ಬೃಹತ್ ಅಕ್ರಮ ಡ್ರಗ್ ತಯಾರಿಕೆ ಶಂಕೆ, ಮೈಸೂರಲ್ಲಿ ಕೆಮಿಕಲ್ಸ್ ಫ್ಯಾಕ್ಟರಿಗೆ ದೆಹಲಿ ಪೊಲೀಸರು ದಾಳಿ!

Published : Jan 28, 2026, 06:42 PM IST
NCB

ಸಾರಾಂಶ

ದೆಹಲಿ ಪೊಲೀಸರು ಮತ್ತು ಎನ್‌ಸಿಬಿ ಅಧಿಕಾರಿಗಳು ಮೈಸೂರಿನ ಹೆಬ್ಬಾಳು ಕೈಗಾರಿಕಾ ಪ್ರದೇಶದ ಕೆಮಿಕಲ್ ಫ್ಯಾಕ್ಟರಿಯ ಮೇಲೆ ದಾಳಿ ನಡೆಸಿದ್ದಾರೆ. ಅಕ್ರಮ ಮಾದಕ ದ್ರವ್ಯ ತಯಾರಿಕೆಯ ಶಂಕೆಯ ಮೇಲೆ ಈ ಕಾರ್ಯಾಚರಣೆ ನಡೆದಿದ್ದು, ಲ್ಯಾಬ್‌ನಲ್ಲಿದ್ದ ರಾಸಾಯನಿಕ ವಸ್ತುಗಳನ್ನು ಪರೀಕ್ಷೆಗೆ ಕಳುಹಿಸಲಾಗಿದೆ. 

ಮೈಸೂರಿನಲ್ಲಿ ಅಕ್ರಮ ಮಾದಕ ದ್ರವ್ಯ ಜಾಲ ಕಾರ್ಯನಿರ್ವಹಿಸುತ್ತಿರುವ ಶಂಕೆಯ ಹಿನ್ನೆಲೆಯಲ್ಲಿ, ದೆಹಲಿ ಪೊಲೀಸರು ಹಾಗೂ ರಾಷ್ಟ್ರೀಯ ಮಾದಕ ದ್ರವ್ಯ ನಿಯಂತ್ರಣ ಬ್ಯೂರೋ (NCB) ಅಧಿಕಾರಿಗಳು ಮೈಸೂರು ನಗರದ ಹೆಬ್ಬಾಳು ಕೈಗಾರಿಕಾ ಪ್ರದೇಶದಲ್ಲಿರುವ ಕೆಮಿಕಲ್ ಉತ್ಪಾದನಾ ಘಟಕದ ಮೇಲೆ ದಾಳಿ ನಡೆಸಿದ್ದಾರೆ. ಈ ಕಾರ್ಯಾಚರಣೆ ರಾಜ್ಯದ ಭದ್ರತಾ ವಲಯದಲ್ಲಿ ಸಂಚಲನ ಮೂಡಿಸಿದೆ.

ಹೆಬ್ಬಾಳು ಕೈಗಾರಿಕಾ ಪ್ರದೇಶದಲ್ಲಿರುವ “ಟುಕ್ ಟುಕ್ ಹೌಸ್‌ಹೋಲ್ಡ್ ಕೆಮಿಕಲ್ಸ್ ಪ್ರೊಡಕ್ಷನ್ ಸೊಲ್ಯೂಷನ್ ಮ್ಯಾನುಫ್ಯಾಕ್ಚರಿಂಗ್” ಎಂಬ ಹೆಸರಿನ ಘಟಕದ ಮೇಲೆ ಈ ದಾಳಿ ನಡೆದಿದ್ದು, ಗುಜರಾತ್ ಮೂಲದ ಗಣಪತ್ ಲಾಲ್ ಎಂಬ ವ್ಯಕ್ತಿ ಈ ಕೆಮಿಕಲ್ ಫ್ಯಾಕ್ಟರಿಯನ್ನು ನಡೆಸುತ್ತಿದ್ದಾನೆ ಎಂಬ ಮಾಹಿತಿ ಲಭ್ಯವಾಗಿದೆ. ಪ್ರಾಥಮಿಕ ಮಾಹಿತಿಯಂತೆ, ಈ ಘಟಕದಲ್ಲಿ ಡ್ರಗ್ಸ್ ತಯಾರಿಕೆ ನಡೆಯುತ್ತಿರುವ ಸಾಧ್ಯತೆ ಇದೆ ಎಂಬ ಶಂಕೆಯ ಮೇರೆಗೆ ಅಧಿಕಾರಿಗಳು ಲ್ಯಾಬ್ ಅನ್ನು ವಶಕ್ಕೆ ಪಡೆದಿದ್ದಾರೆ.

