
ಬೆಂಗಳೂರು: ರಾಜ್ಯದಲ್ಲಿ ನಡೆದ ಭ್ರಷ್ಟಾಚಾರ ಪ್ರಕರಣಗಳ ತನಿಖೆಗೆ ನೇಮಿಸಲಾದ ನಿವೃತ್ತ ನ್ಯಾಯಮೂರ್ತಿ ನಾಗಮೋಹನ್ ದಾಸ್ ಅವರ ನೇತೃತ್ವದ ವಿಚಾರಣಾ ಆಯೋಗದ ಕಾರ್ಯ ಮುಕ್ತಾಯ ಹಂತ ತಲುಪಿರುವ ನಡುವೆಯೇ, ಸರ್ಕಾರದ ನಿರ್ಲಕ್ಷ್ಯ ನಿಲುವಿಗೆ ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಸೆಪ್ಟೆಂಬರ್ 23, 2025ರಂದು ಆಯೋಗದ ಕಾರ್ಯವನ್ನು ಮುಕ್ತಾಯಗೊಳಿಸುವುದಾಗಿ ಅವರು ಅಧಿಕೃತವಾಗಿ ಪತ್ರ ಬರೆದಿದ್ದರು. ಆದರೆ ಅವರ ಅಸಮಾಧಾನದ ಬೆನ್ನಲ್ಲೇ ಸರ್ಕಾರವು ಆಯೋಗದ ಅವಧಿಯನ್ನು ಮತ್ತೊಂದು ತಿಂಗಳ ಕಾಲ ವಿಸ್ತರಿಸಿದೆ. ಇದರಿಂದಾಗಿ ಆಯೋಗವು ಅಕ್ಟೋಬರ್ 1ರಿಂದ ಅಕ್ಟೋಬರ್ 30ರವರೆಗೆ ಮುಂದುವರಿಯಲಿದೆ.
ಆಯೋಗದ ಪೀಠೋಪಕರಣಗಳು ಮತ್ತು ವಿವಿಧ ಸಾಮಗ್ರಿಗಳನ್ನು ಹಸ್ತಾಂತರಿಸುವುದು, ತನಿಖಾ ವರದಿಗೆ ಸಂಬಂಧಿಸಿದ ಗೌಪ್ಯ ಕಡತಗಳನ್ನು ಸರ್ಕಾರಕ್ಕೆ ಒಪ್ಪಿಸುವುದು ಇನ್ನೂ ಬಾಕಿ ಉಳಿದಿದೆ. ಅಲ್ಲದೇ ಕೆಲವು ಅಗತ್ಯ ಸಿಬ್ಬಂದಿಗಳೊಂದಿಗೆ ಗೌರವಾನ್ವಿತ ನ್ಯಾಯಮೂರ್ತಿ ಹಾಗೂ ಸದಸ್ಯ ಕಾರ್ಯದರ್ಶಿಗಳು ಕಾರ್ಯ ಮುಗಿಸುವ ಅವಶ್ಯಕತೆ ಇರುವುದು ಕಾರಣವಾಗಿ ಅವಧಿ ವಿಸ್ತರಣೆಯ ಆದೇಶ ಹೊರಬಂದಿದೆ. ನಾರಾಯಣಪುರ ಉಪ/ಸೀಳು ಕಾಲುವೆ ಸೇರಿದಂತೆ 40% ಕಮಿಷನ್ ಆರೋಪಗಳಿಗೆ ಸಂಬಂಧಿಸಿದ ಗೌಪ್ಯ ಕಡತಗಳ ಹಸ್ತಾಂತರವೂ ಬಾಕಿಯೇ ಉಳಿದಿದೆ.
ಆದರೆ, ನಾಗಮೋಹನ್ ದಾಸ್ ಅವರ ಅಸಮಾಧಾನಕ್ಕೆ ನಿಜವಾದ ಕಾರಣ ಸರ್ಕಾರದ ಕ್ರಮವಾಗಿದೆ. 2019ರ ಜುಲೈ 26ರಿಂದ 2023ರ ಮಾರ್ಚ್ 31ರವರೆಗೆ ನಡೆದ ಭ್ರಷ್ಟಾಚಾರ ಪ್ರಕರಣಗಳ ಕುರಿತು ಸಮಗ್ರ ತನಿಖೆ ನಡೆಸಿ ಅವರು ಈಗಾಗಲೇ ಸರ್ಕಾರಕ್ಕೆ ವರದಿ ಸಲ್ಲಿಸಿದ್ದರು. ಆದರೆ, ಆ ವರದಿಯ ಮೇಲೆ ಯಾವುದೇ ಕ್ರಮ ಕೈಗೊಳ್ಳದೆ ಸರ್ಕಾರ ಮತ್ತೊಂದು ಸಮಿತಿಯನ್ನು ರಚಿಸಿರುವುದು ಪ್ರಶ್ನೆಗಳಿಗೆ ಕಾರಣವಾಗಿದೆ.
