ಅರ್ಜುನ ಸಾವಿನ ಇಂಚಿಂಚು ಮಾಹಿತಿ ಬಿಚ್ಚಿಟ್ಟ ವೈದ್ಯ ರಮೇಶ್: ಇಲ್ಲಿದೆ ನೋಡಿ ಅರ್ಜುನನ ಕೊಂದ ಕಾಡಾನೆ

By Sathish Kumar KHFirst Published Dec 10, 2023, 5:10 PM IST
Highlights

ಮೈಸೂರು ದಸರಾ ಅಂಬಾರಿಯನ್ನು 8 ಬಾರಿ ಹೊತ್ತಿದ್ದ ಅಂಬಾರಿ ಆನೆಯು ಕಾಡಾನೆ ಕಾರ್ಯಾಚರಣೆ ವೇಳೆ ಕಾದಾಡಿ ಸಾವನ್ನಪ್ಪಿದ ಬಗ್ಗೆ ವನ್ಯಜೀವಿ ವೈದ್ಯ ಡಾ. ರಮೇಶ್ ಇಂಚಿಂಚು ಮಾಹಿತಿ ಹಂಚಿಕೊಂಡಿದ್ದಾರೆ.

ಹಾಸನ (ಡಿ.10): ವಿಶ್ವವಿಖ್ಯಾತ ಮೈಸೂರು ದಸರಾ ಅಂಬಾರಿಯನ್ನು 8 ಬಾರಿ ಹೊತ್ತಿದ್ದ ಅಂಬಾರಿ ಆನೆಯು ಕಾಡಾನೆ ಕಾರ್ಯಾಚರಣೆ ವೇಳೆ ಕಾದಾಡಿ ಸಾವನ್ನಪ್ಪಿದ ಬಗ್ಗೆ ವನ್ಯಜೀವಿ ವೈದ್ಯ ಡಾ. ರಮೇಶ್ ಇಂಚಿಂಚು ಮಾಹಿತಿ ಹಂಚಿಕೊಂಡಿದ್ದಾರೆ. ನಮ್ಮ ಜೀವವನ್ನು ಉಳಿಸಲಿಕ್ಕಾಗಿ ಅರ್ಜುನ ತನ್ನ ಪ್ರಾಣವನ್ನು ಬಲಿ ಕೊಟ್ಟಿದ್ದಾನೆ ಎಂದು ಹೇಳಿದ್ದಾರೆ.

ಕಾಡಾನೆ ಸೆರೆ ಕಾರ್ಯಾಚರಣೆ ವೇಳೆ ದಸರಾ ಆನೆ ಅರ್ಜುನ ಸಾವು ಪ್ರಕರಣದ ಬಗ್ಗೆ ಕಾರ್ಯಾಚರಣೆಯಲ್ಲಿ ಅರ್ಜುನನ ಮೇಲಿದ್ದ ವನ್ಯಜೀವಿ ವೈದ್ಯ ಡಾಕ್ಟರ್ ರಮೇಶ್ ಡಿ.4ರಂದು ಆನೆ ಸಾವನ್ನಪ್ಪಿದ ಬಗ್ಗೆ ಇಂಚಿಂಚು ಮಾಹಿತಿ ಬಿಚ್ಚಿಟ್ಟದ್ದಾರೆ. ಕಾಡಾನೆ ಕಾರ್ಯಾಚರಣೆ ದಿನ ಡಿಸೆಂಬರ್ 4 ರಂದು ನಾನು ಆನೆ ಮಾವುತ ವಿನು ಹಾಗೂ ಕರ್ನಾಟಕ ಭೀಮ ಆನೆ ಮಾವುತ ಗುಂಡ ಅರ್ಜುನನ ಮೇಲೆ ಇದ್ದೆವು. ಪ್ರಶಾಂತ್ ಆನೆಯ ಮೇಲೆ ಕೊಡಗಿನ ಡಿಆರ್ ಎಫ್ಓ ರಂಜನ್ ಇದ್ದರು. ಕಾಡಾನೆ ಕಾರ್ಯಾಚರಣೆ ವೇಲೆ ವಿಕ್ರಾಂತ್ ಹೆಸರಿನ ಆನೆ ಹಾಗೂ ಮತ್ತೊಂದು ಒಂಟಿ ಸಲಗ ಸೇರಿ ಎರಡು ಆನೆಗಳ ಸೆರೆಗೆ ಟಾರ್ಗೆಟ್ ಫಿಕ್ಸ್ ಆಗಿತ್ತು.

