Mekedatu Politics: ‘ಕೈ’ ಪಾದಯಾತ್ರೆಗೆ ಸಡ್ಡು: ಜೆಡಿಎಸ್‌ನಿಂದ ಜಲಯಾತ್ರೆ

By Kannadaprabha NewsFirst Published Jan 8, 2022, 4:18 AM IST
Highlights

*   ರಾಜ್ಯದ 15 ದಿಕ್ಕಿನಲ್ಲಿ ಗಂಗಾರಥ ಸಂಚಾರ
*   ಜ.26ರಿಂದ ‘ಜನತಾ ಜಲಧಾರೆ’ ಕಾರ್ಯಕ್ರಮ
*   51 ಸ್ಥಳಗಳಲ್ಲಿ ನದಿಗಳ ನೀರು ಸಂಗ್ರಹ
 

ಬೆಂಗಳೂರು(ಜ.08): ಮೇಕೆದಾಟು(Mekedatu) ಯೋಜನೆ ಜಾರಿಗೊಳಿಸುವಂತೆ ಒತ್ತಾಯಿಸಿ ಕಾಂಗ್ರೆಸ್‌(Congress) ಪಕ್ಷ ಪಾದಯಾತ್ರೆ(Padayatra) ಹಮ್ಮಿಕೊಂಡ ಬೆನ್ನಲ್ಲೇ ಅದಕ್ಕೆ ಪ್ರತಿಯಾಗಿ ಜೆಡಿಎಸ್‌(JDS) ಇದೇ ತಿಂಗಳ 26ರಿಂದ ‘ಜನತಾ ಜಲಧಾರೆ’(Janata Jalayatra) ಎಂಬ ವಿಶೇಷ ಕಾರ್ಯಕ್ರಮ ಆಯೋಜಿಸಿದೆ.

ರಾಜ್ಯದ(Karnataka) ಎಲ್ಲಾ ಭಾಗಗಳಿಗೂ ನೀರು ಒದಗಿಸುವ, ಲಭ್ಯ ನೀರನ್ನು ಸಮರ್ಪಕವಾಗಿ ಬಳಸಿಕೊಳ್ಳುವ ಮತ್ತು ನೆನೆಗುದಿಗೆ ಬಿದ್ದಿರುವ ಎಲ್ಲಾ ನೀರಾವರಿ ಯೋಜನೆಗಳನ್ನು(Irrigation Projects) ಜಾರಿ ಮಾಡುವ ಮಹಾಸಂಕಲ್ಪದೊಂದಿಗೆ ಜೆಡಿಎಸ್‌ ಪಕ್ಷವು ಈ ಕಾರ್ಯಕ್ರಮ ಆಯೋಜಿಸಿದೆ.

Mekedatu Politics: 'ಪಾದಯಾತ್ರೆಗೂ ಮುನ್ನವೇ ಬೊಮ್ಮಾಯಿ ಸರ್ಕಾರಕ್ಕೆ ನಡುಕ'

ಶುಕ್ರವಾರ ಪಕ್ಷದ ಕಚೇರಿ ಜೆ.ಪಿ.ಭವನದಲ್ಲಿ ಜನತಾ ಜಲಧಾರೆಗೆ ಹೊರಡುವ ಗಂಗಾ ರಥವನ್ನು ಜೆಡಿಎಸ್‌ ವರಿಷ್ಠ ಎಚ್‌.ಡಿ.ದೇವೇಗೌಡ(HD Devegowda) ಮತ್ತು ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ(HD Kumaraswamy) ಅನಾವರಣಗೊಳಿಸಿದರು. ಇದೇ ವೇಳೆ ಜನತಾ ಜಲಧಾರೆಯ ಲಾಂಛನ ಬಿಡುಗಡೆ ಮಾಡಲಾಯಿತು.

