ಹೃದಯಾಘಾತ: ಕರ್ಣಾಟಕ ಬಾಂಕ್‌ ಮಾಜಿ ಎಂಡಿ ಜಯರಾಮ ಭಟ್‌ ನಿಧನ

By Kannadaprabha NewsFirst Published Aug 10, 2023, 5:39 AM IST
Highlights

ಕರ್ಣಾಟಕ ಬ್ಯಾಂಕ್‌ ಮಾಜಿ ಅಧ್ಯಕ್ಷ ಪಿ.ಜಯರಾಮ ಭಟ್‌(72)ಬುಧವಾರ ಮಂಗಳೂರಿನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಹೃದಯಾಘಾತದಿಂದ ನಿಧನ ಹೊಂದಿದ್ದಾರೆ.

ಮಂಗಳೂರು (ಆ.10) : ಕರ್ಣಾಟಕ ಬ್ಯಾಂಕ್‌ ಮಾಜಿ ಅಧ್ಯಕ್ಷ ಪಿ.ಜಯರಾಮ ಭಟ್‌(72)ಬುಧವಾರ ಮಂಗಳೂರಿನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಹೃದಯಾಘಾತದಿಂದ ನಿಧನ ಹೊಂದಿದ್ದಾರೆ. ಮಂಗಳವಾರ ಮುಂಬೈಗೆ ತೆರಳಿದ್ದ ಅವರು ಇನ್ಶೂರೆನ್ಸ್‌ ಕಂಪನಿಯೊಂದರ ಆಡಳಿತ ಮಂಡಳಿ ಸಭೆಯಲ್ಲಿ ಭಾಗವಹಿಸಿ ಬುಧವಾರ ಮಧ್ಯಾಹ್ನ 2.35ರ ಸುಮಾರಿಗೆ ಮುಂಬೈನಿಂದ ವಿಮಾನದಲ್ಲಿ ವಾಪಸಾಗಿದ್ದರು. ಮಂಗಳೂರು ವಿಮಾನ ನಿಲ್ದಾಣದಲ್ಲಿ ಇಳಿದ ಸಂದರ್ಭ ಅವರು ಹಠಾತ್‌ ಹೃದಯಾಘಾತಕ್ಕೆ ಒಳಗಾಗಿದ್ದರು. ಕೂಡಲೇ ಅವರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ನಿಧನ ಹೊಂದಿದರು.

ಗುರುವಾರ ಬೆಳಗ್ಗೆ 8 ರಿಂದ 9 ಗಂಟೆ ತನಕ ನಗರದ ಎ.ಜೆ.ಆಸ್ಪತ್ರೆಯಲ್ಲಿ ಅವರ ಅಂತಿಮ ದರ್ಶನಕ್ಕೆ ಸಾರ್ವಜನಿಕರಿಗೆ ಅವಕಾಶ ಕಲ್ಪಿಸಲಾಗಿದೆ. ಬಳಿಕ ಮಂಗಳೂರಿನ ಕದ್ರಿ ರುದ್ರಭೂಮಿಯಲ್ಲಿ ಅಂತ್ಯಸಂಸ್ಕಾರ ನಡೆಯಲಿವೆ ಎಂದು ಕುಟುಂಬದ ಮೂಲಗಳು ತಿಳಿಸಿವೆ. ಮೃತ ಜಯರಾಮ ಭಟ್‌ ಅವರು ಪತ್ನಿ ಹಾಗೂ ಒಬ್ಬ ಪುತ್ರ ಹಾಗೂ ಪುತ್ರಿಯನ್ನು ಅಗಲಿದ್ದಾರೆ.

ಇತ್ತೀಚಿನ ವರ್ಷಗಳಲ್ಲಿ ಯುವಜನರಲ್ಲಿ ಹಾರ್ಟ್‌ಅಟ್ಯಾಕ್ ಹೆಚ್ತಿರೋದ್ಯಾಕೆ?

 

1973ರಿಂದ 2018ರ ನಡುವೆ ಕರ್ಣಾಟಕ ಬ್ಯಾಂಕ್‌ವೊಂದರಲ್ಲೇ ಸುಮಾರು 45 ವರ್ಷಕಾಲ ವ್ಯವಸ್ಥಾಪಕ ನಿರ್ದೇಶಕ ಸೇರಿ ವಿವಿಧ ಹುದ್ದೆಗಳಲ್ಲಿ ಕಾರ್ಯನಿರ್ವಹಿಸಿದ ಜಯರಾಮ ಭಟ್‌ ಅವರು ಬ್ಯಾಂಕಿಂಗ್‌ ಕ್ಷೇತ್ರದ ವಿಶ್ವಕೋಶದಂತಿದ್ದರು. ಅವರ ಆಡಳಿತ ಅವಧಿಯಲ್ಲೇ ಬ್ಯಾಂಕ್‌ಗೆ ಕಾರ್ಪೊರೇಟ್‌ ಟಚ್‌ ನೀಡಿದ್ದಲ್ಲದೆ, ಸ್ಥಾಪಕರ ದಿನಾಚರಣೆಗೆ ಅಂತಾರಾಷ್ಟ್ರೀಯ ಮನ್ನಣೆ ತಂದುಕೊಟ್ಟಿದ್ದರು. ಸಾಹಿತ್ಯ, ಸಾಂಸ್ಕೃತಿಕ ಹಾಗೂ ಸಾಮಾಜಿಕ ಚಟುವಟಿಕೆಗಳಲ್ಲಿ ಬ್ಯಾಂಕ್‌ನ ಸಹಭಾಗಿತ್ವಕ್ಕೆ ಕಾರಣವಾಗಿದ್ದರು.

