ಕರ್ನಾಟಕದ ಸರ್ಕಾರಿ ಆಸ್ಪತ್ರೆಗಳಲ್ಲಿ ಜನೌಷಧಿ ಕೇಂದ್ರಕ್ಕೆ ಅವಕಾಶವಿಲ್ಲ: ಸಚಿವ ಪಾಟೀಲ್‌

By Kannadaprabha NewsFirst Published Aug 14, 2024, 11:58 AM IST
Highlights

ಮಾರುಕಟ್ಟೆ ಪ್ರದೇಶಗಳಲ್ಲಿ ಜನೌಷಧಿ ಮಳಿಗೆಗಳು ಇರಲಿ, ನಾನು ಅದಕ್ಕೆ ವಿರೋಧಿಸೋದಿಲ್ಲ. ಆಸ್ಪತ್ರೆಗಳಿದ್ದಲ್ಲೇ ಯಾಕೆ ಇರಬೇಕು? ನಾವು ಬಡವರಿಗೆ ಎಲ್ಲಾ ಔಷಧಿಗಳನ್ನು ಉಚಿತ ಪೂರೈಸುವ ಸಂಕಲ್ಪ ಮಾಡಿದ್ದೇವೆ. ಮತ್ತೆ ಸರ್ಕಾರಿ ಆಸ್ಪತ್ರೆಗಳ ಅಂಗಳದಲ್ಲೇ ಜನೌಷಧಿ ಮಳಿಗೆ ಯಾಕೆ ಬೇಕು? ಎಂದು ಪ್ರಶ್ನಿಸಿದ ವೈದ್ಯಕೀಯ ಶಿಕ್ಷಣ ಸಚಿವ ಡಾ. ಶರಣಪ್ರಕಾಶ ಪಾಟೀಲ್‌ 

ಕಲಬುರಗಿ(ಆ.14):  ರಾಜ್ಯದಲ್ಲಿರುವ ಸರ್ಕಾರಿ ಆಸ್ಪತ್ರೆಗಳಲ್ಲಿ ಜನೌಷಧಿ ಕೇಂದ್ರ ತೆರೆಯಲು ಅವಕಾಶ ಕೊಡೋದಿಲ್ಲವೆಂದು ರಾಜ್ಯ ವೈದ್ಯಕೀಯ ಶಿಕ್ಷಣ ಸಚಿವ ಡಾ. ಶರಣಪ್ರಕಾಶ ಪಾಟೀಲ್‌ ಹೇಳಿದ್ದಾರೆ.

ಇಲ್ಲಿನ ನಿರ್ಮಾಣ ಹಂತದಲ್ಲಿರುವ ಜಯದೇವ ಹೃದ್ರೋಗ ಸಂಸ್ಥೆಯ ಕಟ್ಟಡ ಕಾಮಗಾರಿ ಸ್ಥಳಕ್ಕೆ ಮಂಗಳವಾರ ಭೇಟಿ ನೀಡಿ ಪರಿಶೀಲನೆ ನಡಸಿದ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಾರುಕಟ್ಟೆ ಪ್ರದೇಶಗಳಲ್ಲಿ ಜನೌಷಧಿ ಮಳಿಗೆಗಳು ಇರಲಿ, ನಾನು ಅದಕ್ಕೆ ವಿರೋಧಿಸೋದಿಲ್ಲ. ಆಸ್ಪತ್ರೆಗಳಿದ್ದಲ್ಲೇ ಯಾಕೆ ಇರಬೇಕು? ನಾವು ಬಡವರಿಗೆ ಎಲ್ಲಾ ಔಷಧಿಗಳನ್ನು ಉಚಿತ ಪೂರೈಸುವ ಸಂಕಲ್ಪ ಮಾಡಿದ್ದೇವೆ. ಮತ್ತೆ ಸರ್ಕಾರಿ ಆಸ್ಪತ್ರೆಗಳ ಅಂಗಳದಲ್ಲೇ ಜನೌಷಧಿ ಮಳಿಗೆ ಯಾಕೆ ಬೇಕು? ಎಂದು ಪ್ರಶ್ನಿಸಿದರು.

