
ಬೆಂಗಳೂರು(ಜು.22): ಬೆಂಗಳೂರು ನಗರ ಒಳಗೊಂಡಂತೆ ದಕ್ಷಿಣ ಒಳನಾಡಿನ ಏಳು ಜಿಲ್ಲೆಗಳಲ್ಲಿ ಶನಿವಾರ ಬೆಳಗ್ಗೆ 8.30ರವರೆಗೆ ಭಾರಿ ಮಳೆಯಾಗುವ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ ‘ಯೆಲ್ಲೋ ಅಲರ್ಚ್’ ನೀಡಲಾಗಿದೆ. ಬೆಂಗಳೂರು ಗ್ರಾಮಾಂತರ, ಮೈಸೂರು, ಮಲೆನಾಡಿನ ಜಿಲ್ಲೆಗಳಾದ ಕೊಡಗು, ಚಿಕ್ಕಮಗಳೂರು, ಹಾಸನ, ಶಿವಮೊಗ್ಗ ಜಿಲ್ಲೆಯಲ್ಲಿ ಭಾರಿ ಮಳೆಯಾಗುವ ನಿರೀಕ್ಷೆಯಿದೆ. ರಾಜ್ಯದ ಉಳಿದ ಜಿಲ್ಲೆಗಳಿಗೆ ಯಾವುದೇ ಅಲರ್ಟ್ ನೀಡಲಾಗಿಲ್ಲ. ಶನಿವಾರದಿಂದ ಸೋಮವಾರದ ತನಕ ರಾಜ್ಯದಲ್ಲಿ ಸಾಧಾರಣ ಮಳೆಯಾಗುವ ನಿರೀಕ್ಷೆಯಿದೆ.
ಗುರುವಾರ ಬೆಳಗ್ಗೆ 8.30ಕ್ಕೆ ಪೂರ್ಣಗೊಂಡಂತೆ ಕಳೆದ 24 ಗಂಟೆ ಅವಧಿಯಲ್ಲಿ ರಾಜ್ಯದ ಕರಾವಳಿಯ ಬಹುತೇಕ ಎಲ್ಲೆಡೆ, ದಕ್ಷಿಣ ಒಳನಾಡಿನ ಹಲವು ಕಡೆ ಮತ್ತು ಉತ್ತರ ಒಳನಾಡಿನ ಕೆಲವು ಕಡೆ ಮಳೆಯಾಗಿದೆ. ಕರಾವಳಿ ಮತ್ತು ಉತ್ತರ ಒಳನಾಡಿನಲ್ಲಿ ಮುಂಗಾರು ದುರ್ಬಲವಾಗಿತ್ತು. ದಕ್ಷಿಣ ಒಳನಾಡಿನಲ್ಲಿ ವಾಡಿಕೆಯ ಮಳೆಯಾಗಿದೆ.
ಕರ್ನಾಟಕದಲ್ಲಿ ಮಳೆಗೆ 1,000 ಕಿಮೀ ರಸ್ತೆ ಹಾನಿ, ತುರ್ತು ದುರಸ್ತಿಗೆ 200 ಕೋಟಿ ರಿಲೀಸ್, ಸಿ.ಸಿ. ಪಾಟೀಲ್
ಬೆಂಗಳೂರು ಗ್ರಾಮಾಂತರದ ವಗಟಾದಲ್ಲಿ 10.75 ಸೆಂ.ಮೀ, ಶಿವನಪುರ 9.35, ದೇವನಗೊಂದಿ 9.25, ಕೋಲಾರದ ಬಂಗಾರಪೇಟೆಯಲ್ಲಿ 9, ಬೆಂಗಳೂರು ನಗರ 8 ಸೆಂ.ಮೀ. ಮಳೆಯಾಗಿದೆ.
ಬುಧವಾರ ರಾತ್ರಿ ಸುರಿದದ್ದು ಜುಲೈನ 10 ವರ್ಷದ ಗರಿಷ್ಠ ಮಳೆ!
