ಪ್ರಧಾನಿ ನರೇಂದ್ರ ಮೋದಿಗೆ ದೇವೇಗೌಡರ ಪತ್ರ

By Kannadaprabha NewsFirst Published Nov 3, 2019, 10:45 AM IST
Highlights

ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮಾಜಿ ಪ್ರಧಾನಿ ಜೆಡಿಎಸ್ ವರಿಷ್ಠ ಎಚ್ ಡಿ ದೇವೇಗೌಡ ಅವರು ಪತ್ರ ಬರೆದಿದ್ದಾರೆ. ಪತ್ರದಲ್ಲಿ ಕೇಂದ್ರದ ಯೋಜನೆಯೊಂದಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ. 

ಬೆಂಗಳೂರು [ನ.03]:  ವಿದೇಶದಿಂದ ಹಾಲು ಆಮದು ಮಾಡಿಕೊಳ್ಳುವ ಕ್ರಮಕ್ಕೆ ಜೆಡಿಎಸ್‌ ವರಿಷ್ಠ ಎಚ್‌.ಡಿ.ದೇವೇಗೌಡ ಅವರು ತೀವ್ರ ವಿರೋಧ ವ್ಯಕ್ತಪಡಿಸಿ ಪ್ರಧಾನಿ ನರೇಂದ್ರ ಮೋದಿ ಮತ್ತು ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಪಿಯೂಷ್‌ ಗೋಯಲ್‌ ಅವರಿಗೆ ಪತ್ರ ಬರೆದಿದ್ದಾರೆ. ಕೇಂದ್ರ ಸರ್ಕಾರವು ವಿದೇಶದಿಂದ ಹಾಲು ಆಮದು ಮಾಡಿಕೊಂಡರೆ ಹಾಲು ಉತ್ಪಾದಕ ರೈತರಿಗೆ ಮರಣ ಶಾಸನವಾಗಲಿದೆ. ಅಲ್ಲದೇ, ಕೇಂದ್ರವು ತನ್ನ ನಿರ್ಧಾರದಿಂದ ಹಿಂದೆ ಸರಿಯದಿದ್ದರೆ ದೇಶಾದ್ಯಂತ ಹೋರಾಟ ನಡೆಸದೆ ಅನ್ಯ ಮಾರ್ಗ ಇಲ್ಲ. ವಿದೇಶದಿಂದ ಹಾಲು ಆಮದು ವಿರುದ್ಧ ಜನಾಂದೋಲನ ರೂಪಿಸಲಾಗುತ್ತದೆ ಎಂದು ಪತ್ರದಲ್ಲಿ ಎಚ್ಚರಿಕೆ ನೀಡಿದ್ದಾರೆ.

ಆಸ್ಪ್ರೇಲಿಯಾ ಮತ್ತು ನ್ಯೂಜಿಲ್ಯಾಂಡ್‌ ಸೇರಿದಂತೆ ಇತರೆ ರಾಷ್ಟ್ರಗಳಿಂದ ಹಾಲು ಆಮದು ಮಾಡಿಕೊಂಡರೆ ದೇಶೀಯ ಮಾರುಕಟ್ಟೆಯ ಮೇಲೆ ವ್ಯತಿರಿಕ್ತ ಪರಿಣಾಮ ಬೀರಲಿದೆ. ಭಾರತೀಯ ಗ್ರಾಮೀಣ ಭಾಗದಲ್ಲಿ ಸುಮಾರು 8 ಕೋಟಿಗೂ ಹೆಚ್ಚು ಮಂದಿ ಬಡವರು ಮತ್ತು ಸಣ್ಣ ರೈತರಾಗಿದ್ದಾತೆ. ಹಾಲು ಉತ್ಪಾದನೆಯಲ್ಲಿ ಕ್ಷೇತ್ರದಲ್ಲಿ ತೊಡಗಿರುವವರೆಲ್ಲಾ ನಿರುದ್ಯೋಗಗಳಾಗಲಿದ್ದಾರೆ. ದೇಶಿಯ ಹಾಲು ಉತ್ಪಾದಕರ ಉತ್ತೇಜನಕ್ಕಾಗಿ ಕ್ರಮ ಕೈಗೊಳ್ಳಬೇಕೇ ಹೊರತು ವಿದೇಶಿ ಹಾಲು ಆಮದಿಗೆ ಉತ್ತೇಜನ ನೀಡುವುದು ಸರಿಯಲ್ಲ. ಅಲ್ಲದೇ, ಪ್ರಧಾನಿಗಳ ಉದ್ದೇಶವಾಗಿರುವ ಮೇಕ್‌ ಇಂಡಿಯಾ ಪರಿಕಲ್ಪನೆಗೆ ಭಾರೀ ಪೆಟ್ಟು ಬೀಳಲಿದೆ ಎಂದು ತಿಳಿಸಿದ್ದಾರೆ.

