Latest Videos

ರಾಜ್ಯದ 17 ಜಿಲ್ಲೆಗಳಿಗೆ ಎರಡು ದಿನ ಯೆಲ್ಲೋ ಅಲರ್ಟ್ ಘೋಷಿಸಿದ ಹವಾಮಾನ ಇಲಾಖೆ

By Sathish Kumar KHFirst Published May 24, 2024, 4:57 PM IST
Highlights

ರಾಜ್ಯದಲ್ಲಿ ಮುಂಗಾರು ಪೂರ್ವ ಮಳೆಯ ಪ್ರಮಾಣ ಶೇ.26% ಹೆಚ್ಚಳವಾಗಿದೆ ಎಂದು ಭಾರತೀಯ ಹವಾಮಾನ ಇಲಾಖೆಯು (IMD) ವರದಿ ಮಾಡಿದೆ. ಜೊತೆಗೆ, ಮುಂದಿನ 2 ದಿನಗಳ ಕಾಲ 17 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಣೆ ಮಾಡಿದೆ.

ಬೆಂಗಳೂರು (ಮೇ 24): ಕರ್ನಾಟಕದಲ್ಲಿ ಮುಂಗಾರು ಪೂರ್ವ ಮಳೆಯ ಪ್ರಮಾಣ ಶೇ.26% ಹೆಚ್ಚಳವಾಗಿದೆ ಎಂದು ಭಾರತೀಯ ಹವಾಮಾನ ಇಲಾಖೆಯು (IMD) ವರದಿ ಮಾಡಿದೆ. ಕರಾವಳಿ ಮತ್ತು ಉತ್ತರ ಪ್ರದೇಶಗಳಲ್ಲಿ ವಿವಿಧ ಮಳೆಯಾಗಿದೆ. ಆದರೆ, ಕೆಲವು ಜಿಲ್ಲೆಗಳು ಕೊರತೆಯನ್ನು ಎದುರಿಸುತ್ತಿವೆ. ಮೇ 24-25 ರಂದು ಹಲವಾರು ಜಿಲ್ಲೆಗಳಿಗೆ ಹಳದಿ ಅಲರ್ಟ್ ಇರುತ್ತದೆ.

ಭಾರತೀಯ ಹವಾಮಾನ ಇಲಾಖೆ (IMD) ಕರ್ನಾಟಕದಾದ್ಯಂತ ಮುಂಗಾರು ಪೂರ್ವ ಮಳೆಯಲ್ಲಿ ಗಮನಾರ್ಹ ಹೆಚ್ಚಳವನ್ನು ವರದಿ ಮಾಡಿದೆ. ಇದು ಸಾಮಾನ್ಯ ವರ್ಷಗಳಿಗೆ ಹೋಲಿಕೆ ಮಾಡಿದಲ್ಲಿ ಬರೋಬ್ಬರಿ ಶೇ.26% ನಷ್ಟು ಏರಿಕೆಯಾಗಿದೆ. ಸಾಮಾನ್ಯವಾಗಿ ಮಾರ್ಚ್‌ನಿಂದ ಮೇ ಅಂತ್ಯದವರೆಗೆ ರಾಜ್ಯದಲ್ಲಿ ಸುಮಾರು 8.9 ಸೆಂ.ಮೀ ಮಳೆಯಾಗುತ್ತದೆ. ಆದರೆ, ಈ ವರ್ಷ ಮಾರ್ಚ್ , ಏಪ್ರಿಲ್ ನಲ್ಲಿ ಒಣಹವೆ ಇದ್ದರೂ ಮೇ 22ರ ವೇಳೆಗೆ 11.3 ಸೆಂ.ಮೀ. ಮಳೆಯಾಗಿದೆ. ತಿಂಗಳಾಂತ್ಯಕ್ಕೆ ಮುನ್ನ ಹೆಚ್ಚಿನ ಮಳೆಯಾಗುವ ನಿರೀಕ್ಷೆ ಇದೆ. ಇನ್ನು ಮೇ 24-25 ರಂದು ಹಲವಾರು ಜಿಲ್ಲೆಗಳಿಗೆ ಹಳದಿ ಅಲರ್ಟ್ ಘೋಷಣೆ ಮಾಡಿದೆ.

