
ವರದಿ : ರಾಕೇಶ್ ಎನ್.ಎಸ್.
ಬೆಂಗಳೂರು (ಮೇ.20): ಆರೋಗ್ಯ ವ್ಯವಸ್ಥೆ ತುಸು ಉತ್ತಮವಾಗಿದ್ದರೂ ಕೊರೋನಾ ಮರಣಗಳನ್ನು ನಿಯಂತ್ರಣದಲ್ಲಿಡಬಹುದು ಎಂಬುದಕ್ಕೆ ಕರುನಾಡೇ ಉತ್ತಮ ನಿದರ್ಶನ. ಏಕೆಂದರೆ, ಅಷ್ಟೇನೂ ಉತ್ತಮ ಆರೋಗ್ಯ ವ್ಯವಸ್ಥೆ ಹೊಂದಿಲ್ಲದ ಉತ್ತರ ಕರ್ನಾಟಕದ ಜಿಲ್ಲೆಗಳಲ್ಲಿ ಮರಣ ಹೆಚ್ಚಿದ್ದರೆ, ತುಲನಾತ್ಮಕವಾಗಿ ತುಸು ಉತ್ತಮ ಆರೋಗ್ಯ ವ್ಯವಸ್ಥೆ ಇರುವ ಕರಾವಳಿ, ಮಧ್ಯ ಹಾಗೂ ದಕ್ಷಿಣ ಭಾಗದ ಜಿಲ್ಲೆಗಳಲ್ಲಿ ಮರಣ ದರ ಕಡಿಮೆ ಇದೆ.
ಮೇ 17ರ ರಾಜ್ಯ ಕೋವಿಡ್ ವಾರ್ ರೂಂ ವರದಿಯ ಪ್ರಕಾರ, ಮೇ 11ರಿಂದ ಮೇ 17ರ ಅವಧಿಯಲ್ಲಿ ಹಾವೇರಿ (ಶೇ.4.46), ಬೀದರ್ (ಶೇ. 2.29), ಕಲಬುರಗಿ (ಶೇ.2.14), ವಿಜಯಪುರ (ಶೇ.1.85), ರಾಮನಗರ (ಶೇ. 1.60) ಅತಿ ಹೆಚ್ಚು ಮರಣ ದರ ದಾಖಲಾಗಿರುವ ರಾಜ್ಯದ ಟಾಪ್ 5 ಜಿಲ್ಲೆಗಳು. ಇದರಲ್ಲಿ ರಾಮನಗರವನ್ನು ಹೊರತುಪಡಿಸಿ ಅಗ್ರ ನಾಲ್ಕು ಜಿಲ್ಲೆಗಳು ಉತ್ತರ ಕರ್ನಾಟಕದಲ್ಲಿವೆ.
ನಮ್ಮ ಪ್ರಾಣವಾಯು ನಮಗೆ: ಕೇಂದ್ರ ಸರ್ಕಾರ ತಾತ್ವಿಕ ಒಪ್ಪಿಗೆ ...
ಅದೇ ರೀತಿ ಅತಿ ಕಡಿಮೆ ಮರಣ ದರ ದಾಖಲಾಗಿರುವ ಜಿಲ್ಲೆಗಳೆಂದರೆ ದಾವಣಗೆರೆ (ಶೇ.0.22), ಬೆಳಗಾವಿ (ಶೇ.0.28), ಚಿಕ್ಕಮಗಳೂರು (ಶೇ.0.32), ದಕ್ಷಿಣ ಕನ್ನಡ (ಶೇ.0.39), ಮೈಸೂರು ಮತ್ತು ಉಡುಪಿ (ಶೇ.0.55). ಈ ಜಿಲ್ಲೆಗಳು ತುಸು ಉತ್ತಮ ಆರೋಗ್ಯ ವ್ಯವಸ್ಥೆಯನ್ನು ಹೊಂದಿವೆ.