ಅರ್ಜುನನ ಕೊಂದ ಕಾಡಾನೆಯ ಸೆರೆ ಹಿಡಿದು ಜನರ ಮುಂದೆ ನಿಲ್ಲಿಸ್ತೇವೆ: ಶಪಥ ಮಾಡಿದ ಮಾವುತ

ವಿಕ್ರಾಂತ್ ಆನೆ ಎದುರಾದರೆ ನಾನು ಹಾಗು ಇನ್ನೊಂದು ಕಡಾನೆ ಎದುರಾದರೆ ರಂಜನ್ ಅರವಳಿಕೆ ಮದ್ದು ನೀಡೊ ನಿರ್ದಾರ ಆಗಿತ್ತು. ಅದರಂತೆ ನಾವು ಕಾಡಿನೊಳಗೆ ಪ್ರವೇಶ ಮಾಡಿದಾಗ ಒಂದು ಆನೆ ಗುಂಪು ಕಾಣಿಸಿತು ಅದರಲ್ಲಿ ವಿಕ್ರಾಂತ್ ಆನೆ ಇರಲಿಲ್ಲ. ಪುನಃ ಅಲ್ಲಿಂದ ನಾವು 400 ಮೀಟರ್ ಮುಂದೆ ಹೋದಾಗ ಒಂದು ಆನೆ ಕಾಣಿಸಿತು. ಕಾಡಿನಲ್ಲಿ ಲಂಟಾನ ಹೆಚ್ಚಾಗಿ ಬೆಳೆದಿದ್ದರಿಂದ ಆನೆಯ ಮುಖ ಕಾಣಲಿಲ್ಲ. ಆನೆಯ ಹಿಂಬದಿಯ ಸ್ವಲ್ಪ ಭಾಗ ಕಾಣುತ್ತಿದ್ದಾಗ ಅದು ಸಣ್ಣ ಆನೆ ಎಂದು ಭಾವಿಸಿದೆವು. ಆದರೆ, ಅಲ್ಲಿರೊ ಆನೆ ನಮ್ಮ ಟಾರ್ಗೆಟ್ ಆನೆಯಾ, ಅದು ಒಂಟಿ ಸಲಗವೇ ಅಥವಾ ಹೆಣ್ಣಾನೆಯಾ ಎನ್ನೋದು ಖಾತ್ರಿ ಆಗಬೇಕಿತ್ತು. ನಾವು ಅರ್ಜುನ ಆನೆಯ ಮೇಲಿದ್ದವು ಆ ಒಂಟಿ ಸಲಗ ಕೆಳಗೆ ಇತ್ತು. ಹೀಗಾಗಿ, ಇದು ದೊಡ್ಡ ಆನೆ ಎಂದು ಖಾತ್ರಿ ಆದಾಗ ನಾವು ಬಂದಿದ್ದ ಆನೆಗಳಿಂದ ಅದನ್ನು ಸುತ್ತುವರೆದೆವು.

ಕಾಡಾನೆಗೆ ಡಾಟ್‌ ಮಾಡುವ ಬಗ್ಗೆ ಅರಣ್ಯಾಧಿಕಾರಿ ರಂಜನ್ ಮತ್ತು ನಾವು ಮಾತಾಡಿಕೊಂಡೆವು. ನಾನು ಡಾಟ್ ಮಾಡ್ತೇನೆ‌ ಎಂದು ಹೇಳಿ ನಾನು ನನ್ನ ಅರವಳಿಕೆ ಸಜ್ಜು ಮಾಡಿಕೊಂಡೆ. ಪ್ರಸರ್ ಫಿಕ್ಸ್ ಮಾಡಿ ಡಾಟ್ ಮಾಡಲು ರೆಡಿಯಾಗಿದ್ದ ವೇಳೆಗೆ ಕಾಡಾನೆ ಏಕಾಏಕಿ ನಾವು ಕುಳಿತಿದ್ದ ಅರ್ಜುನ ಆನೆಯ ಮೇಲೆ ದಾಳಿ ಮಾಡಿತು. ಅದು ಮುಖವನ್ನು ಮುಂದೆ ಮಾಡಿ ಬಂದಿದ್ದರಿಂದ ನಾನು ಮುಖಕ್ಕೆ ಡಾಟ್ ಮಾಡಲು ಆಗಲಿಲ್ಲ. ಯಾವುದೇ ಆನೆಯ ಮುಖದ ಭಾಗಕ್ಕೆ ಹುಟ್ಟೆಗೆ ಇಂಜೆಕ್ಷನ್ ಹೊಡೆಯೊ ಹಾಗಿಲ್ಲ. ಅಕಸ್ಮಾತ್ ಹಾಗೆ ಇಂಜೆಕ್ಟ್ ಆದರೆ ಆನೆ ಜೀವಕ್ಕೆ ಅಪಾಯ ಇದೆ ಹಾಗಾಗಿ ಆಗ ಡಾಟ್ ಮಾಡಲಿಲ್ಲ.

