
ಕಿಕ್ಕೇರಿ(ಜ.04): ಸರ್ಕಾರವು ಜನರ ಜೇಬಿಗೆ ಕೈ ಹಾಕಿ ದರೋಡೆ ಮಾಡಿ ದೊಡ್ಡದಾಗಿ ಗ್ಯಾರಂಟಿ ಕೊಡುತ್ತಿದ್ದಾರೆ ಎಂದು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸರ್ಕಾರದ ಬೂಟಾಟಿಕೆ ಮಾತೇ ದೊಡ್ಡ ಸಾಧನೆ ಯಾಗಿದೆ. ಜಾಹೀರಾತುಗೂ ಸಹ ಕೋಟ್ಯಾಂತರ ರು. ಹಣ ನೀರಿನಂತೆ ಹರಿಯುತ್ತಿದೆ. ತಮ್ಮ ಕಾಂಗ್ರೆಸ್ ಶಾಸಕರ ಕ್ಷೇತ್ರಗಳ ಅಭಿವೃದ್ಧಿಗೂ ಅನುದಾನ ನೀಡದಷ್ಟು ಅಧ್ಯಾನ ಸ್ಥಿತಿಯಲ್ಲಿದೆ. ಇದರ ಬಗ್ಗೆ ಮುಖ್ಯಮಂತ್ರಿಗಳಲ್ಲಿ ಉಸಿರೇ ಇಲ್ಲ ಎಂದು ಟೀಕಿಸಿದರು.
ಕಾಂಗ್ರೆಸ್ ಅಧಿವೇಶನದಲ್ಲಿ ನಕಲಿ ಗಾಂಧಿಗಳ ದರ್ಬಾರ್: ಕುಮಾರಸ್ವಾಮಿ ವ್ಯಂಗ್ಯ
ಶಕ್ತಿ ಯೋಜನೆಗಾಗಿ ಹೆಣ್ಣು ಮಕ್ಕಳಿಗೆ ಉಚಿತ ಬಸ್ ಸೇವೆ ನೀಡುವ ನೆಪದಲ್ಲಿ ಶೇ. 15 ರಷ್ಟು ಬಸ್ ದರ ಏರಿಸಲಾಗಿದೆ. ದರ ಏರಿಕೆಯಲ್ಲಿ ಸರ್ಕಾರಕ್ಕೆ ಉತ್ಪಾದನೆ ಹೆಚ್ಚುತ್ತಿದೆ. ರಾಜ್ಯದ ಖಜಾನೆ ತುಂಬಿಸಲು ಬೆವರು ಸುರಿಸುತ್ತಿಲ್ಲ. ತೆರಿಗೆ ಹಣ ಸದ್ಬಳಕೆಯಾಗದೆ ದುರ್ಬಳಕೆಯಾಗುತ್ತಿದೆ ಎಂದು ದೂರಿದರು.
ಗುತ್ತಿಗೆದಾರರಿಗೆ ಕಾಂಗ್ರೆಸ್ ಸರ್ಕಾರ ಹಣ ಬಿಡುಗಡೆ ಮಾಡದೇ ದಯಮಾರಣ, ಆತ್ಮಹತ್ಯೆಗೆ ಶರಣಾಗುವಂತೆ ಮಾಡಿದೆ. ಹಲವು ಪ್ರಕರಣಗಳಲ್ಲಿ ಆತ್ಮಹತ್ಯೆ ಮಾಡಿಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗುತ್ತಿದೆ. ಗದಗದಲ್ಲಿ ಒಬ್ಬರು ತೀರಿಕೊ ೦ಡಿದ್ದಾರೆ. ಇನ್ಯಾರೋ ಒಬ್ಬರು ದಯಾಮರಣಕ್ಕೆ ಸಿಎಂರನ್ನು ಕೇಳಿಕೊಂಡಿದ್ದಾರೆ ಎಂದರು.
ಮುಖ್ಯಮಂತ್ರಿಗಳ ಖಾಸಾ ಶಿಷ್ಯ ಹರಿಹರ ಎಂಎಲ್ಎ ರಾಮಪ್ಪ ಬಿಜೆಪಿ ಸರ್ಕಾರದ ಶಾಸಕರಾಗಿದ್ದರು. ಬಿಜೆಪಿ ಅವಧಿಯಲ್ಲಿ ಅನುದಾನ ತಂದು ಅಭಿವೃದ್ಧಿ ಮಾಡಿದ್ದೆ. ಆದರೆ, ಕಾಂಗ್ರೆಸ್ ಸರ್ಕಾರ ಇನ್ನೂ ಹಣ ಕೊಟ್ಟಿಲ್ಲ. ಹಣ ಬಿಡುಗಡೆ ಮಾಡಿ. ಇಲ್ಲ. ಆತ್ಮಹತ್ಯೆಗೆ ಅನುಮತಿ ಕೊಡಿ ಎಂದು ಕೇಳಿಕೊಂಡಿದ್ದಾರೆ ಎಂದು ಲೇವಡಿ ಮಾಡಿದರು.
