ಎಚ್‌ಡಿಕೆ, ನಿಜಗುಣಾನಂದ ಶ್ರೀ ಸೇರಿ 15 ಜನರಿಗೆ ಜೀವಬೆದರಿಕೆ!

By Kannadaprabha NewsFirst Published Jan 25, 2020, 7:49 AM IST
Highlights

ಎಚ್‌ಡಿಕೆ, ನಿಜಗುಣಾನಂದ ಶ್ರೀ ಸೇರಿ 15 ಜನರಿಗೆ ಜೀವಬೆದರಿಕೆ| ಚಂಪಾ, ಭಗವಾನ್‌, ಪ್ರಕಾಶ್‌ ರೈ, ಚೇತನ್‌ ಹೆಸರೂ ಉಲ್ಲೇಖ| ನೀವೆಲ್ಲ ಹಿಂದು ವಿರೋಧಿಗಳು ಎಂದು ಪತ್ರ| ಶ್ರೀಗಳಿಗೆ ಭದ್ರತೆ

ಬೆಳಗಾವಿ[ಜ.25]: ಪ್ರತ್ಯೇಕ ಲಿಂಗಾಯತ ಧರ್ಮ ಹೋರಾಟದ ಮುಂಚೂಣಿ ಮಠಾಧೀಶ, ಕಿತ್ತೂರು ತಾಲೂಕಿನ ಬೈಲೂರು ನಿಷ್ಕಲ ಮಂಟಪ ಮಠದ ನಿಜಗುಣಾನಂದ ಸ್ವಾಮೀಜಿ, ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ನಟ ಪ್ರಕಾಶ್‌ ರೈ ಸೇರಿ 15 ಮಂದಿಗೆ ಅಪರಿಚಿತರಿಂದ ಜೀವಬೆದರಿಕೆ ಬಂದಿದೆ. ಅಪರಿಚಿತ ವ್ಯಕ್ತಿಯೊಬ್ಬ ನಿಜಗುಣಾನಂದ ಶ್ರೀಗಳನ್ನು ಉದ್ದೇಶಿಸಿ ಬೈಲೂರು ನಿಷ್ಕಲ ಮಂಟಪ ಮಠಕ್ಕೆ ಬೆದರಿಕೆ ಪತ್ರ ಬರೆದಿದ್ದು, ಅದರಲ್ಲಿ ಶ್ರೀಗಳು ಸೇರಿ 15 ಮಂದಿಯ ಹೆಸರು ಉಲ್ಲೇಖಿಸಲಾಗಿದೆ. ಹಿಂದೂ ವಿರೋಧಿಗಳಾದ ನೀವೆಲ್ಲ ಅಂತಿಮ ಯಾತ್ರೆಗೆ ಸಿದ್ಧರಾಗಿ ಎಂದು ಎಚ್ಚರಿಕೆ ನೀಡಲಾಗಿದೆ.

ಈ ಪತ್ರದಲ್ಲಿ ಇಬ್ಬರು ಮಠಾಧೀಶರು, ಚಂದ್ರಶೇಖರ್‌ ಪಾಟೀಲ, ಬಿ.ಟಿ.ಲಲಿತಾ ನಾಯಕ್‌ರಂಥ ರಾಜ್ಯದ ಮುಂಚೂಣಿ ಎಡಪಂಥೀಯ ಸಾಹಿತಿಗಳು, ಚಿಂತಕರ ಹೆಸರೂ ಇದೆ. ಕುಮಾರಸ್ವಾಮಿ ಹೊರತುಪಡಿಸಿ ಬಹುತೇಕ ಎಲ್ಲರೂ ಎಡಪಂಥೀಯ ಸಂಘಟನೆಗಳೊಂದಿಗೆ ಗುರುತಿಸಿಕೊಂಡವರಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ ಸದ್ಯ ಕಲಬುರಗಿ ಜಿಲ್ಲೆಯ ಜೇವರ್ಗಿಯಲ್ಲಿರುವ ನಿಜಗುಣಾನಂದ ಶ್ರೀಗಳಿಗೆ ಪೊಲೀಸ್‌ ಭದ್ರತೆ ಕಲ್ಪಿಸಲಾಗಿದೆ.

‘ಡಿಕೆಶಿ, ಪರಮೇಶ್ವರ್ ಒಂದಾಗಿ ವಲಸಿಗ ಸಿದ್ದರಾಮಯ್ಯಗೆ ವಿರೋಧ’

ಬೆದರಿಕೆ ಪತ್ರದಲ್ಲೇನಿದೆ?: ಶ್ರೀ ನಿಜಗುಣಾನಂದ ಸ್ವಾಮಿಗಳೇ, ನಿಮ್ಮನ್ನು ಮತ್ತು ನಿಮ್ಮ ಜೊತೆಗಿರುವ ಧರ್ಮದ್ರೋಹಿಗಳು, ದೇಶ ದ್ರೋಹಿಗಳ ಸಂಹಾರಕ್ಕೆ 2020ರ ಜನವರಿ 29 ರಿಂದ ಮುಹೂರ್ತ ನಿಶ್ಚಯವಾಗಿದೆ. ನಿಮ್ಮ ಅಂತಿಮ ಯಾತ್ರೆಗೆ ಸಿದ್ಧರಾಗಿ. ನೀವು ಮಾತ್ರವಲ್ಲದೆ ಇನ್ನೂ 14 ಮಂದಿಯನ್ನೂ ಅಂತಿಮ ಯಾತ್ರೆಗೂ ಸಿದ್ಧಮಾಡಿ. ಅವರಿಗೆ ನೀವೇ ತಿಳಿಹೇಳಿ ಎಂದು ಎಚ್ಚರಿಸಲಾಗಿದೆ.