ಡ್ರಗ್ಸ್ ತಯಾರಿಕಾ ಲ್ಯಾಬ್ ಶಂಕೆ

ಮೂರು ತಿಂಗಳ ಹಿಂದೆ ಮೈಸೂರಿನಲ್ಲಿ ಮಾದಕ ದ್ರವ್ಯ ಪತ್ತೆಯಾದ ಪ್ರಕರಣದ ತನಿಖೆಯ ವೇಳೆ, ಡ್ರಗ್ಸ್ ತಯಾರಿಕಾ ಜಾಲದ ಸುಳಿವುಗಳು ದೊರೆತಿದ್ದವು. ಆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೆಲ ಆರೋಪಿಗಳನ್ನು ಬಂಧಿಸಲಾಗಿದ್ದು, ಅವರಿಂದ ಪಡೆದ ಮಾಹಿತಿಯ ಆಧಾರದಲ್ಲೇ ಈ ಕೆಮಿಕಲ್ ಘಟಕದ ಮೇಲೆ ದಾಳಿ ನಡೆಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ದಾಳಿಯ ವೇಳೆ ಪಿನಾಯಿಲ್ ಉತ್ಪಾದನೆಗೆ ಬಳಸುವ ಕಚ್ಚಾ ವಸ್ತುಗಳು ಪತ್ತೆಯಾಗಿವೆ. ಡಿಟರ್ಜೆಂಟ್, ಸೋಡಾ, ಉಪ್ಪು ಸೇರಿದಂತೆ ವಿವಿಧ ರಾಸಾಯನಿಕ ಕಚ್ಚಾ ವಸ್ತುಗಳು ಲ್ಯಾಬ್‌ನಲ್ಲಿ ಸಂಗ್ರಹವಾಗಿದ್ದವು. ಆದರೆ, ಸದ್ಯದ ಮಟ್ಟಿಗೆ ಯಾವುದೇ ನಿಷೇಧಿತ ಮಾದಕ ದ್ರವ್ಯಗಳು ಪತ್ತೆಯಾಗಿರುವ ಬಗ್ಗೆ ಅಧಿಕೃತ ಮಾಹಿತಿ ಲಭ್ಯವಾಗಿಲ್ಲ.

ಹಿರಿಯ ಪೊಲೀಸ್ ಅಧಿಕಾರಿಗಳ ಭೇಟಿ

ಕಾರ್ಯಾಚರಣೆ ನಡೆಯುತ್ತಿರುವ ಸ್ಥಳಕ್ಕೆ ಮೈಸೂರು ನಗರ ಪೊಲೀಸ್ ಆಯುಕ್ತೆ ಸೀಮಾ ಲಾಟ್ಕರ್ ಹಾಗೂ ಡಿಸಿಪಿ ಸುಂದರ್ ರಾಜ್ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಹೆಬ್ಬಾಳು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಲ್ಯಾಬ್ ಇದ್ದು, ಸ್ಥಳೀಯ ಪೊಲೀಸರ ಸಹಕಾರದೊಂದಿಗೆ ತನಿಖೆ ಮುಂದುವರಿದಿದೆ.

ತನಿಖೆ ಮುಂದುವರಿಕೆ

ಡ್ರಗ್ಸ್ ತಯಾರಿಕಾ ಶಂಕೆಯ ಹಿನ್ನೆಲೆ, ಲ್ಯಾಬ್‌ನಲ್ಲಿರುವ ರಾಸಾಯನಿಕ ವಸ್ತುಗಳ ಮಾದರಿಗಳನ್ನು ಸಂಗ್ರಹಿಸಿ ಪರೀಕ್ಷೆಗೆ ಕಳುಹಿಸಲಾಗುತ್ತಿದೆ. ಈ ಘಟಕದ ಚಟುವಟಿಕೆಗಳು ಕಾನೂನುಬದ್ಧವಾಗಿವೆಯೇ ಅಥವಾ ಅಕ್ರಮ ಮಾದಕ ದ್ರವ್ಯ ತಯಾರಿಕೆಗೆ ಬಳಸಲಾಗುತ್ತಿದೆಯೇ ಎಂಬುದರ ಕುರಿತು ಸವಿಸ್ತಾರ ತನಿಖೆ ನಡೆಯುತ್ತಿದೆ. ಒಟ್ಟಾರೆ, ಮೈಸೂರು ಹೆಬ್ಬಾಳು ಕೈಗಾರಿಕಾ ಪ್ರದೇಶದಲ್ಲಿ ನಡೆದ ಈ ದಾಳಿ ಅಕ್ರಮ ಡ್ರಗ್ಸ್ ಜಾಲದ ಕುರಿತು ಹೊಸ ಅನುಮಾನಗಳಿಗೆ ದಾರಿ ಮಾಡಿಕೊಟ್ಟಿದ್ದು, ತನಿಖೆ ಪೂರ್ಣಗೊಂಡ ಬಳಿಕವೇ ಸಂಪೂರ್ಣ ಸತ್ಯಾಂಶ ಬಹಿರಂಗವಾಗಲಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ವಿಧವೆ ಮಹಿಳೆ ಜೊತೆ Home Stayನಲ್ಲಿದ್ದ ಆರೋಪ; ಸಿ.ಟಿ ರವಿ ಆಪ್ತ, ಸಿಡಿಎ ಮಾಜಿ ಅಧ್ಯಕ್ಷ ಆನಂದ್ ಮೇಲೆ ಹಲ್ಲೆ
Bigg Breaking: ಮುಡಾ ಹಗರಣದಲ್ಲಿ ಸಿಎಂ ಸಿದ್ದರಾಮಯ್ಯಗೆ ಕ್ಲೀನ್ ಚಿಟ್; ಕೋರ್ಟ್‌ನಿಂದ ಬಿ-ರಿಪೋರ್ಟ್ ಅಂಗೀಕಾರ