
ಉಡುಪಿ (ಜೂ.15): ಉಡುಪಿ ಜಿಲ್ಲೆಯನ್ನು ಹಾದು ಹೋಗುವ ರಾ.ಹೆ. 66ರ ಕಾಮಗಾರಿಯಲ್ಲಿ ವಿಳಂಬ, ರಸ್ತೆ ಸುರಕ್ಷತೆಯ ಬಗ್ಗೆ ನಿರ್ಲಕ್ಷ್ಯದ ಬಗ್ಗೆ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಅವರು ಹೆದ್ದಾರಿ ಇಲಾಖೆ ಅಧಿಕಾರಿಗಳು ಮತ್ತು ಗುತ್ತಿಗೆದಾರರನ್ನು ತೀವ್ರ ತರಾಟೆಗೆ ತೆಗೆದುಕೊಂಡರು. ಮಾತ್ರವಲ್ಲ ಗುತ್ತಿಗೆದಾರರನ್ನು ಕಪ್ಪುಪಟ್ಟಿಗೆ ಸೇರಿಸುವುದಾಗಿ ಎಚ್ಚರಿಕೆ ನೀಡಿದರು. ಅವರು ಬುಧವಾರ ರಜತಾದ್ರಿಯ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ನಡೆದ ಜಿಲ್ಲಾ ಅಭಿವೃದ್ಧಿ ಸಮನ್ವಯ ಮತ್ತು ಉಸ್ತುವಾರಿ ಸಮಿತಿ ಸಭೆ ದಿಶಾದ ಅಧ್ಯಕ್ಷತೆ ವಹಿಸಿ, ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನೆ ನಡೆಸಿದರು.
ಹೆದ್ದಾರಿ ಇಲಾಖೆಯ ಹಿರಿಯ ಅಧಿಕಾರಿಗಳು ಸಭೆಗೆ ಬಾರದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಸಚಿವೆ, ಅವರಿಗೆ ನೋಟಿಸ್ ನೀಡುವಂತೆ ಜಿಲ್ಲಾಧಿಕಾರಿ ಅವರಿಗೆ ಸೂಚಿಸಿದರು. ಕಲ್ಯಾಣಪುರ ಸಂತೆಕಟ್ಟೆಯಲ್ಲಿ ರಸ್ತೆ ಮಧ್ಯೆ ಭಾರಿ ಗುಂಡಿಯನ್ನು ಅಗೆದಿದ್ದು, ಕಾಮಗಾರಿಯನ್ನು ಪೂರ್ಣಗೊಳಿಸದಿರುವುದರಿಂದ, ಈ ಮಳೆಗಾಲದಲ್ಲಿ ಹೆದ್ದಾರಿ ಹೊಂಡದೊಳಗೆ ಕುಸಿದು, ಹೆದ್ದಾರಿಯೇ ಕಡಿತವಾಗಲಿದೆ. ಇದಕ್ಕೆ ಯಾರು ಹೊಣೆ ಎಂದು ಮಾಜಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಗರಂ ಆಗಿ ಪ್ರಶ್ನಿಸಿದರು. ರಸ್ತೆಯಲ್ಲಿ ಅಂಡರ್ ಪಾಸ್ಗೆ ಹೊಂಡ ತೆಗೆಯಲಾಗಿದ್ದು, ಭಾರಿ ಬಂಡೆ ಸಿಕ್ಕಿರುವುದರಿಂದ ಕಾಮಗಾರಿ ಸ್ಥಗಿತಗೊಂಡಿದೆ.
ಮೀನುಗಾರರಿಗೆ ವಿನಾ ಕಾರಣ ತೊಂದರೆ ಕೊಟ್ಟರೆ ಸುಮ್ಮನಿರಲ್ಲ: ಶಾಸಕ ಟಿ.ಡಿ.ರಾಜೇಗೌಡ ವಾರ್ನಿಂಗ್
ಹೊಂಡದಲ್ಲಿ ನೀರು ತುಂಬಿದರೆ ಅದನ್ನು ಹೊರಗೆ ಹಾಕುವ ವ್ಯವಸ್ಥೆ ಮಾಡುತ್ತೇವೆ ಎಂದು ಅಧಿಕಾರಿಗಳು ಸಮಜಾಯಿಶಿ ನೀಡಲು ಯತ್ನಿಸಿದರು. ಇದಕ್ಕೆ ಡಿಸಿ ಕೂರ್ಮಾರಾವ್, ಹೆದ್ದಾರಿ ಅಧಿಕಾರಿಗಳಿಗೆ ಇಲ್ಲಿನ ಮಳೆಯ ತೀವ್ರತೆಯೇ ಅರ್ಥ ಆಗುತ್ತಿಲ್ಲ. ಹೊಂಡದಲ್ಲಿ ನೀರು ತುಂಬಿದರೇ ಎಷ್ಟೂಅಂಥ ಹೊರಗೆ ಹಾಕುತ್ತೀರಿ ಎಂದು ಪ್ರಶ್ನಿಸಿದರು. ಎಸ್ಪಿ ಅಕ್ಷಯ್ ಹಾಕೆ ಅವರು, ಅಧಿಕಾರಿ- ಗುತ್ತಿಗೆದಾರರ ಸಭೆ ನಡೆಸಿ ಬ್ಲಾಕ್ ಸ್ಪಾಟ್ಗಳಲ್ಲಿ ಹೈಮಾಸ್ವ್ ದೀಪ, ಸೂಚನಾ ಫಲಕ, ಎಚ್ಚರಿಕೆ ಫಲಕ, ಬ್ಯಾರಿಕೆಡ್ಗಳನ್ನು ಹಾಕಲು ಸೂಚಿಸಿದ್ದರೂ ಹಾಕಿಲ್ಲ, ಪರಿಣಾಮವಾಗಿ 15 ಅಪಘಾತದಲ್ಲಿ 12 ಮಂದಿ ಮೃತಪಟ್ಟಿದ್ದಾರೆ ಎಂದರು.
