟಿ, ರಿಯಲ್ ಎಸ್ಟೇಟ್, ಆಸ್ಪತ್ರೆ ಹಾಗೂ ಗಾರ್ಮೆಂಟ್ಸ್ ಸೇರಿದಂತೆ ಇತರೆ ಕ್ಷೇತ್ರಗಳ ಮೇಲೆ ಹಣ ಹೂಡಿಕೆ ಮಾಡಿದ್ದಾರೆ. ಇದರಲ್ಲಿ ಹೆಚ್ಚು ರಿಯಲ್ ಎಸ್ಟೇಟ್ ಸಂಸ್ಥೆ ಮೇಲೆ ಹೂಡಿಕೆ ಮಾಡಿದ್ದಾರೆ. ಹತ್ತು ಕೋಟಿಗೂ ಹೆಚ್ಚು ವಂಚನೆ ಆಗಿದ್ದರೆ, ಪ್ರಕರಣ ಸಿಐಡಿಗೆ ವರ್ಗಾವಣೆ ಆಗಲಿದೆ. ವಂಚನೆಯ ಮೊತ್ತ ಎಷ್ಟು ಎಂಬುದು ತಿಳಿದು ಬಂದಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಸ್ಪಷ್ಟನೆ ನೀಡಿದ ಕಣ್ವ

ಸಾರ್ವಜನಿಕರು ಹಣ ಹಿಂದಿರುಗಿಸುವಂತೆ ಸಂಸ್ಥೆ ಬಳಿ ಪ್ರತಿಭಟನೆ ನಡೆಸುತ್ತಿದ್ದಂತೆ ಕಣ್ವ ಸಂಸ್ಥೆ ಸ್ಪಷ್ಟನೆ ನೀಡಿದ್ದು, ಹೂಡಿಕೆದಾರರು ಯಾವುದೇ ಆತಂಕಪಡುವ ಅಗತ್ಯವಿಲ್ಲ. ಹಣವನ್ನು ಶೀಘ್ರವೇ ಹಿಂದಿರುಗಿಸಲಾಗುವುದು. ಸಂಸ್ಥೆಯಿಂದ ಸಾಲ ಪಡೆದವರಿಂದ ವಾಪಸ್ ಪಡೆಯುವುದು ತಡವಾಗಿದೆ. ಸಂಸ್ಥೆ ಕಾನೂನು ರೀತಿಯಲ್ಲಿ ಹಣ ವಸೂಲಿಗೆ ಮುಂದಾದರೆ ಸಾಲ ಪಡೆದ ವರು ಮನೆ-ಮಠ ಕಳೆದುಕೊಳ್ಳಲಿದ್ದಾರೆ. ಸದಸ್ಯರಿಗೆ ಸಾಲ ವಾಪಸ್ ನೀಡಲು ಕಾಲಾವಕಾಶ ನೀಡಲಾಗಿದೆ. ಅಲ್ಲದೆ, ನಿಶ್ಚಿತ ಠೇವಣಿ ಇಟ್ಟುಕೊಂಡವರು ನಿಗದಿತ ಸಮಯ ಮುಗಿಯುವ ಮುನ್ನವೇ ಹಣ ಹಿಂದಿರುಗಿಸುವಂತೆ ಕೇಳುತ್ತಿದ್ದಾರೆ. ಸ್ವಲ್ಪ ಸಮಯ ನೀಡಿದರೆ ಹಣ ವಾಪಸ್ ನೀಡಲಾಗುವುದು ಎಂದು ಹೇಳಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಕಾರಲ್ಲ, ಸರ್ಕಾರ ಕೆಲಸಕ್ಕೆ ಓಡಾಡಲು ಹೆಲಿಕಾಪ್ಟರ್, ವಿಮಾನ ಖರೀದಿಗೆ ಡಿಕೆಶಿ ನೇತೃತ್ವದಲ್ಲಿ ಸಭೆ
ರಾಜ್ಯದಲ್ಲಿ 2.84 ಲಕ್ಷ ಸರ್ಕಾರಿ ಹುದ್ದೆ ಖಾಲಿ: 24,300 ಹುದ್ದೆ ಭರ್ತಿಗೆ ಅಂಕಿತ! ಇಲಾಖಾವಾರು ಮಾಹಿತಿ ಇಲ್ಲಿದೆ!