ಆದ್ದರಿಂದ ಕಾಡಾನೆ ಏಕಾಏಕಿ ಅರ್ಜುನನ ಮೇಲೆ ಆನೆ ದಾಳಿಮಾಡಿದಾಗ ನಾವೆಲ್ಲ ಕೆಳಗೆ ಬೀಳುವಂತೆ ಆದೆವು. ಈ ವೇಳೆಯಲ್ಲಿ ನನ್ನ ಕೈಯಲ್ಲಿದ್ದ ಅರವಳಿಕೆ ಟ್ರಿಗರ್ ಆಗಿ ಫೈರ್ ಆಗಿದೆ. ಅದು ಆಕಾಶದ ಕಡೆಗೆ ಹಾರಿ ಕೆಳಗೆ ಬೀಳುವಾಗ ಡಿಆರ್‌ಎಫ್‌ಒ ರಂಜಿತ್ ಕುಳಿತಿದ್ದ ಪ್ರಶಾಂತ್ ಆನೆಯ ಕಾಲಿಗೆ ಬಿದ್ದಿದೆ. ಅದು ನನಗೆ ಮಾಹಿತಿ ಇರಲಿಲ್ಲ. ಪ್ರಶಾಂತ್ ಗೆ ಅರವಳಿಕೆ ಮದ್ದು ಬಿದ್ದ ಬಗ್ಗೆ ಗೊತ್ತಾದ ಕೂಡಲೆ ನಾನು ಓಡಿದೆ. ಅಷ್ಟರಲ್ಲಿ ಅರ್ಜುನ ಆನೆಯು ಕಾದಾಡಿ ಕಾಡಾನೆಯನ್ನು ಓಡಿಸಿತು. ನಾನು ಮತ್ತು ಅರ್ಜುನ ಆನೆಯ ಮಾವುತ ವಿನು ಪ್ರಶಾಂತ್ ಆನೆ ಬಳಿ ಬಂದೆವು. ಅಲ್ಲಿ ಪ್ರಶಾಂತ್ ಆನೆಗೆ ಅರವಳಿಕೆ ಚುಚ್ಚು ಮದ್ದಿನ ರಿವರ್ಸ್‌ ಇಂಜೆಕ್ಷನ್‌ ಕೊಡುತ್ತಿದ್ದೆವು. ಆದರೆ, ಇದೇ ವೇಳೆ ಪುನಃ ಓಡಿಬಂದ ಕಾಡಾನೆ ಅರ್ಜುನನ ಮೇಲೆ ಏಕಾಏಕಿ ದಾಳಿ ಮಾಡಿದೆ. 

ಅರ್ಜುನ ಸಾವಿನ ಬೆನ್ನಲ್ಲೇ ಮತ್ತೊಂದು ಆನೆ ಸಾವು: ಬೆಳೆ ತಿನ್ನಲು ಬಂದ ಕಾಡಾನೆ ಕೊಂದು ಹೊಲದಲ್ಲೇ ಹೂಳಿದ ಜಮೀನ್ದಾರ!

ಇಲ್ಲಿ ಅರ್ಜುನ ಆನೆ ಒಬ್ಬನೇ ಆಗಿದ್ದರಿಂದ ಕಾಡಾನೆ ಜೊತೆಗೆ ಕಾದಾಡಬೇಕೇ ಅಥವಾ ಬೇಡವೇ ಎಂಬುದರ ಬಗ್ಗೆ ಅದರ ಮಾವುತ ವಿನು ನಿರ್ಧಾರ ಮಾಡುತ್ತಿದ್ದನು. ಆದರೆ, ಅರ್ಜುನನ ಮೇಲೆ ವಿನು ಇರದೇ ನನ್ನ ಜೊತೆಗಿದ್ದನು. ಪ್ರಶಾಂತ್ ಆನೆಗೆ ನಾವು ರಿವರ್ಸ್ ಇಂಜೆಕ್ಷನ್ ಕೊಟ್ಟು ಬರುವ ವೇಳೆಗೆ ಕಾಡಾನೆ ಮತ್ತೆ ಅರ್ಜುನನೊಂದಿಗೆ ಜಗಳಕ್ಕೆ ಬಿದ್ದಿತ್ತು. ನಾನು ಮತ್ತೊಂದು ಸುತ್ತು ಅರವಳಿಕೆ ಲೋಡ್ ಮಾಡಿ ಕಾಡಾನೆಗೆ ಹೊಡೆದೆ. ಆದರೆ, ಆ ಕಾಡಾನೆ ಕೆಳಗೆ ಬೀಳಲಿಲ್ಲ. ಅಷ್ಟೊತ್ತಿದೆ ಅರ್ಜುನನಿಗೆ ಗಂಭೀರವಾಗಿ ಗಾಯವಾಗಿ ಕೆಳಗೆ ಬಿದ್ದಿದ್ದನು. ದುರಾದೃಷ್ಟವಶಾತ್ ಈ ಆನೆಗಳ ಕಾಳಗ ಶುರುವಾದಾಗ ಅರ್ಜುನನೊಂದಿಗೆ ಬಂದಿದ್ದ ಬೇರೆ ಆನೆಗಳು ಹೆದರಿ ಓಡಿವೆ. ಅರ್ಜುನ ತಾನು ಪ್ರಾಣ ಬಿಟ್ಟು ನಮ್ಮನ್ನ ಉಳಿಸಿದ್ದಾನೆ ಎಂದು ವನ್ಯಜೀವಿ ವೈದ್ಯ ರಮೇಶ್ ಕಣ್ಣೀರು ಹಾಕಿದರು.

click me!