ರಾಜ್ಯದಲ್ಲಿ ಜೂನ್‌ ತಿಂಗಳಲ್ಲಿ ಸೋಂಕು ತೀವ್ರ!

By Kannadaprabha NewsFirst Published May 22, 2020, 7:10 AM IST
Highlights

ಜೂನ್‌ ತಿಂಗಳಲ್ಲಿ ಸೋಂಕು ತೀವ್ರ!| 21 ದಿನ ಬದಲು ಈಗ 11 ದಿನಕ್ಕೇ ಡಬಲ್‌| ಹೊರಗಿನಿಂದ ಬಂದವರಿಂದ ಕೇಸ್‌ ಹೆಚ್ಚಳ|  ಆದರೂ, ಸರ್ಕಾರ ಸಿದ್ಧ: ಸಚಿವ ಸುಧಾಕರ್‌

ಬೆಂಗಳೂರು(ಮೇ.22): ರಾಜ್ಯದಲ್ಲಿ ಕೊರೋನಾ ಸೋಂಕು ಪ್ರಕರಣಗಳು ಹೊರಗಿನಿಂದ ಬರುತ್ತಿರುವರಿಂದ ಹೆಚ್ಚಾಗುತ್ತಿದೆ. ಹೊರಗಿನಿಂದ ಇನ್ನೂ ಸಾಕಷ್ಟುಜನ ಬರಲಿದ್ದಾರೆ. ಹೀಗಾಗಿ ರಾಜ್ಯದಲ್ಲಿ ಜೂನ್‌ ವೇಳೆಗೆ ಪ್ರಕರಣಗಳ ಸಂಖ್ಯೆ ತೀವ್ರವಾಗಿ ಹೆಚ್ಚಾಗಲಿದೆ. ಹೀಗಾಗಿ, ಸೋಂಕು ನಿಯಂತ್ರಣಕ್ಕೆ ಎಲ್ಲ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ಚಿಕಿತ್ಸೆಗೂ ವ್ಯವಸ್ಥೆ ಮಾಡಿಕೊಳ್ಳಲಾಗಿದೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್‌ ಹೇಳಿದ್ದಾರೆ.

"

ಅಲ್ಲದೆ, ಮೊದಲು 21 ದಿನಗಳಿಗೆ ಸೋಂಕು ಪ್ರಕರಣಗಳು ದುಪ್ಪಟ್ಟಾಗುತ್ತಿತ್ತು. ಈಗ 11 ದಿನಕ್ಕೇ ದ್ವಿಗುಣಗೊಳ್ಳುತ್ತಿದೆ. ದುಪ್ಪಟ್ಟು ಅವಧಿ ಈ ಪರಿ ಕುಸಿಯಲು ಹೊರಗಿನಿಂದ ಬರುತ್ತಿರುವರಲ್ಲಿ ಸೋಂಕು ಪ್ರಮಾಣ ಹೆಚ್ಚಿರುವುದು ಕಾರಣ. ಈ ಸೋಂಕು ನಿಯಂತ್ರಣಕ್ಕೆ ಸರ್ಕಾರ ಎಲ್ಲ ರೀತಿಯ ಕ್ರಮ ಕೈಗೊಳ್ಳುತ್ತಿದೆ ಎಂದರು.

ಕ್ವಾರಂಟೈನ್‌ನಲ್ಲಿ ಪ್ರೇಮಾಂಕುರ: ಮಗು ಬಿಟ್ಟು, ವಿವಾಹಿತ ಪ್ರೇಮಿ ಜೊತೆ ಮಹಿಳೆ ಪರಾರಿ!

ವಿಧಾನಸೌಧದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಸೋಂಕು ನಿಯಂತ್ರಣಕ್ಕಾಗಿ ನಗರ ಹಾಗೂ ಗ್ರಾಮೀಣ ಭಾಗಗಳಲ್ಲಿ ಕೊರೋನಾ ನಿಯಂತ್ರಣಕ್ಕೆ ಪ್ರತ್ಯೇಕ ಕಾರ್ಯಪಡೆ ರಚಿಸಲಾಗುತ್ತಿದೆ. ಬಿಬಿಎಂಪಿ ವ್ಯಾಪ್ತಿಯಲ್ಲಿ ವಾರ್ಡ್‌ಗೊಂದು ಕಾರ್ಯಪಡೆ ರಚನೆಗೆ ನಿರ್ಧರಿಸಲಾಗಿದೆ ಎಂದು ತಿಳಿಸಿದರು.

