HD Kumaraswamy: 6 ಕೋಟಿ ಜನಾಶೀರ್ವಾದದಿಂದ ಮುಖ್ಯಮಂತ್ರಿ ಆದವನಲ್ಲ ಎಂದ ಎಚ್ಡಿಕೆ!

Kannadaprabha News, Ravi Janekal |   | Kannada Prabha
Published : Feb 17, 2026, 05:19 AM IST
HD Kumaraswamy

ಸಾರಾಂಶ

HD Kumaraswamy Sparks Row ತಾನು ಆಕಸ್ಮಿಕವಾಗಿ ಮುಖ್ಯಮಂತ್ರಿಯಾದವನು ಎಂದು ಹೇಳಿಕೊಂಡಿರುವ ಕೇಂದ್ರ ಸಚಿವ ಎಚ್‌.ಡಿ.ಕುಮಾರಸ್ವಾಮಿ, ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳಿಂದ ಕರ್ನಾಟಕ ಆರ್ಥಿಕವಾಗಿ ದಿವಾಳಿಯಾಗಿದೆ ಎಂದು ಟೀಕಿಸಿದ್ದಾರೆ. 

ಚಿಕ್ಕನಾಯಕನಹಳ್ಳಿ (ಫೆ.17): ರಾಜ್ಯದಲ್ಲಿ ನಾನು ಆಕಸ್ಮಿಕವಾಗಿ ಮುಖ್ಯಮಂತ್ರಿಯಾದವನು. ಈ ನಾಡಿನ 6 ಕೋಟಿ ಜನರು ಆಶೀರ್ವಾದ ಮಾಡಿ ಸಿಎಂ ಆದವನಲ್ಲ. ದೈವ ಪ್ರೇರೇಪಣೆ, ಗುರು-ಹಿರಿಯರ ಆಶೀರ್ವಾದ ಹಾಗೂ ನಮ್ಮ ಪಕ್ಷದಲ್ಲಿ ಗೆದ್ದ ಶಾಸಕರು ನನ್ನನ್ನು ಸಿಎಂ ಮಾಡಿದರು. ಹೀಗಾಗಿ, ನಾನು ಎರಡು ಬಾರಿ ಮುಖ್ಯಮಂತ್ರಿಯಾದೆ ಎಂದು ಕೇಂದ್ರ ಸಚಿವ ಎಚ್‌.ಡಿ.ಕುಮಾರಸ್ವಾಮಿ ಹೇಳಿದ್ದಾರೆ.

ತುಮಕೂರು ಜಿಲ್ಲೆ ಚಿಕ್ಕನಾಯಕನಹಳ್ಳಿಯ ಹೈಸ್ಕೂಲ್ ಮೈದಾನದಲ್ಲಿ ಸೋಮವಾರ ಆಯೋಜಿಸಲಾಗಿದ್ದ ಜನಸ್ಪಂದನ ಸಭೆಯಲ್ಲಿ ಮಾತನಾಡಿ, ಮುಂದಿನ ಚುನಾವಣೆಯಲ್ಲಿ ರಾಜ್ಯದಲ್ಲಿ ಎನ್‌ಡಿಎ ಅಧಿಕಾರ ಹಿಡಿಯಲಿದೆ ಎಂದರು.

ಇದೇ ವೇಳೆ, ಪರೋಕ್ಷವಾಗಿ ರಾಜ್ಯ ಸರ್ಕಾರ ಜಾರಿಗೆ ತಂದಿರುವ ಗ್ಯಾರಂಟಿಗಳ ಬಗ್ಗೆ ಅತೃಪ್ತಿ ವ್ಯಕ್ತಪಡಿಸಿದ ಕುಮಾರಸ್ವಾಮಿ, ಕರ್ನಾಟಕ ಸರ್ಕಾರ ಆರ್ಥಿಕವಾಗಿ ದಿವಾಳಿಯಾಗಿದೆ. ಅಭಿವೃದ್ಧಿ ಎನ್ನುವುದು ಪ್ರಚಾರದಲ್ಲಿ ಮಾತ್ರ ಕಾಣುತ್ತಿದೆ. ಕೇವಲ ಜಾಹೀರಾತುಗಳಲ್ಲಿ ಅಭಿವೃದ್ಧಿ ಕಾಣುತ್ತಿದೆ. ನೂರಾರು ಕೋಟಿ ಜನರ ತೆರಿಗೆ ಹಣವನ್ನು ಪೋಲು ಮಾಡಿ ಜಾಹೀರಾತು ನೀಡಲಾಗುತ್ತಿದೆ. ನಾನು ಎರಡು ಬಾರಿ ಮುಖ್ಯಮಂತ್ರಿ ಆಗಿದ್ದಾಗ ಸಾಕಷ್ಟು ಜನಪರ ಕೆಲಸಗಳನ್ನು ಮಾಡಿದ್ದೇನೆ. ಆದರೆ, ಅದನ್ನು ಪ್ರಚಾರಕ್ಕೆ ಬಳಕೆ ಮಾಡಿಕೊಳ್ಳಲಿಲ್ಲ. ಈಗ ನೋಡಿದರೆ ಕೆಲಸಕ್ಕಿಂತ ಪ್ರಚಾರವೇ ಜಾಸ್ತಿಯಾಗಿದೆ ಎಂದು ಅವರು ಟೀಕಿಸಿದರು.