ಶ್ರೀಗಳಿಗೆ ಬಂದಿರುವ ಪತ್ರದಲ್ಲಿ ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ, ನಿಡುಮಾಮಿಡಿ ಶ್ರೀ, ಜ್ಞಾನಪ್ರಕಾಶ ಸ್ವಾಮೀಜಿ, ನಟರಾದ ಪ್ರಕಾಶ್‌ ರೈ, ಚೇತನ್‌ ಕುಮಾರ್‌, ಸಾಹಿತಿಗಳಾದ ಚಂದ್ರಶೇಖರ ಪಾಟೀಲ, ಕೆ.ಎಸ್‌.ಭಗವಾನ್‌, ಬಿ.ಟಿ.ಲಲಿತಾ ನಾಯ್‌್ಕ, ಸಿಪಿಎಂ ನಾಯಕಿ ಬೃಂದಾ ಕಾರಟ್‌, ಪತ್ರಕರ್ತ ಅಗ್ನಿ ಶ್ರೀಧರ್‌, ಮಾಜಿ ಪತ್ರಕರ್ತ ದಿನೇಶ್‌ ಅಮೀನ್‌ ಮಟ್ಟು, ಎಡಪಂಥೀಯರಾದ ಪ್ರೊ.ಮಹೇಶ ಚಂದ್ರಗುರು, ಬಜರಂಗದಳದ ಮಾಜಿ ಮುಖಂಡ ಮಹೇಂದ್ರ ಕುಮಾರ್‌, ದುಂಡಿ ಗಣೇಶ್‌(ಯೋಗೇಶ್‌ ಮಾಸ್ಟರ್‌) ಹೆಸರೂ ಇದೆ. ಕುಮಾರಸ್ವಾಮಿ ಅವರನ್ನು ಹೊರತುಪಡಿಸಿ ಉಳಿದವರೆಲ್ಲರೂ ಎಡಪಂಥೀಯ ಚಿಂತಕರು.

ಬೆದರಿಕೆ ಕರೆಯೂ ಬಂದಿತ್ತು: ಪ್ರತ್ಯೇಕ ಲಿಂಗಾಯತ ಧರ್ಮದ ಹೋರಾಟ ಮಾತ್ರವಲ್ಲದೆ, ಮೂಢನಂಬಿಕೆ ವಿರೋಧಿ ಹೋರಾಟದಲ್ಲೂ ನಿಜಗುಣಾನಂದ ಶ್ರೀಗಳು ಮುಂಚೂಣಿಯಲ್ಲಿದ್ದವರು. ಪ್ರಖರ ವಾಗ್ಮಿಯಾಗಿರುವ ಶ್ರೀಗಳ ಭಾಷಣ ಸಾಮಾಜಿಕ ಜಾಲತಾಣಗಳಲ್ಲಿ ಕ್ರಾಂತಿಯಕಿಡಿಯನ್ನು ಹೊತ್ತಿಸಿವೆ. ಇವರ ಕೆಲ ಹೇಳಿಕೆಗಳು ಹಿಂದೂಗಳ ವಿರೋಧಕ್ಕೂ ಕಾರಣವಾಗಿತ್ತು. 2017ರಲ್ಲಿ ಪತ್ರಕರ್ತೆ ಗೌರಿ ಲಂಕೇಶ್‌ ಹತ್ಯೆಯ ಬಳಿಕ ನಿಜಗುಣಾನಂದ ಸ್ವಾಮೀಜಿಗೆ ಗನ್‌ಮ್ಯಾನ್‌ ಒದಗಿಸಲಾಗಿತ್ತು. ಪರಿಸ್ಥಿತಿ ಸುಧಾರಿಸಿದ ಬಳಿಕ ಭದ್ರತೆ ಹಿಂಪಡೆಯಲಾಗಿತ್ತು. ಆದರೆ, ಕೆಲ ತಿಂಗಳ ಹಿಂದೆ ಹಿಂದಷ್ಟೇ ಶ್ರೀಗಳಿಗೆ ಅಪರಿಚಿತ ವ್ಯಕ್ತಿಯೊಬ್ಬನಿಂದ ಬೆದರಿಕೆ ಕರೆ ಬಂದಿತ್ತು.

10 ರಲ್ಲಿ 7 ಸ್ಥಾನ ಬಿಜೆಪಿ ಪಾಲು : ಜೆಡಿಎಸ್ 1 ಸ್ಥಾನದಲ್ಲಿ ಗೆಲುವು

click me!