ಕೊಡಗಿಗೆ ಮತ್ತೆ ಕಾದಿದೆಯಾ ಭೂಕುಸಿತದ ಆತಂಕ..! ಜಿಯಾಲಜಿಕಲ್ ಸರ್ವೆ ಆಫ್ ಇಂಡಿಯಾದಿಂದ ಶಾಕಿಂಗ್ ವರದಿ !

ಕರಾವಳಿ ಪ್ರದೇಶಗಳಲ್ಲಿ ಮಳೆಯ ಪ್ರಮಾಣ ವಿಭಿನ್ನವಾಗಿದೆ. ಉಡುಪಿ ಜಿಲ್ಲೆಯಲ್ಲಿ ವಾಡಿಕೆಗಿಂತ ಶೇ.7ರಷ್ಟು ಕಡಿಮೆ ಮಳೆಯಾಗಿದ್ದು, ಉಳಿದೆರಡು ಕರಾವಳಿ ಜಿಲ್ಲೆಗಳಲ್ಲಿ ವಾಡಿಕೆಗಿಂತ ಶೇ.31ರಷ್ಟು ಹೆಚ್ಚು ಮಳೆ ಸುರಿದಿದೆ. ಉತ್ತರ ಒಳನಾಡಿನಲ್ಲೂ ಸಾಕಷ್ಟು ಮಳೆಯಾಗಿದೆ. ಉತ್ತರ ಒಳನಾಡಿನಲ್ಲಿ ಒಟ್ಟಾರೆ ಶೇ.28% ಮಳೆ ಪ್ರಮಾಣ ಹೆಚ್ಚಳವಾಗಿದೆ. ಕಲಬುರಗಿ ಮತ್ತು ಹಾವೇರಿ ಕೊರತೆ ಎದುರಿಸುತ್ತಿದ್ದರೂ ಉಳಿದ ಎಲ್ಲ ಜಿಲ್ಲೆಗಳಲ್ಲಿ ಮಳೆಯ ಪ್ರಮಾಣ ವಾಡಿಕೆಗಿಂತ ಹೆಚ್ಚಾಗಿ ಸುರಿದಿದೆ. ಉತ್ತರ ಕರ್ನಾಟಕದ ಬರದ ನಾಡು ಎಂದು ಕರೆಯುವ ಯಾದಗಿರಿ ಜಿಲ್ಲೆಯೂ ಸೇರಿದಂತೆ ಒಟ್ಟು 11 ಜಿಲ್ಲೆಗಳಲ್ಲಿ ಉತ್ತಮ ಮಳೆಯಾಗಿದೆ. ಇನ್ನು ಮುಂಗಾರು ಮಳೆಯ ಮಾನ್ಸೂನ್ ಮಾರುತಗಳು ಮೇ 31ಕ್ಕೆ ಕೇರಳವನ್ನು ಪ್ರವೇಶಿಸಿಸಲಿವೆ ಎಂದು ನಿರೀಕ್ಷಿಸಲಾಗಿದೆ.