ಪ್ರಚಾರಕ್ಕಿಂತ ಕರ್ತವ್ಯವೇ ಮಿಗಿಲು ಎಂದು ನಾನು ನಂಬಿದ್ದೇನೆ. ಕೇವಲ ರಾಜಕೀಯ ಲಾಭದ ಭರವಸೆಗಳಿಂದ ಜನರಿಗೆ ಉಪಯೋಗವಿಲ್ಲ. ಅವರನ್ನು ಶಾಶ್ವತವಾಗಿ ಮೇಲೆತ್ತುವ ಕೆಲಸ ಆಗಬೇಕಿದೆ. ಕೃಷಿಕರಿಗೆ ಶಕ್ತಿ ತುಂಬಬೇಕಿದೆ. ಶಿಕ್ಷಣ, ಆರೋಗ್ಯ, ಉದ್ಯೋಗ, ವಸತಿ ಸೌಲಭ್ಯಗಳು ಎಲ್ಲರಿಗೂ ಕೈಗೆಟುಕುವ ರೀತಿಯಲ್ಲಿರಬೇಕು. ಆದರೆ, ರಾಜ್ಯದಲ್ಲಿ ಬೇರೆಯದೇ ಪರಿಸ್ಥಿತಿ ಇದೆ ಎಂದು ಕೇಂದ್ರ ಸಚಿವರು ಕಳವಳ ವ್ಯಕ್ತಪಡಿಸಿದರು.

ಪ್ರತಿ ಸರ್ಕಾರಿ ಕಾರ್ಯಕ್ರಮದಲ್ಲಿ ಸಂವಿಧಾನದ ಪೀಠಿಕೆ ಓದಿ ನಾವು ಜಾತ್ಯತೀತರು ಎಂದು ಹೇಳುತ್ತೇವೆ. ಆದರೆ, ಅದಾದ ಮೇಲೆ ಜಾತಿ ಹೆಸರಿನ ಮೇಲೆ ರಾಜಕೀಯ ಮಾಡುತ್ತೇವೆ. ಇವತ್ತು ರಾಜಕೀಯ ಲಾಭಕ್ಕಾಗಿ, ಮೀಸಲಾತಿಗಾಗಿ ಜಾತಿಗಳನ್ನು ಒಡೆಯಲಾಗುತ್ತಿದೆ. ಆಮೇಲೆ ನಾವು ಜಾತ್ಯತೀತರು ಎಂದು ಹೇಳಿಕೊಳ್ಳುತ್ತಾರೆ. ಜನತೆ ಜಾತಿ ವ್ಯಾಮೋಹದಿಂದ ಹೊರಬರದೇ ಹೋದರೆ ಅಭಿವೃದ್ಧಿ ಎಂಬುದು ಮರೀಚಿಕೆ ಆಗುತ್ತದೆ. ಕೃತಕ ಬುದ್ಧಿಮತ್ತೆ ಕಾಲದಲ್ಲಿಯೂ ಜಾತಿ ರಾಜಕಾರಣ ಸರಿಯಲ್ಲ ಎಂದು ಅವರು ಹೇಳಿದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಪ್ರಿಯಾಂಕ್‌ ‘ಆರೆಸ್ಸೆಸ್‌ ಟೀಕೆ’ಗೆ ಬಿಜೆಪಿ ಕಿಡಿ- ದೆವ್ವದ ಮನಸ್ಥಿತಿ ಇದ್ರೆ ದೈವದ ಮಾತು ಬರಲ್ಲ
ಕರ್ನಾಟಕ ರೈತ ವಿವೇಕ್‌ರಿಂದ ಎಐ ಆಧರಿತ ಕೃಷಿ, ₹214 ಕೋಟಿ ಹೂಡಿಕೆ