ಡಾ. ಸುಧೀರ್ ಕೃಷ್ಣ (ನಿವೃತ್ತ ಐಎಎಸ್ ಅಧಿಕಾರಿ) ಅವರ ಅಧ್ಯಕ್ಷತೆಯಲ್ಲಿ ಹೊಸ ಸಮಿತಿಯನ್ನು ರಚಿಸಿ, ನಾಗಮೋಹನ್ ದಾಸ್ ಸಲ್ಲಿಸಿದ್ದ ವರದಿಯನ್ನು ಅಧ್ಯಯನ ಮಾಡಲು ಸರ್ಕಾರ ಮುಂದಾಗಿದೆ. ಸಮಿತಿಯ ಮೇಲೆ ಸಮಿತಿ ರಚನೆ ಮಾಡುವುದು ಕಾಲಹರಣದ ಉದ್ದೇಶವೇ ಹೊರತು, ಭ್ರಷ್ಟಾಚಾರದ ವಿರುದ್ಧ ನಿಜವಾದ ರಾಜಕೀಯ ಇಚ್ಛಾಶಕ್ತಿ ಇಲ್ಲ ಎಂದು ನ್ಯಾಯಮೂರ್ತಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ನಾಗಮೋಹನ್ ದಾಸ್ ಅವರ ನೇತೃತ್ವದ ಆಯೋಗವು ನಿರ್ದಿಷ್ಟ ಕಾಮಗಾರಿಗಳಲ್ಲಿ ನಡೆದ ಲಂಚ ಮತ್ತು ಭ್ರಷ್ಟಾಚಾರದ ಪ್ರಕರಣಗಳನ್ನು ಬೆಳಕಿಗೆ ತಂದಿದ್ದರೂ, ಸರ್ಕಾರ ಕ್ರಮ ಕೈಗೊಳ್ಳದಿರುವುದು ಟೀಕೆಗೆ ಗ್ರಾಸವಾಗಿದೆ. “ಭ್ರಷ್ಟಾಚಾರದ ಬಗ್ಗೆ ನ್ಯಾಯಮೂರ್ತಿಯೇ ವರದಿ ಕೊಟ್ಟಿದ್ದರೂ, ಅದರ ಮೇಲೆ ಕ್ರಮಕೈಗೊಳ್ಳದೆ ಮತ್ತೊಂದು ಸಮಿತಿ ಮಾಡಿರುವ ಸರ್ಕಾರದ ನಿಲುವು ಜನರಲ್ಲಿ ಅನುಮಾನ ಹುಟ್ಟಿಸಿದೆ” ಎಂಬ ಅಭಿಪ್ರಾಯ ಹೊರಬಂದಿದೆ.
ಆಯೋಗದ ವರದಿ ಈಗಾಗಲೇ ಸರ್ಕಾರದ ಕೈಯಲ್ಲಿರುವುದರಿಂದ, ಅದು ಜಾರಿಗೆ ಬರುವುದೇ ಅಥವಾ ಮತ್ತೊಂದು ಸಮಿತಿಯ ವರದಿಯ ಹೆಸರಿನಲ್ಲಿ ಕಾಲಹರಣವಾಗುವುದೇ ಎಂಬ ಪ್ರಶ್ನೆ ಮುಂದಿನ ದಿನಗಳಲ್ಲಿ ಸ್ಪಷ್ಟವಾಗಲಿದೆ. ನಾಗಮೋಹನ್ ದಾಸ್ ಅವರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಕಾರಣ, ಈ ವಿಷಯವು ಸರ್ಕಾರಕ್ಕೆ ರಾಜಕೀಯವಾಗಿ ತಲೆನೋವು ತರುವ ಸಾಧ್ಯತೆಯಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