ದಕ್ಷಿಣ ಒಳನಾಡಿನಲ್ಲಿ 17 ಜಿಲ್ಲೆಗಳ ಪೈಕಿ ಚಾಮರಾಜನಗರ, ಚಿಕ್ಕಬಳ್ಳಾಪುರ, ಕೋಲಾರ, ಮೈಸೂರು, ರಾಮನಗರದಲ್ಲಿ ವಾಡಿಕೆಗಿಂತ ಕಡಿಮೆ ಮಳೆಯಾಗಿದೆ. ಇತರೆ ಜಿಲ್ಲೆಗಳಲ್ಲಿ ಶೇ.23ರಷ್ಟು ಮಳೆ ಹೆಚ್ಚಾಗಿದೆ. ಮೇ 24 ಮತ್ತು ಮೇ 25 ರಂದು 6-11 ಸೆಂ.ಮೀ ಮಳೆಯಾಗುವ ಮುನ್ಸೂಚನೆಯನ್ನು ಭಾರತೀಯ ಹವಾಮಾನ ಇಲಾಖೆಯು ಹಲವು ಜಿಲ್ಲೆಗಳಿಗೆ ಹಳದಿ ಅಲರ್ಟ್ ನೀಡಿದೆ. ಕೊಡಗು, ಹಾಸನ, ಚಿಕ್ಕಮಗಳೂರು, ಚಾಮರಾಜನಗರ, ಮಂಡ್ಯ, ಮೈಸೂರು, ದಕ್ಷಿಣ ಕನ್ನಡ, ಮತ್ತು ಉಡುಪಿ ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್ ಘೋಷಣೆ ಮಾಡಿದೆ.

ಭಾರೀ ಮಳೆಯಿಂದ ಪ್ರವಾಹ ಪರಿಸ್ಥಿತಿ: ಬೆಂಗಳೂರು ನಗರ ಪ್ರದಕ್ಷಿಣೆ ಮಾಡಿದ ಸಿಎಂ, ಡಿಸಿಎಂ

ಇನ್ನು ವಾತಾವರಣದ ಪರಿಸ್ಥಿತಿಗಳಿಂದಾಗಿ ಮಾನ್ಸೂನ್ ವಿಳಂಬವಾಗುವ ಆತಂಕದ ಹೊರತಾಗಿಯೂ, ಬಂಗಾಳಕೊಲ್ಲಿ ಮತ್ತು ಅರಬ್ಬಿ ಸಮುದ್ರದಲ್ಲಿನ ಪ್ರತ್ಯೇಕವಾದ ಕಡಿಮೆ ಒತ್ತಡದ ಪ್ರದೇಶಗಳು ಮಾನ್ಸೂನ್ ಆಗಮನಕ್ಕೆ ಅಡ್ಡಿಯಾಗುವುದಿಲ್ಲ ಎಂದು ಹವಾಮಾನ ತಜ್ಞರು ಸ್ಪಷ್ಟಪಡಿಸಿದ್ದಾರೆ. ಮೇ 31 ರಂದು ಕೇರಳದಲ್ಲಿ ಮಾನ್ಸೂನ್ ಪ್ರಾರಂಭವಾದ ಕೆಲವೇ ದಿನಗಳಲ್ಲಿ ಕರ್ನಾಟಕವನ್ನು ತಲುಪುವ ನಿರೀಕ್ಷೆಯಿದೆ. ರಾಜ್ಯ ಹವಾಮಾನ ಇಲಾಖೆಯ ನಿವೃತ್ತ ನಿರ್ದೇಶಕ ಶ್ರೀನಿವಾಸ್ ರೆಡ್ಡಿ, ಬಂಗಾಳ ಕೊಲ್ಲಿಯಲ್ಲಿನ ಹವಾಮಾನ ಕುಸಿತವು ಮಾನ್ಸೂನ್ ಅನ್ನು ಬಲಪಡಿಸಬಹುದು ಎಂದು ತಿಳಿಸಿದ್ದಾರೆ. ಇದರಿಂದ ಮುಂದಿನ ಕೆಲವು ದಿನಗಳಲ್ಲಿ ಕರಾವಳಿ ಮತ್ತು ಗುಡ್ಡಗಾಡು ಪ್ರದೇಶಗಳಲ್ಲಿ ಹೆಚ್ಚಿನ ಮಳೆಗೆ ಕಾರಣವಾಗಬಹುದು ಎಂದು ತಿಳಿಸಿದ್ದಾರೆ.

click me!