ಜ.23ರಂದು ರಾಮನಗರದ ಚಾಮುಂಡೇಶ್ವರಿ ಅಮ್ಮನವರ ದೇಗುಲದಿಂದ ರಾಜ್ಯದ 15 ದಿಕ್ಕುಗಳಿಗೆ ಹೊರಡುವ 15 ಗಂಗಾರಥಗಳಿಗೆ (ವಾಹನಗಳು) ಚಾಲನೆ ನೀಡಲಾಗುತ್ತದೆ. 26ರಂದು ವಾಹನಗಳಲ್ಲಿ ಅಳವಡಿಸಿರುವ ಕಲಶಗಳ ಮೂಲಕ ಪೂರ್ವ ನಿಗದಿ ಮಾಡಿರುವ ಸ್ಥಳಗಳಲ್ಲಿ ಬೆಳಗ್ಗೆ 9 ಗಂಟೆಗೆ ಜನತಾ ಜಲಧಾರೆ ಕಾರ್ಯಕ್ರಮ ಆರಂಭವಾಗಲಿದೆ.

ಕಾವೇರಿ, ಕಬಿನಿ, ಮೇಕೆದಾಟು, ಹೇಮಾವತಿ, ನೇತ್ರಾವತಿ, ಕುಮಾರಧಾರ, ತುಂಗಭದ್ರಾ, ಶರಾವತಿ, ಅಘನಾಶಿನಿ, ಕೃಷ್ಣಾ, ಘಟಪ್ರಭಾ, ಮಲಪ್ರಭಾ, ಭೀಮಾ, ಅರ್ಕಾವತಿ, ಉತ್ತರ ಪಿನಾಕಿನಿ ಸೇರಿದಂತೆ ವಿವಿಧೆಡೆ ಜಲ ಸಂಗ್ರಹ ಮಾಡಲಾಗುವುದು. ಜಲ ಸಂಗ್ರಹಿಸುವ ದಿನದಂದು ರಾಜ್ಯ ವಿವಿಧೆಡೆ ಜೆಡಿಎಸ್‌ ವರಿಷ್ಠ ಎಚ್‌.ಡಿ.ದೇವೇಗೌಡ, ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ, ಪಕ್ಷದ ರಾಜ್ಯಾಧ್ಯಕ್ಷ ಎಚ್‌.ಕೆ.ಕುಮಾರಸ್ವಾಮಿ, ಪಕ್ಷದ ಮುಖಂಡರು ಭಾಗವಹಿಸಲಿದ್ದಾರೆ.

51 ಕಡೆ ಜಲ ಸಂಗ್ರಹ:

ಜಲಧಾರೆ ಕಾರ್ಯಕ್ರಮದಲ್ಲಿ ಒಟ್ಟು 51 ಸ್ಥಳದಲ್ಲಿ ಪವಿತ್ರ ನದಿಗಳ ಜಲ(Water) ಸಂಗ್ರಹ ಮಾಡಲಾಗುತ್ತದೆ. ರಾಜ್ಯದ 180 ವಿಧಾನಸಭಾ ಕ್ಷೇತ್ರಗಳು, 140 ತಾಲೂಕು ಕೇಂದ್ರದಲ್ಲಿ ಈ ಕಲಶಗಳು ಹಾದು ಹೋಗಲಿದೆ.
ಎಲ್ಲೆಡೆ ಜಲ ತುಂಬಿದ ಕಲಶಗಳ ಮೆರವಣಿಗೆ, ಕಲಾ ತಂಡಗಳ ಮೆರಗು, ಮಂಗಳವಾದ್ಯಗಳ ಮೇಳ, ಕಲಶಗಳೊಂದಿಗೆ ಮಹಿಳೆಯರ ನಡಿಗೆ ನಡೆಯಲಿದೆ. ಪ್ರತಿದಿನ 15 ಕಡೆ ಇಂತಹ ಕಾರ್ಯಕ್ರಮಗಳು ನಡೆಯಲಿವೆ. ರಾಜ್ಯ ಉದ್ದಗಲಕ್ಕೂ ಸಾಗಿ 15-20 ದಿನದಲ್ಲಿ ಬೆಂಗಳೂರು(Bengaluru) ತಲುಪುತ್ತವೆ. ಬೆಂಗಳೂರನ್ನು ಪ್ರದಕ್ಷಿಣೆ ಹಾಕುವ ವಾಹನಗಳು ಆ ದಿನ ಸಂಜೆ ಅರಮನೆ ಮೈದಾನದಲ್ಲಿ ಸೇರಲಿವೆ. ನಂತರ ಎರಡು ದಿನದಲ್ಲಿ ಬೃಹತ್‌ ಕಾರ್ಯಕ್ರಮ ನಡೆಯಲಿದೆ. ಸಂಗ್ರಹಿಸಲಾದ ದೊಡ್ಡ ಕಲಶಕ್ಕೆ ತುಂಬಿಸಿ ಗಂಗಾ ಪೂಜೆ, ಗಂಗಾ ಆರತಿ ನೆರವೇರಿಸಲಾಗುತ್ತದೆ.

