ಈ ನೌಕರರಿಗೆ ಕರ್ನಾಟಕ ಸರ್ಕಾರದಿಂದ ಭರ್ಜರಿ ಬಂಪರ್

By Web DeskFirst Published Jan 11, 2019, 9:12 AM IST
Highlights

ರಾಜ್ಯ ಸರ್ಕಾರ ಈ ಎಲ್ಲಾ ನೌಕರರಿಗೆ  ಭರ್ಜರಿ ಗುಡ್ ನ್ಯೂಸ್ ಒಂದನ್ನು ನೀಡಿದೆ. ಕಂದಾಯ ಸಚಿವ ಆರ್.ವಿ ದೇಶಪಾಂಡೆ ಈ ಬಗ್ಗೆ ಮಾಹಿತಿ ನೀಡಿದ್ದು, ಕೆಳವರ್ಗದ ನೌಕರರ ಅನುಕಂಪ ಭತ್ಯೆ ದ್ವಿಗುಣ ಪ್ರಮಾಣದಲ್ಲಿ ಏರಿಸಲಾಗಿದೆ. 

ಬೆಂಗಳೂರು :  ರಾಜ್ಯದ ಕೆಳದರ್ಜೆ ನೌಕರರಾದ ತೋಟಿ, ತಳವಾರ, ನೀರಗಂಟಿ, ವಾಲೀಕಾರ ಸನದಿ ಮತ್ತಿತರಿಗೆ ಹಾಲಿ ಕೊಡುತ್ತಿರುವ ಮಾಸಿಕ 800 ರು.ಗಳ ಅನುಕಂಪ ಭತ್ಯೆಯನ್ನು 1,600 ರು.ಗಳಿಗೆ ಹೆಚ್ಚಿಸಲು ಸರ್ಕಾರ ನಿರ್ಧರಿಸಿದೆ ಎಂದು ಕಂದಾಯ ಸಚಿವ ಆರ್‌.ವಿ. ದೇಶಪಾಂಡೆ ಹೇಳಿದ್ದಾರೆ.

ಈ ಬಗ್ಗೆ ಗುರುವಾರ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಅವರು, ರಾಜ್ಯದ ನಾಲ್ಕು ಕಂದಾಯ ವಿಭಾಗಗಳಲ್ಲಿ ಒಟ್ಟಾರೆ 2,869 ಮಂದಿ ಕೆಳದರ್ಜೆ ನೌಕರರಿದ್ದಾರೆ. ಈ ಪೈಕಿ ಬೆಂಗಳೂರು ಕಂದಾಯ ವಿಭಾಗದಲ್ಲಿ 1,925 ಹಾಗೂ ಮೈಸೂರು ವಿಭಾಗದಲ್ಲಿ 56, ಬೆಳಗಾವಿ ವಿಭಾಗದಲ್ಲಿ 281, ಕಲಬುರಗಿ ವಿಭಾಗದಲ್ಲಿ 607 ಮಂದಿ ನೌಕರರಿದ್ದಾರೆ. ಇವರೆಲ್ಲರೂ ಹಲವು ದಿನಗಳಿಂದ ದಿನನಿತ್ಯದ ಜೀವನ ನಿರ್ವಹಣೆ ವೆಚ್ಚವು ಹೆಚ್ಚಾಗಿದೆ, ಹೀಗಾಗಿ ಭತ್ಯೆಯಲ್ಲಿ ಸೂಕ್ತ ಪರಿಷ್ಕರಣೆ ಮಾಡಬೇಕು ಎಂದು ಒತ್ತಾಯಿಸುತ್ತಿದ್ದರು. ಅವರ ಮನವಿಗೆ ಸ್ಪಂದಿಸಿ ಸರ್ಕಾರ ಅನುಕಂಪ ಭತ್ಯೆ ಹೆಚ್ಚಳಕ್ಕೆ ಮುಂದಾಗಿದೆ. ಇದರಿಂದ 1925 ಕುಟುಂಬಗಳಿಗೆ ಲಾಭ ಸಿಗಲಿದೆ ಎಂದು ಹೇಳಿದರು.

ಸಾಮಾನ್ಯ ವರ್ಗದ ಬಡವರಿಗೆ ಮೀಸಲಿಗೆ ಸ್ವಾಗತ

ಆರ್ಥಿಕವಾಗಿ ಹಿಂದುಳಿದ ಸಾಮಾನ್ಯ ವರ್ಗಗಳ ಬಡವರಿಗೆ ಶೇ.10ರಷ್ಟುಮೀಸಲಾತಿ ಜಾರಿಗೊಳಿಸಲು ಮುಂದಾಗಿರುವ ಕೇಂದ್ರ ಸರ್ಕಾರದ ತೀರ್ಮಾನವನ್ನು ಸ್ವಾಗತಿಸುವುದಾಗಿ ಕಂದಾಯ ಸಚಿವ ಆರ್‌.ವಿ. ದೇಶಪಾಂಡೆ ಹೇಳಿದ್ದಾರೆ. ಸಾಮಾನ್ಯ ವರ್ಗದ ಬಡವರಿಗೆ ಮೀಸಲಾತಿ ಕಲ್ಪಿಸಲು ತಿದ್ದುಪಡಿ ಮಸೂದೆಯನ್ನು ಸಂಸತ್ತಿನ ಉಭಯ ಸದನಗಳಲ್ಲಿ ಮಂಡಿಸಿ ಅನುಮೋದನೆ ಪಡೆಯಲಾಗಿದೆ. ಈವರೆಗೂ ಆರ್ಥಿಕವಾಗಿ ಹಿಂದುಳಿದವರಿಗೆ ನೀಡುತ್ತಿದ್ದ ಯಾವುದೇ ಮೀಸಲಾತಿ ಸೌಲಭ್ಯ ಸಾಮಾನ್ಯ ವರ್ಗದಲ್ಲಿದ್ದ ಬಡವರಿಗೆ ದೊರೆಯುತ್ತಿರಲಿಲ್ಲ. ಕೇಂದ್ರ ಸರ್ಕಾರದ ನಿರ್ಧಾರದಿಂದ ಅವರಿಗೆ ಅನುಕೂಲವಾಗಲಿದೆ ಎಂದು ತಮ್ಮ ಪತ್ರಿಕಾ ಹೇಳಿಕೆಯಲ್ಲಿ ಮೆಚ್ಚುಗೆ ವ್ಯಕ್ತಪಡಿಸಿದರು.

click me!