2 ಸೈಟ್‌ ಬದಲು ಸಿಎಂ ಪತ್ನಿಗೆ 14 ಸೈಟ್‌, ಇಂಥಾ ಕೇಸ್‌ ಬಿಟ್ಟು ಇನ್ನಾವ ಕೇಸ್‌ ತನಿಖೆ ಸಾಧ್ಯ: ಜಡ್ಜ್‌

By Kannadaprabha NewsFirst Published Sep 25, 2024, 8:45 AM IST
Highlights

ಪ್ರಕರಣವನ್ನು ಎಲ್ಲ ಆಯಾಮಗಳಿಂದ ವಿಶ್ಲೇಷಿಸಿರುವ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರು, ನಿಗದಿತ ಅರ್ಹತೆ ಇಲ್ಲದಿದ್ದರೂ ಮುಖ್ಯಮಂತ್ರಿಗಳ ಪತ್ನಿ 56 ಕೋಟಿ ರು. ಮೌಲ್ಯದ 14 ನಿವೇಶನಗಳ ಪಡೆದುಕೊಂಡಿದ್ದಾರೆ. ಇಂತಹ ಪ್ರಕರಣ ಬಿಟ್ಟು ಮತ್ಯಾವ ಪ್ರಕರಣ ತನಿಖೆ ನಡೆಸಬಹುದು ಎಂಬುದು ನನಗೆ ಅರ್ಥವಾಗುವುದಿಲ್ಲ. ಹಾಗಾಗಿ, ಪ್ರಕರಣದಲ್ಲಿ ತನಿಖೆ ಅಗತ್ಯವಿದೆ ಎಂಬುದು ಸ್ಪಷ್ಟವಾಗಿ ಮನದಟ್ಟಾಗುತ್ತದೆ ಎಂದು ತೀರ್ಪಿನಲ್ಲಿ ಹೇಳಿದ್ದಾರೆ.
 

ಬೆಂಗಳೂರು(ಸೆ.25):  ಮುಡಾ ಪ್ರಕರಣದಲ್ಲಿ ಮುಖ್ಯಮಂತ್ರಿಗಳ ಪತ್ನಿ 40*60 ಚದರ ಅಡಿಯ ಎರಡು ನಿವೇಶನ ಪಡೆಯಲು ಅರ್ಹರಾಗಿದ್ದರೂ, 56 ಕೋಟಿ ರು. ಮೌಲ್ಯದ 14 ನಿವೇಶನಗಳನ್ನು ಪಡೆದಿಕೊಂಡಿರುವ ಬಗ್ಗೆ ತೀವ್ರ ಆಘಾತ ವ್ಯಕ್ತಪಡಿಸಿರುವ ಹೈಕೋರ್ಟ್‌, ಕಾನೂನು ಬಾಹಿರ ನಿರ್ಣಯದ ಆಧಾರದ ಮೇಲೆ ಮುಡಾ ಮಂಜೂರು ಮಾಡಿರುವ ಈ 14 ನಿವೇಶನಗಳು ಏನಾಗಿವೆ ಎಂಬುದರ ಬಗ್ಗೆ ತನಿಖೆ ನಡೆಯಬೇಕು ಎಂದು ಸ್ಪಷ್ಟಪಡಿಸಿದೆ.

ಪ್ರಕರಣವನ್ನು ಎಲ್ಲ ಆಯಾಮಗಳಿಂದ ವಿಶ್ಲೇಷಿಸಿರುವ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರು, ನಿಗದಿತ ಅರ್ಹತೆ ಇಲ್ಲದಿದ್ದರೂ ಮುಖ್ಯಮಂತ್ರಿಗಳ ಪತ್ನಿ 56 ಕೋಟಿ ರು. ಮೌಲ್ಯದ 14 ನಿವೇಶನಗಳ ಪಡೆದುಕೊಂಡಿದ್ದಾರೆ. ಇಂತಹ ಪ್ರಕರಣ ಬಿಟ್ಟು ಮತ್ಯಾವ ಪ್ರಕರಣ ತನಿಖೆ ನಡೆಸಬಹುದು ಎಂಬುದು ನನಗೆ ಅರ್ಥವಾಗುವುದಿಲ್ಲ. ಹಾಗಾಗಿ, ಪ್ರಕರಣದಲ್ಲಿ ತನಿಖೆ ಅಗತ್ಯವಿದೆ ಎಂಬುದು ಸ್ಪಷ್ಟವಾಗಿ ಮನದಟ್ಟಾಗುತ್ತದೆ ಎಂದು ತೀರ್ಪಿನಲ್ಲಿ ಹೇಳಿದ್ದಾರೆ.