1951 ನವೆಂಬರ್‌ 14ರಂದು ಪೊಳಲಿಯಲ್ಲಿ ಜನಿಸಿದ ಜಯರಾಮ ಭಟ್‌ ಅವರು ವೇದಶಾಸ್ತ್ರಗಳನ್ನು ಕರಗತ ಮಾಡಿಕೊಂಡಿದ್ದರು. ಆದರೆ ವೃತ್ತಿಜೀವನ ನಡೆಸಿದ್ದು ಬ್ಯಾಂಕಿಂಗ್‌ ಕ್ಷೇತ್ರದಲ್ಲಿ. 2009ರ ಜುಲೈ 14ರಂದು ಮೊದಲ ಬಾರಿಗೆ ಬ್ಯಾಂಕ್‌ನ ಸಿಇಒ ಆದರು. ಸತತ ಮೂರನೇ ಅವಧಿಗೆ ಸಿಇಒ ಆಗಿ ಮರು ನೇಮಕರಾಗಿ ನಿವೃತ್ತರಾಗಿದ್ದರು. ಪ್ರಸ್ತುತ ಅವರು ಚಿಲ್ಲರೆ ಬ್ಯಾಂಕಿಂಗ್‌ನ ಐಬಿಎ ಸ್ಥಾಯಿ ಸಮಿತಿ ಸದಸ್ಯರಾಗಿದ್ದರು.

ಜಯರಾಂ ಭಟ್‌ ನಿಧನಕ್ಕೆ ಕರ್ಣಾಟಕ ಬ್ಯಾಂಕ್‌ನ ಆಡಳಿತ ಮಂಡಳಿ ಮತ್ತು ಸಿಬ್ಬಂದಿ ವರ್ಗ, ಧರ್ಮಸ್ಥಳ ಧರ್ಮಾಧಿಕಾರಿ ಡಾ.ವೀರೇಂದ್ರ ಹೆಗ್ಗಡೆ ಸೇರಿ ಹಲವು ಗಣ್ಯರು ಸಂತಾಪ ವ್ಯಕ್ತಪಡಿಸಿದ್ದಾರೆ.

ಸ್ಪಂದನಾ ವಿಜಯ್‌ ಬೆನ್ನಲ್ಲೇ, ಎಸ್ಸೆಸ್ಸೆಲ್ಸಿ ವಿದ್ಯಾರ್ಥಿನಿ ಕುಸಿದು ಬಿದ್ದು ಸಾವು

ಹೃದಯಾಘಾತ: ಯುವ ಸ್ಟಾಫ್‌ ನರ್ಸ್‌ ಸಾವು

 

ಉಡುಪಿ: ನಗರದ ಜಿಲ್ಲಾಸ್ಪತ್ರೆಯ 108 ಆ್ಯಂಬುಲೆನ್ಸ್‌ ಸ್ಟಾಫ್‌ ನರ್ಸ್‌ ರವಿ ಕುಮಾರ ಕೊಡಗೆರಾ (32) ಎಂಬವರು ಹೃದಯಾಘಾತದಿಂದ ಮೃತಪಟ್ಟಘಟನೆ ಮಂಗಳವಾರ ನಡೆದಿದೆ. ಬೀದರ್‌ ಜಿಲ್ಲೆಯ ಹುಮನಾಬಾದ್‌ ತಾಲೂಕಿನ ಹುಣಸಗೇರಾ ನಿವಾಸಿಯಾಗಿದ್ದ ರವಿ ಕುಮಾರ ಅವರು 6 ವರ್ಷದಿಂದ 108 ಆ್ಯಂಬುಲೆನ್ಸ್‌ ವಾಹನದಲ್ಲಿ ಸ್ಟಾಫ್‌ ನರ್ಸ್‌ ಆಗಿ ದುಡಿಯುತ್ತಿದ್ದರು. ಮಂಗಳವಾರ ಬೆಳಗ್ಗೆ ಆಸ್ಪತ್ರೆಯಲ್ಲಿ ಕರ್ತವ್ಯದಲ್ಲಿದ್ದಾಗ ಅಸ್ವಸ್ಥಗೊಂಡಿದ್ದರು. ತಕ್ಷಣ ಚಿಕಿತ್ಸೆ ನೀಡಲಾಯಿತಾದರೂ, ಹೃದಯಾಘಾತದ ಪರಿಣಾಮ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಉಡುಪಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

click me!