ಈ ಅವಧಿಯಲ್ಲಿ ಹಾವೇರಿಯಲ್ಲಿ 1,234, ಬೀದರ್ 1,247, ಕಲಬುರಗಿ 4,244, ವಿಜಯಪುರ 2,817 ಮತ್ತು ರಾಮನಗರದಲ್ಲಿ 2,436 ಮಂದಿಯಲ್ಲಿ ಸೋಂಕು ಪತ್ತೆಯಾಗಿತ್ತು. ಇದೇ ವೇಳೆ ಕಡಿಮೆ ಮರಣದರ ದಾಖಲಾಗಿರುವ ದಾವಣಗೆರೆ 3,631, ಬೆಳಗಾವಿ 8,173, ಚಿಕ್ಕಮಗಳೂರು 4,714, ದಕ್ಷಿಣ ಕನ್ನಡ 6,665, ಮೈಸೂರು 11,653 ಮತ್ತು ಉಡುಪಿ ಜಿಲ್ಲೆಯಲ್ಲಿ 5,817 ಸೋಂಕಿತರು ಒಂದು ವಾರದ ಅವಧಿಯಲ್ಲಿ ಪತ್ತೆಯಾಗಿದ್ದಾರೆ.
ಉತ್ತಮ ಆರೋಗ್ಯ ವ್ಯವಸ್ಥೆ ಇದ್ದಲ್ಲಿ 100 ಸೋಂಕಿತರಲ್ಲಿ 99 ಮಂದಿಯನ್ನು ಬದುಕಿಸಬಹುದು. ಸಕಾಲಿಕವಾಗಿ ಬೆಡ್, ಆಮ್ಲಜನಕ, ಚಿಕಿತ್ಸೆ ಸಿಕ್ಕರೆ ರೋಗಿಗಳು ಬದುಕಿಕೊಳ್ಳುವ ಸಾಧ್ಯತೆ ಹೆಚ್ಚು ಎನ್ನುತ್ತಾರೆ ಎಂದು ಕೋವಿಡ್ ತಾಂತ್ರಿಕ ಸಲಹಾ ಸಮಿತಿಯ ಸದಸ್ಯ ಡಾ. ಗಿರಿಧರ್ ಬಾಬು.
ಅದೇ ರೀತಿ ಕೋವಿಡ್ ಮರಣ ಸಂಖ್ಯೆಯನ್ನು ವರದಿ ಮಾಡುವುದು ಕೂಡ ಮುಖ್ಯ. ಉತ್ತರ ಪ್ರದೇಶ, ಬಿಹಾರ ಗ್ರಾಮಗಳಲ್ಲಿ 8 ಮಂದಿ ಕೋವಿಡ್ನಿಂದ ಮೃತರಾಗಿದ್ದಾರೆ ಎಂದು ಹೇಳಿ ನೂರಾರು ಶವಗಳನ್ನು ಗಂಗಾ ನದಿಗೆ ಬಿಸಾಕಲಾಗಿದೆ. ಈ ರೀತಿ ಮಾಡುವುದು ಸಲ್ಲದು. ನೈಜ ಮರಣ ಮಾಹಿತಿ ದಾಖಲಾಗಬೇಕು. ಹೆಚ್ಚಿನ ಮರಣ ಪ್ರಮಾಣ ದರ ಇದೆಯೆಂದರೆ ಆ ಜಿಲ್ಲೆಗಳಲ್ಲಿ ಕೋವಿಡ್ ಮರಣ ಪ್ರಮಾಣವನ್ನು ಮುಚ್ಚಿಡುತ್ತಿಲ್ಲ ಎಂದು ಭಾವಿಸಬಹುದು ಎಂದು ಡಾ. ಗಿರಿಧರ್ ಬಾಬು ಹೇಳುತ್ತಾರೆ.
ಏಪಿಲ್ 27 ರಿಂದ ಮೇ 3ರ ಅವಧಿಯಲ್ಲಿ ರಾಜ್ಯದ ಮರಣ ದರ ಶೇ. 0.6 ಇದ್ದದ್ದು ಈಗ ಶೇ.1.08ಕ್ಕೆ ಜಿಗಿದಿದೆ. ಮೇ ಮೊದಲ ವಾರ ರಾಜ್ಯದಲ್ಲಿ ಗರಿಷ್ಠ ಸಂಖ್ಯೆಯ ಸೋಂಕಿತರು ಪತ್ತೆಯಾಗಿದ್ದ ಹಿನ್ನೆಲೆಯಲ್ಲಿ ಈ ವಾರ ಮರಣ ಪ್ರಮಾಣ ಹೆಚ್ಚಿನ ಪ್ರಮಾಣದಲ್ಲಿ ಇರುವ ಸಾಧ್ಯತೆ ಹೆಚ್ಚು ಎಂದು ಆರೋಗ್ಯ ತಜ್ಞರು ಹೇಳುತ್ತಾರೆ.
ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್ ನ್ಯೂಸ್ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