Latest Videos

ಮುಡಾ ಹಗರಣ: ಸಿದ್ದು ತನಿಖೆಗೆ 11 ಸಮರ್ಥನೆ ನೀಡಿದ ಹೈಕೋರ್ಟ್‌

ಸಿಎಂ ಪತ್ನಿ 2 ನಿವೇಶನಕ್ಕೆ ಅರ್ಹ:

ಮುಡಾ ನಿಯಮಗಳ ಪ್ರಕಾರವೇ ಬಡಾವಣೆ ಅಭಿವೃದ್ಧಿಗೆ ಮೂರು ಎಕರೆಗಿಂತ ಹೆಚ್ಚು ಜಮೀನು ಕಳೆದುಕೊಂಡ ವ್ಯಕ್ತಿ 4,800 ಚದರ ಅಡಿ ವಿಸ್ತೀರ್ಣದ 40*60 ಎರಡು ನಿವೇಶನಗಳನ್ನು ಪಡೆಯಲು ಅರ್ಹರಾಗಿರುತ್ತಾರೆ. ಈ ಪ್ರಕರಣದಲ್ಲಿ 14 ನಿವೇಶನ ನೀಡಿರುವುದು ಆಘಾತ ಮೂಡಿಸಿದೆ. ಪರ್ಯಾಯ ನಿವೇಶನವನ್ನು ಕೆಸರೆ ಅಥವಾ ಬಳಿಕ ನಿರ್ಮಾಣಗೊಂಡ ಯಾವುದೇ ಬಡಾವಣೆಯಲ್ಲಿ ನೀಡದೆ ಮೈಸೂರಿನ ಹೃದಯ ಭಾಗದ ವಿಜಯನಗರದಲ್ಲಿ ನೀಡಲಾಗಿದೆ. ಆದ್ದರಿಂದ ಮುಖ್ಯಮಂತ್ರಿಗಳ ಅನುಕೂಲಕ್ಕಾಗಿ ಹೇಗೆ ಮತ್ತು ಯಾಕೆ ನಿಯಮವನ್ನು ಸಡಿಲಿಸಲಾಯಿತು ಎಂಬ ಬಗ್ಗೆ ತನಿಖೆ ನಡೆಯುವ ಅಗತ್ಯವಿದೆ ಎಂದು ನ್ಯಾಯಾಲಯ ಹೇಳಿದೆ.

ಮೇಲ್ನೋಟಕ್ಕೆ ದೂರುದಾರರು ತಮ್ಮ ಅಧಿಕಾರವನ್ನು ದುರುಪಯೋಗ ಪಡಿಸಿಕೊಂಡಿರುವುದು, ಪ್ರಭಾವ ಬಳಸಿರುವುದು ಕಂಡು ಬರುತ್ತದೆ. ಪ್ರಭಾವ ಬೀರುವುದಕ್ಕೆ ಯಾವುದೇ ಶಿಫಾರಸು ಮಾಡುವ ಅಥವಾ ಆದೇಶ ಹೊರಡಿಸುವ ಅಗತ್ಯವಿಲ್ಲ. ಸಿದ್ದರಾಮಯ್ಯ ಮತ್ತೆ ಮುಖ್ಯಮಂತ್ರಿಯಾದ ಬಳಿಕ 50:50 ಅನುಪಾತದಲ್ಲಿ ಪರಿಹಾರ ಭೂಮಿ ನೀಡುವ ನಿರ್ಣಯವನ್ನು ಮುಡಾ ಹಿಂತೆಗೆದುಕೊಂಡಿತ್ತು. ಆ ಸಭೆಯಲ್ಲಿ ಭಾಗಿಯಾಗಿದ್ದ ಸಿದ್ದರಾಮಯ್ಯ ಅವರ ಮಗ ಡಾ.ಯತೀಂದ್ರ ನಿವೇಶನ ಹಂಚಿಕೆ ಬಗ್ಗೆ ಚರ್ಚೆ ನಡೆಯುವಾಗ ಮೌನವಾಗಿದ್ದರು ಎಂಬ ವಾದ ನಿಜಕ್ಕೂ ಹಾಸ್ಯಾಸ್ಪದ ಎಂದು ಹೈಕೋರ್ಟ್‌ ಆದೇಶದಲ್ಲಿ ತಿಳಿಸಿದೆ.

click me!