ಬೆಂಗಳೂರು ನಗರದಲ್ಲಿ ಬುಧವಾರ ತಡರಾತ್ರಿ ದಾಖಲೆಯ ಮಳೆ ಸುರಿದಿದ್ದು, ಭಾರತೀಯ ಹವಾಮಾನ ಕೇಂದ್ರದ ನಗರದ ಮಾಪನದಲ್ಲಿ 8.25 ಸೆಂ.ಮೀ. ಮಳೆ ದಾಖಲಾಗಿದ್ದು, ಕಳೆದ 10 ವರ್ಷದಲ್ಲಿ ಜುಲೈ ತಿಂಗಳಲ್ಲಿ ಒಂದು ದಿನದಲ್ಲಿ ದಾಖಲಾದ ಗರಿಷ್ಠ ಪ್ರಮಾಣದ ಮಳೆಯಾಗಿದೆ.
ಕಳೆದ ವರ್ಷದ ಜುಲೈ 26ರಂದು 5.98 ಸೆಂ.ಮೀ. ಮಳೆ ದಾಖಲಾಗಿತ್ತು. ಈ ದಾಖಲೆಯನ್ನು ಬುಧವಾರ ದಾಖಲೆ ಮುರಿದಿದೆ. 1998ರ ಜುಲೈ 18ರಂದು 12.35 ಸೆಂ.ಮೀ ಮಳೆ ಸುರಿದಿರುವುದು ಸಾರ್ವಕಾಲಿಕ ದಾಖಲೆಯಾಗಿದೆ. ಜುಲೈ ತಿಂಗಳಲ್ಲಿ ನಗರದಲ್ಲಿ ಸರಾಸರಿ 11.64 ಸೆಂ.ಮೀ ಮಳೆಯಾಗುತ್ತಿದ್ದರೆ, ಈ ವರ್ಷ ಈಗಾಗಲೇ 13.34 ಸೆಂ.ಮೀ. ಮಳೆಯಾಗಿದೆ.
ಜಿಲ್ಲೆಯಲ್ಲಿ ಶೇಂಗಾ ಬಿತ್ತನೆ ಪ್ರಮಾಣ ಭಾರೀ ಕುಸಿತ!
ರಾತ್ರಿ 11 ಗಂಟೆಯ ಹೊತ್ತಿಗೆ ಪ್ರಾರಂಭಗೊಂಡ ಮಳೆ ರಾತ್ರಿ 2 ಗಂಟೆಯವರೆಗೂ ಸುರಿದಿದ್ದು, ಪ್ರಮುಖವಾಗಿ ಸಂಪಂಗಿರಾಮ ನಗರ (1) 8.5 ಸೆಂ.ಮೀ, ಸಂಪಂಗಿರಾಮ ನಗರ (2) 7.9, ಹಗದೂರು 7.5, ಚಾಮರಾಜಪೇಟೆ, ಕಾಟನ್ಪೇಟೆ ತಲಾ 6.5, ಪುಲಕೇಶಿ ನಗರ 6.45, ಹಂಪಿ ನಗರ, ಮಾರುತಿ ಮಂದಿರ ವಾರ್ಡ್ 5.9 ಸೆಂ.ಮೀ. ಮಳೆಯಾಗಿದೆ.
ಯೆಲ್ಲೋ ಅಲರ್ಟ್
ನಗರಕ್ಕೆ ಶನಿವಾರ ಬೆಳಗ್ಗೆ 8.30ರ ತನಕ ಯೆಲ್ಲೋ ಅಲರ್ಟ್ ನೀಡಲಾಗಿದ್ದು, ಭಾರಿ ಮಳೆಯಾಗುವ ಸಾಧ್ಯತೆಗಳಿವೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ನಗರದಲ್ಲಿ ಮೋಡ ಕವಿದ ವಾತಾವರಣ ಇರಲಿದ್ದು, ಗುಡುಗು ಸಹಿತ ಮಳೆಯಾಗುವ ಸಾಧ್ಯತೆಗಳಿವೆ. ನಗರದ ಗರಿಷ್ಠ ಮತ್ತು ಕನಿಷ್ಠ ತಾಪಮಾನ ಕ್ರಮವಾಗಿ 27.9 ಮತ್ತು 20.5 ಡಿಗ್ರಿ ಸೆಲ್ಸಿಯಸ್ ದಾಖಲಾಗುವ ನಿರೀಕ್ಷೆಯಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