
ಹುಬ್ಬಳ್ಳಿ(ಏ.07): ಒಳಮೀಸಲಾತಿ ಜತೆ ಮೀಸಲಾತಿ ಪ್ರಮಾಣ ಹೆಚ್ಚಳ ಐತಿಹಾಸಿಕ ತೀರ್ಮಾನ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ರಾಜ್ಯ ಬಿಜೆಪಿ ಸರ್ಕಾರದ ನಡೆಯನ್ನು ಶ್ಲಾಘಿಸಿದರು. ಇಲ್ಲಿನ ನೆಹರು ಮೈದಾನದಲ್ಲಿ ಪರಿಶಿಷ್ಟಸಮುದಾಯಗಳ ಒಕ್ಕೂಟದಿಂದ ಆಯೋಜಿಸಿದ್ದ ಬಿಜೆಪಿ ಸರ್ಕಾರಕ್ಕಾಗಿನ ಅಭಿನಂದನಾ ಸಮಾರಂಭದಲ್ಲಿ ಗುರುವಾರ ಮಾತನಾಡಿ, ಯಾವ ರಾಜ್ಯದಲ್ಲೂ ಇಂಥದ್ದೊಂದು ನಿರ್ಣಯ ಕೈಗೊಳ್ಳಲು ಸಾಧ್ಯವಾಗಿಲ್ಲ. ಆದರೆ ಕಾಂಗ್ರೆಸ್ನವರು ಉದ್ದೇಶಪೂರ್ವಕವಾಗಿಯೇ ದಾರಿ ತಪ್ಪಿಸುತ್ತಿದ್ದಾರೆ. ಈ ಬಗ್ಗೆ ದಲಿತ ಸಮುದಾಯದವರು ಎಚ್ಚರಿಕೆಯಿಂದಿರಬೇಕು. ಬಿಜೆಪಿಯನ್ನು ಅಧಿಕಾರಕ್ಕೆ ತರುವುದನ್ನು ತಡೆಯಲು ಯಾವ ಶಕ್ತಿಯಿಂದಲೂ ಸಾಧ್ಯವಿಲ್ಲ. ಈ ಸಲ ಬಿಜೆಪಿ ಅಧಿಕಾರಕ್ಕೆ ಬರುವುದು ಖಚಿತ ಎಂದು ಭರವಸೆ ನೀಡಿದರು.
ನಾವು ಯಾವುದೇ ಸಮುದಾಯದ ಮೀಸಲಾತಿ ಹಿಂಪಡೆಯುವುದಿಲ್ಲ. ಯಾರಿಗೂ ಅನ್ಯಾಯ ಮಾಡುವುದಿಲ್ಲ ಎಂದು ಸ್ಪಷ್ಟಪಡಿಸಿದ ಅವರು ಬಂಜಾರ, ಕೊರಮ, ಕೊರಚ, ಬೋವಿ ಸಮಾಜದವರ ಮೀಸಲಾತಿ ಹಿಂಪಡೆಯಲಾಗುತ್ತಿದೆ ಎಂದು ಜನರ ದಿಕ್ಕು ತಪ್ಪಿಸುವ ಕೆಲಸ ಕಾಂಗ್ರೆಸ್ ಮಾಡುತ್ತಿದೆ. ಅಂಥವುಗಳಿಗೆ ಸಮುದಾಯದವರು ಕಿವಿಗೊಡಬಾರದು ಎಂದರು.
ದೀನದಲಿತರನ್ನ ಮತಬ್ಯಾಂಕ್ ಮಾಡಿಕೊಂಡಿದ್ದ ಕಾಂಗ್ರೆಸ್: ನಾವು ಮೀಸಲಾತಿ ನೀಡಿ ನ್ಯಾಯ ಒದಗಿಸಿದ್ದೇವೆ: ಸಿಎಂ
ದಲಿತರನ್ನು ಕಾಂಗ್ರೆಸ್ ಬರೀ ವೋಟ್ಬ್ಯಾಂಕನ್ನಾಗಿ ಮಾತ್ರ ಬಳಸಿಕೊಳ್ಳುತ್ತಿದೆ. ಆದರೆ ಬಿಜೆಪಿ ಹಾಗಲ್ಲ. ಹೇಳಿದ್ದನ್ನು ಮಾಡಿತೋರಿಸುತ್ತದೆ. ದಲಿತರಿಗೆ ಅನ್ಯಾಯ, ದ್ರೋಹ ಮಾಡಿದ ಯಾವುದಾದರೂ ಪಕ್ಷ ಇದ್ದರೆ ಅಂದರೆ ಅದು ಕಾಂಗ್ರೆಸ್ ಮಾತ್ರ. ಅಂಬೇಡ್ಕರ್ಗೆ ಅನ್ಯಾಯ ಮಾಡಿದ್ದು ಕಾಂಗ್ರೆಸ್ ಎಂದರು.
ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಶಿ ಅವರು ಮಾತನಾಡಿ, ದೇಶದಲ್ಲಿ ದಲಿತರಿಗೆ ಅನ್ಯಾಯ ಮಾಡಿದ್ದು ಕಾಂಗ್ರೆಸ್ ಪಕ್ಷ. ಅಂಬೇಡ್ಕರ್ ಅವರಿಗೆ ಸಂಸತ್ತಿಗೆ ಬಾರದಂತೆ ತಡೆಹಿಡಿಯಿತು. ಅಂತಹ ಕಾಂಗ್ರೆಸ್ಗೆ ಈ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸಿ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಮನವಿ ಮಾಡಿದರು.