Congress Padayatra: ಮೇಕೆದಾಟುಗೂ ಮುನ್ನ ಮಹದಾಯಿಗಾಗಿ 'ಕೈ' ಪಾದಯಾತ್ರೆ

ವರ್ಷವಿಡೀ ಗಂಗಾಪೂಜೆ:

ಕಾರ್ಯಕ್ರಮ ಮುಗಿದ ನಂತರ ಪೂಜಿಸಲ್ಪಟ್ಟಿದ್ದ ಪವಿತ್ರ ಜಲವುಳ್ಳ ಕಲಶವನ್ನು ಬೆಂಗಳೂರಿನ ವಿವಿಧೆಡೆಗಳಿಂದ ಮೆರವಣಿಗೆ ಮೂಲಕ ಪಕ್ಷದ ರಾಜ್ಯ ಕಚೇರಿ ಜೆ.ಪಿ.ಭವನಕ್ಕೆ ವಿಧ್ಯುಕ್ತವಾಗಿ ಬರಮಾಡಿಕೊಂಡು ಆ ಕಲಶ ಪ್ರತಿಷ್ಠಾಪನೆ ಮಾಡಲಾಗುವುದು. ಅಂದಿನಿಂದ ಮುಂದಿನ 391 ದಿನಗಳ ಕಾಲ ಗಂಗಾಪೂಜೆ, ಗಂಗಾ ಆರತಿ ನಿರಂತರವಾಗಿ ನಡೆಯಲಿದೆ. ಆ ನಿತ್ಯ ಪೂಜೆಯಲ್ಲಿ ಪಕ್ಷದ ಎಲ್ಲ ಮುಖಂಡರು, ಕಾರ್ಯಕರ್ತರು, ಮಹಿಳಾ ಕಾರ್ಯಕರ್ತರು ಭಾಗವಹಿಸಲಿದ್ದಾರೆ.

ಈ ವೇಳೆ ಮಾತನಾಡಿದ ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ, ನಮಗೆ ಧಾವಂತ ಇಲ್ಲ. ಸೋಂಕು ನಿಯಂತ್ರಣಕ್ಕೆ ಸರ್ಕಾರ ಜಾರಿ ಮಾಡುವ ಎಲ್ಲಾ ನಿಯಮಗಳಿಗೆ ಬದ್ಧರಾಗಿ ಜಲಧಾರೆ ಕಾರ್ಯಕ್ರಮ ನಡೆಸುತ್ತೇವೆ. ಕಾಂಗ್ರೆಸ್‌ ನಾಯಕರಂತೆ ಅನುಮತಿ ಕೊಡದಿದ್ದರೆ ಪ್ರಾಣ ಬಿಡುತ್ತೇವೆ ಎಂದು ನಾವು ಬೆದರಿಕೆ ಹಾಕುವುದಿಲ್ಲ ಎಂದು ಹೇಳಿದರು.

click me!