5 ವರ್ಷ ಕಳೆಯುತ್ತ ಬಂದರೂ ರಾಜ್ಯ ಸರ್ಕಾರ ತಾಪಂ, ಜಿಪಂ ಚುನಾವಣೆಗೆ ಯೋಚಿಸುತ್ತಿಲ್ಲ. ಗ್ರಾಮ ಪಂಚಾಯಿತಿಗಳಿಗೆ ಎಷ್ಟು ಅನುದಾನ ನೀಡಲಾಗುತ್ತಿದೆ ಎಂಬ ಮಾಹಿತಿ ರಾಜ್ಯ ಸರ್ಕಾರದಲ್ಲಿ ಇಲ್ಲವಾಗಿದೆ. ರಾಜ್ಯ ಸರ್ಕಾರ ಇದೆಯೇ ಎಂದು ಯೋಚಿಸುವಂತಾಗಿದೆ ಎಂದು ಕಿಡಿಕಾರಿದರು.
ಕುಮಾರಸ್ವಾಮಿ ಡೀಸೆಲ್ ದರ ಇಳಿಸಲಿ ಎಂಬ ಕ್ಕೆ ನಾಯಕರ ಹೇಳಿಕೆಗೆ ತಿರುಗೇಟು ನೀಡಿದ ಎಚ್ಚಿಕೆ, ನೀವು ಮೊದಲು ಸೆಸ್ ದರ ಏರಿಕೆ ಮಾಡಿದ್ದೀರಲ್ಲ, ಅದನ್ನು ಇಳಿಸಿ. ಡೀಸೆಲ್, ಪೆಟ್ರೋಲ್ ದರ ಏರಿಕೆ ಆಗುವುದು ಅಂತಾರಾಷ್ಟ್ರೀಯ ಮಾರುಕಟ್ಟೆ ಏರಿಳಿತದ ಮೇಲೆ. ಮೊದಲು ಪೆಟ್ರೋಲ್, ಡೀಸೆಲ್ ಸೆಸ್ ಸರಿ ಮಾಡ್ರಪ್ಪ ಎಂದು ವ್ಯಂಗ್ಯವಾಡಿದರು.
ಆರೋಗ್ಯಕ್ಕೆ ಸಂಬಂಧಿಸಿದಂತೆ ಬಾಣಂತಿಯರ ಮರಣವಾರ್ತೆ ನಿರಂತರವಾಗಿದೆ. 300ಕ್ಕೂ ಹೆಚ್ಚು ತಾಯಂದಿರ ಮಕ್ಕಳು ದುರ್ಮರಣವಾಗಿದ್ದಾರೆ. ಆರೋಗ್ಯ ಸೇವೆಯಲ್ಲಿ ಸರ್ಕಾರ ಸೋತಿದೆ. ಪ್ರತಿ ಹಳ್ಳಿಯಲ್ಲೂ ಸಮುದಾಯ ಭವನದ ಬೇಡಿಕೆ ಇದೆ. ಇದಕ್ಕೆ ಕನಿಷ್ಠ 40 ಲಕ್ಷ ರು. ಬೇಕಿದೆ. ಆದರೆ, ರಾಜ್ಯ ಸರ್ಕಾರ ಮೌನವಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ನಿರುದ್ಯೋಗ ಸಮಸ್ಯೆ ನಿವಾರಣೆಗೆ ಒತ್ತು: ಕೇಂದ್ರ ಸಚಿವ ಕುಮಾರಸ್ವಾಮಿ
ಕೆಪಿಎಸ್ಸಿಯಲ್ಲಿ ಕನ್ನಡಿಗರಿಗೆ ಅನ್ಯಾಯ ವಿಚಾರವಾಗಿ ಅದನ್ನು ಒಂದು ಸಂಸ್ಥೆ ಎಂದು ಕರೆಯುತ್ತೀರಾ? ಇವತ್ತಿನವರೆಗೂ ಒಂದು ನೇಮಕಾತಿ ಕೊಡಲಿಲ್ಲ. ಸರಿಯಾಗಿ ಪರೀಕ್ಷೆ ನಡೆಸುವುದಕ್ಕೆ ಆಗಲಿಲ್ಲ. ಯುವಕರಿಗೆ ಉದ್ಯೋಗ ಕೊಡದೆ ಸಬೂಬು ಹೇಳಿಕೊಂಡು ಹೋಗುತ್ತಿದೆ ಕಿಡಿಕಾರಿದರು.
ಕೇಂದ್ರ ಸಚಿವರಿಗೆ ಸರ್ಕಾರ ಕಾರು ಕೊಡದೆ ನಿರ್ಲಕ್ಷ್ಯ ಮಾಡಿದೆ. ಹೀಗಾಗಿ ಕೇಂದ್ರ ಸರ್ಕಾರಕ್ಕೆ ಸೇರಿದ ಕಾರು ತರಿಸಿಕೊಂಡಿದ್ದೇನೆ. ನಿರ್ಲಕ್ಷ್ಯದ ಬಗ್ಗೆ ಅವರನ್ನೇ ಕೇಳಬೇಕು. ನಮ್ಮ ರಾಜ್ಯ ಸಂಪತ್ಪರಿತವಾಗಿದ್ದು, ಕೊರತೆ ಇರುವುದು ಕಾಂಗ್ರೆಸ್ ಸರ್ಕಾರದ ಆಡಳಿತದಲ್ಲಿ, ಸಂಕ್ರಾಂತಿ ಕಳೆದ ನಂತರ ಈ ಬಗ್ಗೆ ಮಾತನಾಡುವೆ ಎಂದು ಉತ್ತರಿಸಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