ಆಗ ಡಬ್ಲ್ಯುಟಿಒ-ಗ್ಯಾಟ್‌ ಒಪ್ಪಂದ, ಈಗ ಆರ್‌ಸಿಇಪಿ ಒಪ್ಪಂದ: ಏನಿದು ಮುಕ್ತ ವ್ಯಾಪಾರದ ಗುಮ್ಮ?...

ಅಮೂಲ್‌ ಹಾಲು ದೇಶದಲ್ಲಿಯೇ ದೊಡ್ಡ ಕ್ರಾಂತಿಯನ್ನುಂಟು ಮಾಡಿದೆ. ಮಾಜಿ ಪ್ರಧಾನಿ ಲಾಲ್‌ ಬಹದ್ದೂರ್‌ ಶಾಸ್ತ್ರಿ ಅವರು ಅಮೂಲ್‌ ಯಶಸ್ವಿಯನ್ನು ಕಂಡು ರಾಷ್ಟೀಯ ಹಾಲು ಉತ್ಪನ್ನಗಳ ಅಭಿವೃದ್ಧಿ ನೀತಿಯನ್ನು ರೂಪಿಸಿದ್ದರು. ಜತೆಗೆ 1965ರಲ್ಲಿ ಮಂಡಳಿಯನ್ನು ಸ್ಥಾಪಿಸಿದರು. ದೇಶದ ಆರ್ಥಿಕತೆಯ ಅಭಿವೃದ್ಧಿಯಲ್ಲಿ ಹಾಲು ಉತ್ಪನ್ನ ಉದ್ಯಮವು ದೊಡ್ಡ ಕೊಡುಗೆಯನ್ನು ನೀಡಿದೆ.

ಇದೇ ಮಾದರಿಯಲ್ಲಿ ರಾಜ್ಯದಲ್ಲಿಯೂ ನಂದಿನಿ ಹಾಲು ಉತ್ಪನ್ನ ಮಾಡಿ ಯಶಸ್ವಿಯೂ ಆಗಿದೆ. ಹಾಲು ಉತ್ಪಾದಕರ ಸಹಕಾರ ಫೆಡರೇಷನ್‌ ಮೂಲಕ ರೈತರ ಹಿತ ಕಾಪಾಡಲಾಗುತ್ತಿದೆ. ಲಕ್ಷಾಂತರ ಜನರು ಇದೇ ಉದ್ಯಮದ ಮೇಲೆ ಅವಲಂಬಿತರಾಗಿದ್ದಾರೆ. ಕೇಂದ್ರದ ನಿರ್ಧಾರದಿಂದ ಲಕ್ಷಾಂತರ ಕುಟುಂಬಗಳು ಬೀದಿಪಾಲಾಗಿವೆ. ಹೀಗಾಗಿ ಕೇಂದ್ರ ಸರ್ಕಾರವು ವಿದೇಶದಿಂದ ಹಾಲು ಆಮದು ಮಾಡಿಕೊಳ್ಳುವ ನಿರ್ಧಾರದಿಂದ ಹಿಂದೆ ಸರಿಯಬೇಕು ಎಂದು ಒತ್ತಾಯಿಸಿದ್ದಾರೆ.

ನವೆಂಬರ್ 3ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ:

click me!