ಕೋವಿಡ್‌ 19 ನಿಯಂತ್ರಣಕ್ಕೆ ಸಂಬಂಧಿಸಿದಂತೆ ದೀರ್ಘಕಾಲದ ಹೋರಾಟಕ್ಕೆ ನಗರ ಮತ್ತು ಗ್ರಾಮೀಣ ಪ್ರದೇಶಗಳನ್ನು ಸಜ್ಜುಗೊಳಿಸುವ ಸಂಬಂಧ ಗುರುವಾರ ಸರ್ಕಾರದ ಹಿರಿಯ ಅಧಿಕಾರಿಗಳು, ತಜ್ಞರು ಮತ್ತು ವಿಶ್ವ ಆರೋಗ್ಯ ಸಂಸ್ಥೆ ಅಧಿಕಾರಿಗಳೊಂದಿಗೆ ಸಭೆ ನಡೆಸಲಾಯಿತು. ಈ ಸಭೆಯಲ್ಲಿ ಕಾರ್ಯಪಡೆ ರಚನೆಯ ತೀರ್ಮಾನಗಳನ್ನು ಕೈಗೊಳ್ಳಲಾಗಿದೆ ಎಂದು ತಿಳಿಸಿದರು.

ರಾಜ್ಯದಲ್ಲಿ ಈ ವರೆಗೆ 63 ಲಕ್ಷ ಜನ ಆರೋಗ್ಯ ಸೇತು ಆ್ಯಪ್‌ ಬಳಸುತ್ತಿದ್ದು, ಇದರಲ್ಲಿನ ಸ್ವಯಂ ನಿಗಾ ಪ್ರಕ್ರಿಯೆ ಮೂಲಕ 2,255 ಜನರಿಗೆ ರೆಡ್‌ ಫ್ಲಾಗ್‌ ಅಲರ್ಟ್‌ ನೀಡಲಾಗಿದೆ. ಅವರೆಲ್ಲರಿಗೂ ಕೋವಿಡ್‌ ಪರೀಕ್ಷೆ ಮಾಡಿಸಿಕೊಳ್ಳುವಂತೆ ಸಂದೇಶ ಹೋಗಿದೆ. ಇವರಲ್ಲಿ 233 ಮಂದಿ ಪರೀಕ್ಷೆ ಮಾಡಿಸಿಕೊಂಡಿದ್ದು, 17 ಮಂದಿಗೆ ಪಾಸಿಟಿವ್‌ ಬಂದಿದೆ. ಪ್ರತಿಯೊಬ್ಬ ಸ್ಮಾರ್ಟ್‌ ಫೋನ್‌ ಬಳಕೆದಾರರು ಈ ಅಪ್ಲಿಕೇಶನ್‌ ಬಳಸಿ ಕೋವಿಡ್‌ ವಿರುದ್ಧದ ಸಮರದಲ್ಲಿ ಸಹಕರಿಸುವಂತೆ ಸಚಿವರು ಮನವಿ ಮಾಡಿದರು.

6 ಅಡಿ ಅಂತರ ಕಾಯ್ದುಕೊಂಡರೂ ವೈರಸ್‌ ದಾಳಿ ತಪ್ಪಿದ್ದಲ್ಲ!

ಮಾಸಾಂತ್ಯಕ್ಕೆ 10 ಸಾವಿರ ಪರೀಕ್ಷಾ ಸಾಮರ್ಥ್ಯ:

ರಾಜ್ಯವು ಕೋವಿಡ್‌-19 ಪರೀಕ್ಷಾ ಸಾಮರ್ಥ್ಯವನ್ನು ನಿರಂತರವಾಗಿ ಹೆಚ್ಚಸಿಕೊಳ್ಳುತ್ತಿದ್ದು, ಕಳೆದ ಬುಧವಾರ ಒಂದೇ ದಿನ 7293 ಜನರಿಗೆ ಪರೀಕ್ಷೆ ನಡೆಸಲಾಗಿದೆ. ಇದು ಇದುವರೆಗೂ ಏಕದಿನದಲ್ಲಿ ನಡೆದ ಅತ್ಯಧಿಕ ಪರೀಕ್ಷೆಯಾಗಿದೆ. ರಾಜ್ಯದಲ್ಲಿ ಪ್ರಸ್ತುತ 53 ಕೋವಿಡ್‌ ಪ್ರಯೋಗಾಲಯಗಳಿದ್ದು, ಮೇ ಅಂತ್ಯದ ವೇಳೆಗೆ ಈ ಸಂಖ್ಯೆ 60ಕ್ಕೆ ಹೆಚ್ಚಿಸುವ ಗುರಿ ಇದೆ. ಇದರಿಂದ ರಾಜ್ಯದಲ್ಲಿ ಪರೀಕ್ಷಾ ಸಾಮರ್ಥ್ಯ ಇನ್ನಷ್ಟುಹೆಚ್ಚಾಗಲಿದೆ. ಮೇ 8ರವರೆಗೆ 1 ಲಕ್ಷ ಪರೀಕ್ಷೆಯ ಮೈಲಿಗಲ್ಲು ತಲುಪಿದ್ದೆವು. ಬಳಿಕ 10 ದಿನಗಳಲ್ಲಿ 1.56 ಲಕ್ಷ ಪರೀಕ್ಷೆ ನಡೆಸಿದ್ದೇವೆ. ಮೇ ಮಾಸಾಂತ್ಯದೊಳಗೆ ನಿತ್ಯ 10 ಸಾವಿರ ಪರೀಕ್ಷೆಗಳನ್ನು ನಡೆಸಿ ಸೋಂಕು ಪತ್ತೆ ಹಚ್ಚಿ ಸೂಕ್ತ ಚಿಕಿತ್ಸೆ ನೀಡುಲು ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವರು ಟ್ವೀಟ್‌ ಮಾಡಿದ್ದಾರೆ.

ಸರ್ಕಾರಿ ನೌಕರರಿಗೆ ‘ಆರೋಗ್ಯ ಸೇತು’ ಕಡ್ಡಾಯ

ಕೊರೋನಾ ಸೋಂಕು ನಿಯಂತ್ರಿಸಲು ‘ಆರೋಗ್ಯ ಸೇತು’ ಆ್ಯಪ್‌ ಸಹಕಾರಿ. ಸೋಂಕಿತರು ಹತ್ತಿರದಲ್ಲಿದ್ದರೆ ಬಳಕೆದಾರರನ್ನು ಈ ಆ್ಯಪ್‌ ಎಚ್ಚರಿಸುತ್ತದೆ. ಹಾಗಾಗಿ ಪ್ರತಿಯೊಬ್ಬ ನಾಗರಿಕನೂ ಈ ಆ್ಯಪ್‌ ಬಳಸುವಂತಾಗಬೇಕು. ಸರ್ಕಾರಿ ನೌಕರರಿಗೆ ಈ ಆ್ಯಪ್‌ ಕಡ್ಡಾಯ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ. ಸುಧಾಕರ್‌ ತಿಳಿಸಿದ್ದಾರೆ.

ಕೊರೋನಾ ಮಾಹಿತಿ: ಜಿಲ್ಲಾಧಿಕಾರಿಯನ್ನೇ ಮೀರಿಸಿದ ಈ ಲೇಡಿ!

ಕೊರೋನಾ ವಿರುದ್ಧ ಹೋರಾಟಕ್ಕೆ ಆರೋಗ್ಯ ಸೇತು ಒಂದು ಪ್ರಬಲ ಅಸ್ತ್ರವಾಗಿದೆ. ದೇಶದಲ್ಲಿ 10 ಕೋಟಿಗೂ ಅಧಿಕ ಜನರು ಇದನ್ನು ಬಳಸುತ್ತಿದ್ದಾರೆ. ಅತ್ಯಾಧುನಿಕ ತಂತ್ರಜ್ಞಾನ ಬಳಸಿ ಜನರಿಗೆ ಅರ್ಥವಾಗುವ ರೀತಿಯಲ್ಲಿ ಇದು ಮಾಹಿತಿ ನೀಡುತ್ತದೆ. ಕೊರೋನಾ ವೈರಸ್‌ ಕುರಿತಾದ ಎಲ್ಲಾ ಸಂದೇಹ, ಗೊಂದಲಗಳಿಗೆ ಉತ್ತರವನ್ನೂ ನೀಡುತ್ತದೆ. ಇದನ್ನು ಪ್ರತಿಯೊಬ್ಬ ಸರ್ಕಾರಿ ಸಿಬ್ಬಂದಿಯೂ ಡೌನ್‌ಲೋಡ್‌ ಮಾಡಿಕೊಳ್ಳುವುದು ಕಡ್ಡಾಯ. ಆ್ಯಪ್‌ ಬಳಸದೆ ಕಚೇರಿಗೆ ಬರುವಂತಿಲ್ಲ ಎಂದು ಹೇಳಿದ್ದಾರೆ.

click me!