ಕಾಂಗ್ರೆಸ್ ಸುಡುವ ಮನೆ. ಅಲ್ಲಿಗೆ ದಲಿತರು ಹೋಗಬೇಡಿ ಎಂದು ಅಂಬೇಡ್ಕರ್ ಹೇಳಿದ್ದರು. ಬಾಬು ಜಗಜೀವನರಾಮ್ ಅವರಿಗೆ ಮೋಸ ಮಾಡಿದ್ದು ಕಾಂಗ್ರೆಸ್ ಎಂದ ಅವರು, ಕರ್ನಾಟಕದಲ್ಲೂ ಜಿ.ಪರಮೇಶ್ವರ್, ಮುನಿಯಪ್ಪ, ಮಲ್ಲಿಕಾರ್ಜುನ ಖರ್ಗೆ, ಅಖಂಡ ಶ್ರೀನಿವಾಸ ಮೂರ್ತಿ ಅವರನ್ನು ಮುಳುಗಿಸಿದ್ದು ಕಾಂಗ್ರೆಸ್. ನಾವು ಮೀಸಲಾತಿ ತಂದರೆ, ಅವರು ಮೀಸಲಾತಿ ತೆಗೆಯುತ್ತೇವೆ ಎಂದು ಹೇಳುತ್ತಿದ್ದಾರೆ ಎಂದು ಕಿಡಿಕಾರಿದರು.
ಮೀಸಲಾತಿ ಕೊಡುವವರು ಬೇಕೋ? ಮೀಸಲಾತಿ ತೆಗೆಯುವವರು ಬೇಕೋ ಎಂದು ನೀವೇ ನಿರ್ಧರಿಸಿ ಎಂದು ಇದೇ ವೇಳೆ ಸಭಿಕರನ್ನು ಪ್ರಶ್ನಿಸಿದರು.
2016ರಲ್ಲಿ ಇದೇ ಮೈದಾನದಲ್ಲಿ ಒಳಮೀಸಲಾತಿ ಸಂಬಂಧಿಸಿ ದೊಡ್ಡ ಸಮಾವೇಶ ನಡೆದಿತ್ತು. ಆಗ ಒಳಮೀಸಲಾತಿ ಜಾರಿಗೊಳಿಸುವ ಕುರಿತು ಆಗಿನ ಸಿಎಂ ಸಿದ್ದರಾಮಯ್ಯ ಚಕಾರ ಕೂಡ ಎತ್ತಲಿಲ್ಲ. ಬಿಜೆಪಿ ಸರ್ಕಾರ ಬಂದರೆ ಒಳಮೀಸಲಾತಿ ಜಾರಿಗೊಳಿಸುವುದಾಗಿ ಅವತ್ತೇ ನಾನು ಹೇಳಿದ್ದೆ. ಅದರಂತೆ ಇದೀಗ ಒಳಮೀಸಲಾತಿ ಘೋಷಿಸಿದ್ದೇವೆ ಅಂತ ಮಾಜಿ ಸಿಎಂ ಜಗದೀಶ್ ಶೆಟ್ಟರ್ ತಿಳಿಸಿದ್ದಾರೆ.
ದೀನದಲಿತರನ್ನ ಮತಬ್ಯಾಂಕ್ ಮಾಡಿಕೊಂಡಿದ್ದ ಕಾಂಗ್ರೆಸ್: ನಾವು ಮೀಸಲಾತಿ ನೀಡಿ ನ್ಯಾಯ ಒದಗಿಸಿದ್ದೇವೆ: ಸಿಎಂ
30 ವರ್ಷಗಳ ಬೇಡಿಕೆಗೆ ಈಗ ಸ್ಪಂದನೆ ಸಿಕ್ಕಂತಾಗಿದೆ. ಮೀಸಲಾತಿ ಜತೆಗೆ ಪೌರಕಾರ್ಮಿಕರು, ಸಫಾಯಿ ಕರ್ಮಚಾರಿಗಳನ್ನು ಸರ್ಕಾರಿ ನೌಕರರನ್ನಾಗಿಸಿದ್ದಾರೆ. ನಾವೆಲ್ಲರೂ ಸೇರಿಕೊಂಡು ಬಿಜೆಪಿಯ ಋುಣ ತೀರಿಸುವ ಕೆಲಸ ಮಾಡಬೇಕಿದೆ ಅಂತ ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಹೇಳಿದ್ದಾರೆ.
ಒಳ ಮೀಸಲಾತಿ ಸಂಬಂಧಿಸಿ ಕಾಂಗ್ರೆಸ್ ನಾಮ್ ಕೇ ವಾಸ್ತೆ ಆಯೋಗ ಮಾಡಿತ್ತು. ಬಿಜೆಪಿ ಸರ್ಕಾರ ಬಂದ ಮೇಲೆಯೇ ಅದಕ್ಕೆ ಅನುದಾನ ಕೊಟ್ಟಿದ್ದು. ವರದಿ ಬಂದ ನಂತರ ಇದೀಗ ಒಳಮೀಸಲಾತಿ ಕೊಟ್ಟಿದೆ. ಶೋಷಿತ ಸಮುದಾಯಕ್ಕೆ ನ್ಯಾಯ ಕೊಟ್ಟ ಬಿಜೆಪಿಯ ಋುಣ ತೀರಿಸಬೇಕು ಅಂತ ಕೇಂದ್ರ ಸಚಿವ ಎ.ನಾರಾಯಣಸ್ವಾಮಿ ತಿಳಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