
ಬೆಂಗಳೂರು (ಜ.8) : ವಿದ್ಯಾರ್ಥಿಗಳು ಶಾಲಾ ಶೌಚಾಲಯ ಸ್ವಚ್ಛಗೊಳಿಸುವುದು ತಪ್ಪಲ್ಲ ಎಂದು ಸ್ಪೀಕರ್ ಯು.ಟಿ.ಖಾದರ್ ಅವರು ನೀಡಿರುವ ಹೇಳಿಕೆ ಈಗ ಶಿಕ್ಷಕರು ಹಾಗೂ ಸಾರ್ವಜನಿಕ ವಲಯದಲ್ಲಿ ಹೆಚ್ಚು ಚರ್ಚೆಗೆ ಒಳಗಾಗಿದೆ.
ಸ್ಪೀಕರ್ ಹೇಳಿಕೆಯನ್ನು ಸ್ವಾಗತಿಸಿರುವ ಶಿಕ್ಷಕರ ವಲಯ, ಶಾಲೆಗಳಿಗೆ ಡಿ ಗ್ರೂಪ್ ನೌಕರರನ್ನೂ ನೀಡದೆ, ಸೂಕ್ತ ಅನುದಾನವನ್ನೂ ಒದಗಿಸದೆ ಶಾಲಾ ಶೌಚ ಸ್ವಚ್ಛತೆ ವಿಚಾರದಲ್ಲಿ ತಮ್ಮದಲ್ಲದ ತಪ್ಪಿಗೆ ಶಿಕ್ಷಕರು ಅಮಾನತು, ಬಂಧನದಂತಹ ಶಿಕ್ಷೆಗೆ ಗುರಿಯಾಗುತ್ತಿದ್ದಾರೆ. ಈ ವಿಚಾರವನ್ನು ಸ್ಪೀಕರ್ ಅವರು ಸ್ವಯಂಪ್ರೇರಿತವಾಗಿ ಸರ್ಕಾರದ ಗಮನಕ್ಕೆ ತರಬೇಕು. ಅಥವಾ ಮುಂದಿನ ವಿಧಾನಸಭೆ ಅಧಿವೇಶನದಲ್ಲಿ ಸದನದಲ್ಲಿ ಚರ್ಚೆಗೆ ಅವಕಾಶ ನೀಡಿ ಸ್ಪಷ್ಟ ಅಭಿಪ್ರಾಯ ಪಡೆಯಲು ಕ್ರಮ ವಹಿಸಬೇಕೆಂದು ಸಾಮಾಜಿಕ ಜಾಲತಾಣದಲ್ಲಿ ಮನವಿ ಮಾಡಿದ್ದಾರೆ.
ಶೌಚಕ್ಕೂ ಸರತಿ ಸಾಲಿನಲ್ಲಿ ನಿಲ್ಲುವ ಕನ್ನಡ ಶಾಲೆಯ ಮಕ್ಕಳು!
ಇದೇ ವಿಷಯದ ಬಗ್ಗೆ ಸಾರ್ವಜನಿಕ ವಲಯದಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಸ್ಪೀಕರ್ ಹೇಳಿಕೆಗೆ ಯಾವುದೇ ವಿರೋಧ ವ್ಯಕ್ತವಾಗದೆ ಇದ್ದರೂ ರಾಜಕಾರಣಿಗಳು, ಅಧಿಕಾರಿಗಳು ಕೂಡ ತಿಂಗಳಲ್ಲಿ ನಿಗದಿತ ದಿನಗಳಂದು ಶಾಲಾ ಶೌಚಾಲಯ ಸ್ವಚ್ಛಗೊಳಿಸಿ ವಿದ್ಯಾರ್ಥಿಗಳು, ಶಿಕ್ಷಕರು, ಸಾರ್ವಜನಿಕರಿಗೆ ಮಾದರಿಯಾಗಬೇಕು ಎಂದು ಆಗ್ರಹಿಸಿದ್ದಾರೆ.
ಬಿಇಒ, ಡಿಡಿಪಿಐ ಹಂತದಿಂದ ಇಲಾಖೆಯ ಉನ್ನತ ಅಧಿಕಾರಿಗಳವರೆಗೂ ತಿಂಗಳಲ್ಲಿ ಒಂದು ದಿನ ಸಮೀಪದ ಶಾಲೆಗಳಲ್ಲಿ ಹಾಗೂ ಶಾಸಕರು, ಸಂಸದರು, ಜಿಲ್ಲಾ ಉಸ್ತುವಾರಿ ಸಚಿವರುಗಳು ಕೂಡ ತಮ್ಮ ಕ್ಷೇತ್ರ, ಜಿಲ್ಲೆಗಳ ಒಂದೊಂದು ಶಾಲೆಯಲ್ಲಿ ಶೌಚ ಸ್ವಚ್ಛಗೊಳಿಸಿ ಸಾಮಾಜಿಕವಾಗಿ ಮಾದರಿಯಾಗಲಿ ಎಂದು ಜಾಲತಾಣದಲ್ಲಿ ಒತ್ತಾಯಿಸಿರುವುದು ಕಂಡುಬಂದಿದೆ.
ಮಕ್ಕಳಿಂದ ಶೌಚಾಲಯ ತೊಳಿಸಿದರೆ ಎಫ್ಐಆರ್: ಎಂಟು ಅಂಶಗಳ ಸುತ್ತೋಲೆಯಲ್ಲೇನಿದೆ?
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