Latest Videos

ಅನ್ನ ಭಾಗ್ಯ ಅಕ್ಕಿ ಹೈದರಾಬಾದ್‌ಗೆ ಮಾರಾಟ; ಮಲ್ಲಿಕಾರ್ಜುನ ಖರ್ಗೆ ತವರಲ್ಲಿ ಬಡಜನರಿಗೆ ಬರೆ!

ಸರ್ಕಾರಿ ಆಸ್ಪತ್ರೆಗಳ ಅಂಗಳದಲ್ಲಿ ಪ್ರಧಾನ ಮಂತ್ರಿ ಜನೌಷಧಿ ಕೇಂದ್ರಗಳಿಗೆ ಅವಕಾಶ ನೀಡೋದಿಲ್ಲವೆಂಬ ಸರ್ಕಾರದ ಈ ನಿಲುವಿನಿಂದಾಗಿ ಮತ್ತೆ ಕೇಂದ್ರ ಮತ್ತು ರಾಜ್ಯ ಸರ್ಕಾರದ ನಡುವೆ ಈ ವಿಚಾರದಲ್ಲೇ ತಿಕ್ಕಾಟ ಶುರುವಾಗುವ ಸಾಧ್ಯತೆಗಳು ಅಧಿಕವಾಗಿವೆ. ಸರ್ಕಾರಿ ಆಸ್ಪತ್ರೆಗಳಲ್ಲಿ ಔಷಧಿ ಮಾರಾಟ ಮಳಿಗೆ ಬೇಡ ಎನ್ನುವುದು ನನ್ನ ಖಡಕ್‌ ನಿಲುವು. ಈ ಹಿಂದೆಯೂ ನಾನು ಮಂತ್ರಿಯಾಗಿದ್ದಾಗ ಇದಕ್ಕೆ ಅವಕಾಶ ಕೊಟ್ಟಿರಲಿಲ್ಲ, ಈಗಲೂ ಇದಕ್ಕೆ ಅವಕಾಶ ನೀಡಲಾರೆ ಎಂದರು.

ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಭ್ರಷ್ಟಾಚಾರದಲ್ಲಿ ಮುಳುಗಿದೆ: ಮಾಜಿ ಸಂಸದ ಉಮೇಶ್ ಜಾಧವ್

ನಮ್ಮಲ್ಲಿಯೇ ಎಲ್ಲಾ ಔಷಧಿಗಳು ಸಂಪೂರ್ಣ ಉಚಿತವಾಗಿ ದೊರೆಯುವಾಗ ಖರೀದಿಸುವ, ಮಾರಾಟದ ಮಾತೇಕೆ? ನಮ್ಮಲ್ಲಿ ಸಿಗದಿರುವ ಔಷಧಿಗಳು ಖರೀದಿಸಬಹುದು ಎನ್ನುವ ಮಾತೇ ಇಲ್ಲ. ನಮ್ಮಲ್ಲಿಯೇ ಎಲ್ಲಾ ರೀತಿಯ ಔಷಧಿಗಳು ಉಚಿತವಾಗಿ ಸಿಗುತ್ತವೆ. ಹಾಗೆ ಸಿಗುವಂತೆಯೇ ಮಾಡುತ್ತೇವೆ. ಸರ್ಕಾರಿ ಆಸ್ಪತ್ರೆ ವೈದ್ಯರು ಒಂದೇ ಒಂದು ಔಷಧಿ ಚೀಟಿ ಬರೆದು ಕೊಡುವಂತಿಲ್ಲ ಎಂದರು.

ಜನೌಷಧಿ ಕೇಂದ್ರದ ಮಳಿಗೆಗಳನ್ನು ಬೇಕಾದ್ರೆ ಮಾರ್ಕೆಟ್‌ಗಳಲ್ಲಿ ಹಾಕಿಕೊಳ್ಳಲಿ. ಈ ವಿಚಾರದಲ್ಲಿ ರಾಜಕೀಯದ ಪ್ರಶ್ನೆಯೇ ಇಲ್ಲ. ಅಂತಹ ರಾಜಿ ಮಾಡಿಕೊಳ್ಳುವ ಚಿಲ್ಲರೆ ವ್ಯಕ್ತಿ ನಾನಲ್ಲ ಎಂದು ವೈದ್ಯಕೀಯ ಶಿಕ್ಷಣ ಸಚಿವರು ಸ್ಪಷ್ಟಪಡಿಸಿದರು.

click me!