ಇದೆಲ್ಲವನ್ನೂ ಆಲಿಸಿದ ಸಚಿವೆ, ಜನರ ಜೀವದ ರಕ್ಷಣೆಯ ಬಗ್ಗೆ ಇಷ್ಟುನಿರ್ಲಕ್ಷ ವಹಿಸಿದರೇ ಅವರನ್ನು ಬ್ಲಾಕ್ ಲೀಸ್ಟಿಗೆ ಹಾಕಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು. ಕೊನೆಗೆ ಈ ಹೊಂಡವು ಈ ಮಳೆಗಾಲದಲ್ಲಿ ಭಾರೀ ದುರಂತಕ್ಕೆ ಕಾರಣವಾಗಿ ಮಾಧ್ಯಮಗಳಲ್ಲಿ ರಾಷ್ಟ್ರೀಯ ಮಟ್ಟದ ಸುದ್ದಿಯಾಗುವುದಕ್ಕೆ ಮೊದಲೇ, ಅಗೆದ ಹೊಂಡವನ್ನು ಪುನಃ ಮುಚ್ಚಿ, ಮಳೆಗಾಲದ ನಂತರ ಪುನಃ ಅಗೆದು ಕಾಮಗಾರಿಯನ್ನು ಮುಂದುವರಿಸಿ ಎಂದು ಸಚಿವರು ಸಲಹೆ ಮಾಡಿದರು. ವೇದಿಕೆಯಲ್ಲಿ ಶಾಸಕರಾದ ಯಶ್ಪಾಲ್ ಸುವರ್ಣ, ಗುರುರಾಜ ಗಂಟಿಹೊಳೆ, ಸುರೇಶ್ ಶೆಟ್ಟಿಗುರ್ಮೆ, ಕಿರಣ್ ಕೊಡ್ಗಿ ಉಪಸ್ಥಿತರಿದ್ದರು.
ಹೊಂದಾಣಿಕೆ ಇಲ್ಲದಿದ್ದರೆ ಆರೋಪಗಳ ಬಗ್ಗೆ ತನಿಖೆಗೆ ಆದೇಶಿಸಿ: ಪ್ರತಾಪ್ ಸಿಂಹ ಸವಾಲು
ಉಡುಪಿ ಸ್ವಚ್ಛತೆಯನ್ನು ಪ್ರಧಾನಿಗೆ ತಿಳಿಸುತ್ತೇನೆ: ಸ್ವಚ್ಛ ಭಾರತ್ ಮಿಶನ್ ನಡಿ ಉಡುಪಿ ಜಿಲ್ಲೆ ಘನ ತ್ಯಾಜ್ಯ ವಸ್ತುಗಳ ನಿರ್ವಹಣೆಯಲ್ಲಿ ರಾಜ್ಯ ಮಟ್ಟದಲ್ಲಿ ಅತ್ಯುತ್ತಮ ಸಾಧನೆ ಮಾಡಿದ್ದು, 155 ಗ್ರಾಪಂಗಳಲ್ಲಿ ಘನ ದ್ರವ ಸಂಪನ್ಮೂಲ ನಿರ್ವಹಣಾ ಘಟಕಗಳನ್ನು ಆರಂಭಿಸಲಾಗಿದೆ. ಜಿಲ್ಲೆಯ ಶೇ.70 ಮನೆಗಳವರು ತ್ಯಾಜ್ಯವನ್ನು ಈ ಘಟಕಗಳಿಗೆ ನೀಡುತ್ತಿದ್ದಾರೆ. ಅದನ್ನು ವಿಂಗಡಿಸಿ ಆರ್ಥಿಕ ಸಂಪನ್ಮೂಲವಾಗಿ ಪರಿವರ್ತಿಸಲಾಗುತ್ತಿದೆ, ಇದನ್ನು ಮಹಿಳೆಯರೇ ಮಾಡುತ್ತಿದ್ದಾರೆ ಎಂದು ಜಿಪಂ ಸಿಇಒ ಪ್ರಸನ್ನ ಅವರು ಸಾಕ್ಷ್ಯಚಿತ್ರವನ್ನು ಪ್ರಸ್ತುತಪಡಿಸಿದರು. ಈ ಸಾಧನೆಗೆ ಮೆಚ್ಚುಗೆ ವ್ಯಕ್ತಪಡಿಸಿದ ಸಚಿವೆ ಶೋಭಾ ಕರಂದ್ಲಾಜೆ ಈ ಸಾಕ್ಷ್ಯಚಿತ್ರವನ್ನು ಪ್ರಧಾನಿ ನರೇಂದ್ರ ಮೋದಿ ಅವರ ಗಮನಕ್ಕೆ ತರುವುದಾಗಿ ಹೇಳಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